ಗಜೇಂದ್ರಗಡಕ್ಕಿಲ್ಲ ತಹಶೀಲ್ದಾರ್ ಭಾಗ್ಯ
Team Udayavani, Oct 27, 2018, 5:37 PM IST
ಗಜೇಂದ್ರಗಡ: ಸಾರ್ವಜನಿಕರಿಗೆ ಸರ್ಕಾರಿ ಸೇವೆ ತ್ವರಿತಗತಿಯಲ್ಲಿ ನೀಡಬೇಕೆನ್ನುವ ಉದ್ದೇಶದಿಂದ ಗಜೇಂದ್ರಗಡದಲ್ಲಿ ಆರಂಭವಾಗಿರುವ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರರೇ ಇಲ್ಲ. ಇದರಿಂದ ಕಡತಗಳು ವಿಲೇವಾರಿಯಾಗುತ್ತಿಲ್ಲ. ಕಚೇರಿಗೆ ಜನರ ನಿತ್ಯ ಅಲೆದಾಟ ತಪ್ಪಿಲ್ಲ. ಗಜೇಂದ್ರಗಡ ನೂತನ ತಾಲೂಕು ಕೇಂದ್ರವೆಂದು ಘೋಷಣೆಯಾಗುವುದಲ್ಲದೇ ಆಡಳಿತಾತ್ಮಕ ಚಾಲನೆ ದೊರೆತು ಒಂಬತ್ತು ತಿಂಗಳು ಕಳೆದಿವೆ. ಆದರೆ ಕಚೇರಿಗೆ ಅಂದು ಹಿಡಿದ ಗ್ರಹಣ ಇನ್ನು ಬಿಡದಂತಾಗಿದೆ. ಈವರೆಗೂ ಕಾಯಂ ತಹಶೀಲ್ದಾರ್ ನೇಮಕವಾಗದ ಪರಿಣಾಮ ಸಾರ್ವಜನಿಕರ ಸಮಸ್ಯೆಗೆ ಕೊನೆಯಿಲ್ಲದಂತಾಗಿದೆ.
ಸರ್ಕಾರವೆನೋ ಗಜೇಂದ್ರಗಡವನ್ನು ತಾಲೂಕನ್ನಾಗಿ ಘೋಷಣೆ ಮಾಡಿ ಕೈ ತೊಳೆದುಕೊಂಡಿತು. ಆದರೆ ಕಚೇರಿಗೆ ಬೇಕಾದ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡಿಲ್ಲ. ಹೀಗಾಗಿ ಜನ ತಮ್ಮ ಕೆಲಸ ಕಾರ್ಯಗಳಿಗೆ ಇನ್ನೂ ರೋಣ ಪಟ್ಟಣಕ್ಕೆ ಅಲೆಯುವುದು ತಪ್ಪಿಲ್ಲ. ಅತ್ತ ಪೂರ್ಣ ಅಧಿಕಾರವುಳ್ಳ ತಹಶೀಲ್ದಾರರೂ ಇಲ್ಲ. ಇತ್ತ ಸಮರ್ಪಕ ಸಿಬ್ಬಂದಿಯೂ ಇಲ್ಲವಾಗಿ, ಆರಕ್ಕೇರದ, ಮೂರಕ್ಕೂ ಇಳಿಯದ ಕರುಣಾಜನಕ ಸ್ಥಿತಿ ಗಜೇಂದ್ರಗಡ ತಹಶೀಲ್ದಾರ್ ಕಾರ್ಯಾಲಯಕ್ಕೆ ಬಂದೊದಗಿದೆ.
ಕಚೇರಿಗಿಲ್ಲ ತಹಶೀಲ್ದಾರ್ ಭಾಗ್ಯ: ಗಜೇಂದ್ರಗಡದ ತಹಶೀಲ್ದಾರ ಕಚೇರಿ ಕಳೆದ ಒಂಬತ್ತು ತಿಂಗಳಿಂದ ಕುಂಟುತ್ತಾ, ತೆವಳುತ್ತಾ ಮಂದಗತಿಯಲ್ಲಿ ಜನರಿಗೆ ಸೇವೆ ನೀಡುತ್ತಿದೆ. ಇಲ್ಲಿಯ ವರೆಗೆ ನಾಲ್ಕಕ್ಕೂ ಅಧಿಕ ತಹಶೀಲ್ದಾರರು ಬದಲಾವಣೆಯಾಗಿದ್ದಾರೆ. ಕರ್ತವ್ಯಕ್ಕೆ ಹಾಜರಾಗಿ ತಿಂಗಳು ಕಳೆಯುವಷ್ಟರಲ್ಲೇ ಮತ್ತೂಂದು ಕಡೆ ವರ್ಗಾವಣೆ ಆಗುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ.
2018 ಜನವರಿ 24ರಂದು ಗಜೇಂದ್ರಗಡ ತಹಶೀಲ್ದಾರ್ ಕಚೇರಿ ಆರಂಭವಾಯಿತು. ಆ ಸಂದರ್ಭದಲ್ಲಿ ಶಿವಕುಮಾರ ವಸ್ತ್ರದ ತಹಶೀಲ್ದಾರ್ ಆಗಿ ಸೇವೆ ಆರಂಭಿಸಿದ ಬಳಿಕ ಬೇರೆಡೆ ವರ್ಗಾವಣೆಯಾದರು. ಇದಾದ ಬಳಿಕ ಪ್ರಭಾರಿಯಾಗಿ ಶ್ರೀಶೈಲ ತಳವಾರ ಸೇವೆಗೆ ಹಾಜರಾದರು. ನಂತರ ಕೆ.ಬಿ. ಕೋರಿಶೆಟ್ಟರ ಆಗಮಿಸಿದರು. ಬಳಿಕ ಇವರು ಸಹ ವರ್ಗಾವಣೆಗೊಂಡರು. ಈ ಮೊದಲಿದ್ದ ತಳವಾರ ಅವರು, ಸೇವೆಗೆ ಹಾಜರಾಗುತ್ತಿದ್ದಂತೆ ಅವರು ಕೂಡಾ ಇಲಾಖೆ ವತಿಯಿಂದ ತರಬೇತಿಗಾಗಿ ತೆರಳಿದರು.
