ಹವಾಲಾ ಬಳಸಿ, ಹವಾಲಾತ್‌ ಹವಾ ಸೇವಿಸಿ


Team Udayavani, Apr 2, 2018, 6:15 AM IST

Hawala-Business,.jpg

ಸದ್ಯಕ್ಕೆ ಟ್ಯಾಕ್ಸ್‌ ಸೀಸನ್‌ ಮುಗಿಯಿತು.ಮಾರ್ಚ್‌ 31 ಮುಗಿದು ವರ್ಷಾಂತ್ಯವಾದರೆ ನಮಗೂ ನಿಮಗೂ ಒಂದು ರೀತಿಯಲ್ಲಿ ನಿರಾಳ. ಕಳೆದೆರಡು ತಿಂಗಳಿಂದ ಸತತವಾಗಿ ಆದಾಯ ತೆರಿಗೆ ಬಗ್ಗೆ ಕೊರೆದೂ ಕೊರೆದೂ ನನಗೂ, ಅದನ್ನು ಓದಿ ಓದಿ ನಿಮಗೂ ಒಂದು ರೀತಿ ವೈರಾಗ್ಯ ಬಂದಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ಇನ್ನು ಜುಲೈ ತಿಂಗಳಲ್ಲಿ ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಸಿದರಾಯಿತು. ಅಲ್ಲಿಯವರೆಗೆ 2017-18 ವಿತ್ತ ವರ್ಷದ ಮಂಡೆಬಿಸಿ ಸದ್ಯಕ್ಕಿಲ್ಲ. ಹಾಗಾಗಿ ಬೇರೆ ಕೆಲ ಮುಖ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಕಾಲಾವಕಾಶ ಕೂಡಿ ಬಂದಿದೆ. ಕಪ್ಪು ಹಣದ ವಿಚಾರ, ಹವಾಲ ವ್ಯವಹಾರ, ಬಿಟ್‌ ಕಾಯಿನ್‌ ಹೆಸರನ್ನು ಹೋಲುವ ಕೆಲ ಸ್ಕೀಮುಗಳ ಬಗ್ಗೆ ಚರ್ಚೆ ನಡೆಸಲು ಉತ್ತಮ ಸಮಯ. ಮೊತ್ತ ಮೊದಲನೆಯದಾಗಿ ಇವತ್ತಿನ ಎಪಿಸೋಡಿನಲ್ಲಿ ಹವಾಲಾ ವ್ಯವಹಾರದ ಬಗ್ಗೆ ಒಂದಷ್ಟು ವಿಮರ್ಶೆ. 

ಸ್ವಿಸ್‌ ಬ್ಯಾಂಕಿನಲ್ಲಿ ಹಾಗೂ ಇನ್ನಿತರ ಕರ ಸ್ವರ್ಗಗಳೆನ್ನಲಾದ ಚಿಕ್ಕ ಪುಟ್ಟ ರಾಷ್ಟ್ರಗಳಲ್ಲಿ ಇದೆಯೆನ್ನಲಾದ ಕಪ್ಪುಹಣದ ಬಗ್ಗೆ ದೇಶದ ಎಲ್ಲೆಡೆ ವ್ಯಾಪಕವಾದ ಚರ್ಚೆ ಆಗುತ್ತಿದೆ. ಅಲ್ಲಿ ಇದೆಯೆನ್ನಲಾದ ದುಡ್ಡು ಎಷ್ಟು ಎನ್ನುವುದು ಒಂದೆಡೆಯಾದರೆ ಅದನ್ನು ವಾಪಾಸು ತರುವ ಬಗ್ಗೆ ಇನ್ನೊಂದೆಡೆ ಚರ್ಚೆ ನಡೆಯುತ್ತಿದೆ. ಇವೆಲ್ಲದರ ನಡುವೆ ಕೆಲವರಾದರೂ ಈ ದೇಶದಿಂದ ಕಪ್ಪು ಹಣ ಒಳಕ್ಕೆ ಮತ್ತು ಹೊರಕ್ಕೆ ಹರಿದಾಡುವುದಾದ್ರೂ ಹೇಗೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಹೌದು! ಈ ಕಪ್ಪು ಹಣವೆನ್ನುವ ಭೂತ ಯಾವ ಅವತಾರವೆತ್ತಿ ಯಾವ ರೀತಿ ಸಂಚಾರ ಮಾಡುತ್ತದೆ ಎನ್ನುವುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಒಳ್ಳೆಯದು. ಅರಿವಿಲ್ಲದೆಯೇ ಅಮಾಯಕರು ಇದರ ಕರಾಳಾಗ್ನಿಯಲ್ಲಿ ಬೆಂದು ಹೋಗುವ ಸಾಧ್ಯತೆಗಳೂ ಇವೆಯಲ್ಲ? ತಪ್ಪು ಮಾಡುವುದು ಯಾರೋ ಸಿಕ್ಕಿ ಬೀಳುವುದು ಇನ್ಯಾರೋ? ನಾಲ್ಕು ಕಾಸಿನ ಆಸೆಗೆ ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸಿಕ್ಕಿ ಬೀಳದಿರಿ.

ಈ ಘಟನೆಯನ್ನು ಗಮನಿಸಿ 
ಕೆಲ ವರ್ಷಗಳ ಹಿಂದೆ ಕರ್ನಾಟಕದ ಕರಾವಳಿಯ ಅಯೇಷಾ- ಜುಬೈರ್‌ ದಂಪತಿ ನಡೆಸಿದರೆನ್ನಲಾದ ಬಹುಕೋಟಿಯ ಹವಾಲಾ ಹಗರಣವನ್ನು ಕೇಳಿದ ನಾಡಿನ ಜನ ದಂಗಾಗಿ ಹೋಗಿದ್ದಾರೆ. ಹಲವು ಬ್ಯಾಂಕು ಖಾತೆಗಳನ್ನು ಹೊಂದಿದ್ದು ಬೇರೆಯವರಿಂದಲೂ ಖಾತೆ ತೆರೆಸಿ, ಅವುಗಳಲ್ಲಿ ಕಮಿಶನ್‌ ಮೇರೆಗೆ ದುಡ್ಡು ತುಂಬಿ ಪಾಟ್ನಾ ಇನ್ನಿತರ ಕಡೆ ದುಡ್ಡು ವರ್ಗಾವಣೆ ಮಾಡಿದ ಇವರನ್ನು ಬಿಹಾರದ ಪೋಲೀಸರು ಬಂಧಿಸಿ ಕೊಂಡೊಯ್ದಿದ್ದರು.
 
