ತಾವಾಗಿಯೇ ಸೃಷ್ಟಿಸಿಕೊಂಡ ಸಮಸ್ಯೆ: ಚೀನ-ಪಾಕಿಸ್ಥಾನ ಬದಲಾಗಬೇಕು
Team Udayavani, Nov 28, 2018, 6:00 AM IST
ಉಗ್ರ ಸಂಘಟನೆಗಳನ್ನು ತಮ್ಮ ಲಾಭಕ್ಕಾಗಿ ಬಹಿರಂಗವಾಗಿಯೇ ಬೆಂಬಲಿಸುವ ಧಾಷ್ಟ ತೋರಿಸುವ ಪಾಕ್-ಚೀನಾಕ್ಕೆ ಈಗ ಅದೇ ಉಗ್ರರಿಂದ ಸಂಕಷ್ಟದ ಸಮಯ. ಇನ್ನಾದರೂ ಈ ವಿಚಾರದಲ್ಲಿ ಅವುಗಳು ಪಾಠ ಕಲಿಯಲೇಬೇಕಿದೆ.
ಪಾಕಿಸ್ಥಾನದ ಕರಾಚಿ ನಗರಿಯಲ್ಲಿ ಕಳೆದ ಶುಕ್ರವಾರ ಚೀನದ ವಾಣಿಜ್ಯ ದೂತವಾಸದ ಮೇಲೆ ಉಗ್ರರ ದಾಳಿಯಾಗಿತ್ತು. ಈ ದಾಳಿಯ ನಂತರ ನಿಜಕ್ಕೂ ಚೀನ ವ್ಯಗ್ರಗೊಂಡಿತ್ತು. ಆದರೂ ಪಾಕ್ ಜೊತೆಗಿನ ತನ್ನ ಸಂಬಂಧಕ್ಕೆ ಈ ಘಟನೆ ಅಡ್ಡಿಯಾಗದು ಎಂದು ಹೇಳಿತ್ತು. ಈಗ ಪಾಕ್ನ ಭದ್ರತಾ ವ್ಯವಸ್ಥೆಯ ಕುರಿತು ಮಾತನಾಡಲು ವಿಶೇಷ ನಿಯೋಗವೊಂದನ್ನು ಕಳುಹಿಸಿಕೊಟ್ಟಿದೆ. ಪಾಕಿಸ್ಥಾನದ ಆಂತರಿಕ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಪಾಕ್ ಸರ್ಕಾರಕ್ಕೆ ತನ್ನ ಮನೆಯನ್ನು ಸರಿಪಡಿಸಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ, ಈ ದಾಳಿಯನ್ನು ತಾನು ನಡೆಸಿದ್ದಾಗಿ ಯಾವಾಗ ಬಲೂಚಿಸ್ಥಾನ್ ಲಿಬರೇಷನ್ ಆರ್ಮಿ(ಬಿಎಲ್ಎ) ಹೇಳಿತೋ, ಅದಕ್ಕಾಗಿಯೇ ಕಾಯುತ್ತಿದ್ದ ಪಾಕಿಸ್ಥಾನ ಭಾರತವೇ ದಾಳಿಯ ಹಿಂದಿದೆ ಎಂದು ಹೇಳುತ್ತಿದೆ, ಇತ್ತ ಪಾಕ್ನ ಮೇಲೆ ಅಸಮಾಧಾನಗೊಂಡಿದ್ದರೂ ಚೀನ “ಚೀನಿ-ಪಾಕಿ’ ಭಾಯ್ಭಾಯ್ ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದೆ.
