ಮನೆ-ಮನ ಬೆಳಗಿದ ದೀವಿಗೆ
Team Udayavani, Nov 9, 2018, 4:50 PM IST
ಗದಗ: ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಮನೆ, ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್ಗಳಲ್ಲಿ ಧನಲಕ್ಷ್ಮೀ ಆರಾಧನೆ ಜೋರಾಗಿತ್ತು. ಮಹಿಳೆಯರು ನೂತನ ವಸ್ತ್ರ, ಚಿನ್ನಾಭರಣ ಧರಿಸಿ ಗಮನ ಸೆಳೆದರೆ, ಮುದ್ದು ಮಕ್ಕಳು, ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ದೀಪಾವಳಿ ಹಬ್ಬದ ಆಚರಣೆಗಾಗಿ ಜಿಲ್ಲಾದ್ಯಂತ ಮಹಿಳೆಯರು ಬೆಳಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದರು. ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಾದ ಪುಟ್ಟರಾಜ ಕವಿ ಗವಾಯಿಗಳ ಆಶ್ರಮ, ಸಾಯಿಬಾಬಾ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ, ಜೋಡು ಮಾರುತಿ, ಗಂಗಾಪುರ ಪೇಟೆ ದುರ್ಗಾದೇವಿ, ಬೆಟಗೇರಿ ಬನಶಂಕರಿ ದೇವಸ್ಥಾನ ಸೇರಿದಂತೆ ಅವಳಿ ನಗರದ ಪ್ರಮುಖ ದೇವಸ್ಥಾನ ಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೀಪಾವಳಿ ಹಬ್ಬದಂದೇ ಹೊಸದಾಗಿ ವಾಹನಗಳ ಖರೀದಿಸಿದವರು ತಮ್ಮ ಇಷ್ಟ ದೇವರ ಸನ್ನಿಧಾನದಲ್ಲಿ ನೂತನ ಪೂಜೆ ನೆರವೇರಿಸಿದರು.
ಮನೆ-ಮನ ಬೆಳಗಿದ ದೀವಿಗೆ: ಬಾನಂಗಳದಲ್ಲಿ ಕತ್ತಲೆ ಆವರಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲೂ ಹಣತೆಯ ದೀಪಗಳು ಮನೆ- ಮನಗಳನ್ನು ಬೆಳಗಿದವು. ದೀಪಾವಾಳಿ ನಿಮಿತ್ತ ಬಹುತೇಕರು ತಮ್ಮ ಮನೆ ಮುಖ್ಯ ಬಾಗಿಲು, ಕಿಟಕಿ, ಹಾಗೂ ಕಾಂಪೌಂಡ್ ಗೋಡೆಗಳ ಮೇಲೆ ಹಣತೆಗಳನ್ನು ಸಾಲು ಸಾಲಾಗಿ ಹಚ್ಚಿ, ಬೆಳಕು ಮೂಡಿಸಿರುವುದು ನೋಡುಗರಿಗೆ ಮುದ ನೀಡಿತು.
ಬಾಗಿಲು ಹಾಗೂ ದೇವರ ಮಂಟಪಗಳನ್ನು ಬಾಳೆ ಎಲೆ ಹಾಗೂ ಮಾವಿನ ಎಲೆಗಳಿಂದ ಅಂಲಕರಿಸಲಾಗಿತ್ತು. ಇನ್ನೂ ಕೆಲವರು ಮನೆ ಹಾಗೂ ಅಂಗಡಿ ಮುಂಗಟ್ಟುಗಳನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರಿಂದ ಬೆಳಕಿನ ಕಿರಣಗಳ ಮಧ್ಯೆ ಕಟ್ಟಡಗಳು ಜಗಮಗಿಸುತ್ತಿದ್ದವು.
ಎಲ್ಲೆಲ್ಲೂ ಲಕ್ಷ್ಮೀ ದೇವಿ ಆರಾಧನೆ: ಅವಳಿ ನಗರದ ಸಾವಿರಾರು ಅಂಗಡಿ ಮುಂಗಟ್ಟುಗಳು, ನೂರಾರು ಹೋಟೆಲ್ಗಳಲ್ಲಿ ಅರ್ಚಕರು ಧಾರ್ಮಿಕ ವಿ ವಿಧಾನಗಳೊಂದಿಗೆ ಮಹಾಗಣಪತಿ ಹಾಗೂ ತಾಯಿ ಅಷ್ಟಲಕ್ಷ್ಮೀಯರ ಪೂಜೆ ನೆರವೇರಿಸಿದರು.
ಪೂಜೆಗೆ ನೆಂಟರಿಷ್ಟರು, ಸ್ನೇಹಿತರು ಹಾಗೂ ಅಕ್ಕ-ಪಕ್ಕದವರನ್ನು ಪೂಜೆಗೆ ಆಹ್ವಾನಿಸಿ ಬಾಳೆ ಹಣ್ಣು, ಎಲೆ ಅಡಿಕೆ ಹಾಗೂ ಉಪಹಾರ ನೀಡಿ ಸತ್ಕರಿಸಿದರು. ಸ್ಥಿತಿವಂತ ಉದ್ಯಮಿಗಳು ಹಬ್ಬದೂಟ ಬಡಿಸಿ ತಾಯಿ ಲಕ್ಷ್ಮೀದೇವಿ ಕೃಪೆಗೆ ಪಾತ್ರರಾದರು. ಇನ್ನುಳಿದಂತೆ ಮನೆಗಳಲ್ಲೂ ಮುತ್ತೈದೆಯರು ತಾಯಿ ಲಕ್ಷೀದೇವಿ, ಗೌವರಮ್ಮ ಪೂಜೆ ನೆರವೇರಿಸಿದರು. ಮನೆ ದೇವರ ಕೋಣಿಯಲ್ಲಿ ಕಳಶ ಹಾಗೂ ಮಡಿ ನೀರು ತುಂಬಿದ್ದ ಕಂಚಿನ ತಂಬಿಗೆಯಲ್ಲಿ ತೆಂಗಿನ ಕಾಯಿಗೆ ಸೀರೆ ಉಡಿಸಿ ವಿವಿಧ ಹೂವುಗಳಿಂದ ಲಕ್ಷ್ಮೀ ದೇವಿ ಪ್ರತಿಮೆ ತಯಾರಿಸಿ ಭಕ್ತಿಯಿಂದ ಪೂಜಿಸಿದರು.