ಒತ್ತಡ ನಿಯಂತ್ರಣ ರಾಹಿತ್ಯ
Team Udayavani, Jan 20, 2019, 12:30 AM IST
ಮಾಲತಿ ತನ್ನ ಗೃಹಪ್ರವೇಶಕ್ಕೆ ಆಮಂತ್ರಿಸಲು ಬಂದಿದ್ದಾಗ ಚೈತ್ರಾ ಬೆಡ್ರೂಮಿನಲ್ಲಿ ಒಬ್ಬಳೇ ಕುಳಿತು ಅಳುತ್ತಿರುವುದನ್ನು ಕಂಡಳು. ಮಾಲತಿ ಆಮಂತ್ರಿಸಿದಾಗ ಆಕೆ ಸಾರಾಸಗಟಾಗಿ ನಿರಾಕರಿಸಿಬಿಟ್ಟಳು. ಅವರಿಬ್ಬರೂ ಸಣ್ಣ ವಯಸ್ಸಿನಿಂದಲೇ ಗೆಳತಿಯರು. ಮಾಲತಿಯ ಪತಿ ಸೇನೆಯಲ್ಲಿದ್ದುದರಿಂದ ಮಾಲತಿ ಉಡುಪಿ ಬಿಟ್ಟಿದ್ದಳು. ಪರಿಣಾಮವಾಗಿ ಬಾಲ್ಯ ಗೆಳತಿಯರಿಬ್ಬರ ನಡುವಣ ಸಂಪರ್ಕ ತಪ್ಪಿಹೋಗಿತ್ತು. ಈಚೆಗೆ ಮಾಲತಿಯ ಗಂಡನಿಗೆ ನಿವೃತ್ತಿಯಾದ ಬಳಿಕ ಅವರು ಉಡುಪಿಗೆ ಮರಳಿ ಮನೆ ಕಟ್ಟಿಕೊಂಡು ಊರಿನಲ್ಲಿಯೇ ವಾಸಿಸಲು ನಿರ್ಧರಿಸಿದ್ದರು.
“ಚೈತ್ರಾ, ನನ್ನ ಮನೆಯ ಗೃಹಪ್ರವೇಶಕ್ಕೆ ನೀನು ಬರುವುದಿಲ್ಲ ಎಂದರೆ ಹೇಗಾಗುತ್ತದೆ! ಅದು ನನಗೆ ಬಹಳ ಪ್ರಮುಖ ದಿನ. ನೀನು ಬರಲೇಬೇಕು’ ಮಾಲತಿ ಒತ್ತಾಯಿಸಿದಳು. ಆಗ ಚೈತ್ರಾ ಗಳಗಳನೆ ಅಳಲು ಪ್ರಾರಂಭಿಸಿದಳು. “ನನಗೆ ಬರಲು ಸಾಧ್ಯವೇ ಇಲ್ಲ. ಅದು ನಿನಗೆ ಅರ್ಥವಾಗುವುದಿಲ್ಲ. ಯಾವುದೇ ಸಮಾರಂಭಕ್ಕೆ ಹೋಗುವುದು ಎಂದರೆ ನನಗೆ ಹೆದರಿಕೆಯಾಗುತ್ತದೆ.
ಶಾಪಿಂಗ್ಗೆ ಹೋಗುವುದು ಅಥವಾ ಮಕ್ಕಳನ್ನು ಶಾಲೆಗೆ ಬಿಡುವುದು ಕೂಡ ನನಗೆ ದೊಡ್ಡ ಹೊರೆಯಾಗುತ್ತಿದೆ. ನಿನಗೆ ಅದು ಅರ್ಥವಾಗದು’- ಹೇಳಿದಳು ಚೈತ್ರಾ.ತನ್ನ ಗೆಳತಿಗೆ ಏನೋ ಆಗಿದೆ, ಏನೋ ಪ್ರಮಾದವಾಗಿದೆ ಎಂಬುದು ಮಾಲತಿಗೆ ಅರ್ಥವಾಯಿತು. ಅವರ ಗೆಳತಿಯರ ಬಳಗದಲ್ಲಿಯೇ ಚೈತ್ರಾ ಅತ್ಯಂತ ಲವಲವಿಕೆಯ, ಉತ್ಸಾಹದ ಹುಡುಗಿಯಾಗಿದ್ದವಳು. ಮಾಲತಿಯ ಒತ್ತಾಯಕ್ಕೆ ತಲೆಬಾಗಿ ಚೈತ್ರಾ ತನ್ನ ಕತೆಯನ್ನು ಹೇಳಲು ಆರಂಭಿಸಿದಳು…
ನನ್ನ ಎರಡನೆಯ ಮಗ ಹುಟ್ಟುವ ವರೆಗೂ ಎಲ್ಲವೂ ಚೆನ್ನಾಗಿತ್ತು. ಎರಡನೆಯ ಹೆರಿಗೆಯ ಬಳಿಕ ಎಲ್ಲವೂ ಬದಲಾಗಿಬಿಟ್ಟಿತು. ಕೆಮ್ಮುವಾಗ, ಸೀನುವಾಗ, ನಗುವಾಗ ಮೂತ್ರ ನಿಯಂತ್ರಣ ತಪ್ಪಿ ಒಸರಲು ಆರಂಭವಾಯಿತು. ಇದು ಆರಂಭವಾಗಿ ಆರು ವರ್ಷಗಳಾಗಿವೆ. ಇದೆಲ್ಲ ಸಹಜ, ಸರಿಹೋಗುತ್ತದೆ ಎಂದುಕೊಂಡಿದ್ದೆ. ಆದರೆ ಸಮಸ್ಯೆ ಹೆಚ್ಚಾಗುತ್ತಲೇ ಬಂದಿದೆ. ಈಗ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಯಾರಿಗಾದರೂ ನನ್ನ ಮೈಯಿಂದ ಮೂತ್ರದ ವಾಸನೆ ತಟ್ಟುತ್ತದೆಯೋ ಎಂಬ ಹೆದರಿಕೆಯಿಂದಾಗಿ ಮನೆಯಿಂದ ಹೊರಹೋಗುವುದೇ ಬೇಡವಾಗಿ ಬಿಟ್ಟಿದೆ – ಇಷ್ಟು ಹೇಳಿ ಚೈತ್ರಾ ಮತ್ತೆ ಅಳಲು ಆರಂಭಿಸಿದಳು. ಮಾಲತಿ ಆಕೆಯ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಳು, ತನ್ನ ಗೆಳತಿಗೆ ಏನಾದರೂ ಮಾಡಿ ಸಹಾಯ ಮಾಡಬೇಕು ಎಂಬುದಾಗಿ ನಿಶ್ಚಯಿಸಿದಳು.
ಮುಂದಿನ ಒಂದೆರಡು ದಿನಗಳಲ್ಲಿ ಮಾಲತಿ ಇಂಟರ್ನೆಟ್ ಸಹಾಯದಿಂದ ತನ್ನ ಗೆಳತಿಯ ಸಮಸ್ಯೆಯ ಬಗ್ಗೆ ಹುಡುಕಾಟ ನಡೆಸಿದಳು. ಚೈತ್ರಾ ಬಳಲುತ್ತಿದ್ದುದು ಒತ್ತಡದಿಂದ ಮೂತ್ರ ನಿಯಂತ್ರಣ ರಾಹಿತ್ಯ ಎಂಬ ಸಮಸ್ಯೆಯಿಂದಾಗಿತ್ತು. ಇಂಟರ್ನೆಟ್ ಪ್ರಕಾರ, ಇದು ಅನೇಕ ಮಹಿಳೆಯರು ಅನುಭವಿಸುತ್ತಿದ್ದ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿತ್ತು. ಇವರಲ್ಲಿ ಬಹುತೇಕ ಮಹಿಳೆಯರು ಈ ಸಮಸ್ಯೆಯ ಬಗ್ಗೆ ಯಾರಲ್ಲೂ ಹೇಳಿಕೊಳ್ಳದೆ ಮೌನವಾಗಿ ಸಹಿಸಿಕೊಳ್ಳುತ್ತಿದ್ದರು. ಇಂತಹ ಸಮಸ್ಯೆಯ ಪರಿಹಾರಕ್ಕೆ ಯಾರನ್ನು ಸಂಪರ್ಕಿಸಬೇಕು ಎಂದು ಹುಡುಕಿದಾಗ, “ಯುರೋಗೈನೆಕಾಲಜಿಸ್ಟ್’ ವಿಶೇಷಜ್ಞ ವೈದ್ಯರು ಎಂಬ ಉತ್ತರ ಸಿಕ್ಕಿತು.
ಯುರೋಗೈನೆಕಾಲಜಿಸ್ಟ್ ಎಂದರೆ ಮಹಿಳೆಯರ ಮೂತ್ರ, ಮೂತ್ರಾಂಗ ಸಂಬಂಧಿ ಸಮಸ್ಯೆಗಳ ತಜ್ಞರು ಎಂದರ್ಥ. ಮೂತ್ರದ್ವಾರದ ಪೆಲ್ವಿಕ್ ಲಿಗಮೆಂಟ್ಗಳನ್ನು ವಿಸ್ತರಿಸುವ, ಕೆಲವೊಮ್ಮೆ ಅಲ್ಲಿ ಗಾಯಕ್ಕೆ ಕಾರಣವಾಗುವ ಹೆರಿಗೆ ಒತ್ತಡ ನಿಯಂತ್ರಣ ರಾಹಿತ್ಯಕ್ಕೆ ಪ್ರಧಾನ ಕಾರಣಗಳಲ್ಲೊಂದು. ಶಿಶು ಜನನ ಸಂಬಂಧಿ ವಿಚಾರಗಳನ್ನು ನಿಭಾಯಿಸುವಲ್ಲಿ ಈ ವೈದ್ಯರು ಪರಿಣಿತರಾಗಿರುತ್ತಾರೆ. ಹೀಗಾಗಿ ಆಕೆ ಯುರೋಗೈನೆಕಾಲಜಿಸ್ಟ್ ಸಹಾಯ ಪಡೆಯಲು ನಿರ್ಧರಿಸಿದಳು.
ಮುಂದಿನ ದೊಡ್ಡ ಸವಾಲು ಇದ್ದದ್ದು ಆಸ್ಪತ್ರೆಗೆ ಹೋಗಲು ಚೈತ್ರಾಳ ಮನವೊಲಿಸುವುದು; ಜತೆಗೆ ಆಕೆಯ ಪತಿಗೆ ಮತ್ತು ಅತ್ತೆಗೆ ವಿಷಯ ತಿಳಿಸುವುದು ಕೂಡ ಸಮಸ್ಯೆಯೇ ಆಗಿತ್ತು. ಆದರೆ ಮಾಲತಿ ಎಂಥದ್ದೇ ಸವಾಲು ಇದ್ದರೂ ಅದನ್ನು ಎದುರಿಸಿ ಚೈತ್ರಾಗೆ ಸಹಾಯ ಮಾಡಲು ನಿರ್ಧರಿಸಿದ್ದಳು. ಹೀಗಾಗಿ ಗೆಳತಿಯನ್ನು ವೈದ್ಯರಲ್ಲಿಗೆ ಕರೆದೊಯ್ಯುವುದು ಆಕೆಗೆ ಸಾಧ್ಯವಾಯಿತು.
ವೈದ್ಯರು ಚೈತ್ರಾಳ ಸಮಸ್ಯೆ ಹೇಗೆ ಆರಂಭವಾಯಿತು, ಹೇಗೆ ಬೆಳೆಯಿತು, ಅದರ ತೀವ್ರತೆ ಮತ್ತಿತರ ವಿವರಗಳನ್ನು ಸಂಗ್ರಹಿಸಿದರು. ಚೈತ್ರಾ ಸ್ಟ್ರೆಸ್ ಯೂರಿನರಿ ಇನ್ಕಂಟಿನೆನ್ಸ್ (ಎಸ್ಯುಐ) ಅಥವಾ ಒತ್ತಡದಿಂದ ಮೂತ್ರ ನಿಯಂತ್ರಣರಾಹಿತ್ಯ ಸಮಸ್ಯೆಯಿಂದ ಬಳಲುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಕೆಲವು ಪರೀಕ್ಷೆಗಳನ್ನೂ ನಡೆಸಿದರು
ಇದೊಂದು ಸಾಮಾನ್ಯ ಸಮಸ್ಯೆ, ಹೆರಿಗೆಯಾಗಿರುವ ಎಲ್ಲ ಹೆಂಗಸರಿಗೂ ಈ ಸಮಸ್ಯೆ ಉಂಟಾಗುತ್ತಿದ್ದು, ಕಾಲಕ್ರಮೇಣ ಸರಿಹೋಗುತ್ತದೆ ಎಂಬುದಾಗಿ ಗೆಳತಿಯರು ಅಥವಾ ಕುಟುಂಬದ ಇತರ ಸದಸ್ಯ ಮಹಿಳೆಯರು ಹೇಳಿರುವುದು ಒಂದು ಕಾರಣ. ವೈದ್ಯರು ಅಥವಾ ಇನ್ನೊಬ್ಬರಲ್ಲಿ ಹೇಳಿಕೊಳ್ಳಲು ಮುಜುಗರ ಇನ್ನೊಂದು ಕಾರಣ. ಈ ಎಲ್ಲ ಹೇಳಿಕೆಗಳು, ಕಾರಣಗಳು ಸಂಪೂರ್ಣ ತಪ್ಪು. ಪರಿಹಾರ ಪಡೆಯದೆ ನಿರ್ಲಕ್ಷಿಸಿದರೆ ಈ ಸಮಸ್ಯೆ ಕಡಿಮೆಯಾಗುವುದಿಲ್ಲ; ಬದಲಾಗಿ ಉಲ್ಬಣಿಸುತ್ತದೆ. ಋತುಚಕ್ರ ನಿಂತ ಬಳಿಕ ಅದು ಇನ್ನಷ್ಟು ತೀವ್ರವಾಗುತ್ತದೆ. ಈ ಸಮಸ್ಯೆಯಿಂದ ಪೀಡಿತರಾಗಿರುವ ಇನ್ನೊಂದು ವರ್ಗದ ಮಹಿಳೆಯರಿಗೆ ಇದು ಒಂದು ಆರೋಗ್ಯ ಸಮಸ್ಯೆ ಎಂಬುದು ತಿಳಿದಿರುತ್ತದೆ; ಆದರೆ ಇದಕ್ಕೆ ವೈದ್ಯಕೀಯ ಚಿಕಿತ್ಸೆ ಇದೆ ಎಂಬುದು ಗೊತ್ತಿರುವುದಿಲ್ಲ. ಇನ್ನು ಕೆಲವರಿಗೆ ವೈದ್ಯರ ಬಳಿಗೆ ಹೋಗುವುದಕ್ಕೆ ಮುಜುಗರ ಅಡ್ಡಿಯಾಗುತ್ತದೆ.
ಈ ಸಮಸ್ಯೆಗೆ ಅನೇಕ ಪರಿಹಾರಗಳು ಲಭ್ಯವಿವೆ. ಸಮಸ್ಯೆಯ ತೀವ್ರತೆ ಮತ್ತು ದೈನಂದಿನ ಗುಣಮಟ್ಟದ ಜೀವನಕ್ಕೆ ಇದು ಎಷ್ಟು ಪ್ರಮಾಣದ ಅಡ್ಡಿಯನ್ನು ಉಂಟು ಮಾಡುತ್ತದೆ ಎಂಬುದನ್ನು ಆಧರಿಸಿ ನಿರ್ದಿಷ್ಟ ಚಿಕಿತ್ಸಾ ಆಯ್ಕೆಗಳನ್ನು ನೀಡಲಾಗುತ್ತದೆ. ಸಣ್ಣ ಪ್ರಮಾಣದ, ಯಾವಾಗಾದರೊಮ್ಮೆ ಉಂಟಾಗುವ ಮೂತ್ರ ಸೋರುವಿಕೆಯನ್ನು ಪೆಲ್ವಿಕ್ ಪ್ರದೇಶದ ವ್ಯಾಯಾಮಗಳ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದು. ಪರಿಣಾಮಕಾರಿ ಫಲಿತಾಂಶಕ್ಕಾಗಿ ಈ ವ್ಯಾಯಾಮಗಳನ್ನು ಗುಣಮಟ್ಟದ ವಿಧಾನದಲ್ಲಿ ಕಲಿತು, ಅನುಸ ರಿಸಬೇಕಾಗುತ್ತದೆ. ಕೆಲವು ರೋಗಿಗಳಿಗೆ ಬಾಯಿಯ ಮೂಲಕ ಸೇವಿಸುವ ಔಷಧಗಳು ಮತ್ತು ಮುಲಾಮುಗಳನ್ನು ನೀಡಲಾಗುತ್ತದೆ. ಶಸ್ತ್ರಚಿಕಿತ್ಸಾ ವಿಧಾನವೂ ಇದೆ. ಆದರೆ ಶಸ್ತ್ರಚಿಕಿತ್ಸೆಯನ್ನು ಎಚ್ಚರಿಕೆಯ ಮತ್ತು ಕೂಲಂಕಷ ತಪಾಸಣೆಯ ಬಳಿಕ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಸಣ್ಣ ಮಟ್ಟದ್ದಾಗಿದ್ದರೂ ಕನಿಷ್ಠ 3ದಿನ ಆಸ್ಪತ್ರೆ ಯಲ್ಲಿ ದಾಖಲಾಗಿರಬೇಕಾಗುತ್ತದೆ. ಮೊದಲ ದಿನ ಅರಿವಳಿಕೆ ಮತ್ತು ಶಸ್ತ್ರಚಿಕಿತ್ಸೆಗೆ ರೋಗಿ ಸಿದ್ಧಳಿದ್ದಾಳೆಯೇ ಎಂಬುದನ್ನು ತಪಾಸಿ ಸಲಾಗುತ್ತದೆ.
ಎರಡನೆಯ ದಿನ ಅರಿವಳಿಕೆ ನೀಡಿ ಶಸ್ತ್ರಕ್ರಿಯೆಯನ್ನು ನಡೆಸಲಾಗುತ್ತದೆ, ಇದಕ್ಕೆ ಸುಮಾರು 15-30 ನಿಮಿಷ ತಗಲುತ್ತದೆ. ಶಸ್ತ್ರಚಿಕಿತ್ಸೆಯನ್ನು ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ನಡೆಸುವುದರಿಂದ ರೋಗಿಗೆ ನೋವು ಅನುಭವಕ್ಕೆ ಬರುವುದಿಲ್ಲ. ಮಾರನೆಯ ದಿನ ರೋಗಿ ಬಿಡುಗಡೆಗೊಳ್ಳಲು ಸಿದ್ಧಳಾಗಿರುತ್ತಾಳೆ ಹಾಗೂ ಆಕೆ ದೈನಿಕ ಕೆಲಸಗಳಲ್ಲಿ ತೊಡಗಬಹುದಾಗಿದೆ.
ಒತ್ತಡದಿಂದ ಮೂತ್ರ ನಿಯಂತ್ರಣ ರಾಹಿತ್ಯವು ಚಿಕಿತ್ಸೆಗೆ ಒಳಪಡಿಸಿ ಗುಣಪಡಿಸಬಹುದಾದ ಒಂದು ಆರೋಗ್ಯ ಸಮಸ್ಯೆ ಎಂಬುದನ್ನು ಚೈತ್ರಾ ಅರಿತುಕೊಂಡಳು. ಸ್ವತಃ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆಯಿಂದ ಮುಕ್ತಳಾದ ಆಕೆ ಈಗ ಖುಷಿ ಮತ್ತು ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿದ್ದಾಳೆ. ಮಾಲತಿಯಂತಹ ಗೆಳತಿಯಿರುವುದು ಆಕೆಯ ಸೌಭಾಗ್ಯ.ಇಂತಹ ಮೂತ್ರ ಸ್ರಾವದ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಎಚ್ಚೆತು ¤ ಕೊಳ್ಳಬೇಕು. ನಿಮ್ಮ ಮಾಲತಿ ನೀವೇ ಆಗಿ; ತಜ್ಞ ವೈದ್ಯರಿಂದ ಸಹಾಯ ಪಡೆದುಕೊಂಡು ಸಮಸ್ಯೆಯಿಂದ ಹೊರಬನ್ನಿ.
ಒತ್ತಡದಿಂದ ಮೂತ್ರ ನಿಯಂತ್ರಣ ರಾಹಿತ್ಯ ಎಂದರೆ ವ್ಯಾಯಾಮ, ಕೆಮ್ಮುವುದು, ಸೀನುವುದು, ನಗುವುದು ಅಥವಾ ಭಾರ ಎತ್ತುವಂತಹ ಸಂದರ್ಭಗಳಲ್ಲಿ ಅನಿಯಂತ್ರಿತವಾಗಿ ಮೂತ್ರ ಸ್ರಾವವಾಗುವುದು. ಸ್ಥೂಲವಾಗಿ, ಮಗುವಿಗೆ ಜನ್ಮ ನೀಡಿರುವ ಪ್ರತೀ ಮೂರರಲ್ಲಿ ಓರ್ವ ಮಹಿಳೆ ಈ ಸಮಸ್ಯೆಗೆ ತುತ್ತಾಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ಆದರೂ ವಿವಿಧ ಕಾರಣಗಳಿಂದಾಗಿ ಈ ಸಮಸ್ಯೆಗೆ ತುತ್ತಾಗಿರುವ ಮಹಿಳೆಯರು ಪರಿಹಾರಕ್ಕಾಗಿ ವೈದ್ಯರ ನೆರವನ್ನು ಪಡೆಯಲು ಮುಂದಾಗುವುದಿಲ್ಲ.
– ಡಾ| ದೀಕ್ಷಾ ಪಾಂಡೆ,
ಡಾ| ಶ್ರೀಪಾದ ಹೆಬ್ಟಾರ್
ಒಬಿಜಿವೈಎನ್ ವಿಭಾಗ, ಕೆಎಂಸಿ ಮಣಿಪಾಲ.