ಪ್ರವಾಸಿ ಕೇಂದ್ರ ಘೋಷಣೆಗೆ ಸೀಮಿತ
Team Udayavani, Dec 12, 2017, 10:13 AM IST
ಬಸವಕಲ್ಯಾಣ: ಸಮಾನತೆ ತತ್ವದಡಿ 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಗುರು ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿಸಬೇಕು ಎನ್ನುವ ಸರ್ಕಾರ ನಿರ್ಧಾರ ಬರಿ ಘೋಷಣೆಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ.
ಆಳುವವರಿಗೆ ಘೋಷಣೆ ಮತ್ತು ಅನುಷ್ಠಾನದ ಮಧ್ಯೆ ವ್ಯತ್ಯಾಸ ಕಾಣುತ್ತಿಲ್ಲ, ಹಾಗಾಗಿಯೇ ಕಳೆದೊಂದು ದಶಕದ ಹಿಂದೆ ಆರಂಭವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದರೂ ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಸಲೀಸಾಗಿ ಯೋಜನೆಗಳನ್ನು ಘೋಷಣೆ ಮಾಡುವ ಸರ್ಕಾರಗಳು ಬಳಿಕ ಅನುಷ್ಠಾನಕ್ಕೆ ಒತ್ತು ನೀಡುತ್ತಿಲ್ಲ ಎಂಬುದು ಹಳೇ ಆರೋಪ. ಈ ಆರೋಪವು ಇಲ್ಲಿನ ಬಿಕೆಡಿಬಿಗೆ ಚೆನ್ನಾಗಿ ಅನ್ವಯಿಸುತ್ತದೆ. ಮಾಜಿ ಮುಖ್ಯಮಂತ್ರಿ ದಿ| ಎನ್.ಧರ್ಮಸಿಂಗ್ ಮುಖ್ಯ ಮಂತ್ರಿಯಾಗಿದ್ದಾಗ ಅಸ್ತಿತ್ವಕ್ಕೆ ಬಂದ ಬಿಕೆಡಿಬಿ ಆರಂಭ ಶೂರತ್ವ ಮಾತ್ರ ತೋರಿದ್ದು ಬಿಟ್ಟರೆ ಹೇಳಿಕೊಳ್ಳುವ ಕಾಮಗಾರಿಗಳು ನಡೆದಿಲ್ಲ ಎನ್ನುವುದು ದಾಖಲೆಗಳಿಂದ ಸ್ಪಷ್ಟವಾಗುತ್ತವೆ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿ ಆರು ಜನ ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಈ ಪೈಕಿ ಬಹುತೇಕ ಮುಖ್ಯಮಂತ್ರಿಗಳು ಬಸವಣ್ಣನ ತತ್ವಾದರ್ಶಗಳ ಮೇಲೆ ನಂಬಿಕೆ ಇಟ್ಟುಕೊಂಡೇ ಅಧಿಕಾರಕ್ಕೇರಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಆದರೆ, ಇಲ್ಲಿವರೆಗೆ 74.97 ಕೋಟಿ ಅನುದಾನ ಬಿಡುಗಡೆಯಾಗಿದ್ದು ಬಿಟ್ಟರೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮಾತ್ರ ಮನಸು ಮಾಡಲಿಲ್ಲ. ಬಿಡುಗಡೆಯಾದ ಅನುದಾನದಲ್ಲಿ ಒಟ್ಟು 67.71 ಕೋಟಿ ಖರ್ಚಾಗಿದ್ದು, ಪ್ರಥಮ ಹಂತದಲ್ಲಿ ಬಿಕೆಡಿಬಿಯಿಂದ
ಕೈಗೆತ್ತಿಕೊಳ್ಳಲಾದ 29 ಶರಣ ಸ್ಮಾರಕಗಳ ಪೈಕಿ ಇದು ವರೆಗೆ ಪೂರ್ಣಗೊಂಡಿದ್ದು 17 ಸ್ಮಾರಕಗಳು ಮಾತ್ರ.
ಅಂಬಿಗರ ಚೌಡಯ್ಯ, ನೂಲಿ ಚಂದಯ್ಯ, ಅಕ್ಕ ನಾಗಮ್ಮ, ಹರಳಯ್ಯ, ಅಲ್ಲಮ ಪ್ರಭು ದೇವರ ಗದ್ದುಗೆ ಮಠ, ಮಡಿವಾಳ ಮಾಚಿದೇವರ ಸ್ಮಾರಕ ಮತ್ತು ಹೊಂಡ, ಕಂಬಳಿ ನಾಗಿದೇವರ ಮಠ, ಜೇಡರ ದಾಸಿಮಯ್ಯ, ಉರಿಲಿಂಗ ಪೆದ್ದಿ ಮಠ ಸೇರಿ 17 ಸ್ಮಾರಕಗಳ ಜತೆಗೆ ಸಸ್ತಾಪುರ ಬಂಗ್ಲಾ ಬಳಿ 108 ಅಡಿ ಎತ್ತರದ ಮಹಾದ್ವಾರ, ಬಂಗ್ಲಾದಿಂದ ಬಸವಕಲ್ಯಾಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಚತುಷ್ಪಥ ಮಾಡುವುದು, ಬಸವೇಶ್ವರ ದೇವಸ್ಥಾನದ ಬಳಿ ದಾಸೋಹ ಭವನ, ಕೋಟಿ ಬಳಿ ಪ್ರಾಚ್ಯ ವಸ್ತು ಸಂಗ್ರಹಾಲಯ, ಶರಣ ಸಾಹಿತ್ಯ ಗ್ರಂಥಾಲಯ, ಶಾಲಾ ಕಟ್ಟಡ ಮತ್ತು ರಥ ಮೈದಾನದಲ್ಲಿ ಸುಮಾರು 6000 ಆಸನಗಳ ಕ್ಷಮತೆಯುಳ್ಳ ಸಭಾ ಭವನ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ.
