22 ಕಲಾವಿದರ ಚಿತ್ರಕಲಾ ಪ್ರದರ್ಶನ
Team Udayavani, Nov 24, 2018, 11:00 AM IST
ಕಲೆಗೆ ಇರುವ ಶಕ್ತಿ ಅಪಾರ ಮತ್ತು ಅಪರಿಮಿತ. ಸಂಗೀತ, ಸಾಹಿತ್ಯ, ಚಿತ್ರಕಲೆ, ವಾಸ್ತುಶಿಲ್ಪ… ಹೀಗೆ ಪ್ರಕಾರ ಯಾವುದೇ ಆದರೂ, ಪ್ರತಿಯೊಂದಕ್ಕೂ ಮಾನವನ ಅಂತರ್ ಶಕ್ತಿಯನ್ನು ಜಾಗೃತಿಗೊಳಿಸುವ ಶಕ್ತಿಯಿದೆ. ಚಿತ್ರಗಳ ಮೂಲಕ ಜಾಗೃತಿ ಮೂಡಿಸುವ, ಸಮಾಜ ಸೇವೆ ಮಾಡುವ ಉದ್ದೇಶದ “ಊರ್ಜಾ’ ಚಿತ್ರಕಲಾ ಪ್ರದರ್ಶನ, ತಾಜ್ ವೆಸ್ಟ್ ಎಂಡ್ ಮತ್ತು ಕಲಾವಿದ ಎಂ. ಜಿ. ದೊಡ್ಡಮನಿ ನೇತೃತ್ವದಲ್ಲಿ ನಡೆಯುತ್ತಿದೆ.
“ಊರ್ಜಾ’ ಎಂದರೆ ಸಂಸ್ಕೃತದಲ್ಲಿ ಶಕ್ತಿ ಎಂದರ್ಥ. ಈ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳ 22 ಹಿರಿ, ಕಿರಿಯ ಕಲಾವಿದರ ಶಕ್ತಿ, ಒಂದು ಒಳ್ಳೆಯ ಉದ್ದೇಶಕ್ಕಾಗಿ ಒಗ್ಗೂಡಿದೆ.
ಪ್ರದರ್ಶನದ ಮೂಲಕ ಸಂಗ್ರಹವಾದ ಹಣದ ಒಂದು ಭಾಗ “ಸ್ತ್ರೀ ಜಾಗೃತಿ ಸಮಿತಿ’ಯ ಕೆಲಸ ಕಾರ್ಯಗಳಿಗೆ ಸಂದಾಯವಾಗಲಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸ್ತ್ರೀಯರ ಅಭಿವೃದ್ಧಿಗಾಗಿ ಈ ಸಮಿತಿ ಕಾರ್ಯ ನಿರ್ವಹಿಸುತ್ತಿದೆ.
ಖ್ಯಾತ ಕಲಾವಿದ ಎಂ. ಜಿ. ದೊಡ್ಡಮನಿಯವರು, ಈ ಪ್ರದರ್ಶನದ ನೇತೃತ್ವ ವಹಿಸಿದ್ದು, ದೇಶದ ವಿವಿಧ ಭಾಗಗಳ ಹಿರಿಯ ಹಾಗೂ ಉದಯೋನ್ಮುಖ ಕಲಾವಿದರನ್ನು ಒಂದೆಡೆ ಸೇರಿಸಿದ್ದಾರೆ. ಹಿರಿಯ ಕಲಾವಿದರಾದ ಎಸ್.ಜಿ. ವಾಸುದೇವ, ಕೆ.ಟಿ. ಶಿವಪ್ರಸಾದ್, ಸಚಿನ್ ಜಲತಾರೆ, ಗುರುದಾಸ್ ಶೆನಾಯ್, ಬಾಸುಕಿ ದಾಸ್, ಜಿ.ಎಂ.ಎಸ್ ಮಣಿ ಮತ್ತು ಉದಯೋನ್ಮುಖ ಕಲಾವಿದರಾದ ಆಶು ಗುಪ್ತಾ, ಬಬಿತಾ ಸಕ್ಸೇನಾ, ಜ್ಯೋತಿ ಗುಪ್ತಾ, ಕಾಂತಿ, ನೀಲಂ ಮಲ್ಹೋತ್ರ, ನಿವೇದಿತಾ ಗೌಡ, ರಿತು ಚಾವ್ಲಾ ಮಾಥೂರ್, ರೋಶ್ ರವೀಂದ್ರನ್, ವನಜಾ ಬಾಲ, ವೆಂಕಟರಾಮನ್ ಆರ್. ಇವರ ಕಲಾಕೃತಿಗಳು ಪ್ರದರ್ಶನದಲ್ಲಿವೆ.
ಎಲ್ಲಿ?: ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರಸ್ತೆ,
ಯಾವಾಗ?: ನ. 24-28, ಬೆಳಗ್ಗೆ 11-8
ಪ್ರವೇಶ: ಉಚಿತ