ಆದಾಯಕ್ಕೆ ಆಲೂಗಡ್ಡೆ
Team Udayavani, Nov 20, 2017, 12:00 PM IST
ತರೀಕೆರೆ ತಾಲೂಕಿನ ಕೃಷ್ಣಾಪುರ ಗ್ರಾಮದ ಲಿಂಗದಹಳ್ಳಿಯ ಟಿ. ಆಂಡಿಯವರಿಗೆ ಆಲೂಗಡ್ಡೆ ಬೆಳೆಯ ಬಗ್ಗೆ ಸಾಕಷ್ಟು ಅನುಭವವಿದೆ. ಅವರಿಗೆ ಒಂಭತ್ತು ಎಕರೆ ಜಮೀನಿದೆ. ಬಹುಬೆಳೆಗಳನ್ನು ಬೆಳೆಯುವ ಮೂಲಕ ಅವರು ಕೃಷಿಯಲ್ಲಿ ಲಾಭ ನಷ್ಟ ಸರಿದೂಗಿಸುತ್ತಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಒಂದೂವರೆ ಎಕರೆಯಲ್ಲಿ ಆಲೂಗಡ್ಡೆ ನಾಟಿ ಮಾಡುತ್ತಿದ್ದಾರೆ. ಗೆಡ್ಡೆ ನಾಟಿ ಹಂತದಲ್ಲಿ ಮಳೆ ಚೆನ್ನಾಗಿ ಬಂದರೆ ಉತ್ತಮ ಫಸಲು ದೊರೆಯುತ್ತದೆ. ಸಾಕಷ್ಟು ಬಾರಿ ನಷ್ಟವನ್ನು ಅನುಭವಿಸಿದ್ದೂ ಇದೆ. ಹಾಗಂತ ಆಂಡಿ ಕೈಕಟ್ಟಿ ಕುಳಿತುಕೊಂಡಿಲ್ಲ. ಆಲೂಗಡ್ಡೆ ಮೂರು ತಿಂಗಳ ಬೆಳೆ. ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಕೊಪ್ರಿಜ್ಯೋತಿ ತಳಿಯನ್ನು ಬಿತ್ತಿದ್ದಾರೆ. ಗಡ್ಡೆಯನ್ನು ಹಾಸನದಿಂದ ತಂದಿದ್ದಾರೆ. ಒಂದು ಎಕರೆಗೆ ಆರು ಕ್ವಿಂಟಾಲ್ ಗಡ್ಡೆ ಬೇಕು. ಕ್ವಿಂಟಾಲ್ಗೆ ರೂ. 1,000 ದರವಿದೆ. ಇದು ಮೂರು ತಿಂಗಳ ಬೆಳೆಯಾಗಿದ್ದು, ಮಳೆಗಾಲದ ಆರಂಭ ನಾಟಿಗೆ ಸೂಕ್ತ. ಆಲೂಗಡ್ಡೆ ಕಲ್ಲು ಭೂಮಿಯಲ್ಲೂ ಚೆನ್ನಾಗಿ ಬೆಳೆಯುತ್ತದೆ.
ನಾಟಿಗಿಂತ ಮುಂಚೆ ಭೂಮಿಯನ್ನು ಉಳುಮೆ ಮಾಡಿಕೊಳ್ಳಬೇಕು. ಒಂದು ಎಕರೆಗೆ ನಾಲ್ಕು ಟ್ರಾಕ್ಟರ್ ಕೊಟ್ಟಿಗೆ ಗೊಬ್ಬರ, ಎರಡು ಗೋಣಿ ಡಿಐಪಿಯನ್ನು ಚೆಲ್ಲಬೇಕು. ನೀರು ಹಾಯಿಸಿ ಒಂದೂವರೆ ಅಡಿ ಅಂತರಬಿಟ್ಟು ಸಾಲನ್ನು ನಿರ್ಮಿಸಿಕೊಳ್ಳಬೇಕು. ಕೈ ಬೆರಳಿನಲ್ಲಿ ಗುಂಡಿ ತೆಗೆದು ಬುಡದಿಂದ ಬುಡಕ್ಕೆ ಅರ್ಧ ಅಡಿ ಅಂತರಬಿಟ್ಟು ನಾಟಿ ಮಾಡಬೇಕು. ಬೆಳೆಗೆ ನೀರು ಅತ್ಯಗತ್ಯ. ಮಳೆ ಬಾರದಿದ್ದರೆ ದಿನಕ್ಕೆ ಮೂರು ತಾಸು ಹನಿ ನೀರಾವರಿಯ ವ್ಯವಸ್ಥೆ ಮಾಡಬೇಕು. ಒಂದು ಬಾರಿ ಕಳೆಕೀಳಬೇಕು. ಬಿತ್ತನೆ ಮುಗಿದ ಇಪ್ಪತ್ತು ದಿನದಲ್ಲಿ ಚಿಗುರು ಬರುತ್ತದೆ. ಸುಮಾರು ಮೂರು ಅಡಿ ಎತ್ತರಕ್ಕೆ ಬೆಳೆದ ಗಿಡದಲ್ಲಿ ಬಿಳಿ ಹೂ ಕಾಣಸಿಗುತ್ತದೆ. ಹೂವು ನೀಡುವ ಮುಂಚೆ ಕೊಟ್ಟಿಗೆ
ಗೊಬ್ಬರ ನೀಡಿದರೆ ಒಳ್ಳೆಯದು. ಮುಂದಿನ ಎರಡು ತಿಂಗಳ ನಂತರ ಗಿಡ ಬಾಡುತ್ತದೆ. ಅಷ್ಟರಲ್ಲಿ ಮಣ್ಣಿನೊಳಗೆ ಗಡ್ಡೆ ಬೆಳೆದು ಕಟಾವಿಗೆ ಸಿದ್ಧಗೊಂಡಿರುತ್ತದೆ. ಕೆಲವೊಮ್ಮೆ ಗಡ್ಡೆಗಳು ಮಣ್ಣಿನ ಮೇಲ್ಭಾಗಕ್ಕೆ ಬರುವುದೂ ಇದೆ. ಆ ಗಡ್ಡೆಗಳು ಹಸಿರು ಬಣ್ಣವನ್ನು
ಪಡೆಯುತ್ತವೆ. ಮಾರುಕಟ್ಟೆಯಲ್ಲಿ ಇಂಥ ಗಡ್ಡೆಗಳಿಗೆ ಬೇಡಿಕೆ ಇರುವುದಿಲ್ಲ.
ಒಂದು ಗಿಡದಲ್ಲಿ ಐದರಿಂದ ಇಪ್ಪತ್ತು ಗಡ್ಡೆಗಳು ಬೆಳೆಯುತ್ತವೆ. ಕಳೆದ ವರ್ಷ ಒಂದು ಎಕರೆಯಲ್ಲಿ ನೂರು ಕ್ವಿಂಟಾಲ್ ಇಳುವರಿಯನ್ನು ಅಂಡಿಯವರು ಪಡೆದಿದ್ದಾರೆ. ಕೆ.ಜಿ.ಗೆ ಕಡಿಮೆಯೆಂದರೆ ಹದಿನೆಂಟು ರೂ. ದೊರೆಯುತ್ತದೆ. ತೋಟಕ್ಕೇ ಬಂದು ಖರೀದಿಸುವವರ ಸಂಖ್ಯೆ ಹೆಚ್ಚಿರುವುದರಿಂದ ಸಾಗಾಟದ ಖರ್ಚಿಲ್ಲ. ಆಲೂಗಡ್ಡೆಗೆ ಎಲೆಸುಡುವ, ಕೊಳೆರೋಗ ಬಾಧಿಸುವುದು ಸಾಮಾನ್ಯ. ಒಂದು ಎಕರೆಗೆ ಎಲ್ಲಾ ಸೇರಿ 50 ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಕೆ. ಜಿ. ಗೆ ಹತ್ತರಿಂದ 20 ರೂಪಾಯಿ ಇದ್ದರೆ ಕೈತುಂಬಾ ಲಾಭ ಸಿಗುತ್ತದೆಯಂತೆ. ಪಂಜಾಬ್, ಹರಿಯಾಣ, ಛತ್ತಿಸ್ಗಢದಲ್ಲಿ ಹೆಚ್ಚು ಬೆಳೆಗಾರರಿದ್ದಾರೆ. ಅಲ್ಲಿ ಆಲೂಗಡ್ಡೆಯನ್ನು ಸಂಗ್ರಹಿಸಿಡಲು ಸಂಗ್ರಹಣಾ ಘಟಕವೂ ಇದೆ. ರಾಜ್ಯಕ್ಕೆ ಅಲ್ಲಿಂದ ಆಲೂಗಡ್ಡೆ ಆಮದಾಗುತ್ತಿದೆ. ಆದ್ದರಿಂದ ರಾಜ್ಯದ ರೈತರು ಬೆಳೆದ ಗಡ್ಡೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬುವುದು ಅವರ ಅನುಭವದ ಮಾತು. ಆಂಡಿಯವರು ನಾಟಿ, ಕಳೆಕೀಳುವುದು ಹೀಗೆ ಹೆಚ್ಚಿನ ಕೆಲಸಗಳನ್ನು
ತಾವೇ ಮಾಡಿ ಮುಗಿಸುತ್ತಿದ್ದಾರೆ. ಕೆಲವು ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ದುರ್ಗಾಂಬ’ ಪ್ರಗತಿಬಂಧು ತಂಡದ ಶ್ರಮವಿನಿಮಯದ ಮೂಲಕ ಮಾಡಿ ಮುಗಿಸುತ್ತಿದ್ದಾರೆ. ಆದ್ದರಿಂದ ತಗಲುವ ಖರ್ಚು ಕೂಡಾ ಕಡಿಮೆ. ಒಂದು ಬೆಳೆಯಲ್ಲಿ ನಷ್ಟವಾದರೂ ಎರಡನೆ ಬೆಳೆಯಲ್ಲಿ ಲಾಭವಾಗುತ್ತದೆಯಂತೆ. ನೀರಾವರಿ ವ್ಯವಸ್ಥೆ ಇದ್ದರೆ ರಾಜ್ಯದ ಇತರ ಭಾಗಗಳಲ್ಲೂ ಆಲೂಗಡ್ಡೆ ಬೆಳೆಯಬಹುದಾಗಿದೆ.
ಪ್ರೇಮ ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು