ಪುಲ್ವಾಮಾ ಘಟನೆ; ಸತ್ಯವನ್ನು ಮರೆಮಾಚಲಾಗದು
Team Udayavani, Dec 18, 2018, 6:00 AM IST
ಇವರ್ಯಾರೂ ಅಮಾಯಕ ನಾಗರಿಕರಲ್ಲ ಎನ್ನುವುದು ಇವರುಗಳ ಕೃತ್ಯದಿಂದಲೇ ಅರ್ಥವಾಗುತ್ತದೆ. ಉಗ್ರರನ್ನು ಕಾಪಾಡುವುದಕ್ಕಾಗಿ ಭದ್ರತಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಷ್ಟೇ ಅಲ್ಲದೇ, ಸೈನಿಕರ ಅಸ್ತ್ರಗಳನ್ನೂ ಕಸಿದುಕೊಳ್ಳಲು ಪ್ರಯತ್ನಿಸಿದ್ದರು.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಎನ್ಕೌಂಟರ್ವೊಂದರಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಶನಿವಾರ ಹತ್ಯೆಗೈದಿದೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಭದ್ರತಾ ಪಡೆಯೊಂದಿಗೆ ಘರ್ಷಣೆಗಿಳಿದಿದ್ದು, ಈ ವೇಳೆ ನಡೆದ ಗೋಲಿಬಾರ್ಗೆ 7 ಮಂದಿ ನಾಗರಿಕರು ಬಲಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಎಂದಿನಂತೆಯೇ ಕಾಶ್ಮೀರಿ ರಾಜಕಾರಣಿಗಳು, ಪತ್ರಿಕೆಗಳು ಮತ್ತು ಪ್ರತ್ಯೇಕತಾವಾದಿಗಳಿಂದ ಅಮಾಯಕ ಕಾಶ್ಮೀರಿಗಳ ಮೇಲೆ ಸೈನ್ಯದ ಕ್ರೌರ್ಯ ಎಂದೇ ಈ ಘಟನೆಗೆ ರೂಪಕೊಡುವ ಪ್ರಯತ್ನ ನಡೆದಿದೆ.
ತನ್ನದೇ ಜನರನ್ನು ಕೊಲ್ಲುವ ಮೂಲಕ ಯಾವುದೇ ರಾಷ್ಟ್ರವೂ ಯುದ್ಧ ಗೆಲ್ಲಲಾರದು ಎಂದು ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಹೇಳಿದರೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಈ ಘಟನೆಯನ್ನು “ಹತ್ಯಾಕಾಂಡ’
ಎನ್ನುವುದನ್ನು ಬಿಟ್ಟು ಬೇರಾವ ಪದದಲ್ಲೂ ಕರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಅಮಾಯಕ ನಾಗರಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿತು ಎನ್ನುವ ಮಾತಿನಲ್ಲೇ ಸತ್ಯವಿಲ್ಲ. ಇವರ್ಯಾರೂ ಅಮಾಯಕ ನಾಗರಿಕರಲ್ಲ ಎನ್ನುವುದು ಇವರುಗಳ ಕೃತ್ಯದಿಂದಲೇ ಅರ್ಥವಾಗುತ್ತದೆ. ಉಗ್ರರನ್ನು ಕಾಪಾಡುವುದಕ್ಕಾಗಿ ಭದ್ರತಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಷ್ಟೇ ಅಲ್ಲದೇ, ಸೈನಿಕರ ಅಸ್ತ್ರಗಳನ್ನೂ ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ಭದ್ರತಾ ಪಡೆಗಳು ಕಠಿಣ ಪರಿಸ್ಥಿತಿಯಲ್ಲೂ ಸಂಯಮ ಕಾಪಾಡಿಕೊಳ್ಳಬೇಕು ಎಂದು ಆಪೇಕ್ಷಿಸುವುದು ಸರಿ. ಆದರೆ ಉಗ್ರರೊಂದಿಗೆ ಸೆಣಸುವ ವಿಷಮ ಸಮಯದಲ್ಲಿ ಈ ಮಾತನ್ನು ಅನ್ವಯಿಸಲು ಕಷ್ಟವಾಗುತ್ತದೆ.
ಉಗ್ರವಾದಿಗಳೂ ಕಲ್ಲು ತೂರಾಟಗಾರರ ಸೋಗಿನಲ್ಲಿ ಇರುವ ಅಪಾಯವೂ ಇರುತ್ತದೆ. ಸತ್ಯವೇ ನೆಂದರೆ, ಈ ಕಲ್ಲು ತೂರಾಟಗಾರರು ಅನೇಕಬಾರಿ ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೂ ಬಿಡುವುದಿಲ್ಲ. ಪುಲ್ವಾಮಾದ ಘಟನೆ ಯಲ್ಲೂ ಗಾಯಗೊಂಡ ಸೈನಿಕನನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿದ್ದರೆ ಬಹುಶಃ ಆತನ ಪ್ರಾಣ ಉಳಿಯುತ್ತಿತ್ತೇನೋ. ಆದರೆ ಈ ಉಗ್ರಪರ ಶಕ್ತಿಗಳು ಇದಕ್ಕೆ ಅನುವು ಮಾಡಿಕೊಟ್ಟಿಲ್ಲ. ಭದ್ರತಾ ಪಡೆಗಳಿಗೆ ಸಂಯಮದ ಪಾಠ ಮಾಡುವವರು ಇದನ್ನೆಲ್ಲ ಅರ್ಥಮಾಡಿಕೊಳ್ಳುವುದು ಅಗತ್ಯ.