ಅಯೇಷಾ-ಜುಬೈರ್‌ ಜೋಡಿ ಸೇರಿ ನಡೆಸಿಕೊಂಡು ಬಂದಿದ್ದರೆನ್ನಲಾದ ಹವಾಲಾ ಚಟುವಟಿಕೆಯ ಸಂಪೂರ್ಣ ಸ್ವರೂಪವೇನು? ದುಡ್ಡು ಎಲ್ಲಿಂದ ಹೇಗೆ ಬರುತ್ತಿತ್ತು? ಎಲ್ಲಿಗೆ ಹೇಗೆ ಹೋಗುತ್ತಿತ್ತು? ಮತ್ತದು ನಿಜವಾಗಿಯೂ ಹವಾಲಾ ಆಗಿತ್ತೇ? ಆಗಿದ್ದರೂ ಆಪಾದಿಸಿದಂತೆ ಅದರ ಉದ್ದೇಶ ಭಯೋತ್ಪಾದನೆ ಆಗಿತ್ತೇ ಎನ್ನುವುದು ಬೇರೆ ವಿಷಯ. ಅವೆಲ್ಲಾ ಸಂಪೂರ್ಣ ತನಿಖೆಯ ಬಳಿಕವೇ ತಿಳಿಯಬಹುದಷ್ಟೆ. ಆದರೆ ಪೋಲೀಸ್‌ ತನಿಖೆಯ ಪ್ರಕಾರ ಅವರು ಯಾವುದೋ ಒಂದು ರೀತಿಯ ಕಾನೂನುಬಾಹಿರ ದುಡ್ಡು ವರ್ಗಾವಣೆಯ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಂತೂ ಹೌದು. ಆ ಕೇಸಿನ ಬಗ್ಗೆ ವಿಷದವಾದ ವಿಶ್ಲೇಷಣೆ ನಡೆಸುವುದು ಇಲ್ಲಿನ ಉದ್ದೇಶವಲ್ಲ. ಆದರೆ ಈ ಪ್ರಕರಣ ಎತ್ತಿ ಹಾಕಿದ ಹವಾಲಾ ಬಗ್ಗೆ ಸ್ಪಷ್ಟವಾದ ಮಾಹಿತಿ ಅತ್ಯಗತ್ಯವಾಗಿ ಬೇಕಾಗುತ್ತದೆ. ಯಾಕೆಂದರೆ ನಮ್ಮ ದೇಶದಲ್ಲಿ ಹವಾಲಾ ಮನಿ ಟ್ರಾನ್ಸ್‌ಫ‌ರ್‌ ಅತ್ಯಂತ ಗಣನೀಯವಾಗಿ ನಡೆಯುತ್ತಿರುವ ಚಟುವಟಿಕೆ. ಎಷ್ಟೋ ಜನ ಅಮಾಯಕ ಜನರೂ ಕೂಡಾ ಇದರ ಸಂಪೂರ್ಣ ಸ್ವರೂಪದ ಅರಿವಿಲ್ಲದೆ ಈ ಬೆಂಕಿಯೊಡನೆ ಸರಸವಾಡಲು ಅತ್ಯಂತ ಸಲೀಸಾಗಿ ಹೋಗುವುದು ಗಾಬರಿ ಹುಟ್ಟಿಸುತ್ತದೆ.
 
ಇಷ್ಟಕ್ಕೂ ಏನಿದು ಹವಾಲ?
ದುಡ್ಡನ್ನು ಕೂಡಿಡಲು, ಹೂಡಿಕೆ ಮಾಡಲು ಮತ್ತು ಅತ್ತಿತ್ತ ವರ್ಗಾವಣೆ ಮಾಡಲು ನಾವು ಬ್ಯಾಂಕನ್ನು ಅವಲಂಬಿಸುತ್ತೇವಷ್ಟೆ? ಆ ರೀತಿಯ ಬ್ಯಾಂಕು ಮೂಲಕ ವರ್ಗಾವಣೆ ಮಾಡುವುದು ಕಾನೂನು ಸಮ್ಮತ ಕಾರ್ಯ. ಆದರ ಬದಲು ಹಣ ವರ್ಗಾವಣೆಗೆ ಬ್ಯಾಂಕು ಅಲ್ಲದ ಯಃಕಶ್ಚಿತ್‌ ಖಾಸಗಿ ಜನರನ್ನು ಉಪಯೋಗಿಸಿದರೆ ಅದು ಕಾನೂನು ಬಾಹಿರವಾಗುತ್ತದೆ. ಹೌದು, ಕಪ್ಪು ಹಣದ ಹರಿವನ್ನು ತಡೆಗಟ್ಟಲು ಯಾವುದೇ ರೀತಿಯ ಖಾಸಗಿ ವರ್ಗಾವಣೆಯನ್ನು ಜಗತ್ತಿನಾದ್ಯಂತ ನಿಶೇಧಿಸಲಾಗಿದೆ. ಆದರೆ ದುಡ್ಡು ವರ್ಗಾವಣೆಯನ್ನೇ ಕಸುಬನ್ನಾಗಿಸಿಕೊಂಡ ಕಾನೂನು ಕಣ್ಣುತಪ್ಪಿಸಿ ಕಾರ್ಯವೆಸಗುವ ಒಂದು ಬಹುದೊಡ್ಡ ಜಾಲವೇ ದೇಶ ವಿದೇಶಗಳಲ್ಲಿ ಹಬ್ಬಿದೆ. ಇದು ಒಂದು ರೀತಿಯಲ್ಲಿ ಪರ್ಯಾಯ ಬ್ಯಾಂಕಿನಂತೆ ಕೆಲಸ ಮಾಡುತ್ತದೆ ಆದರೆ ಇದು ನೂರಕ್ಕೆ ನೂರು ಕಾನೂನು ಬಾಹಿರ. ಸಿಕ್ಕಿ ಬಿದ್ದವರಿಗೆ ಜೈಲೇ ಗತಿ. ಇಂತಹ ಜಾಲವನ್ನು ನಂಬಿ ಅದನ್ನು ಬಳಸುವ ವ್ಯಕ್ತಿಗಳು ಕಾಳದಂಧೆಯವರು, ಪಾತಕಿಗಳು, ಕಳ್ಳಸಾಗಣೆಕಾರರು, ಭಯೋತ್ಪಾದಕರು ಹಾಗೂ ನಮ್ಮ ನಿಮ್ಮಂತಹ ಕೆಲ ಅಮಾಯಕರು. ಇಲ್ಲಿ ಈಗ ಹವಾಲದ ಗುಣಗಾನ ಮಾಡುವುದರ ಮೂಲ ಉದ್ದೇಶ ಅದಕ್ಕೆ ಪ್ರಚಾರ ಕೊಟ್ಟು ಪೋ›ತ್ಸಾಹಿಸುವುದಾಗಿರದೆ ಅದರಲ್ಲಿರುವ ಅಪಾಯಗಳನ್ನು ವಿವರಿಸಿ ಅಮಾಯಕರನ್ನು ಎಚ್ಚರಿಸುವುದೇ ಆಗಿದೆ.

ಹೇಗೆ ನಡೆಯತ್ತದೆ ಹವಾಲಾ?
ದೂರದ ದುಬೈಯಲ್ಲಿ ಒಬ್ಟಾತ ಭಾರತೀಯ ಇದ್ದಾನೆ ಎಂದಿಟ್ಟುಕೊಳ್ಳಿ. ಆತನಿಗೆ ಭಾರತದಲ್ಲಿರುವ ತನ್ನ ಮನೆಗೆ ಒಂದಷ್ಟು ದುಡ್ಡು ಕಳುಹಿಸುವುದು ಇರುತ್ತದೆ. ನೇರಾನೇರವಾದ ಸುಲಭದ ದಾರಿ ಎಂದರೆ ಸೀದಾ ಅಲ್ಲಿನ ಒಂದು ಬ್ಯಾಂಕಿಗೆ ಹೋಗಿ ದುಡ್ಡು ಕಟ್ಟಿದರೆ ಅದು ಸೀದಾ ಬಂದು ಭಾರತದಲ್ಲಿರುವ ಪತ್ನಿಯ ಖಾತೆಗೆ ಬಂದು ಬೀಳುತ್ತದೆ. ಅಥವಾ ವೆಸ್ಟರ್ನ್ ಯೂನಿಯನ್ನಂತಹ ಮನಿ ಟ್ರಾನ್ಸ್‌ಫ‌ರ್‌ ಕಂಪೆನಿಗಳನ್ನೂ ಸಂಪರ್ಕಿಸಬಹುದು.

ಆದರೆ ಅದೆಲ್ಲಾ ಕಿರಿಕಿರಿ ಬೇಡವೆಂದು ಆತ ಅಲ್ಲೇ ಬೀದಿ ಬದಿಯ ಒಂದು ಸಣ್ಣ ಕುಫಿಯಾ ಅಂಗಡಿಗೆ ಕಾಲಿಡುತ್ತಾನೆ. ಅಲ್ಲಿ ಕುಳಿತಿರುವ ಹವಾಲಾ ವರ್ತಕನ ಕೈಯಲ್ಲಿ ಮನೆಗೆ ಕಳುಹಿಸಲಿರುವ ಮೊತ್ತವನ್ನು ಇಡುತ್ತಾನೆ. ಮನೆಯ ಎಡ್ರೆಸ್‌, ಫೋನ್‌ ನಂಬರ್‌ ಇತ್ಯಾದಿಗಳನ್ನು ನೀಡುತ್ತಾನೆ. ಯಾವುದೇ ಪುರಾವೆ ಇಲ್ಲ. ಬರೇ ಬಾಯಿ ಮಾತಿನಲ್ಲಿ ನಡೆಯುವ ಈ ವ್ಯವಹಾರ ಅತ್ಯಂತ ನಂಬಿಗಸ್ಥ ಹಾಗೂ ಪರಿಣಾಮಕಾರಿಯಾಗಿದೆ. 

ಗಿರಾಕಿ ತನ್ನ ರೂಮಿಗೆ ಸೇರುವ ಮೊದಲೇ ಇಲ್ಲಿ ಮಂಗಳೂರಿನಲ್ಲಿರುವ ಆತನ ಪತ್ನಿಯ ಕೈಯಲ್ಲಿ ದುಡ್ಡು ರವಾನೆಯಾಗಿರುತ್ತದೆ. ಬ್ಯಾಂಕುಗಳು ನೀಡುವ ವಿನಿಮಯ ದರಕ್ಕಿಂತ ಜಾಸ್ತಿ ದರ ನೀಡುವುದಲ್ಲದೆ ಕಮಿಶನ್‌ ಕೂಡಾ ಕಡಿಮೆ; ಅಂದರೆ ಅದೇ ದಿರಮ್‌ ಮೊತ್ತಕ್ಕೆ ಜಾಸ್ತಿ ರುಪಾಯಿ ದಕ್ಕುತ್ತದೆ. ಆಲ್‌ ಈಸ್‌ ವೆಲ್‌ ಆದರೆ, ಅತ್ಯಂತ ಅಚ್ಚುಕಟ್ಟಾಗಿ ನಡೆಯುವ ಈ ಹವಾಲಾ ವ್ಯವಹಾರದಲ್ಲಿ ಇರುವ ಒಂದೇ ಒಂದು ಸಮಸ್ಯೆ ಏನೆಂದರೆ ಅದು ಶೇ.100 ಕಾನೂನುಬಾಹಿರ.
 
ಹವಾಲಾ ಜಾಲ
ದುಬೈ ಅಥವಾ ಪ್ರಪಂಚದ ಇನ್ನಾವುದೋ ಮೂಲೆಯಲ್ಲಿ ಕುಳಿತ ಆ ವ್ಯಕ್ತಿ ಭಾರತದ ಇನ್ನೊಂದು ಮೂಲೆಗೆ ಕಾನೂನು ಕಣ್ತಪ್ಪಿಸಿ ದುಡ್ಡು ಹೇಗೆ ಕಳುಹಿಸುತ್ತಾನೆ? ಇದು ಹವಾಲಾ ಜಾಲದ ಶಕ್ತಿ. ಅಂತಾರಾಷ್ಟ್ರೀಯ ಬ್ಯಾಂಕಿಂಗ್‌ ವ್ಯವಸ್ಥೆಯಂತೆಯೇ ದೇಶ ವಿದೇಶಗಳಲ್ಲಿ ಹವಾಲಾ ಚಾಲಕರ ಒಂದು ಬೃಹತ್‌ ಜಾಲವೇ ಇದೆ. ಯಾವುದೇ ಕಾಗದ ಪತ್ರಗಳಿಲ್ಲದೇ ಕೇವಲ ನಂಬಿಕೆಯಿಂದ ಮಾತ್ರವೇ ನಡೆಯುವ ಜಾಲ! ಇಂತಹ ಕಾನೂನುಬಾಹಿರ ಚಟುವಟಿಕೆ ಗಳಲ್ಲಿರುವಷ್ಟು ನಂಬಿಕೆ ವಿಶ್ವಾಸಗಳು ರಿಸರ್ವ್‌ ಬ್ಯಾಂಕಿನ ವ್ಯವಹಾರದಲ್ಲೂ ಇರಲಾರದು. ಇದು ವಿಪರ್ಯಾಸವಾದರೂ ಸತ್ಯ. 

ಅಂತಹ ನಂಬಿಗಸ್ಥ ಜಾಲದ ಒಂದು ಕೊಂಡಿ ಇಲ್ಲಿ ನಮ್ಮೂರಲ್ಲೂ ಇರುತ್ತದೆ. ದುಬೈಯ ಹವಾಲಾ ಕುಳವಾರು ಮಂಗಳೂರಿನ ಕುಳವಾರಿಗೆ ಫೋನಾಯಿಸಿ ಇಲ್ಲಿ ದುಡ್ಡು ಬಟ್ವಾಡೆ ಮಾಡುವುದಕ್ಕೆ ನಿರ್ದೇಶಿಸುತ್ತಾನೆ. ಇದಕ್ಕೆ ಮೊಬೈಲ್‌ ನಂಬರ್‌, ಕೋಡ್ವರ್ಡುಗಳನ್ನು ಬಳಸುವುದೂ ಇದೆ. ಇದೇ ರೀತಿ ಮಂಗಳೂರಿನಿಂದ ದುಬೈಗೂ ರವಾನೆಗಳಿರುತ್ತವೆ. ಕೊನೆಗೆ ಯಾವಗಾದರೊಮ್ಮೆ ಕ್ರೆಡಿಟ್‌/ಡೆಬಿಟ್‌ ಲೆಕ್ಕಾಚಾರ ಹಾಕಿ ನಿವ್ವಳ ಮೊತ್ತದ ಪಾವತಿಯನ್ನು ನಗದು ಸ್ಮಗ್ಲಿಂಗ್‌, ಚಿನ್ನದ ವರ್ಗಾವಣೆ ಅಥವಾ ಇನ್ನಾವುದೋ ರೀತಿಯಲ್ಲಿ ಸೆಟಲ್‌ ಮಾಡಿಕೊಳ್ಳುತ್ತಾರೆ. 

ಇದೇ ರೀತಿ ಅಮೇರಿಕ, ಯುರೋಪು ಕಡೆ ದುಡ್ಡು ಕಳುಹಿಸ ಬೇಕಿದ್ದರೆ ಕಾಳಧನದವರು ಆಶ್ರಯಿಸುವುದು ಹವಾಲಾ ಜಾಲವನ್ನೇ! ಇಲ್ಲಿನ ರಾಜಕೀಯ ಪುಡಾರಿಗಳು ಬಿಸಿನೆಸ್‌ ಧುರೀಣರು ಸಿನಿಮಾ ನಿರ್ಮಾಪಕರು ಇತ್ಯಾದಿ ಇತ್ಯಾದಿ ಕಾಸುಳ್ಳ ಕುಡಿಕೆದಾರರು ವಿದೇಶಕ್ಕೆ ದುಡ್ಡನ್ನು ಹವಾಲಾ ಮೂಲಕ ಕಳುಹಿಸುತ್ತಾರೆ. ಇವೆಲ್ಲವೂ ಕಪ್ಪು ಧನವಾದ ಕಾರಣ ಬ್ಯಾಂಕಿಂಗ್‌ ಜಾಲವನ್ನು ಬಳಸಿಕೊಳ್ಳುವಂತಿಲ್ಲ. ಬಹುತೇಕ ಹವಾಲ ನಡೆಯುವುದು ಹೀಗೆ. ಇದರಲ್ಲಿ ಸಂದರ್ಭಾನುಸಾರ ಅಲ್ಪಸ್ವಲ್ಪ ವ್ಯತ್ಯಾಸಗಳಿರಬಹುದು.
 
ದೇಶದೊಳಗೂ ಹವಾಲ
ದೇಶದಲ್ಲಿ ಅಪಾರ ಮೊತ್ತದಲ್ಲಿ ಹರಿದಾಡುವ ಕಪ್ಪು ಧನ ಈ ದೇಶದ ಬಿಸಿನೆಸ್‌ ಮತ್ತು ಆರ್ಥಿಕ ವ್ಯವಸ್ಥೆಯ ಜೀವನಾಡಿ. ಇಲ್ಲಿನ ರಾಜಕೀಯ ಪಕ್ಷಗಳು, ಬಿಸಿನೆಸ್‌ ಮನೆತನದವರು, ಸುಪಾರಿ ಕೋರರು, ಗೂಂಡಾ ದುರ್ಜನರು ಹಣವನ್ನು ಅತ್ತಿತ್ತ ವರ್ಗಾಯಿ ಸುವುದು ಹವಾಲ ಮೂಲಕವೇ. ದೂರದ ಗುಜರಾತಿನಲ್ಲಿ ಕುಳಿತಿರುವ ಒಬ್ಟಾತ ಅಡಿಕೆ ಸೇs… ತೆರಿಗೆ ಕಟ್ಟದ ರಶೀದಿ ಇಲ್ಲದ ಮಾಲಿನ ಪಾವತಿ ಮಾಡುವುದೂ ಕೂಡಾ ಹವಾಲಾ ಮೂಲಕವೇ. 

ಸಮಸ್ಯೆಯೇನೆಂದರೆ ನಾಲ್ಕು ಜನರಿಗೆ ಸೌಕರ್ಯ ಉಂಟುಮಾಡುವ ಕೈಯಲ್ಲಿ ಸ್ವಲ್ಪ ಕಾಸು ಉಳಿಸುವ ಪ್ರತಿಯೊಂದು ಚಟುವಟಿಕೆಯನ್ನೂ ಅದು ಕಾನೂನುಬಾಹಿರವಾದರೂ ಕೂಡಾ ನಾವು ನೀವು ಪ್ರೋತ್ಸಾಹಿಸುತ್ತೇವೆ. ಈ ದೇಶದಲ್ಲಿ ಲಂಚ, ಭ್ರಷ್ಟಾಚಾರ, ಕಪ್ಪುಹಣ ಈ ಪರಿಯಲ್ಲಿ ರಾರಾಜಿಸಲು ಅದರ ಬಗ್ಗೆ ಜನತೆಗೆ ಇರುವ ಆಷಾಡಭೂತಿತನವೇ ಮುಖ್ಯ ಕಾರಣ. ನಾವು ಜನರು ಬೇಡವೆಂದರೆ ಆ ಸಂಗತಿ ಈ ಭೂಮಿಯಲ್ಲಿ ಇರಲು ಹೇಗೆ ಸಾಧ್ಯ? ಇದು ಮುಖ್ಯ ವಿಚಾರ. 

ಅದೇ ರೀತಿ ಹವಾಲ ಕೂಡಾ ಜನ ಸಾಮಾನ್ಯರ ಹಾಗೂ ಬಿಸಿನೆಸ್‌ ಧುರೀಣರ, ಭ್ರಷ್ಟರ ಪೋಷಣೆಯಿಂದ ಬೆಳೆಯುತ್ತಿದೆ. ಸ್ವಲ್ಪ ಲಾಭಕ್ಕೆ, ಸ್ವಲ್ಪ ಸೌಕರ್ಯಕ್ಕೆ, ಸ್ವಲ್ಪ ಉದಾಸೀನಕ್ಕೆ ಬಲಿಬಿದ್ದು ಅಮಾಯಕರು ಹವಾಲಾಕೋರರ ಬಾಗಿಲು ತಟ್ಟುತ್ತಾರೆ, ತಾವು ಎಂತಹ ಅಪಾಯಕಾರಿ ಜಾಲದಲ್ಲಿ ಸಿಕ್ಕಿ ಬೀಳುತ್ತಿದ್ದೇವೆ ಎನ್ನುವುದರ ಅರಿವಿರುವುದಿಲ್ಲ. ನಮ್ಮ ರಾಜ್ಯದಿಂದ ಹೊರ ಹೋಗಿ ಕೊಲ್ಲಿ ಮತ್ತಿತರ ರಾಷ್ಟ್ರಗಳಲ್ಲಿ ಕಷ್ಟ ಪಟ್ಟು ದುಡಿದು ಉಳಿಸಿ ಮನೆಗೆ ದುಡ್ಡು ಕಳಿಸುವ ಹಲವಾರು ಕನ್ನಡಿಗರು ಚಿಕ್ಕಾಸು ಉಳಿಸುವ ಆಸೆಯಲ್ಲಿ ತಮಗೆ ಅರಿವಿಲ್ಲದೆಯೇ ಇಂತಹ ಕಾನೂನು ಬಾಹಿರ ವ್ಯವಸ್ಥೆಗೆ ಪುಷ್ಟಿ ನೀಡುತ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ಕಳ್ಳಸಾಗಾಣಿಕೆ, ಭಯೋತ್ಪಾದನೆ ವಿಚಾರವಾಗಿ ನಾಲ್ಕು ಹವಾಲಾಕೋರರನ್ನು ಪೋಲೀಸರು ಹಿಡಿದಾಗ ಆತನ ಅಂಗಡಿಯಲ್ಲಿ ವ್ಯವಹಾರ ಕುದುರಿಸಿದ ನೂರಾರು ಅಮಾಯಕ ಮಂದಿ ಸುಖಾಸುಮ್ಮನೆ ಸಿಕ್ಕಿ ಹಾಕಿಕೊಳ್ಳುತ್ತಾರೆ. 

ಹೇಳಿಕೇಳಿ ಕಾನೂನುಬಾಹಿರ; ಇತ್ತೀಚೆಗಿನ ದಿನಗಳಲ್ಲಂತೂ ಭಯೋತ್ಪಾದನೆಯ ಜೊತೆಗೆ ನಿಕಟವಾಗಿ ಬೆಸೆದುಕೊಂಡಿರುವ ವ್ಯವಹಾರ, ಕೆಲವು ನೂರು ಸಾವಿರದ ವರ್ಗಾವಣೆಗಾಗಿ ಹವಾಲ ಬಳಸಿ ಹವಾಲಾತ್‌ನ ಹವಾ ಸೇವಿಸುವ ದುರಾದೃಷ್ಟ ನಮ್ಮ ಪಾಲಾಗಬಾರದಲ್ಲ? ಹೋಗುತ್ತಾ ಹೋಗುತ್ತಾ ಈ ಕಾಕುವಾಣಿ ನೆನಪಿರಲಿ – ಯಾವತ್ತಿಗೂ ಕಾನೂನಿನ ಕೈಯಲ್ಲಿ ಸಿಕ್ಕಿ ಬೀಳುವುದು ನಾಲ್ಕಾಣೆ ಕದ್ದ ಅಮಾಯಕನೇ ಹೊರತು ಕೋಟ್ಯಂತರ ದೋಚಿದ ಖಳನಾಯಕನಲ್ಲ!!

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.