ಷೇರು ಮೌಲ್ಯಮಾಪನ ಮತ್ತು “ನಿರೀಕ್ಷೆ’ಯ ಎಡವಟ್ಟು!
Team Udayavani, Oct 30, 2017, 11:17 AM IST
ಷೇರು ಖರೀದಿ ಮಾಡುವ ಮೊದಲು ಸುದ್ದಿಗಳ ಬದಲು ಆಯಾ ಕಂಪನಿಗಳ ಮೇಲೆ ಮಾರುಕಟ್ಟೆಯಲ್ಲಿ ಯಾವ ರೀತಿಯ ನಿರೀಕ್ಷೆ ಇರಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕು. ಕೇವಲ ಮಾಹಿತಿಯನ್ನು ಆಧರಿಸಿ ಹೂಡಿಕೆ ಮಾಡಿದರೆ ಕೈಸುಟ್ಟುಕೊಳ್ಳುವುದ ಖಚಿತ. ಟಿವಿ ವಾಹಿನಿಗಳಲ್ಲಿ ಬರುವ ಚರ್ಚೆ, ತಜ್ಞರ ಜತೆಗೆ ವಿಚಾರ ವಿನಿಮಯ ಮಾಡುವ ಮೂಲಕ ಉಂಟಾಗಬಹುದಾದ ನಷ್ಟ ತಪ್ಪಿಸಲು ಅವಕಾಶ ಉಂಟು
1ನೇ ಖಾಯಿದೆ: ದುಡ್ಡು ಕಳೆದುಕೊಳ್ಳಬೇಡಿ !
2 ನೇ ಖಾಯಿದೆ: 1ನೇ ಖಾಯಿದೆಯನ್ನು ಎಂದಿಗೂ ಮರೆಯಬೇಡಿ!
ವಾರೆನ್ ಬಫೆಟ್
ಒಂದು ವಿಶಾಲವಾದ ಕೋಣೆಯಲ್ಲಿ ನಿರಂತರವಾಗಿ ಅಡ್ಡಾದಿಡ್ಡಿ ಪುಟಿದೇಳುವ ಸಾವಿರಾರು ಚೆಂಡುಗಳಿದ್ದಂತೆ, ಷೇರು ಬಜಾರಿನಲ್ಲಿ ಸಾವಿರಾರು ಷೇರುಗಳ ಬೆಲೆಗಳು ನಿರಂತರವಾಗಿ ಏರಿಳಿಯುತ್ತಲೇ ಇರುತ್ತದೆ. ಒಂದು ಕ್ಷಣ ಒಂದು ಷೇರು ಇಲ್ಲಿದ್ದರೆ, ಮರುಕ್ಷಣ ಅಲ್ಲಿ; ಮುಂದೆ ಎಲ್ಲಿ ಎಂದು ಹೇಳಲಾಗದು. ಒಂದು ರೀತಿಯಲ್ಲಿ ಹುಚ್ಚು ಹಿಡಿದಂತೆ ನೆಗೆದಾಡುವ ಬೆಲೆಗಳ ಹಿಂದೆ ಯಾವುದಾದರೂ ತಾರ್ಕಿಕ ನೆಲೆ ಇದೆಯೇ? ಅಥವಾ ಇದೆಲ್ಲಾ ಬರೇ ಹುಚ್ಚೇ? – ಇದು ಹಣ ಹೂಡುವ ಎಲ್ಲರನ್ನೂ ಕಾಡುವ ಪ್ರಶ್ನೆ. ಶೇರು ಬೆಲೆಗಳ ಏರಿಳಿತದ ಮರ್ಮವನ್ನು ಭೇದಿಸಿ ಒಮ್ಮೆ ಕರಗತ ಮಾಡಿಕೊಂಡರೆ ಅದೊಂದು ಆರ್ಥಿಕ ನಿರ್ವಾಣವೇ ಸರಿ. ದುಡ್ಡು ಬಾಚಿಕೊಳ್ಳಲು ಎರಡು ಕೈಗಳು ಸಾಲವು. ಹಾಗಾಗಿ, ಶೇರು ಪೀಡಿತ ಗಂಡುಗಲಿಗಳು ಈ ಗುಂಗಿನಲ್ಲೇ ಸದಾ ಲೀನವಾಗಿರುತ್ತಾರೆ, ತಮ್ಮ ತಾರುಣ್ಯದ ಕನಸುಗಳ ದಿನಗಳಂತೆ.