ಮತ್ತೇ ತಹಶೀಲ್ದಾರ್ ಹುದ್ದೆ ಖಾಲಿಯಾಗಿಯೇ ಉಳಿಯಿತು. ಇದನ್ನು ಮನಗಂಡ ಮೇಲಾಧಿಕಾರಿಗಳು ರೋಣ ತಾಲೂಕು ತಹಶೀಲ್ದಾರ ಅಜೀತ ರೈ ಅವರನ್ನು ಪ್ರಭಾರಿಯನ್ನಾಗಿ ಅ. 1ರಂದು ಗಜೇಂದ್ರಗಡಕ್ಕೆ ನೇಮಕ ಮಾಡಿದರು. ಆದರೆ ನಾಲ್ಕು ವಾರದಲ್ಲಿ ಒಂದು ದಿನ ಮಾತ್ರ ಗಜೇಂದ್ರಗಡದ ಕಚೇರಿಯಲ್ಲಿ ಸೇವೆ ನೀಡಿ, ಇದೀಗ ಅವರೂ ಬೇರೆಡೆಗೆ ವರ್ಗಾವಣೆ ಆಗಿರುವುದರಿಂದ ಗಜೇಂದ್ರಗಡಕ್ಕೆ ಕಾಯಂ ತಹಶೀಲ್ದಾರ್ ಕನಸಾಗಿಯೇ ಉಳಿದಿದೆ.
ಸಿಬ್ಬಂದಿಯಿಲ್ಲದ ತಾಲೂಕು ಕಚೇರಿ: ತಹಶೀಲ್ದಾರ್ ಕಚೇರಿಯಲ್ಲಿ ಒಬ್ಬ ತಹಶೀಲ್ದಾರ್, ಇಬ್ಬರು ಶಿರಸ್ತೇದಾರ, ಇಬ್ಬರು ಪ್ರಥಮ ದರ್ಜೆ, ನಾಲ್ವರು ದ್ವಿತೀಯ ದರ್ಜೆ ಸಹಾಯಕರ ಅಗತ್ಯವಿದೆ. ಆದರೆ ಗಜೇಂದ್ರಗಡ ತಹಶೀಲ್ದಾರ್ ಕಚೇರಿಯಲ್ಲಿ ಒಬ್ಬ ಪ್ರಥಮ ದರ್ಜೆ ಸಹಾಯಕರನ್ನು ಹೊರತುಪಡಿಸಿ, ಯಾವುದೇ ವರ್ಗದ ಅಧಿಕಾರಿಗಳು ಇಲ್ಲದ ಪರಿಣಾಮ ಸಿಬ್ಬಂದಿ ಕೊರತೆ ತಾಲೂಕು ಕಚೇರಿಗೆ ತೀವ್ರವಾಗಿ ಕಾಡುತ್ತಿದೆ. ಆದರೆ ಸರ್ಕಾರ ಮಾತ್ರ ಅಧಿಕಾರಿಗಳ ನೇಮಕಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಈ ಭಾಗದ ಜನರು ನಡೆಸಿದ ಹೋರಾಟಕ್ಕೆ ಸರ್ಕಾರವೇನೊ ತಾಲೂಕು ಕೇಂದ್ರ ಘೋಷಣೆ ಮಾಡಿತು. ಆದರೆ ತಾಲೂಕು ಕಚೇರಿಗೆ ಬೇಕಾದ ಪೂರ್ಣ ಪ್ರಮಾಣದ ತಹಶೀಲ್ದಾರ್ ಸೇರಿದಂತೆ ಇನ್ನಿತರ ಸಿಬ್ಬಂದಿ ಹಾಗೂ ಮೂಲ ಸೌಲಭ್ಯಗಳನ್ನು ಸರ್ಕಾರ ಶೀಘ್ರದಲ್ಲೇ ಒದಗಿಸದಿದ್ದರೆ ಮತ್ತೂಂದು ಹೋರಾಟಕ್ಕೆ ಜನತೆ ಅಣಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಕಾಯಂ ತಹಶೀಲ್ದಾರ್ ಸೇರಿದಂತೆ ಗಜೇಂದ್ರಗಡ ತಾಲೂಕು ಕಚೇರಿಗೆ ಬೇಕಾದ ಸಿಬ್ಬಂದಿ ಜೊತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು.
ಭೀಮಣ್ಣ ಇಂಗಳೆ,
ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ
ಕಾಯಂ ತಹಶೀಲ್ದಾರ್ ಸೇರಿ ಮೂಲ ಸೌಲಭ್ಯ ಒದಗಿಸುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಗಜೇಂದ್ರಗಡ ತಾಲೂಕು ಕಚೇರಿಗೆ ಪ್ರಭಾರಿ ತಹಶೀಲ್ದಾರರನ್ನಾಗಿ ಆರ್. ಎಸ್. ಮದಗುಣಕಿ ಅವರನ್ನು ನೇಮಕ ಮಾಡಿದ್ದಾರೆ. ಆದರೆ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ.
ವೀರಣ್ಣ ಅಡಗತ್ತಿ, ಕಂದಾಯ ನಿರೀಕ್ಷಕ
ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