ವಂದೇ ಭಾರತ್ಗೆ “ಕಾಟ’: ಅವಮಾನ ಮಾಡದಿರಿ
Team Udayavani, Feb 22, 2019, 12:30 AM IST
ಭಾರತದ ಹೆಮ್ಮೆಯ ಸ್ವದೇಶಿ ನಿರ್ಮಿತ, ಅತಿವೇಗದ ವಂದೇ ಭಾರತ್ ಎಕ್ಸ್ ಪ್ರಸ್ ರೈಲಿಗೆ ತೊಂದರೆಗಳು ತಪ್ಪುತ್ತಿಲ್ಲ. ಆರಂಭದಲ್ಲಿ ಎದುರಾದ ಕೆಲ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಈಗ ರೈಲು ಮುನ್ನುಗ್ಗುತ್ತಿ ದೆಯಾದರೂ, ಅದರತ್ತ ಕಲ್ಲೆಸೆದು ಗಾಜುಗಳನ್ನು ಪುಡಿಮಾಡುತ್ತಿರುವ ಪುಂಡರ ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎನ್ನುವ ಬೃಹತ್ ಪ್ರಶ್ನೆ ಈಗ ಎದುರಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಪಡಿಸಲಾದ ದೇಶದ ಮೊದಲ ಸೆಮಿ ಹೈ ಸ್ಪೀಡ್ ರೈಲಿನ ಮೇಲೆ ದುಷ್ಕರ್ಮಿಗಳು 3ನೇ ಬಾರಿ ಕಲ್ಲು ಎಸೆದಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪರೀಕ್ಷಾರ್ಥ ಓಡಾಟ ಆರಂಭಿಸಿದ್ದ ವೇಳೆಯಲ್ಲೂ ಈ ರೀತಿ ರೈಲಿಗೆ ಕಲ್ಲೆಸೆದು ಹಾನಿ ಮಾಡಲಾಗಿತ್ತು. ಬುಧವಾರ ಮತ್ತೆ ಇಂಥದ್ದೇ ಘಟನೆ ನಡೆದಿದ್ದು ದುಷ್ಕರ್ಮಿಗಳು ರೈಲಿನ ಕಿಟಕಿಗಳನ್ನು ಪುಡಿ ಮಾಡಿದ್ದಾರೆ. ಇಲ್ಲವೇ, ತಿಳಿವಳಿಕೆ ಇಲ್ಲದ ಹುಡುಗರು ಮಾಡಿರುವ ಕೃತ್ಯವೂ ಇದಾಗಿರಬಹುದು. ತನಿಖೆಯಿಂದ ಸತ್ಯ ಹೊರಬರುತ್ತದೆ.
ಆದರೆ ನಿಜಕ್ಕೂ ಬೇಸರ ಉಂಟುಮಾಡುತ್ತಿರುವ ಸಂಗತಿಯೆಂದರೆ, ವಂದೇ ಭಾರತ್ ರೈಲಿನ ವಿಚಾರದಲ್ಲಿ ತಿಳಿವಳಿಕಸ್ಥರು ಎಂದು ಕರೆಸಿಕೊಳ್ಳುವವರ ವರ್ತನೆ. ಮೊದಲ ವಾಣಿಜ್ಯ ಓಡಾಟದ ದಿನ ತಾಂತ್ರಿಕ ಕಾರಣಗಳಿಂದ ಈ ರೈಲು ಕೆಲ ಕಾಲ ಸ್ಥಗಿತಗೊಂಡದ್ದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶ ಮಾಜಿ ಸಿಎಂ ಅಖೀಲೇಶ್ ಯಾದವ್ ಈ ಘಟನೆಗೆ ರಾಜಕೀಯ ಸ್ಪರ್ಶ ಕೊಡಲು ಪ್ರಯತ್ನಿಸಿದ್ದರು. ರೈಲಿನ ಸಮಸ್ಯೆಯನ್ನು ನೆಪವಾಗಿಟ್ಟುಕೊಂಡ ರಾಹುಲ್ ಗಾಂಧಿ ಮೇಕ್ ಇನ್ ಇಂಡಿಯಾ ವಿಫಲವಾಗಿದೆ ಎಂಬ ಧಾಟಿಯಲ್ಲಿ ಮಾತನಾಡಿದರೆ, ಉತ್ತರ ಪ್ರದೇಶ ಮಾಜಿ ಸಿಎಂ ಅಖೀಲೇಶ್ ಯಾದವ್ ರೈಲು ಎದುರಿಸಿದ ತಾಂತ್ರಿಕ ತೊಂದರೆಗಳನ್ನು ಭಾರತದ ಸ್ಥಿತಿಗೆ ಹೋಲಿಸಿ ಪ್ರಧಾನಿ ಮೋದಿಯವರ ಕಾಲೆಳೆಯಲು ಪ್ರಯತ್ನಿಸಿದರು. ರೈಲು ಕ್ಷಣಕಾಲ ಸ್ಥಗಿತಗೊಂಡ ಸುದ್ದಿಯನ್ನು ಕೆಲ ಮಾಧ್ಯಮಗಳಂತೂ “ಫ್ಲಾಪ್ ಶೋ’ ಎನ್ನುವ ಮಟ್ಟಕ್ಕೆ ಕರೆದುಬಿಟ್ಟವು.
ಇವರೆಲ್ಲರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ, ಎಲ್ಲರೂ ರೈಲು ಕೆಟ್ಟು ನಿಲ್ಲಲಿ ಎಂದೇ ಕಾಯುತ್ತಿದ್ದರೇನೋ ಎಂದೆನಿಸದೇ ಇರದು.
ಫ್ಲಾಪ್ ಶೋ ಎನ್ನುವುದಕ್ಕೆ ಇದು ರಿಯಾಲಿಟಿ ಕಾರ್ಯಕ್ರಮವಲ್ಲ. ದೇಶದ ಎಂಜಿನಿಯರ್ಗಳ, ತಂತ್ರಜ್ಞರ ಪರಿಶ್ರಮದ ಫಲ ಈ ರೈಲು. ಸತ್ಯವೇನೆಂದರೆ ವಂದೇ ಭಾರತ ಎಕ್ಸ್ಪ್ರೆಸ್ ಅನ್ನು ಅಣಕಿಸುವ ಮೂಲಕ ತಾವೂ ಮೋದಿಯನ್ನು ಹಂಗಿಸುತ್ತಿದ್ದೇವೆ ಎಂದು ರಾಹುಲ್, ಅಖೀಲೇಶ್ ಸೇರಿದಂತೆ ಅನೇಕರು ಭಾವಿಸಿರುವುದೇ ಈ ರೀತಿಯ ಹೇಳಿಕೆಗಳಿಗೆ, ಹೆಡ್ಲೈನ್ಗಳಿಗೆ ಕಾರಣ. ತಾವು ನಿಜಕ್ಕೂ ಹಂಗಿಸುತ್ತಿರುವುದು ಮತ್ತು ತಮ್ಮ ಮಾತು ಗಳು ಘಾಸಿ ಮಾಡುತ್ತಿರುವುದು ಈ ಯೋಜನೆಗಾಗಿ ಬೆವರು ಹರಿ ಸಿದ ದೇಶದ ಇಂಜಿನಿಯರ್ಗಳನ್ನು ಮತ್ತವರ ಪ್ರಾಮಾಣಿಕ ಪರಿಶ್ರಮವನ್ನು ಎನ್ನುವುದನ್ನು ಇವರ್ಯಾರೂ ಅರಿತುಕೊಳ್ಳದಿರುವುದು ದುರಂತ.
ಇತ್ತೀಚಿನ ದಿನಗಳಲ್ಲಂತೂ, ರಾಜಕೀಯ ಕಾರಣಗಳಿಗಾಗಿ ದೇಶದ ಸಾಧನೆಯನ್ನು ಅಲ್ಲಗಳೆಯುವ ಅಥವಾ ನಿರಾಕರಿಸುವ ಅತಿರೇಕದ ವರ್ತನೆಗಳು ಹೆಚ್ಚಾಗುತ್ತಿವೆ. ಮೋದಿ ಸರ್ಕಾರದ ಅವಧಿಯಲ್ಲಿ ನಡೆಯಿತು ಎನ್ನುವ ಒಂದೇ ಕಾರಣಕ್ಕಾಗಿ “ಸರ್ಜಿಕಲ್ ಸ್ಟ್ರೈಕ್’ ನಡೆದೇ ಇಲ್ಲ ಎಂಬ ಧಾಟಿಯಲ್ಲಿ ಮಾತನಾಡಿ ಸೇನೆಗೆ ಅವಮಾನ ಮಾಡಲಾಯಿತು. “ದಾಳಿಗೆ ಪುರಾವೆ ಕೊಡಿ’ ಎಂದು ಥೇಟ್ ಪಾಕಿಸ್ತಾನ ನಮ್ಮನ್ನು ಪ್ರತಿ ಬಾರಿಯೂ ಕೇಳುವ ರೀತಿಯಲ್ಲೇ ಪ್ರತಿಪಕ್ಷಗಳ ಕೆಲ ನಾಯಕರು ಕೇಳಿದರು.
ಯಾವುದೇ ಒಂದು ತಂತ್ರಜ್ಞಾನಿಕ ಯೋಜನೆಯಿರಲಿ, ಅದರಲ್ಲಿ ಟ್ರಯಲ್ ಅಡ್ ಎರರ್ ಇದ್ದದ್ದೇ. ಕೆಲವೊಮ್ಮೆ ಎಷ್ಟೇ ತಯ್ನಾರಿ ಮಾಡಿಕೊಂಡರೂ ಅನುಷ್ಠಾನದ ಸಮಯದಲ್ಲಿ ಅನಿರೀಕ್ಷಿತ ಸವಾಲುಗಳು-ಸಮಸ್ಯೆಗಳು ಎದುರಾಗಿಬಿಡುತ್ತವೆ. ಆ ಸಮಸ್ಯೆಗಳನ್ನು ಸೋಲು ಎಂದು ಭಾವಿಸಿದರೆ ಮುನ್ನುಗ್ಗುವುದಾದರೂ ಹೇಗೆ? ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆ ಕೂಡ ಅನೇಕ ಬಾರಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದೆ. ಆ ದೋಷಗಳನ್ನೆಲ್ಲ ಸರಿಪಡಿಸಿಕೊಂಡು-ಅದರಿಂದ ಪಾಠ ಕಲಿತೇ ಈ ಮಟ್ಟಕ್ಕೆ ಬೆಳೆದು ನಿಂತಿದೆಯಲ್ಲವೇ? ಇಂದು ಈ ಸಂಸ್ಥೆ ಅದ್ಭುತ ತಾಂತ್ರಿಕ ನೈಪುಣ್ಯ ಸಾಧಿಸಿ ಜಗತ್ತಿನ ಬಾಹ್ಯಾಕಾಶ ಲೋಕದಲ್ಲಿ ಹೆಸರು ಪಡೆಯುವುದರ ಹಿಂದೆ ಅದು ಎದುರಿಸಿದ ಸವಾಲು-ಸಮಸ್ಯೆಗಳೇನು ಕಡಿಮೆಯೇ? ಹಾಗೆಂದು, ಆಗೆಲ್ಲ ಅದು ಎದುರಿಸಿದ ಸಮಸ್ಯೆಗಳನ್ನು ರಾಜಕೀಯಗೊಳಿಸಿದ್ದರೆ ವಿಜ್ಞಾನಿಗಳು-ಇಂಜಿನಿಯರ್ಗಳ ಶ್ರಮಕ್ಕೆ ಅವಮಾನ ಮಾಡಿದಂತೆ ಆಗುತ್ತಿರಲಿಲ್ಲವೇ? ಪ್ರಗತಿಗೆ ಹಿನ್ನಡೆಯಾಗುತ್ತಿರಲಿಲ್ಲವೇ?
ಹೀಗಾಗಿ, ಇನ್ನುಮುಂದಾದರೂ ಈ ರೀತಿಯ ಯೋಜನೆಗಳ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಎಲ್ಲರೂ ಬಿಡಬೇಕಿದೆ. ಈ ರೈಲನ್ನು ಚುನಾವಣೆಯ “ವಾಹನ’ ಮಾಡಿಕೊಳ್ಳುವ ಬದಲು ಅದನ್ನು “ಭಾರತದ ಹೆಮ್ಮೆ’ ಎಂದು ನೋಡುವ ದೃಷ್ಟಿ ಬೆಳೆಸಿಕೊಂಡಷ್ಟೂ ದೇಶದ ಪ್ರಗತಿಗೆ ಹಿತ.