ಐಟಿ ಕಂಪನಿಯಲ್ಲಿ ಮಕ್ಕಳ ಮರಿ ಸೈನ್ಯ
Team Udayavani, Aug 11, 2018, 3:50 PM IST
ಅದೊಂದು ದಿನ ಕೆ. ದೊಮ್ಮಸಂದ್ರ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಉತ್ಸಾಹ, ಖುಷಿ ಉಕ್ಕಿ ಹರಿಯುತ್ತಿತ್ತು. ತಾವು ನೋಡಿರದ ಹೊಸ ಜಗತ್ತಿಗೆ ಕಾಲಿಡುವ ಕಾತರ, ಇದ್ದಕ್ಕಿದ್ದಂತೆ ದೊಡ್ಡವರಾಗಿಬಿಟ್ಟ ಫೀಲ್ ಅವರಲ್ಲಿತ್ತು. ಯಾಕಂದ್ರೆ, ಐಟಿ ಕಂಪನಿಯಲ್ಲಿ ಅದು ಅವರ ಮೊದಲ ದಿನ. ಅರೆ, ಈ ಮಕ್ಕಳಿಗೆ ಅಲ್ಲೇನು ಕೆಲಸ ಅಂದುಕೊಂಡಿರಾ? 5ನೇ ತರಗತಿಯ ಆ ಪುಟಾಣಿಗಳೆಲ್ಲ ಅವತ್ತು ಸಾಫ್ಟ್ವೇರ್ ಕಂಪನಿಗೆ ಪಿಕ್ನಿಕ್ ಹೊರಟಿದ್ದರು. ಇಷ್ಟು ದಿನ ಬರೀ ಹೊರಗಿನಿಂದ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿ, ಇದರೊಳಗೆ ಏನೇನಿರುತ್ತೆ, ಹೇಗೆ ಕೆಲಸ ನಡೆಯುತ್ತೆ? ಅಂತೆಲ್ಲಾ ಕುತೂಹಲಪಡುತ್ತಿದ್ದ ಮಕ್ಕಳು ಅವತ್ತು ಅದರೊಳಗೆ ಕಾಲಿಡಲು ಉತ್ಸುಕರಾಗಿದ್ದರು. ಶಾಲಾ ಮಕ್ಕಳು, ಮ್ಯೂಸಿಯಂಗೆ, ಜಲಪಾತಕ್ಕೆ, ಝೂಗೆ ಪಿಕ್ನಿಕ್ಗೆ ಹೋಗುವುದು ಸಾಮಾನ್ಯ. ಆದರೆ, ಹೊಸಬಗೆಯ ಪಿಕ್ನಿಕ್ ಅನ್ನು ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಕಲ್ಪಿಸಿರುವುದು ಅನ್ವಯ ಫೌಂಡೇಶನ್ನ ಸಂಪತ್ ರಾಮಾನುಜಂ.
ಕಮ್ಯುನಿಟಿ ಕನೆಕ್ಟ್
ಸಾಫ್ಟ್ವೇರ್ ಉದ್ಯೋಗಿ ಸಂಪತ್ ರಾಮಾನುಜಂ ಮತ್ತು ಪತ್ನಿ ಶ್ರೀದೇವಿ ಸಂಪತ್, ನಾಲ್ಕು ವರ್ಷಗಳಿಂದ ಅನ್ವಯ ಫೌಂಡೇಶನ್ ಎಂಬ ಎನ್ಜಿಓ ನಡೆಸುತ್ತಿದ್ದಾರೆ. ಸಂಸ್ಥೆಯ “ಕಮ್ಯುನಿಟಿ ಕನೆಕ್ಟ್’ ಕಾರ್ಯಕ್ರಮದ ಭಾಗವಾಗಿ, ಈ ಪಿಕ್ನಿಕ್ ಅನ್ನು ಆಯೋಜಿಸಲಾಗಿತ್ತು. ಕೆ.ದೊಮ್ಮಸಂದ್ರ ಸರ್ಕಾರಿ ಶಾಲೆಯ 5ನೇ ತರಗತಿಯ 6 ಪುಟಾಣಿಗಳು, ಒಂದಿಡೀ ದಿನವನ್ನು ವೈಟ್ಫೀಲ್ಡ್ ಬಳಿ, ಹೂಡಿಯ ಐಟಿ ಕಂಪನಿಯೊಂದರಲ್ಲಿ ಕಳೆದರು. ಸಾಫ್ಟ್ವೇರ್ ಕಂಪನಿಯೊಂದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡರು.
ಹೇಗಿತ್ತು ಆ ದಿನ?
ಐಟಿ ಹಬ್ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ನೂರಾರು ಕಂಪನಿಗಳಿವೆ. ಬಹುಮಹಡಿ ಕಟ್ಟಡದ ಆ ಆಫೀಸ್ ಒಳಕ್ಕೆ ಒಮ್ಮೆಯಾದರೂ ಹೋಗಬೇಕೆಂಬ ಆಸೆ ಹಲವರಿಗಿರುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೂ ಆ ಕುತೂಹಲ, ಆಸೆ ಇತ್ತು. ಜುಲೈ 30, ಸೋಮವಾರ ಬೆಳಗ್ಗೆ 9.30ಕ್ಕೆಲ್ಲ ಮಕ್ಕಳು ಐಟಿ ಕಂಪನಿಯಲ್ಲಿದ್ದರು. ಐಟಿ ಕಂಪನಿಯ ಸಿಬ್ಬಂದಿಯೂ ಇವರನ್ನು ಖುಷಿಯಿಂದ ಬರಮಾಡಿಕೊಂಡರು. ಶಾಲೆಯಲ್ಲಿ ಒಂದೆರಡು ಕಂಪ್ಯೂಟರ್ಗಳನ್ನಷ್ಟೇ ನೋಡಿದ್ದ ಮಕ್ಕಳು ಅಲ್ಲಿನ ದೊಡ್ಡ ಸರ್ವರ್ ರೂಮ್ಗಳನ್ನು ನೋಡಿ ಕಣ್ ಕಣಿºಟ್ಟರು. ಅಲ್ಲಿನವರ ಆತ್ಮವಿಶ್ವಾಸ, ಮಾತಿನ ಶೈಲಿ ನೋಡಿ ಮೋಡಿಗೊಳಗಾಗಿ, ಮುಂದೆ ನಾವೂ ಇದೇ ರೀತಿ ದೊಡ್ಡ ಕೆಲಸಕ್ಕೆ ಸೇರುತ್ತೇವೆ ಅಂತ ಅವರಲ್ಲಿ ಕನಸನ್ನು ಹಂಚಿಕೊಂಡರು. ಕಂಪನಿಯ ಸಿಬ್ಬಂದಿಯ ಜೊತೆಗೆ ಕೆಫೆಟೇರಿಯಾದಲ್ಲಿ ಊಟ, ಕೇರಂ, ಬಿಲಿಯರ್ಡ್ಸ್ ಆಟ ಕೂಡ ಆಡಿದರು. ಸಂಜೆ 4 ಗಂಟೆಗೆ ಅಲ್ಲಿಂದ ಹೊರಬಂದಾಗ ಮಕ್ಕಳಲ್ಲಿ ಕನಸಿನ ಕಾಮನಬಿಲ್ಲೊಂದು ಮೂಡಿತ್ತು ಅಂತಾರೆ ಸಂಪತ್ ರಾಮಾನುಜಂ. ಚೆನ್ನಾಗಿ ಓದಿದರೆ ಏನೇನೆಲ್ಲಾ ಅವಕಾಶಗಳು ಜೊತೆಯಾಗುತ್ತವೆ ಎಂಬ ಕನಸು, ಗುರಿಯನ್ನು ಅವರಲ್ಲಿ ಮೂಡಿಸುವುದೇ ಈ ಪಿಕ್ನಿಕ್ನ ಉದ್ದೇಶ.
ನಾನ್ ಕನ್ನಡಿಗ ಟು ನಾನು ಕನ್ನಡಿಗ
ಅನ್ವಯ ಫೌಂಡೇಶನ್ನ ಸಂಪತ್ ರಾಮಾನುಜಂ ಮೂಲತಃ ತಮಿಳುನಾಡಿನವರು. 14 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಅವರಿಗೆ ಕನ್ನಡ ಗೊತ್ತೇ ಇರಲಿಲ್ಲವಂತೆ. ಅವರಿವರಿಂದ ಕನ್ನಡ ಕಲಿತ ಸಂಪತ್ ಈಗ ಬೇರೆಯವರಿಗೂ ಕನ್ನಡ ಕಲಿಸಲು ನಿರ್ಧರಿಸಿದ್ದಾರೆ. “ನಾನ್ ಕನ್ನಡಿಗ ಟು ನಾನು ಕನ್ನಡಿಗ’ ಎಂಬ ವಾರಾಂತ್ಯದ ಕನ್ನಡ ಕ್ಲಾಸ್ ಕಳೆದ ತಿಂಗಳಷ್ಟೇ ಶುರುವಾಗಿದೆ. 7ರಿಂದ 70 ವರ್ಷದ, ಬೇರೆ ಬೇರೆ ಉದ್ಯೋಗದಲ್ಲಿರುವ 75ಕ್ಕೂ ಹೆಚ್ಚು ಅನ್ಯಭಾಷಿಕರು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿದ್ದಾರೆ. ವಿವಿಧ ಚಟುವಟಿಕೆಗಳ ಮೂಲಕ ಓದಲು, ಬರೆಯಲು, ಮಾತಾಡಲು, ಕಲಿಸಲಾಗುತ್ತದೆ. ವಿಶೇಷವೆಂದರೆ, ಈ ತರಗತಿ ನಡೆಯುವುದು ಯಾವುದೋ ಎಸಿ ರೂಮ್ನಲ್ಲಲ್ಲ. ಬದಲಿಗೆ ಸರ್ಕಾರಿ ಶಾಲೆಯೊಂದರಲ್ಲಿ! ಯಾಕೆಂದರೆ, ಹೆಚ್ಚಿನವರಿಗೆ ತಮ್ಮ ಎಸಿ ಕೋಣೆಯ ಹೊರಗೊಂದು ಜಗತ್ತಿದೆ ಎಂದು ಗೊತ್ತೇ ಇರುವುದಿಲ್ಲ. ಹಾಗಾಗಿ ಈ ತರಗತಿಯೂ ಇದೂ ಕೂಡ ಕಮ್ಯುನಿಟಿ ಕನೆಕr…ನ ಒಂದು ಭಾಗವೇ.
ನಾವು ಚಿಕ್ಕವರಿ¨ªಾಗ ಕೆಲಸ ಅಂದ್ರೆ ಡಾಕ್ಟರ್, ಎಂಜಿನಿಯರ್, ಟೀಚರ್, ಲಾಯರ್ ಅಷ್ಟೇ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಸಾವಿರ ಸಾವಿರ ಅವಕಾಶಗಳು ನಮ್ಮ ಮುಂದಿವೆ. ಈ ಎಲ್ಲ ಮಾಹಿತಿ, ಮಾರ್ಗದರ್ಶನ ಸರ್ಕಾರಿ ಶಾಲೆಯ ಮಕ್ಕಳಿಗೂ ಸಿಗಬೇಕು ಎಂಬುದೇ ನಮ್ಮ ಉದ್ದೇಶ. ಐಟಿ ಕಂಪನಿಗಳು ಮುಂದೆ ಬಂದರೆ ಮುಂದೆಯೂ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಹಂಬಲವಿದೆ.
-ಸಂಪತ್ ರಾಮಾನುಜಂ, ಅನ್ವಯ ಸ್ಥಾಪಕ, 9663033699