ನನ್ನ ನೆರೆಮನೆಯ ಶಾ. ಲಾ. ಉಪಾಧ್ಯಾಯರು ಮೊನ್ನೆ ಮೊನ್ನೆ ತಾನೆ ನಿವೃತ್ತಿಗೊಂಡು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೇಳಿ ತಮ್ಮ ಪಿ.ಎಫ್ ದುಡ್ಡಿನಿಂದ 100 ರಿಲಯನ್ಸ… ಇಂಡಸ್ಟ್ರೀಸ್ ಷೇರುಗಳನ್ನು ಪ್ರತಿ ಷೇರು ಒಂದರ 1000 ರೂಪಾಯಿಗಳಂತೆ ಖರೀದಿಸುತ್ತಾರೆ. ಮರುದಿನ ಬೆಳಗ್ಗೆ ಉಪಾಧ್ಯಾಯರು ವೆಂಕಟೇಶ ಸುಪ್ರಭಾತವನ್ನು ಭಕ್ತಿಯಿಂದ ಕೇಳಿ, ಆಮೇಲೆ ದಿನದ ಪೇಪರು ತೆರೆದು ನೋಡುತ್ತಾರೆ. ರಿಲಯನ್ಸ್ ಕಂಪನಿಗೆ ಕೃಷ್ಣಾ-ಗೋದಾವರಿ ಪ್ರದೇಶದಲ್ಲಿ ಹೊಸ ತೈಲ ನಿಕ್ಷೇಪವೊಂದರ ಪತ್ತೆಯಾಗಿರುತ್ತದೆ. ಇದು ಕಂಪನಿಯ ಭವಿಷ್ಯಕ್ಕೆ ಪೂರಕವಾದ ಅಂಶ. ಭವಿಷ್ಯದ ಆದಾಯ ಹೆಚ್ಚಾಗುವ ಸಂಭವ. ಆ ದಿನ ಮಾರುಕಟ್ಟೆಯಲ್ಲಿ ರಿಲಯನ್ಸ್ ಆ ಸಿಹಿ ಸುದ್ದಿಯ ಬಲದಿಂದ 50 ರೂ. ಹೆಚ್ಚಿಸಿಕೊಂಡು 1050 ಕ್ಕೆ ಏರುತ್ತದೆ. ಉಪಾಧ್ಯಾಯರು ಖುಶಿಯಿಂದ ಬೀಗುತ್ತಾರೆ. ತಿಮ್ಮಪ್ಪನಿಗೆ ಇನ್ನೊಮ್ಮೆ ಭಕ್ತಿಯಿಂದ ಕೈಮುಗಿಯುತ್ತಾರೆ.
ಅದಕ್ಕೂ ಮರುದಿನ, ವಕೀಲ ರಾಮ್ ಜೇಠ್ಮಲಾನಿಯವರು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಯಾವುದೋ ಒಂದು ಅಥರ್ವಣದ ಕೇಸಿನಲ್ಲಿ ತಮ್ಮ ಅದ್ಭುತ ವಾಕ್ಚಾತುರ್ಯದಿಂದ ರಿಲಯನ್ಸ್ ವಿರುದ್ಧವಾದ ತಮ್ಮ ವಾದವನ್ನು ಮಂಡಿಸುತ್ತಾರೆ. ಇದನ್ನು ಕೇಳಿದ ಜನತೆಗೆ ರಿಲಯನ್ಸ್ ಈ ಕೇಸಿನಲ್ಲಿ ಸೋಲಬಹುದು ಎಂಬ ಆತಂಕ ಮೂಡುತ್ತದೆ. ಇದು ಕಂಪನಿಯ ಆದಾಯಕ್ಕೆ ಮಾರಕವಾದ ಸಂಗತಿ. ಹಾಗಾಗಿ ಅಂದು ಅದರ ಷೇರಿಗೆ ಬೇಡಿಕೆ ಕಡಿಮೆಯಾಗಿ ರಿಲಯನ್ಸ್ 100 ರೂ. ಕಳೆದುಕೊಂಡು 950 ಕ್ಕೆ ಕ್ಲೋಸ್ ಆಗುತ್ತದೆ. ಉಪಾಧ್ಯಾಯರಿಗೆ ಆವಾಗ ಬೇಸರವಾದರೂ ಮುಂದೊಂದು ದಿನ ಉತ್ತಮ ತ್ತೈಮಾಸಿಕ ಸಾಧನೆಯ ಮೇರೆಗೆ ರಿಲಯನ್ಸ್ 1,100 ರೂ.ಗೆ ಏರಿದಾಗ ಮತ್ತೆ ಖುಷಿಯಿಂದ ಉಬ್ಬುತ್ತಾರೆ; ದೇವರಿಗೆ ಹಣ್ಣುಕಾಯಿ ಅರ್ಪಿಸುತ್ತಾರೆ.
ಹೀಗೆ ಸಿಹಿಸುದ್ದಿಗೆ ಹಿಗ್ಗುತ್ತಾ, ಕಹಿಸುದ್ದಿಗೆ ಕುಗ್ಗುತ್ತಾ ಷೇರುಗಳೂ, ಒಟ್ಟಿಗೆ ಉಪಾಧ್ಯಾಯರೂ ತಮ್ಮ ಸಹಬಾಳ್ವೆ ನಡೆಸುತ್ತಿದ್ದಾರೆ. ಬೆಲೆಗಳ ಏರಿಳಿತದ ಈ ಕ್ರಮವನ್ನು ಅಥೆìçಸಿಕೊಂಡ ಶಾ. ಲಾ. ಉಪಾಧ್ಯಾಯರು ತಮ್ಮ ಖರೀದಿಯ ರಣ ತಂತ್ರವನ್ನು ರೂಪಿಸಿಯೇ ಬಿಡುತ್ತಾರೆ. ಯಾವುದೇ ಕಂಪನಿಯ ಸಿಹಿಸುದ್ದಿ ಬಂದೊಡನೆಯೇ ಎಲ್ಲರಿಗೂ ಮೊದಲಿಗರಂತೆ ಆ ಕಂಪನಿಯ ಷೇರನ್ನು ಖರೀದಿಸಬೇಕು ಎಂದುಕೊಳ್ಳುತ್ತಾರೆ. ಸಿಹಿ ಸುದ್ದಿಗೆ ಬೆಲೆ ಮೇಲೇರಲೇ ಬೇಕಲ್ಲವೇ?
ಮೊನ್ನೆ ಒಂದು ದಿನ ಹೀಗೆ ಆಯಿತು
ವಿಪ್ರೋ ಕಂಪೆನಿಯ ತ್ತೈಮಾಸಿಕ ರಿಸಲ್ಟ್ ಬಂದಿತ್ತು. ಅದು ತನ್ನ ಆದಾಯದಲ್ಲಿ 25% ವೃದ್ಧಿಯನ್ನು ದಾಖಲಿಸಿತ್ತು. ಇದೊಂದು ಭಾರೀ ಉತ್ತಮ ಬೆಳವಣಿಗೆ ಎಂದುಕೊಂಡ ಶಾ. ಲಾ. ಉಪಾಧ್ಯಾಯರು ಷೇರೊಂದನ್ನು 700 ರೂ.ನಂತೆ ಮಾರುಕಟ್ಟೆಯ ಬೆಲೆಯಲ್ಲಿ 100 ವಿಪ್ರೋ ಕಂಪನಿಯ ಷೇರುಗಳನ್ನು ಕೂಡಲೇ ಕೊಂಡರು. ಅವರ ಖಾತೆಯಿಂದ 70 ಸಾವಿರ ವರ್ಗಾವಣೆಯಾದ ಮರುಕ್ಷಣದಿಂದಲೇ ಷೇರು ಕುಸಿಯತೊಡಗಿತು. ಉಪಾಧ್ಯಾಯರು ಬೆವರಲಾರಂಭಿಸಿದರು. ಏನು ಮಾಡುವುದು ಎಂದರಿಯದೆ ಅತೀವ ಆತಂಕಕ್ಕೆ ಒಳಪಟ್ಟರು. ದಿನದ ಕೊನೆಗೆ ಷೇರು ಮೌಲ್ಯ 5% ದಷ್ಟು ಕುಸಿದಿತ್ತು. ರಾತ್ರಿಯಿಡೀ ಭಜನೆಯಲ್ಲೇ ಕಾಲ ಕಳೆದರು. ಮರುದಿನ ಬೆಳಗ್ಗೆ ಇನ್ನೂ 2% ಕುಸಿಯಿತು. ಕೊನೆಗೆ, 5 ಸಾವಿರ ರೂ. ನಷ್ಟದೊಂದಿಗೆ ಘಾಸಿಗೊಂಡ ಉಪಾಧ್ಯಾಯರು ಕಂಪನಿ ಷೇರಿನಿಂದ ಹೊರ ಬಂದರು. ಈಗ ಹೆಸರು ಕೇಳಿದರೂ ಬೆಚ್ಚಿ ಬೀಳುವ ಉಪಾಧ್ಯಾಯರಿಗೆ ನಡೆದ ಅನಾಹುತದ ಅರಿವಾಗಲಿಲ್ಲ. ಇಲ್ಲಿ, ಉತ್ತಮ ತ್ತೈಮಾಸಿಕ ಸಾಧನೆಯ ಬಳಿಕವೂ ಷೇರಿನ ಬೆಲೆ ಏಕೆ ಕುಸಿಯಿತು? ಇದು ಮುಖ್ಯ ಪ್ರಶ್ನೆ. ಇದು ಹಲವರಿಗೆ ತರ್ಕಕ್ಕೆ ನಿಲುಕದ ವಿಚಾರ.
ಕಳೆದೆರಡು ದಶಕಗಳಿಂದ ಭಾರತೀಯ ಷೇರು ಮಾರುಕಟ್ಟೆಯನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಂಡಿರುವ ವಿದೇಶಿ ಹಾಗೂ ಸ್ವದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors and Domestic Institutional Investors) ಮತ್ತು ದೊಡ್ಡ ದೊಡ್ಡ ಹೂಡಿಕೆದಾರರು ಎಲ್ಲಾ ಕಂಪನಿಗಳ ಷೇರಿನ ಮೌಲ್ಯಮಾಪನವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಹಾಲಿ ವರ್ಷದ ಆದಾಯ (e.p.s) ಅಲ್ಲದೆ ಭಾವಿ ವರ್ಷಗಳ ನಿರೀಕ್ಷಿತ ಆದಾಯವೂ ಸೇರಿರುತ್ತದೆ. ಜಾಗತಿಕ ಮಾರುಕಟ್ಟೆ, ಔದ್ಯೋಗಿಕ ವಾತಾವರಣ, ದೇಶದ ಆರ್ಥಿಕ ಪ್ರಗತಿ, ಕಂಪನಿ ನ್ಯೂಸ್, ಗಾಸಿಪ್, ವಿಶ್ಲೇಷಣೆಗಳು ಇತ್ಯಾದಿಗಳ ಮೇಲೆ ಷೇರುಗಳ ಬೆಲೆಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಲೇ ಇರುತ್ತಾರೆ. ಅದೇ ಬೆಲೆಗಳನ್ನು ಆಧಾರವಾಗಿಟ್ಟು ಷೇರುಗಳನ್ನು ಖರೀದಿ-ಬಿಕರಿ ಮಾಡುತ್ತಾರೆ. ಅಂತೆಯೇ ಮಾರುಕಟ್ಟೆಯಲ್ಲಿ ಬೆಲೆಗಳು ಏರಿಳಿಯುತ್ತಾ ಇರುತ್ತವೆ.
ಉಪಾಧ್ಯಾಯರು ವಿಪ್ರೋ ಷೇರುಗಳನ್ನು ಖರೀದಿಸಿದ ಸಂದರ್ಭದಲ್ಲಿ ಮಾರುಕಟ್ಟೆ ಆಗಾಗಲೇ ವಿಪ್ರೋ ಷೇರುಗಳಿಗೆ 40% ದಷ್ಟು ಆದಾಯದ ವೃದ್ಧಿಯ ನಿರೀಕ್ಷೆ ಹೊಂದಿತ್ತು. ಮಾರ್ಕೆಟ್ ಬೆಲೆಯಾದ 700 ರೂ.ಗಳಲ್ಲಿ 40% ಬೆಳವಣಿಗೆಯ ನಿರೀಕ್ಷೆಯೂ ಅಡಕವಾಗಿತ್ತು. ಕೊನೆಗೆ ಘೋಷಿತವಾದ 25% ಉತ್ತಮ ಏರಿಕೆಯಾಗಿದ್ದರೂ ಕೂಡಾ ನಿರೀಕ್ಷಿತ 40% ಸಾಕಾರವಾಗದೆ ಹೋದದ್ದೇ ಮಾರುಕಟ್ಟೆಯ ನಿರಾಸೆಗೆ ಕಾರಣ. ಹೊಸ ಮೌಲ್ಯಮಾಪನಕ್ಕನುಸಾರ ಬೆಲೆ ಕುಸಿಯಿತು. ಏರುತ್ತಿರುವ ಬಿ.ಪಿ ಯ ನಡುವೆ ಉಪಾಧ್ಯಾಯರು ಷೇರು ಮೌಲ್ಯಮಾಪನ ಮತ್ತು ಅದರೊಳಗೆ ನಿರೀಕ್ಷೆ’ಯ (Expectation) ಮಹತ್ವದ ಬಗ್ಗೆ ಪ್ರಾಥಮಿಕ ಪಾಠ ಕಲಿತರು.
ಹೀಗೆ ಮಾರುಕಟ್ಟೆಯಲ್ಲಿ ಪ್ರತಿಯೊಂದು ಸುದ್ದಿಯನ್ನೂ “ನಿರೀಕ್ಷೆ’ಯ ಮಾನದಂಡದಲ್ಲಿ ನೋಡಬೇಕು. ನಮಗೆ ಸಿಕ್ಕ ಸುದ್ದಿಯನ್ನು ಮಾರುಕಟ್ಟೆ ಈಗಾಗಲೇ ಅರಿತಿದ್ದು, ಬೆಲೆಯಲ್ಲಿ ಅದನ್ನು ಗಣನೆಗೆ ತೆಗೆದುಕೊಂಡಿದ್ದಲ್ಲಿ (Discount) ಮಾಡಿದ್ದಲ್ಲಿ ಆ ಸುದ್ದಿಯ ಘೋಷಣೆಯಾದ ಕೂಡಲೇ ಅದು ಬೆಲೆಯನ್ನು ಅಷ್ಟಾಗಿ ಬಾಧಿಸುವುದಿಲ್ಲ. ಹೊರಬಿದ್ದ ಸುದ್ದಿ ಅನಿರೀಕ್ಷಿತವಾದಲ್ಲಿ ಮಾತ್ರ ಬೆಲೆ ಅದಕ್ಕನುಸಾರವಾಗಿ ಏರಿಳಿಯಬಹುದು. ನಿರೀಕ್ಷೆಗಿಂತ ಭಿನ್ನವಾದ ಅಂಶಗಳಿದ್ದಲ್ಲಿ ಅಷ್ಟರಮಟ್ಟಿಗೆ ಬೆಲೆ ಹೆಚ್ಚು-ಕಡಿಮೆಯಾದೀತು.
ಆದ್ದರಿಂದ ಷೇರು ಬೆಲೆಯನ್ನು ಊಹಿಸುವಾಗ ಮತ್ತು ಸುದ್ದಿಗಳ ಆಧಾರದಲ್ಲಿ ಅವುಗಳಲ್ಲಿ ದುಡ್ಡು ಹೂಡುವಾಗ ಮಾರುಕಟ್ಟೆಯ ಪೂರ್ವಭಾವಿ ನಿರೀಕ್ಷೆಯನ್ನು ಗಮನದಲ್ಲಿ ತೆಗೆದುಕೊಳ್ಳಲೇ ಬೇಕು. ಈ ಬಗ್ಗೆ ಮಾಹಿತಿ ಷೇರು ಪಂಡಿತರ ಲೇಖನಗಳಲ್ಲಿ, ಟಿ.ವಿ ಶೋಗಳಲ್ಲಿ ಆಗಾಗ ಬರುತ್ತಿರುತ್ತದೆ. ಈ ಬಗ್ಗೆ ವಿಶೇಷ ಹಾಗೂ ನಿರಂತರ ಅಧ್ಯಯನದ ಅಗತ್ಯ ಬರುತ್ತದೆ. ಅಧ್ಯಯನವಿಲ್ಲದೆ ಬರೇ ಸುದ್ಧಿಯ ಆಧಾರದ ಮೇಲೆ ಏಕಾಏಕಿ ಹಣ ಹೂಡಿದರೆ ಶಾ. ಲಾ. ಉಪಾಧ್ಯಾಯರ ರೀತಿಯಲ್ಲಿ ಎಡವಟ್ಟಾದೀತು.
ಷೇರು ಮೌಲ್ಯ ಮಾಪನ (Valuation) ಹೇಗೆ?
ಷೇರು ಮೌಲ್ಯಮಾಪನಕ್ಕೆ, ಮೂಲಭೂತವಾಗಿ ಒಂದು ಕಂಪನಿಯ ಆದಾಯ ಅತಿಮುಖ್ಯವಾಗುತ್ತದೆ. ಕಂಪನಿಯ ಒಟ್ಟು ವಾರ್ಷಿಕ ಆದಾಯವನ್ನು ಶೇರುಗಳ ಸಂಖ್ಯೆಯಿಂದ ಭಾಗಿಸಿದರೆ, ಪ್ರತಿ ಷೇರಿನ ಆದಾಯ (Earnings Per Share or EPS) ಸಿಗುತ್ತದೆ. ಒಂದು ಕಂಪನಿಯ ಒಂದು ಷೇರು ಕೊಳ್ಳುವುದು ಎಂದರೆ ಅದರ ಒಂದು ಪ್ರತಿ ಷೇರಿನ ಆದಾಯವನ್ನು ಅಥವ ಉ.ಕ.ಖ ಅನ್ನು ಖರೀದಿಸಿ ನಮ್ಮದಾಗಿಸಿಕೊಂಡಂತೆ.
ಈಗ ಪ್ರಶ್ನೆ ಬರುವುದು, ಈ “ಅರ್ನಿಂಗ್ಸ್ ಪರ್ ಷೇರ್’ ಅಥವಾ ಉ.ಕ.ಖ ಅನ್ನು ಎಷ್ಟು ಹೆಚ್ಚುವರಿ ಮೊತ್ತ ಕೊಟ್ಟು ಕೊಳ್ಳಬಯಸುತ್ತೀರಿ ಎನ್ನುವುದು. ಇದು ಆ ಷೇರಿನ ಗುಣಮಟ್ಟವನ್ನು ಹೊಂದಿಕೊಂಡಿದೆ. ಭವಿಷ್ಯದ ಉತ್ತಮ ಸಾಧನೆಯ ನಿರೀಕ್ಷೆಯಿರುವ ಕಂಪನಿಗಳಿಗೆ ಬೇಡಿಕೆ ಜಾಸ್ತಿ ಇದ್ದು ಅವುಗಳ ಷೇರುಗಳಿಗೆ ಜಾಸ್ತಿ ಬೆಲೆಕೊಟ್ಟು ಕೊಳ್ಳುವ ಮನಸ್ಸು ಮಾಡುತ್ತೀರಿ. ಈ ರೀತಿ ಭವಿಷ್ಯದ ನಿರೀಕ್ಷೆಗೆ ಅನುಗುಣವಾಗಿ ತಮ್ಮ ಆದಾಯದ ಏಷ್ಟೋ ಪಟ್ಟು ಜಾಸ್ತಿ ಬೆಲೆಗೆ ಒಳ್ಳೆಯ ಕಂಪೆನಿಯ ಶೇರುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತವೆ. ಇದನ್ನು Price Earnings Ratio ಅಥವಾ P/E Ratio ಎಂದು ಕರೆಯುತ್ತಾರೆ. ಇದು 5, 10, 20, 30, 50, 100 ಎಷ್ಟಾದರೂ ಆಗಿರಬಹುದು. ಅದು ಷೇರಿನಿಂದ ಷೇರಿಗೆ, ಉದ್ಯಮದಿಂದ ಉದ್ಯಮಕ್ಕೆ ಅವುಗಳ ಸಾಧನೆಯನ್ನು ಅನುಸರಿಸಿ ವ್ಯತ್ಯಾಸವಾಗುತ್ತದೆ. ಅಷ್ಟೇ ಅಲ್ಲದೆ, ಒಟ್ಟಾರೆ ಮಾರುಕಟ್ಟೆ ಬುಲ್ಲಿಶ್ ಆಗಿದ್ದಾಗ ಎಲ್ಲಾ ಕಂಪೆನಿಯ ಕ/ಉ ಗಳು ಜಾಸ್ತಿಯಾಗಿರುತ್ತದೆ. ಮಾರುಕಟ್ಟೆ ಕಾಂತಿಕಳೆದುಕೊಂಡು ಬೇರಿಶ್ ಆಗಿರುವಾಗ ಎಲ್ಲಾ ಶೇರುಗಳ ಕ/ಉ ಗಳು ಕುಸಿದಿರುತ್ತವೆ.
ಕಂಪೆನಿಯ ವ್ಯವಹಾರ ಮತ್ತು ನಿರೀಕ್ಷೆಯನ್ನು ಹೊಂದಿಕೊಂಡು ಉ.ಕ.ಖ ಮತ್ತು P/E – ಇವೆರಡೂ ಏರಿಳಿಯುತ್ತಾ ಇರುತ್ತವೆ. ಒಂದು ಕಂಪೆನಿಯ ಶೇರು ಬೆಲೆ ಎಂದರೆ ಬಹುತೇಕ ಇವೆರಡು ಮಾಪನಗಳ ಮಿಶ್ರಫಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