ಭಾರೀ ಮಳೆಗೆ ಆಟೋ ಸಮೇತ ಕೊಚ್ಚಿ ಹೋದ ಯುವಕ, ಕೊನೆಗೂ ಬಚಾವ್!
Team Udayavani, Oct 4, 2017, 11:28 AM IST
ಹಾವೇರಿ: ಧಾರಾಕಾರ ಮಳೆಯಿಂದಾಗಿ ನೀರಿನ ರಭಸಕ್ಕೆ ಆಟೋ ರಿಕ್ಷಾ ಸಮೇತ ಯುವಕನೊಬ್ಬ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ರಾತ್ರಿಯಿಡೀ ಸಾವು, ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೂ ಗ್ರಾಮಸ್ಥರಿಂದ ಬಚಾವ್ ಆಗಿರುವ ಘಟನೆ ರಾಣೇಬೆನ್ನೂರಿನ ಮೈದೂರು ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಆಟೋ ರಿಕ್ಷಾ ಸಮೇತ ಚಾಲಕ ಗಂಗಪ್ಪ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ. ಈ ಸಂದರ್ಭದಲ್ಲಿ ಗಂಗಪ್ಪ ಮುಳ್ಳುಕಂಟೆಯಲ್ಲಿ ಕುಳಿತು ರಾತ್ರಿಯಿಡೀ ಕಾಲ ಕಳೆದಿದ್ದ.
ಬುಧವಾರ ಬೆಳಗ್ಗೆ ಗ್ರಾಮಸ್ಥರ ಗಮನಕ್ಕೆ ಗಂಗಪ್ಪ ನೀರಿನಲ್ಲಿ ಸಿಲುಕಿರುವ ವಿಷಯ ಗಮನಕ್ಕೆ ಬಂದಾಗ, ಗ್ರಾಮಸ್ಥರಾದ ಮಾರುತಿ ಹಾಗೂ ಮೂವರು ಯುವಕರು ಸೇರಿ ಆಟೋ ಚಾಲಕ ಗಂಗಪ್ಪನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಳೆ ನೀರಿನಲ್ಲಿ ಸಿಲುಕಿ ಪರದಾಡುತ್ತಿದ್ದ ಚಾಲಕ ಗಂಗಪ್ಪ ಕೊನೆಗೂ ದಡ ಸೇರಿದ್ದಾನೆ. ಜೀವದ ಹಂಗು ತೊರೆದು ತನ್ನ ರಕ್ಷಿಸಿದ ಮಾರುತಿ ಹಾಗೂ ಆತನ ಗೆಳೆಯರಿಗೆ ಗಂಗಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.