ತರಬೇತಿಗೆ ಚಕ್ಕರ್: ವಾಹನಉರುಳಿ 10 ಮಂದಿಗೆ ಗಾಯ
Team Udayavani, Nov 29, 2018, 2:25 PM IST
ಮಧುಗಿರಿ: ತಾಲೂಕಿನ ಬಿಸಿಯೂಟ ತಯಾರಕರ ತರಬೇತಿಗಾಗಿ ತೆರಳಿದ್ದ ಸಿಬ್ಬಂದಿಗಳ ಟಾಟಾ ಏಸ್ ವಾಹನ ಉರುಳಿ ಬಿದ್ದು, 10ಕ್ಕೂ ಹೆಚ್ಚು ಸಿಬ್ಬಂದಿಗೆ ಗಾಯವಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ.
ಮಧುಗಿರಿಯ ದೊಡ್ಡೇರಿ ಹೋಬಳಿಯ ಸಿಡದರಗಲ್ಲು ಗ್ರಾಮದಲ್ಲಿ ಬಡವನಹಳ್ಳಿ ಕ್ಲಸ್ಟರ್ನ ಬಿಸಿಯೂಟ ತಯಾರಕರ ಸಿಬ್ಬಂದಿ ತರಬೇತಿಗಾಗಿ ತೆರಳಿದ್ದು, ತರಬೇತಿ ಮುಗಿಸಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ತಕ್ಷಣ ಎಲ್ಲ ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಜಯಮ್ಮ, ವಿಜಯಮ್ಮ, ಮಂಜಮ್ಮ, ಜಯ್ಯಮ್ಮನವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳಾದ ಮಂಜಮ್ಮ, ಗಂಗಮ್ಮ, ದೊಡ್ಡಜ್ಜಿ, ಮಂಜಮ್ಮ, ಬಸಮ್ಮ, ಕೋಟಮ್ಮ, ರವರನ್ನು ಮಧುಗಿರಿಯ ಆಸ್ಪತ್ರೆಯಲ್ಲೇ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಬಡವನಹಳ್ಳಿ ಸಿಪಿಐ ಪ್ರಭಾಕರ್ ಭೇಟಿ ನೀಡಿದ್ದರು. ಆಸ್ಪತ್ರೆಗೆ ಅಕ್ಷರ ದಾಸೋಹದ ಉಪ ನಿರ್ದೇಶಕಿ ಪದ್ಮಾವತಿ ಭೇಟಿ ನೀಡಿದ್ದು, ಗಾಯಾಳುಗಳ ಕ್ಷೇಮ ವಿಚಾರಿಸಿದರು.
ತರಬೇತಿಗೆ ಚಕ್ಕರ್ ಹಾಕಿದ ಸಿಬ್ಬಂದಿ: ಸಿಡದರಗಲ್ಲು ಗ್ರಾಮದಲ್ಲಿ ನಡೆಯುತ್ತಿದ್ದ ತರಬೇತಿಯಲ್ಲಿ ಮಧ್ಯಾಹ್ನದ ಊಟದ ನಂತರ ಅಲ್ಲಿಂದ ಯಾರಿಗೂ ತಿಳಿಸದೆ ಅರ್ಧಕ್ಕೆ ವಾಪಸ್ ಬಂದ ಇಷ್ಟೂ ಸಿಬ್ಬಂದಿ ಮುಂದಿನ ತರಬೇತಿಗೆ ಚಕ್ಕರ್ ಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬಡವನಹಳ್ಳಿಯ 3 ಜನ ಸಿಆರ್ಪಿಗಳಾದ ನಾಗರಾಜು, ವಸಂತ, ಹಾಗೂ ರೇವಣ್ಣ ಎಂಬುವವರು ಈ ಸಿಬ್ಬಂದಿಗಳ ಕಡೆ ಗಮನ ಹರಿಸಿಲ್ಲದಿರುವುದು ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಅಲ್ಲದೇ ಸುರಕ್ಷತೆಯಿಲ್ಲದೆ ಯಾರ ಗಮನಕ್ಕೂ ತಾರದೆ ತರಬೇತಿಯನ್ನು ಅರ್ಧಕ್ಕೆ ಬಿಟ್ಟು ಬಂದು ಈ ಸ್ಥಿತಿಯನ್ನು ಗಾಯಾಳುಗಳು ತಂದು ಕೊಂಡಿರು ವುದು ತಿಳಿದುಬಂದಿದೆ.