ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೊಡ್ಡಹಬ್ಬ
Team Udayavani, Mar 16, 2019, 7:37 AM IST
ಹಾಸನ: ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಹಬ್ಬ. ಪತ್ರಿಯೊಬ್ಬ ಮತದಾರ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಇದನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂಪಾಷಾ ಮನವಿ ಮಾಡಿದರು.
ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿರುವ ಷಾ ಗಾರ್ಮೆಂಟ್ಸ್ನಲ್ಲಿ ಜಿಲ್ಲಾಡಳಿತ, ಸ್ಪೀಪ್ ಸಮಿತಿ ಹಾಗೂ ಕಾರ್ಮಿಕ ಇಲಾಖಾ ವತಿಯಿಂದ ಏರ್ಪಡಿಸಿದ್ದ ಮತದಾರರ ಜಾಗೃತಿ ಚಟುವಟಿಕೆ ಹಾಗೂ ಇವಿಎಂಗಳ ಬಳಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಪ್ರತಿಯೊಬ್ಬರ ಸಂಪೂರ್ಣ ಸಹಭಾಗಿತ್ವ ಸಂಪೂರ್ಣ ಅಗತ್ಯ ಎಂಬುದು ಚುನಾವಣಾ ಆಯೋಗದ ಆಶಯ.
ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವ 18 ವರ್ಷ ತುಂಬಿರುವರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು. ಎಲ್ಲರೂ ಮತದಾನದ ಮಹತ್ವ ಅರಿಯಬೇಕು ಹಾಗೂ ಇತರರಿಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಸ್ಪೀಪ್ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ಕೆ.ಎನ್.ವಿಜಯಪ್ರಕಾಶ್, ಕಾರ್ಮಿಕರಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ, ಜಿಲ್ಲಾ ಸ್ಪೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ವಿನೋದ್ಚಂದ್ರ, ತೋಟಗಾರಿಕಾ ಇಲಾಖಾ ಹಿರಿಯ ಸಹಾಯ ನಿರ್ದೇಶಕ ರವಿಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿ ಬಾಲಕೃಷ್ಣ, ಮಾಸ್ಟರ್ ಟ್ರೈನರ್ ಉಬೇದುಲ್ಲಾ, ಷಾ ಏಕ್ಸ್ಪೋರ್ಟ್ಸ್ನ ಮುಖ್ಯಸ್ಥರು ಹಾಜರಿದ್ದರು. ನಗರದ ಗೋಕುಲ್ದಾಸ್ ಕಾರ್ಖಾನೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಿತು.