ಸೋತವರ ತುತ್ತು ಕಸಿದವರು ಯಾರು? 


Team Udayavani, Apr 17, 2017, 2:21 PM IST

17-ISIRI-3.jpg

ನಮ್ಮ ರೈತರು ಮಳೆ ಕೊರತೆ, ಬೆಲೆ ಕುಸಿತದಿಂದ ಬಹಳ ಸೋಲುತ್ತಿದ್ದಾರೆ. ಆದರೂ ಗೆಲ್ಲುವ ಕನಸು ಕಾಣುತ್ತ ಉರಿ ಬಿಸಿಲಲ್ಲಿ ಹೊಲದಲ್ಲಿ ಕಣ್ಮುಚ್ಚಿ ನಿಂತಿದ್ದಾರೆ. ಸಂತೆಗೆ ಚೀಲ ಹಿಡಿದು ಹೊರಟವರು ರೈತರ ಕಷ್ಟ ಅರಿಯಬೇಕು,  ಸೋತವರ ತುತ್ತು ಕಸಿಯುತ್ತ ಹೋದರೆ ಮುಂದೆ ಏನಾದೀತು?

ಈರುಳ್ಳಿಯ ದರ ಕುಸಿದು ಕೃಷಿಕ ಕಂಗಾಲಾದ ದಿನಗಳವು. ಬೇಸಿಗೆಯ ಆರಂಭಕ್ಕೆ ಭರ್ಜರಿ ಬಿಸಿಲು ಶುರುವಾಗಿತ್ತು. ಮಳೆ ಕೈಕೊಟ್ಟು ಮುಂಗಾರಿಯಲ್ಲೇ ಬಯಲುಸೀಮೆಯ ಬಯಲು ಬೆಳೆಯಿಲ್ಲದೇ ಖಾಲಿ ಖಾಲಿ. ಬರದ ಸೀಮೆಯ ಹುಣಸೆ, ಕರಿಜಾಲಿ ಮರಗಳು  ಯಾವತ್ತೂ ನಗುತ್ತಿದ್ದವು. ಆದರೆ  ಈ ವರ್ಷ ಬರದ ಹೊಡೆತಕ್ಕೆ ಮರಗಳೂ ಸೋತಿವೆ. ಸವಣೂರು ದಾಟಿ ಇನ್ನೇನು ಗದಗ ಸಮೀಪಿಸುವಾಗ  ಬಯಲಿನ ನಡುವೆ ಬೆರಗು ಹುಟ್ಟಿಸಿದಂತೆ ಅಲ್ಲಲ್ಲಿ ಈರುಳ್ಳಿ ಬೀಜೋತ್ಪಾದನೆಯ  ಉಮೇದಿ. ಹೂವರಳಿ ಬೀಜ ಕಟ್ಟುವ ಕಾಲ. ಬಯಲಿನಲ್ಲಿ ಬೆಳೆ ಹಸಿರಿದೆಯೆಂದರೆ ಅಲ್ಲಿ ಆಳದ ಕೊಳವೆ ಬಾವಿಯ ನೀರಿದೆಯೆಂದು ಊಹಿಸಬಹುದು. ಹೊಲಕ್ಕಿಳಿದು ನೋಡಿದರೆ ಹುಳಕ್‌ ಎರಿಯ ಮಣ್ಣಿನಲ್ಲಿ ಹೊರ್ತಿಯ ಕೃಷಿಕ ಮಲ್ಲಪ್ಪ ಗುರುಸಿದ್ದಪ್ಪ ಹೊನ್ನಪ್ಪನವರ್‌(58) ಬದುಕು ಗೆಲ್ಲುವ ಸಾಹಸದಲ್ಲಿ ನಿರತರಾಗಿದ್ದರು. 

 ಗುರುಸಿದ್ದಪ್ಪರದು ಮೂರು ಎಕರೆ ಜಮೀನು. ನೀರಾವರಿಗೆ 350-400 ಅಡಿ ಆಳದ ಮೂರು ಕೊಳವೆ ಬಾವಿ ಕೊರೆಸಿದ್ದಾರೆ. ಲಕ್ಷಾಂತರ ಹಣ ಖಾಲಿಯಾಗಿ ಸಿಕ್ಕಿದ್ದು ಮೂರು ಇಂಚು ನೀರು. ಬೋರು ಯಾವಾಗ ಕೈಕೊಡುತ್ತದೋ ಎಂಬ ದುಗುಡದಲ್ಲಿಯೇ ದಿನ ಕಳೆದಿದ್ದಾರೆ. 2001ರಿಂದಲೂ ಈರುಳ್ಳಿ ಬೀಜೋತ್ಪಾದನೆಯನ್ನು ನಿರಂತರವಾಗಿ ವಾಣಿಜ್ಯ ಬೆಳೆಯಾಗಿ ಅನುಸರಿಸಿದ್ದಾರೆ. ಎಕರೆಗೆ 60 ಕಿಲೋ ತೂಕದ ಐದಾರು ಚೀಲ ಬೀಜ ಉತ್ಪಾದಿಸುತ್ತಾರೆ. ಕಿಲೋ ಬೀಜಕ್ಕೆ 350-500 ರೂಪಾಯಿ ದರದಂತೆ ಅಜ್ಜಂಪುರ, ರೋಣ, ಗದಗ ಕೃಷಿಕರಿಗೆ ಮಾರಾಟ. ಸಾಮಾನ್ಯವಾಗಿ ಮಸಾರಿ ಹೊಲದಲ್ಲಿ ಬೀಜೋತ್ಪಾದನೆ ನಡೆಯುತ್ತದೆ. ಉತ್ತಮ ಗುಣಮಟ್ಟದ ಬೀಜ ದೊರೆಯಲು  ಈ ಭೂಮಿ ಸೂಕ್ತ. ಎರೆ ಮಣ್ಣಿನಲ್ಲಿಯೇ ಹುಳಕ್‌ ಎರಿಯೆಂದು ಗುರುತಿಸುವ ನೆಲೆಯೂ ಬೀಜೋತ್ಪಾದನೆಗೆ ಬಳಕೆಯಾಗುತ್ತದೆ. ಹತ್ತಿ, ಗೋವಿನಜೋಳ, ಈರುಳ್ಳಿಯ ಮಳೆ ಆಶ್ರಿತ ಬೆಳೆ ಬಳಿಕ ಆದಾಯದ ಹೆಜ್ಜೆಯಾಗಿ ಕೆಲವರು ಬೀಜೋತ್ಪಾದನೆಯ ಪ್ರಯತ್ನ ನಡೆಸುವರು. ಕೊಳವೆ ಬಾವಿಯಲ್ಲಿ ನೀರಿದ್ದರೆ ಇದಕ್ಕೆಲ್ಲ ಅವಕಾಶ.

 ಮಳೆ ನಾಲ್ಕು ವರ್ಷಗಳಿಂದ ಗದಗದ ಹೊಲಗಳನ್ನು ಸಂಪೂರ್ಣ ಮರೆತಿದೆ. ರೈತರು ಮಾತ್ರ ಭೂಮಿ ತಾಯಿಯನ್ನು ಮರೆತಿಲ್ಲ, ಮಳೆ ನಿರೀಕ್ಷೆಯಲ್ಲಿ ಬೆಳೆ ಪ್ರಯೋಗ ನಡೆಸುತ್ತಾರೆ. ಗುರುಸಿದ್ದಪ್ಪ ಎರಡು ಎಕರೆ ಹತ್ತಿ ಹಾಕಿದ್ದರು. 25 ಕ್ವಿಂಟಾಲ್‌ ದೊರೆಯಿತು. ಕ್ವಿಂಟಾಲ್‌ಗೆ 5,200 ರೂಪಾಯಿಗೆ ಮಾರಿದರು.  ಕಳೆದ ವರ್ಷ ಬರೋಬ್ಬರಿ ಐದು ಎಕರೆ ಇರುಳ್ಳಿ ಬೆಳೆದಿದ್ದರು.  ಬೆಲೆ ಕುಸಿದು ಕಿಲೋಗೆ ಮೂರು ರೂಪಾಯಿಗೂ ಕೇಳುವವರಿಲ್ಲ.   ಹೀಗಾಗಿ ಈರುಳ್ಳಿ ಕೀಳಲಿಲ್ಲ. ಸಂಬಂಧಿಕರು, ಪರಿಚಯಸ್ಥರು ಹೊಲಕ್ಕಿಳಿದು ಪುಕ್ಕಟೆ ಕಿತ್ತು ಒಯ್ದರು! ಒಮ್ಮೆ ಈರುಳ್ಳಿ ಕೀಳಲು ಹೋಗಿದ್ದರೆ ಒಂದು ಕಿಲೋಗೆ 7-8 ರೂಪಾಯಿ ಖರ್ಚಾಗುತ್ತಿತ್ತು. ಒಂದು ಎಕರೆ ಈರುಳ್ಳಿ ಕೀಳಲು 10 ಆಳು ಬೇಕು. 150 ರೂಪಾಯಿ ಕೂಲಿ ದರವಿದೆ. ಗಡ್ಡೆಯ ಕಸ ಕತ್ತರಿಸಲು ಚೀಲಕ್ಕೆ 30 ರೂಪಾಯಿ ಖರ್ಚಾಗುತ್ತದೆ. ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಲು ಇನ್ನಷ್ಟು ಹಣ ಬೇಕು. ಒಂದು ಕಿಲೋಗೆ ಎರಡು, ಮೂರು ರೂಪಾಯಿ ದೊರೆಯದ ಪರಿಸ್ಥಿತಿಯಲ್ಲಿ ಬೆಳೆ ಸಂಗ್ರಹಿಸುವುದೂ ನಿವ್ವಳ ನಷ್ಟದ ಕೆಲಸ. ಇರುಳ್ಳಿ ಕೊಯ್ಲಿನ ಖರ್ಚು ಹುಟ್ಟದ ಪರಿಸ್ಥಿತಿ. 

 ಒಂದು ಎಕರೆ ಈರುಳ್ಳಿ ಬೆಳೆಯುವಾಗ ಕಳೆ ತೆಗೆಯುವುದಕ್ಕೆ ಒಮ್ಮೆಗೆ 30 ಆಳು ಬೇಕು. ಮೂರೂವರೆ ತಿಂಗಳ ಬೆಳೆಗೆ ಮೂರು ಸಾರಿ ಕಳೆ ತೆಗೆಯಬೇಕು. ಕೃಷಿಯ ಖರ್ಚು ಲೆಕ್ಕ ಹಾಕಿದರೆ ನಾವು ಕಿಲೋಗೆ 50 ರೂಪಾಯಿ ನೀಡಿದರೂ ಕೃಷಿಕರಿಗೆ ಲಾಭವಾಗದ ಪರಿಸ್ಥಿತಿಯಿದೆ. ಲಕ್ಷಾಂತರ ಆದಾಯದ ಕನಸು ಕಾಣುತ್ತ ಬೆಳೆಯುವ ರೈತರಿಗೆ ಬೆಲೆ ಕುಸಿತದ ಹೊಡೆತ  ಈಗ ಬರದ ಕಾಲದಲ್ಲಿಯೇ ಬಂದಿದ್ದು ವಿಚಿತ್ರ. ಉತ್ತಮ ಮಳೆ ಸುರಿದರೆ ಎಕರೆಗೆ 15 ಕ್ವಿಂಟಾಲ್‌ ಗೋವಿನಜೋಳ ದೊರೆಯುತ್ತದೆ. ತಮ್ಮ ಹೊಲದ ಪಕ್ಕದ ಐದು ಎಕರೆ  ಭೂಮಿಯನ್ನು ಲಾಗಣಿಗೆ ಹಾಕಿಕೊಂಡು  ಗುರುಸಿದ್ದಪ್ಪ ಗೋವಿನ ಜೋಳ ಬಿತ್ತಿದರು. ಕೃಷಿ ವೆಚ್ಚ ಕಡಿಮೆಯಿರುವ ಈ ವಾಣಿಜ್ಯ ಬೆಳೆ ಬೆಳಗಾವಿಯಿಂದ ಚಿತ್ರದುರ್ಗದ ತುದಿಯವರೆಗೂ ಬಯಲು ನಾಡಿಗೆಲ್ಲ ವ್ಯಾಪಿಸಿದೆ. ಆದರೆ ಮಳೆ ಕೊರತೆಯಿಂದ ಎರೆ ಹೊಲದ ಗೋವಿನಜೋಳ ಒಣಗಿದವು. ಭೂಮಿ ಬಿರುಕಾಗಿ ಬೇರು ಹರಿದು ಗಿಡಗಳು ಸತ್ತವು. ಎಕರೆಗೆ ಮೂರು ಕ್ವಿಂಟಾಲ್‌ ಕೂಡಾ ಬರಲಿಲ್ಲ, ಕ್ವಿಂಟಾಲ್‌ ದರ 1,400ರೂಪಾಯಿ ದೊರೆಯಿತು. 

 ಕೃಷಿಯಲ್ಲಿ ಲಾಭ ಹುಡುಕಲು ಹೊಸ ಹೊಸ ಬೆಳೆ ಹುಡುಕುವುದು ಕೃಷಿ ನಂಬಿದವರ ಸಹಜ ಪ್ರಯತ್ನ. ಪಾರಂಪರಿಕವಾಗಿರುವ ಈರುಳ್ಳಿ, ಮೆಣಸು ಬೆಳೆಯುವುದು. ಬೀಜೋತ್ಪಾದನೆಯ ಆಸೆಗೆ ಕೊಳವೆ ಬಾವಿ ಕೊರೆಸುತ್ತ ನೀರು ಹುಡುಕುವುದು. ಅಕ್ಕಪಕ್ಕದ ಹೊಲಗಳನ್ನು ಕಡ್ತಕ್ಕೆ ಹಾಕಿಕೊಂಡು ಕೃಷಿ ವಿಸ್ತರಿಸುವ ಸಾಹಸ ನಡೆಸುತ್ತ ರೈತರು ಸಾಗಿದ್ದಾರೆ. ಗದಗದ ಹೊರ್ತಿಯ ಗುರುಸಿದ್ದಪ್ಪ  ಬದುಕು ನಮ್ಮ ರೈತ ಸಮುದಾಯದ  ಬದುಕಿನ ಶೈಲಿಯ ಒಂದು ಉದಾಹರಣೆ ಮಾತ್ರ. ಇರುಳ್ಳಿಯ ಬೆಲೆ ಕುಸಿದಾಗ ಇರುಳ್ಳಿ ಕೀಳದ ನಿರ್ಧಾರಗಳನ್ನು ನೂರಾರು ರೈತರು ಕೈಗೊಂಡಿದ್ದಾರೆ. ಕೊಯ್ಲಿಗೆ ನಷ್ಟ ಮಾಡಿಕೊಂಡು ಮಾರುಕಟ್ಟೆಗೆ ಸಾಗಿಸುವುದಾದರೂ ಏಕೆ? ಪ್ರಶ್ನೆ ರೈತರನ್ನು ಕಾಡುತ್ತದೆ. ಆದರೆ ದೂರದ ಸಂತೆಯಲ್ಲಿ ಖರೀದಿಗೆ ಹೊರಟ ನಾವು ಹತ್ತು ರೂಪಾಯಿ ಕಿಲೋ ಇರುಳ್ಳಿಯಿದ್ದರೆ  ಐದು ರೂಪಾಯಿಗೆ ಸಿಗುತ್ತದೆಯೇ? ಚೌಕಾಶಿ ಮಾಡುತ್ತೇವೆ. ನಮಗೆ ಯಾರಿಗೂ ದೂರದ ಹೊರ್ತಿಯ ಗುರುಸಿದ್ದಪ್ಪರ ಕಷ್ಟ ಕಾಣಿಸುವುದಿಲ್ಲ.  ಅಗ್ಗಕ್ಕೆ ಸಿಕ್ಕರೆ ಎಲ್ಲರಿಗೂ ಬೇಕು. ಆದರೆ ಕೃಷಿಕ ಬದುಕುವುದು ಹೇಗೆಂದು ಯೋಚಿಸುವುದಿಲ್ಲ. ನಮಗೆ ಅನ್ನ ನೀಡುವವರ ಬಗ್ಗೆ ಯೋಚಿಸಿದಷ್ಟು  ಒತ್ತಡದಲ್ಲಿ ಮುಳುಗಿದ್ದೇವೆ.

 ಈಗ 41 ಡಿಗ್ರಿ ಉರಿ ಬಯಲು ನಾಡಿಗೆಲ್ಲ ವ್ಯಾಪಿಸಿದೆ. ಒಂದು ತಾಸು ವಿದ್ಯುತ್‌ ಕೈಕೊಟ್ಟರೆ ಸಾವು ಬಂದಂತೆ ಚಡಪಡಿಸುವವರು, ಉರಿಬಿಸಿಲ ತಗಡಿನ ಮನೆಯಲ್ಲಿ ರೈತರು ಹೇಗಿದ್ದಾರೆಂದು ನೋಡಬೇಕು.  ಬೀದರ್‌ನ ತುದಿಗೋ, ಕೋಲಾರದ ಮೂಲೆಗೂ ಪಯಣಿಸಿ ಬರಬೇಕು. ಬರದ ತಾಂಡವಾಡುವ ಭಯಾನಕ ಬಯಲಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕೃಷಿಕರು ಬೆಳೆಗೆ ನೀರುಣಿಸುತ್ತ ತಾವು ಬದುಕಿ ನಮಗೆ ಅನ್ನ ನೀಡುವ ಪ್ರಯತ್ನ ನಡೆಸಿದ್ದು ಕಾಣಿಸುತ್ತದೆ. ವಿಶೇಷವೆಂದರೆ ಕೃಷಿಯಲ್ಲಿ ಗೆದ್ದು ಹಣ ಕಾಣುವವರು ನೂರರಲ್ಲಿ ಐದು ರೈತರೂ ಇಲ್ಲ. ಗಳಿಸಿದ ಹಣವನ್ನು ನೀರು ಹುಡುಕಲು ಕೊಳವೆ ಬಾವಿಗೆ ಚೆಲ್ಲುವವರು ಈಗ ಎಲ್ಲೆಡೆ ಸಿಗುತ್ತಾರೆ. ಮುಂದೆ ಮಳೆ ಸರಿದು ಬೆಳೆ ಚೆನ್ನಾಗಿ ಆಗುತ್ತದೆಂಬ ಕನಸು ಕಾಣುತ್ತ ಉಳುಮೆ ನಡೆಸುವವರು ಹೊಲದಲ್ಲಿ ಧೈರ್ಯದಲ್ಲಿ ನಿಂತಿದ್ದಾರೆ. ಇವರ ಹುಂಬು ಧೈರ್ಯ ನಮಗೆ ಅನ್ನ ನೀಡುತ್ತಿದೆ.  ಎಕರೆಗೆ 50 ಚೀಲ ಭತ್ತ ಬೆಳೆಯುವ ಗಂಗಾವತಿ, ಸಿಂಧನೂರಿನವರು ನೀರಿಲ್ಲದೇ 15 ಚೀಲ ಬೆಳೆದರೂ ಅದು ನಮ್ಮ ತಟ್ಟೆಯ ಅನ್ನವಾಗುತ್ತದೆ. ನಷ್ಟ ವರ್ಷದಿಂದ ವರ್ಷಕ್ಕೆ ಹೀಗೆ ಮುಂದುವರಿಯುತ್ತ ಹೋದರೆ ಕಟ್ಟಕಡೆಗೆ ಕೃಷಿಕ ಎಲ್ಲಿರಬೇಕು? ಪರೀಕ್ಷೆ ಶುರುವಾಗಿದೆ. ನಾವು ಸತ್ಯ ದರ್ಶನಕ್ಕೆ ಹೋಗದೇ ಸೋತವರ ತುತ್ತು ಕಸಿಯುತ್ತ ಕುಳಿತರೆ ನಾಳೆ ಏನಾಗಬಹುದು? ಯೋಚಿಸಬೇಕು. ನಿಮ್ಮ ಕಿಸೆಯ ಕಾಸು ತೆಗೆದು ರೈತರ ಹೊಲಗಳಿಗೆ ಕೃಷಿ ಹೊಂಡ, ಕೆರೆ ರಚನೆಗೆ ನೆರವಾಗಬೇಕು. ಒಮ್ಮೆ ಮಳೆ ಸುರಿದು ಅವುಗಳಲ್ಲಿ ನೀರು ತುಂಬಿದರೆ ಎಲ್ಲರಿಗೂ ನೆಮ್ಮದಿ ದೊರೆಯಬಹುದು. 

ಶಿವಾನಂದ ಕಳವೆ

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.