ಇನ್ನೂ 12 ಶರಣ ತಾಣಗಳಾದ ಪರುಷ ಕಟ್ಟೆ, ಬಸವಕಲ್ಯಾಣ ಕೋಟೆ, ವಿಜ್ಞಾನೇಶ್ವರಗವಿ, ಪಂಚ ಸೂತ್ರ ಗವಿ, ಅನುಭವ
ಮಂಟಪ, ಶಿವಪುರ ಶಿವಾಲಯ, ನಾರಾಯಣಪುರ ಶಿವಾಲಯ, ಕಿನ್ನರಿ ಬೊಮ್ಮಯ್ಯ ಗುಡಿ, ಮೊಳಿಗೆ ಮಾರಯ್ಯ ಗುಡಿ, ಸದಾನಂದ ಮಠ, ಬಸವೇಶ್ವರ ಮಹಾಮನೆ ಇದ್ದ ಸ್ಥಳ ಅರಿವಿನ ಮನೆ, ಯಳೆಹೊಟ್ಟೆ ಶಿಕ್ಷೆ ಅನುಭವಿಸಿದ ಶರಣರ ಸ್ಥಳಗಳ ಅಭಿವೃದ್ಧಿ ಕಾರ್ಯ ನಿಂತು ಹೋಗಿದೆ.
2005ರಲ್ಲಿ ಆರಂಭವಾದ ಕಾಮಗಾರಿ ದಶಕಕ್ಕಿಂತ ಹೆಚ್ಚು ವರ್ಷಗಳಾದರೂ ಹೇಳಿಕೊಳ್ಳುವ ಪ್ರಗತಿ ಕಂಡಿಲ್ಲ. ಸ್ಮಾರಕಗಳ ಕಾಮಗಾರಿಗಳ ಪೈಕಿಯೇ ಅರ್ಧ ಕಾಮಗಾರಿ ಬಾಕಿ ಉಳಿದಿದೆ. ಈ ಮಧ್ಯೆ ಮತ್ತೆ ಅನುಭವ ಮಂಟಪ ಪುನರ್ ನಿರ್ಮಾಣಕ್ಕಾಗಿ ಗೋ. ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ರಚಿಸಿದ ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸುಮಾರು ರೂ. 600 ಕೋಟಿಗಳ ಯೋಜನೆ ತಯಾರಿಸಲಾಗಿದೆ.
ಬಿಕೆಡಿಬಿ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿಗಳು ಬಸವಕಲ್ಯಾಣಕ್ಕೆ ಬಂದು ಇಲ್ಲಿಯೇ ಸಭೆ ನಡೆಸಿ ನೂತನ ಅನುಭವ ಮಂಟಪಕ್ಕೆ ಅನುಮೋದನೆ ನೀಡುವ ಜತೆಗೆ ಭೂಮಿ ಪೂಜೆ ನೆರವೇರಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಡಿ.13ರಂದು ಸಾಧನಾ ಸಮಾವೇಶದ ನಿಮಿತ್ತ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಕಾರ್ಯಕ್ರಮಗಳಲ್ಲಿ ಬಿಕೆಡಿಬಿ ಸಭೆ
ನಡೆಸುವುದು ಹಾಗೂ ಅನುಭವ ಮಂಟಪ ನಿರ್ಮಾಣ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಬಸವ ಭಕ್ತರಲ್ಲಿ ನಿರಾಸೆ ಮೂಡಿಸುವಂತಾಗಿದೆ.
ಅನುಭವ ಮಂಟಪ ನಿರ್ಮಾಣಕ್ಕೆ ಕೂಡಲೆ ಆಡಳಿತಾತ್ಮಕ ಅನುಮೋದನೆ ನೀಡುವ ಜತೆಗೆ ಇನ್ನು ಅಭಿವೃದ್ದಿಗೊಳ್ಳದಿರುವ 12 ಶರಣ ಸ್ಮಾರಕಗಳ ಅಭಿವೃದ್ಧಿಗೆ ಅಗತ್ಯವಿರುವ 119 ಕೋಟಿ ರೂ. ಅನುದಾನ ಕಲ್ಪಿಸಿ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಬಿಕೆಡಿಬಿ ಯಿಂದ ನಗರದ ರಥ ಮೈದಾನದಲ್ಲಿ ನಿರ್ಮಿಸಲಾದ ನೂತನ ಸಭಾಭವನವು ಸುಮಾರು 6000 ಆಸನ ಸಾಮರ್ಥ್ಯಹೊಂದಿದ್ದು, 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳಿಸಲಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆಂದು ಬುಧವಾರ ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭಾಭವನ ಲೋಕಾರ್ಪಣೆಗೊಳಿಸುವರು.
ಉದಯಕುಮಾರ ಮುಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