ಇದೇನೆೇ ಇದ್ದರೂ ಪಾಕಿಸ್ಥಾನದಲ್ಲಿ ಉಗ್ರ ಸಂಘಟನೆಗಳು, ಪ್ರತ್ಯೇಕತಾವಾದಿ ಸಂಘಟನೆಗಳ ಸಂಖ್ಯೆ ಎಷ್ಟು ಬೆಳೆದುಬಿಟ್ಟಿದೆಯೆಂದರೆ, ಯಾವ ಸಂಘಟನೆಗಳ ಕೈವಾಡವಿದೆ ಎನ್ನುವುದನ್ನು ಪತ್ತೆ ಹಚ್ಚಲು ಅದಕ್ಕೆ ಸಾಧ್ಯವಾಗುತ್ತಲೇ ಇಲ್ಲ. ಆಂತರಿಕ ಭದ್ರತೆಯ ಮೇಲೆ ಸರ್ಕಾರಕ್ಕೆ ಹಿಡಿತವೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಬಲೂಚಿಸ್ಥಾನ ಲಿಬರೇಷನ್ ಆರ್ಮಿ, ಪ್ರತ್ಯೇಕ ಬಲೂಚಿಸ್ಥಾನಕ್ಕಾಗಿ ಧ್ವನಿಯೆತ್ತುತ್ತಿರುವ ಸಂಘಟನೆ. ಇಂಥ ಸಂಘಟನೆ ಬೆಳೆಯಲು, ದಶಕಗಳಿಂದ ಪಾಕಿಸ್ಥಾನ ಬಲೂಚಿಸ್ಥಾನವನ್ನು ಹತ್ತಿಕ್ಕಲು ಪದೇ ಪದೆ ನಡೆಸುತ್ತಾ ಬಂದ ದೌರ್ಜನ್ಯವೇ ಕಾರಣ.
ಬಲೂಚಿಸ್ಥಾನದ ಪರ ತಾನಿರುವುದಾಗಿ ಭಾರತ ಮೊದಲಿನಿಂದಲೂ ಸಾರುತ್ತಾ ಬಂದಿದೆ. ಹೀಗಾಗಿ ಇಂಥ ಘಟನೆಗಳು ಸಂಭವಿಸಿದಾಗ ಭಾರತದತ್ತ ಕೈತೋರಿಸಿ ತಾನೂ ಕೂಡ ಉಗ್ರವಾದ ಪೀಡಿತ ರಾಷ್ಟ್ರ ಎಂದು ಜಗತ್ತಿನೆದುರು ಸಂತ್ರಸ್ತನ ಪಾತ್ರ ನಿರ್ವಹಿಸುತ್ತದೆ ಪಾಕಿಸ್ಥಾನ. ಚೀನದ ದೂತವಾಸದ ಮೇಲೆ ನಡೆದಿರುವ ಈ ದಾಳಿಯ ಹಿಂದಿನ ಬಹುದೊಡ್ಡ ಕಾರಣ “ಚೀನಾ ಪಾಕ್ ಆರ್ಥಿಕ ಕಾರಿಡಾರ್’ ಎನ್ನಲಾಗುತ್ತಿದೆ. ಇದನ್ನು ಬಲೂಚಿಯರು ಪಾಕ್ ಮತ್ತು ಚೀನದ ವಿಸ್ತಾರಣಾವಾದಿ ಗುಣದ ಹಿನ್ನೆಲೆಯಲ್ಲಿ ನೋಡುತ್ತಾರೆ. ಬಲೂಚಿಸ್ಥಾನದ ನೆಲದಲ್ಲಿ ಚೀನಿಯರು ಕಾಲಿಡುವುದನ್ನು ತಾನು ಸರ್ವಥಾ ಸಹಿಸುವುದಿಲ್ಲ ಎಂದು ಬಿಎಲ್ಎ ಬಹಿರಂಗವಾಗಿಯೇ ಹೇಳುತ್ತಾ ಬಂದಿದೆ.
