ಬೇಸಿಗೆಯಲ್ಲಿ ಗರಿಗರಿ ಸಂಡಿಗೆ ತಯಾರಿ!
Team Udayavani, Mar 15, 2019, 11:14 AM IST
ಗಜೇಂದ್ರಗಡ: ಬೇಸಿಗೆ ಬಂತೆಂದರೆ ಸಾಕು ಅಬ್ಬಬ್ಟಾ ಇದೆಂತಹ ಬಿರು ಬಿಸಿಲು ಎಂದು ಜನ ಬೇಸರ ವ್ಯಕ್ತಪಡಿಸಿದರೆ, ಇತ್ತ ಮಹಿಳೆಯರಿಗೆ ಬಿಸಿಲಿನ ಪ್ರಕರತೆ ಎಂದರೆ ಖುಷಿಯೋ ಖುಷಿ. ಏಕೆಂದರೆ ಮನೆಯ ಮಾಳಿಗೆ ಮೇಲೆ ಸಂಡಿಗೆ (ಕುರುಕುಲು) ಮಾಡಲು ಒಳ್ಳೆ ಸಂದರ್ಭ.
ಮಹಿಳೆಯರಿಗೆ ಬೇಸಿಗೆಯ ಬಿಸಿಲೆಂದರೆ ತಟ್ಟನೆ ನೆನಪಾಗೋದು ಸಂಡಿಗೆ, ಹಪ್ಪಳ, ಶ್ಯಾವಿಗೆ, ಉಪ್ಪಿನಕಾಯಿ ಹೀಗೆ ಇಡೀ ವರ್ಷಕ್ಕಾಗುವಷ್ಟು ಈ ಪದಾರ್ಥಗಳ ತಯಾರಿಗೆ ನಾರಿಯರ ಪ್ರಥಮ ಆದ್ಯತೆ. ಆದರೆ ಪಟ್ಟಣ ಪ್ರದೇಶಗಳಲ್ಲಿ ಇವುಗಳ ತಯಾರಿಕೆ ಕ್ಷೀಣಿಸುತ್ತಿದ್ದು, ಇಂದಿನ ರೇಡಿಮೇಡ್ ಫುಡ್ ಐಟಮ್ಸ್ಗಳ ಜಮಾನಾದಲ್ಲಿ ದೇಸಿ ಸೊಗಡು ಕಣ್ಮರೆಯಾಗುತ್ತಿದೆ.
ಹಬ್ಬ ಹರಿದಿನ, ಮದುವೆ, ನಾಮಕರಣ, ಸೀಮಂತ, ಅತಿಥಿಗಳ ಸತ್ಕಾರ ಹೀಗೆ ಪ್ರತಿಯೊಂದು ಕಾರ್ಯಕ್ರಮದ ಭೋಜನಕ್ಕೆಂದು ತಯಾರಿಸುವ ಬಗೆ ಬಗೆಯ ಖಾದ್ಯಗಳೊಂದಿಗೆ ಸಂಡಿಗೆ, ಹಪ್ಪಳಗಳಿಲ್ಲದಿದ್ದರೆ ಆ ಸಮಾರಂಭ ಅಪೂರ್ಣ. ಅದಕ್ಕಾಗಿಯೇ ಅನೇಕ ಮಹಿಳೆಯರು ಬೇಸಿಗೆ ದಿನಗಳಲ್ಲಿ ಸಕಲ ಪೂರ್ವ ಸಿದ್ಧತೆಗಳೊಂದಿಗೆ ಇವುಗಳ ತಯಾರಿಕೆ ಕಾರ್ಯದಲ್ಲಿ ನಿರತರಾಗುತ್ತಾರೆ.
ಆಧುನಿಕ ಸೌಕರ್ಯದ ಯುಗದಲ್ಲಿ ದುಡ್ಡು ಕೊಟ್ಟರೆ ಸಾಕು ಎಲ್ಲವು ಪಟ್ಟಣಗಳಲ್ಲಿ ಯಂತ್ರದಿಂದ ಸಿದ್ಧಪಡಿಸಿರುವ ಪದಾರ್ಥಗಳು ಸುಲಲಿತವಾಗಿ ಸಿಗುತ್ತವೆ. ಹೀಗಾಗಿ ಬಹುತೇಕ ಮಹಿಳೆಯರು ಮನೆಯಲ್ಲಿ ತಯಾರಿಸುವ ಶಾವಿಗೆ, ಹಪ್ಪಳ, ಸಂಡಿಗೆ ಮಾಡುವುದನ್ನೆ ಮರೆತಿದ್ದಾರೆ. ಇಷ್ಟೊಂದು ಹೈರಾಣಾಗಿ ವರ್ಷಪೂರ್ತಿ ಸಂಗ್ರಹಿಸಿಡುವುದು ಎಂದರೆ ಆಗಲಾರದ ಮಾತೆ ಎಂಬ ಉಚ್ಚಾರಣೆ ನಾರಿಮಣಿಯರ ತುಟಿಯಂಚಿನಲ್ಲಿ ಸುಳಿದಾಡುತ್ತಿದೆ.
ಇಂತಹ ಸಂದರ್ಭದಲ್ಲಿ ಮಹಿಳೆಯರು ಪಾರಂಪರಿಕ ಆಹಾರ ಪದ್ಧತಿ ಇನ್ನೂ ಮುಂದುವರಿಸಿದ್ದಾರೆ ಎಂಬುದಕ್ಕೆ ಸಂಡಿಗೆ ಮಾಡುತ್ತಿರುವ ದೃಶ್ಯವೇ ಸಾಕ್ಷಿ. ಉತ್ತರ ಕರ್ನಾಟಕ ಊಟದಲ್ಲಿ ಇಂದಿಗೂ ಸಂಡಿಗೆ, ಹಪ್ಪಳಕ್ಕೆ ವೈಶಿಷ್ಟ್ಯ ಸ್ಥಾನಮಾನ ಕಲ್ಪಿಸಲಾಗಿದೆ. ಬೀಗರು, ಬಿಜ್ಜರು, ತವರು ಮನೆಯವರು ಯಾರೇ ಅತಿಥಿ ಮನೆಗೆ ಬಂದಾಗ ಮೃಷ್ಟಾನ್ನ ಭೋಜನಕ್ಕೆ ಖಾದ್ಯದಿಂದ ಕರಿದ ಸಂಡಿಗೆ ಹಪ್ಪಳ ಬಡಿಸಿದರೆ ಮನೆ ಒಡತಿಗೆ ಸಮಾಧಾನ. ಇಂಥ ಸಂಡಿಗೆ ತಯಾರಿಸಲು ಹಿಂದಿರುವ ಬೇವರಿನ ಶ್ರಮ ಅರಿತ ಈಗಿನ ನಾರಿಮಣಿಗಳು ಎಷ್ಟೊಂದು ಕಷ್ಟಪಟ್ಟು ಸಂಡಿಗೆ ಮಾಡುವುದು ಬೇಡಪ್ಪ ಎಂದು ನಿಟ್ಟುಸಿರು ಬಿಡುತ್ತಾರೆ.
ಅಕ್ಕಿ ಹಿಟ್ಟಿನ ಸಂಡಿಗೆ, ಸಾಬುದಾನಿ ಸಂಡಿಗೆ, ಬೂದ ಕುಂಬಳಕಾಯಿ ಸಂಡಿಗೆ ಸೇರಿದಂತೆ ಇತರ ಸಾಮಗ್ರಿಗಳನ್ನು ಬಳಸಿ ರಂಗು ರಂಗಿನ ಸಂಡಿಗೆ ಮಾಡುವಲ್ಲಿ ಮಹಿಳೆಯರು ತಲ್ಲೀನರಾಗಿದ್ದಾರೆ. ಸಂಡಿಗೆ ಮಾಡುವುದರಲ್ಲಿಯೂ ವೈಶಿಷ್ಟ್ಯತೆ ಇದೆ.
ಮುಖ್ಯವಾಗಿ ಅಕ್ಕಿ ಹಿಟ್ಟಿನ ಸಂಡಿಗೆ ಮಾಡುವಾಗ ಅದನ್ನು ಬಿಡಿ ಇರುವಾಗಲೇ ತಮಗೆ ಬೇಕಾದ ಬಣ್ಣ ಬೆರೆಸಿ ನಾನಾ ನಮೂನೆ ಆಕಾರದಲ್ಲಿ ಮಾಳಿಗೆ ಮೇಲೆ ಪ್ಲಾಸ್ಟಿಕ್ ಮೇಲೆ ಬಿಸಿಲಿಗೆ ಹಾಕುತ್ತಾರೆ.
ಆಗ ಬಿರುಬಿಸಿಲಿನಲ್ಲಿಯೂ ಮಕ್ಕಳು ಮಹಿಳೆಯರಿಗೆ ಸಹಾಯ ಮಾಡುವುದರ ಜತೆ ತಾವೂ ಸಂತಸ ಪಡುತ್ತಾರೆ. ಸಂಜೆ ಹೊತ್ತಿಗೆ ಒಣಗಿದ ಬಳಿಕ ಡಬ್ಬದಲ್ಲಿ ಹಾಕಿ ವರ್ಷ ಪೂರ್ತಿ ಸಂಡಿಗೆ ಬಳಕೆ ಮಾಡುತ್ತಾರೆ. ಇದನ್ನು ಈಗ ಕೆಲ ಮನೆಯ ಮಹಿಳೆಯರು ಮಾಡುವಲ್ಲಿ ನಿರತರಾಗಿದ್ದಾರೆ. ಇನ್ನೂ ಹಲವಾರು ಮಹಿಳೆಯರು ಇಷ್ಟೆಲ್ಲಾ ಜಂಜಾಟವೇ ಬೇಡವೆಂದು ಆಧುನಿಕ ಪ್ರಾಪಂಚಿಕ ಜ್ಞಾನದಲ್ಲಿ ಮಗ್ನರಾಗಿದ್ದಾರೆ. ಹೀಗಾದರೆ ಮುಂದಿನ ಪೀಳಿಗೆ ಶಾವಿಗೆ, ಹಪ್ಪಳ, ಸಂಡಿಗೆ ಎಂದರೆ ಏನು? ಎಂದು ಕೇಳಿದರೆ ಆಶ್ಚರ್ಯವಾಗದು.
ಹಪ್ಪಳ, ಸಂಡಿಗೆ ಇನ್ನೂ ಜೀವಂತ: ಹಿಂದೆ ಮಹಿಳೆಯರು, ಅಜ್ಜಿಯಂದಿರು, ಓಣಿಯಲ್ಲಿ ನಾಲ್ಕಾರು ಕುಟುಂಬದ ಮಹಿಳೆಯರೊಂದಿಗೆ ಬೆರೆತು ಮನೆಯ ಮಾಳಿಗೆಯ ಮೇಲೆ ಸಂಡಿಗೆಯ ಅಚ್ಚುಗಳನ್ನು ಹಿಡಿದು ವಿವಿಧ ಆಕಾರಗಳ ರುಚಿಕರವಾದ ಸಂಡಿಗೆ ಹಾಕಿದರೆ, ಆನಂತರ ಮಧ್ಯಾಹ್ನ ಹಾಗೂ ಸಂಜೆಯ ವೇಳೆಯಲ್ಲಿ ಧಾನ್ಯಗಳ ಹಪ್ಪಳಗಳ ಲಟ್ಟಿಸುವಿಕೆಯಲ್ಲಿ ಮಗ್ನರಾಗಿರುತ್ತಿದ್ದರು. ಆದರೀಗ ಆ ಲಟ್ಟಿಸುವಿಕೆಯ ಶಬ್ದ, ಮನೆಗಳ ಮಾಳಿಗೆಯ ಮೇಲೆ ಸಂಡಿಗೆ ಹಾಕುವಿಕೆ ಕಣ್ಮರೆಯಾಗುತ್ತಿದೆ. ಆದಾಗ್ಯೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿದೆ.
ಸಂಡಿಗೆ, ಹಪ್ಪಳ ರೊಕ್ಕಾಕೊಟ್ಟ ಅಂಗಡ್ಯಾಗ ಕೊಂಡು ತಿಂದ್ರ, ಮನ್ಯಾಗ ಮಾಡದಷ್ಟ ರುಚಿ ಬರುದಿಲ್ರೀ. ನಮಗ ಬೇಕಾದಂಗ ನಾನಾ ಆಕಾರದ ಸಂಡಿಗೆಗಳು ಸಿಗುದಿಲ್ಲ. ಹೀಗಾಗಿ ವರ್ಷಕ್ಕೆ ಬೇಕಾಗುವಷ್ಟು ಸಂಡಿಗೆ ಹಪ್ಪಳಗಳು ಮನೆಯ ಅಕ್ಕ ಪಕ್ಕದ ಮಹಿಳೆಯರನ್ನು ಕರಕೊಂಡು ಸಂಡಿಗೆ ಹಾಕ್ತೀವ್ರೀ.
. ರೇಣವ್ವ ಹಡಪದ, ಸಂಡಿಗೆ
ತಯಾರಿಸುವವರು.
ಡಿ.ಜಿ ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್