ನುಸುಳುಕೋರರ ದುಃಸ್ವಪ್ನ ಲೇಸರ್ ಫೆನ್ಸ್
Team Udayavani, Sep 18, 2018, 7:31 AM IST
ಭಾರತ ಮತ್ತು ಪಾಕಿಸ್ಥಾನದ ಗಡಿಯಲ್ಲಿ ಅಕ್ರಮ ಒಳನುಸುಳುವಿಕೆಗಳನ್ನು ತಡೆಯಲು ನಿರ್ಮಿಸಲಾಗುತ್ತಿರುವ ಕಾಂಪ್ರಹೆನ್ಸಿವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜ್ಮೆಂಟ್ ಸಿಸ್ಟಂ (ಸಿಐಬಿಎಂಎಸ್) ಅನ್ನು ಪ್ರಾಯೋಗಿಕವಾಗಿ ಜಮ್ಮುವಿನಲ್ಲಿ ಸೋಮವಾರ ಆರಂಭಿಸಲಾಯಿತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇದರ ಉದ್ಘಾಟನೆ ನೆರವೇರಿಸಿದರು. ಭಾರತ-ಪಾಕಿಸ್ಥಾನ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿನ (ಐಬಿ) ಸುಮಾರು 2,016 ಕಿ.ಮೀ. ದೂರದವರೆಗೆ ಹದ್ದಿನ ಕಣ್ಣಿಡಲು ಇದರಿಂದ ನೆರವಾಗಲಿದೆ.
ವೈಶಿಷ್ಟ್ಯವೇನು?
ಇದೊಂದು ಭೌತಿಕವಲ್ಲದ, ಲೇಸರ್ ಬೇಲಿ. ನುಸುಳು ಕೋರರ ಅತಿ ಸೂಕ್ಷ್ಮ ಪ್ರಯತ್ನಗಳನ್ನೂ ಪತ್ತೆ ಹಚ್ಚುವ ಸಾಮರ್ಥ್ಯವಿರುವುದರಿಂದ ಗಡಿ ಮತ್ತಷ್ಟು ಸುರಕ್ಷಿತ.
ಕಾರ್ಯವೈಖರಿ ಹೇಗೆ?
ಇದರಲ್ಲಿ ಉಷ್ಣಾಂಶ ಆಧಾರಿತ ಇಮೇಜಿಂಗ್ ವ್ಯವಸ್ಥೆ, ಇನ್ಫ್ರಾ ರೆಡ್ ಮತ್ತು ಲೇಸರ್ ಆಧಾರಿತ ಸೈರನ್ ವ್ಯವಸ್ಥೆಗಳಿವೆ. ಇದರಿಂದ ದೂರದಿಂದಲೇ ನುಸುಳು ಕೋರರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಜತೆಗೆ, ಏರೋಸ್ಟಾಟ್ಸ್, ಗ್ರೌಂಡ್ ಸೆನ್ಸರ್ಗಳಿದ್ದು ಇದರಿಂದ ಸೂಕ್ಷ್ಮಾತಿಸೂಕ್ಷ್ಮ ಒಳ ನುಸುಳುವಿಕೆಯನ್ನೂ ಗ್ರಹಿಸ ಬಹುದು.ಯಾವುದೇ ಅನುಮಾನಾಸ್ಪದ ನಡೆಗಳನ್ನು ಕ್ಷಣಾರ್ಧದಲ್ಲಿ ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ.
ಪ್ರಯೋಜನಗಳೇನು?
ಗಡಿಯಲ್ಲಿ ಮಾನವ ಆಧಾರಿತ ಗಸ್ತು ಅವಶ್ಯಕತೆ ಗಣನೀಯ ಇಳಿಕೆ.
ಮೋಸಗೊಳಿಸಲಾಗದ ತಂತ್ರಜ್ಞಾನದಿಂದ ನುಸುಳುಕೋರರ ಕಳ್ಳಾಟಗಳಿಗೆ ಇತಿಶ್ರೀ.
ಗಡಿ ಭದ್ರತೆ ಹಿಂದೆಂದಿಗಿಂತಲೂ ಬಲಿಷ್ಠ ಹಾಗೂ ಪರಿಣಾಮಕಾರಿ.
ಗಡಿಗಳಲ್ಲಿ ಸೈನಿಕರ ಪ್ರಾಣಹಾನಿಗೆ ತಡೆ
ಇಸ್ರೇಲ್ಗೆ ಭೇಟಿ ನೀಡಿದ್ದಾಗ ಇಲ್ಲಿ ಇಂಥದ್ದೊಂದು ವ್ಯವಸ್ಥೆ ಇರುವುದನ್ನು ನೋಡಿದ್ದೆ. ಅಂಥದ್ದೇ ವ್ಯವಸ್ಥೆಯನ್ನು ಭಾರತ-ಪಾಕ್ ಗಡಿಯಲ್ಲಿ ಅಳವಡಿಸಬೇಕೆಂದು ಇಚ್ಛಿಸಿದ್ದೆ. ಅದು ಈಗ ನೆರವೇರುತ್ತಿದೆ.
ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
ಭಾರತ, ಪಾಕ್ ಗಡಿಯಲ್ಲಿ ತಲೆ ಎತ್ತಲಿರುವ ವರ್ಚುವಲ್ ಬೇಲಿ
2,016 ಕಿ.ಮೀ ಗಡಿಗೆ ಸದ್ಯದಲ್ಲೇ ಹೊಸ ವ್ಯವಸ್ಥೆ ವಿಸ್ತರಣೆ