ಏಕೆಂದರೆ, ಪುಲ್ವಾಮಾದಲ್ಲಿ ಸೈನಿಕರು ಕಲ್ಲು ತೂರುವವರ ಮೇಲೆ ಏಕೆ ಗುಂಡು ಹಾರಿಸಿದರೆಂದರೆ, ಲಾಠಿ ಚಾರ್ಜ್, ಅಶ್ರುವಾಯು ಮತ್ತು ಪೆಲೆಟ್ ಗನ್ನಿಂದ ಎಚ್ಚರಿಸಿದರೂ, ಈ ಜನರು ಸೈನಿಕರ ಪ್ರಾಣಕ್ಕೆ ಕುತ್ತಾಗಿ ಎದುರಾದರು. ಅತ್ತ ಉಗ್ರರು, ಇತ್ತ ಕಲ್ಲುತೂರಾಟಗಾರರಿಂದ ಪ್ರಾಣಕ್ಕೆ ಅಪಾಯ ಎದುರಾದಾಗ ಸೈನಿಕರ ಮುಂದಾದರೂ ಯಾವ ದಾರಿ ಇರುತ್ತದೆ?
ಉಗ್ರರನ್ನು ತಪ್ಪಿಸಿಕೊಳ್ಳಲು ಬಿಟ್ಟಿದ್ದರೆ ಕಾಶ್ಮೀರದ ಪೊಲೀಸರು, ಅರೆಸೈನಿಕ ದಳ ಮತ್ತು ಸೈನ್ಯದ ಸಾಮರ್ಥ್ಯದ ಮೇಲೆ ಪ್ರಶ್ನೆಗಳೇಳುತ್ತಿದ್ದವು. ಉಗ್ರರನ್ನು ಕಾಪಾಡುವುದಕ್ಕಾಗಿ ಸೈನಿಕರ ಮೇಲೆ ಕಲ್ಲು ತೂರುತ್ತಾ, ಅವರ ಪ್ರಾಣಕ್ಕೆ ಅಪಾಯ ತಂದವರಿಗೂ, ಅತ್ತ ಸೈನಿಕರನ್ನು ಸಾಯಿಸಲು ಹೊಂಚುಹಾಕುವ ಉಗ್ರರಿಗೂ ಏನು ವ್ಯತ್ಯಾಸವಿದೆ?
ಸೈನ್ಯ ಕಾರ್ಯಾಚರಣೆಯ ವೇಳೆ ನಡೆಸಲಾಗುವ ಕಲ್ಲು ತೂರಾಟವು “ಭಯೋತ್ಪಾದನೆಯ ಬಹಿರಂಗ ಸಮರ್ಥನೆ’ ಎನ್ನುವುದು ಈ ನಾಯಕರಿಗೆ ಅರ್ಥವಾಗುವುದು ಯಾವಾಗ? ಕಾಶ್ಮೀರದಲ್ಲಿ ಕಲ್ಲು ತೂರಾಟ ಕೇವಲ ದಂಧೆಯಾಗಿಯಷ್ಟೇ ಅಲ್ಲದೆ, ಉಗ್ರರನ್ನು ಬಚಾವು ಮಾಡುವ ಹಿಂಸಾತ್ಮಕ ದಾರಿಯಾಗಿಯೂ ಬದಲಾಗಿದೆ.
ಈ ರೀತಿಯ ಘಟನೆಗಳಲ್ಲಿ ಕಲ್ಲು ತೂರುವವರು ಮೃತಪಟ್ಟ ತಕ್ಷಣ ಅವರನ್ನು ಕಾಶ್ಮೀರದ ಅಮಾಯಕ ಯುವಕರು, ಸಾಮಾನ್ಯ ನಾಗರಿಕರು ಎಂದು ಬಿಂಬಿಸುವ ಕೆಲಸವನ್ನು ಆರಂಭಿಸಲಾಗುತ್ತದೆ. ಕಲ್ಲು ತೂರುವವರಿಗೆ ಹಣ ಹರಿದುಬರುತ್ತದೆ, ಅವರು ಹುರಿಯತ್ ಕಾನ್ಫರೆನ್ಸ್ನಂಥ ಪ್ರತ್ಯೇಕತಾವಾದಿ ಸಂಘಟನೆಗಳ ದಿನವಹಿ ಕೆಲಸದಾಳಾಗಿ ಬದಲಾಗಿದ್ದಾರೆ ಎನ್ನುವುದನ್ನು ಓಮರ್ ಮತ್ತು ಮೆಹಬೂಬಾರಂಥ ನಾಯಕರು ಒಪ್ಪಿಕೊಳ್ಳುವುದು ಯಾವಾಗ? ಸೈಯ್ಯದ್ ಅಲಿ ಶಾಹ್ ಗಿಲಾನಿ, ಮಿರ್ವಾಯಿಜ್ ಉಮರ್ ಫಾರೂಕ್, ಯಾಸೀನ್ ಮಲಿಕ್ರಂಥವರು ಕಾಶ್ಮೀರದ ಯುವಕರ ತಲೆ ತುಂಬಿ ಅವರ ಕೈಗೆ ಕಲ್ಲು ಕೊಟ್ಟು ಸಾವಿನಂಚಿಗೆ ತಳ್ಳುತ್ತಿದ್ದಾರೆ ಎನ್ನುವುದನ್ನು ಕಾಶ್ಮೀರಿ ರಾಜಕಾರಣಿಗಳು ಮತ್ತು ನಾಗರಿಕರು ಒಪ್ಪಿಕೊಳ್ಳುವವರೆಗೆ ಈ ವಿಷ ಚಕ್ರ ಮತ್ತು ಭದ್ರತಾಪಡೆಗಳ ಮೇಲಿನ ದಾಳಿಗಳು ನಿಲ್ಲುವುದಿಲ್ಲವೇನೋ?