ಬೆಳೆವಿಮೆ ವಿತರಣೆಗೆ ಒತ್ತಾಯಿಸಿ ಕಚೇರಿಗೆ ಬೀಗ
Team Udayavani, Dec 12, 2017, 2:13 PM IST
ಹಾನಗಲ್ಲ: 20 ಕೋಟಿ ರೂ. ಬೆಳೆವಿಮೆ ಹಣ ರೈತರ ಖಾತೆಗೆ ಜಮಾ ಆಗದಿರುವುದನ್ನು ಖಂಡಿಸಿ ರೈತರು ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಸುಮಾರು 5 ಗಂಟೆಗಳ ಕಾಲ ಧರಣಿ ನಡೆಸಿದರು.
ಸೋಮವಾರ ರೈತರು ಪೂರ್ವ ನಿಗದಿಯಂತೆ ಧರಣಿ ಪ್ರಾರಂಭಿಸಿ, ಬೆಳಗ್ಗೆ 11ಕ್ಕೆ ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿದರು. ನ. 7ರಂದು ಇದೇ ವಿಷಯಕ್ಕೆ ಸಂಬಂಧಿಸಿ ಮನವಿ ಸಲ್ಲಿಸಿದ ರೈತರು, ಡಿ. 11ರೊಳಗೆ ರೈತರ ಖಾತೆಗೆ ಬೆಳೆವಿಮೆ ಹಣ ಜಮಾ ಆಗದಿದ್ದರೆ ಕೃಷಿ ಇಲಾಖೆಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೂ ಬೇಡಿಕೆ ಈಡೇರದ ಕಾರಣ ಸೋಮವಾರ ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿ, ಧರಣಿ ನಡೆಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ ಕೃಷಿ ನಿರ್ದೇಶಕ ಎಚ್. ಹುಲಿರಾಜ, ರೈತರು ಹಾಗೂ ಬೆಳೆವಿಮೆ ಇಲಾಖೆಯ
ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ರೈತರು ಹಾಗೂ ಅಧಿಕಾರಿ ನಡುವೆ ಸುದೀರ್ಘ ವಾಗ್ವಾದ ನಡೆಯಿತು. ಅಂತಿಮವಾಗಿ ಇನ್ನು ಹತ್ತು ದಿನಗಳಲ್ಲಿ ರೈತರ ಖಾತೆಗೆ ಹಣ ಜಮಾ ಮಾಡುವ ಭರವಸೆ ನೀಡಿದರು. ಡಿ. 21ರೊಳಗಾಗಿ ರೈತರ ಖಾತೆಗಳಿಗೆ ಹಣ ಜಮಾ ಆಗದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆ ನೀಡಿ ಧರಣಿ ಕೈ ಬಿಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ರಾಘವೇಂದ್ರ ಹುನಗುಂದ, ಚನಬಸಗೌಡ
ಪಾಟೀಲ, ಮಹೇಶ ವಿರುಪಣ್ಣನವರ, ಸೋಮಣ್ಣ ಜಡೆಗೊಂಡರ್, ಎಸ್.ಎಸ್.ಇನಾಂದಾರ, ಬಾಬಣ್ಣ ವರ್ದಿ, ಶ್ರೀಕಾಂತ ದುಂಡಣ್ಣನವರ, ಮಹಲಿಂಗಪ್ಪ ಅಕ್ಕಿವಳ್ಳಿ ಮೊದಲಾದವರಿದ್ದರು.