ಈ ಕಾರಿಡಾರ್ ಏನಾದರೂ ಬಲೂಚ್ನಲ್ಲಿ ಅನುಷ್ಠಾನಕ್ಕೆ ಬಂತೆಂದರೆ ಈ ಪ್ರದೇಶದಲ್ಲಿ ಚೀನದ ಗತಿವಿಧಿಗಳು ನಿಸ್ಸಂಶಯವಾಗಿಯೂ ವೇಗಪಡೆಯಲಿವೆ. ಅಂಥ ಸಂದರ್ಭದಲ್ಲಿ ಬಲೂಚಿಗಳನ್ನು ತುಳಿಯಲು ಪಾಕಿಸ್ಥಾನ ಚೀನದ ಸಹಾಯ ಪಡೆಯುವುದಕ್ಕೆ ತಡಮಾಡುವುದಿಲ್ಲ ಎನ್ನುವುದು ಪ್ರತ್ಯೇಕ ಬಲೂಚಿಸ್ಥಾನದ ಪರ ಇರುವವರ ವಾದ.
ಈಗ ಪಾಕಿಸ್ಥಾನಕ್ಕೆ ಚೀನ ಬೇಕೇ ಬೇಕು. ಏಕೆಂದರೆ, ಕೆಲ ವರ್ಷಗಳಿಂದ ಅಮೆರಿಕ, ಉಗ್ರವಾದದ ಮೇಲೆ ಲಗಾಮು ಹಾಕದ ಕಾರಣಕ್ಕಾಗಿ ಪಾಕಿಸ್ಥಾನಕ್ಕೆ ಆರ್ಥಿಕ ಮತ್ತು ಭದ್ರತಾ ಸಹಾಯವನ್ನು ನಿಲ್ಲಿಸಿಬಿಟ್ಟಿದೆ. ಹೀಗಾಗಿ ಈಗ ಪಾಕಿಸ್ಥಾನ ಪೂರ್ಣವಾಗಿ ಚೀನದ ತೆಕ್ಕೆಗೆ ಸೇರಿದೆ. ಪ್ರಸಕ್ತ ದಾಳಿಯ ಬಗ್ಗೆ ಚೀನ ಆಘಾತಗೊಂಡಿದೆ ಎನ್ನುವುದು ನಿರ್ವಿವಾದ. ಏಕೆಂದರೆ ನಿರ್ಮಾಣವಾಗುತ್ತಿರುವ ಈ ಕಾರಿಡಾರ್ನಲ್ಲಿ ಚೀನದ ಸಾವಿರಾರು ಅಧಿಕಾರಿಗಳು ಮತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯನ್ನು ವಿರೋಧಿಸುವವರು ಎಲ್ಲಿ ತಮ್ಮ ಜನರ ಮೇಲೆ ದಾಳಿ ಮಾಡುತ್ತಾರೋ ಎಂಬ ಭಯ ಚೀನದ್ದು. ಈಗ ಪಾಕಿಸ್ಥಾನದ ಮೇಲೂ ಒತ್ತಡ ಸೃಷ್ಟಿಯಾಗಿದೆ. ಈ ಒತ್ತಡದಲ್ಲಿ ಅದು ಬಲೂಚಿಸ್ಥಾನದ ಮೇಲೆ ಮುಗಿಬೀಳುವ ಸಾಧ್ಯತೆಯೂ ಇಲ್ಲದಿಲ್ಲ.
ಚೀನಾ ಮತ್ತು ಪಾಕ್ಗೆ ನಿಜಕ್ಕೂ ಇದು ಇಕ್ಕಟ್ಟಿನ ಸಮಯ. ಜೈಷ್-ಎ-ಮೊಹಮ್ಮದ್ನಂಥ ಸಂಘಟನೆಗಳನ್ನು ಮತ್ತು ಉಗ್ರರನ್ನು ಬಹಿರಂಗವಾಗಿ ಬೆಂಬಲಿಸುತ್ತಾ ಬಂದ ಈ ರಾಷ್ಟ್ರಗಳು ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿ ಆನಂದಿಸುತ್ತಿದ್ದವು. ಈಗ ಇಂಥದ್ದೇ ಸಂಕಷ್ಟ ಅವಕ್ಕೆ ಎದುರಾಗಿದೆ. ಇವೆರಡೂ ರಾಷ್ಟ್ರಗಳು ಆತ್ಮಾವಲೋಕನ ಮಾಡಿಕೊಂಡು, ಬದಲಾಗಬೇಕಾದ ಸಮಯವಿದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು