ಮೆಸ್ ಅಂದರೆ ಮೆಸ್ ಐಯ್ಯರ್ವೆುಸ್
Team Udayavani, Jan 8, 2018, 3:11 PM IST
ಬಾಯ ನೀರು ಬರಿಸುವ ಕುಂಬಳಕಾಯಿ, ಸೌತೇಕಾಯಿ ಮಜ್ಜಿಗೆ ಹುಳಿ, ಹೋಮ್ ಮೇಡ್ ಉಪ್ಪಿನಕಾಯಿ ಸಿಗುತ್ತದೆ. ಆಗಾಗ ಅತಿಥಿಯಂತೆ ಹಾಗಲಕಾಯಿ ಹುಳಿ, ವಾರಕ್ಕೆ ಎರಡು ಭಾರಿ ಪುಷ್ಕಳ ಬೋಜನ…
ಮೆಸ್ ಅಂದರೆ ಅದೇ ಅನ್ನ, ಅದೇ ಸಾರು, ಅದೇ ಉಪ್ಪಿನಕಾಯಿ, ಅದೇ ಹಪ್ಪಳ ಇಷ್ಟರ ಸುತ್ತಲೇ ಊಟ ಮುಗಿದು ಬಿಡುತ್ತದೆ. ಇದರಲ್ಲಿ ವೈವಿಧ್ಯತೆ ಅನ್ನೋದು ಏನು? ಇಡೀ ಬೆಂಗಳೂರಲ್ಲಿ ಯಾವುದೇ ಮೆಸ್ಗೆ ಹೋದರೂ ಇಂಥದೇ ಊಟ. ಚೂರು ಆಚೀಚೆ ಆಗಬಹುದು ಅಷ್ಟೇ.
ಹಾಗಾದರೆ, ವೈವಿಧ್ಯಮಯ ಊಟ ಬೇಕು ಅಂದರೆ, ಮಲ್ಲೇಶ್ವರಂನ ಐಯ್ಯರ್ ಮೆಸ್ಸೇ (8 ಮತ್ತು 7ನೇಕ್ರಾಸ್ ಮಧ್ಯೆ ಮಲ್ಲೇಶ್ವರಂ ಸರ್ಕಲ್ ಹತ್ತಿರ) ಗತಿ. ಹೆಚ್ಚಾ ಕಡಿಮೆ 40-50 ವರ್ಷದಿಂದ ಹಸಿದ ಹೊಟ್ಟೆಗಳಿಗೆ ಊಟ ಬಡಿಸುತ್ತಿದೆ ಈ ಮೆಸ್. ಬೆಳಗ್ಗೆ 11 ರಿಂದ 3, ಸಂಜೆ 7 ರಿಂದ 9.15ರ ಸಮಯದಲ್ಲಿ ಇಲ್ಲಿ ಊಟ ಲಭ್ಯ. ಐಯ್ಯರ್ ಮೆಸ್ನಲ್ಲಿನ ಊಟ ಇತರೆ ಮೆಸ್ಗಳಿಗಿಂತ ಭಿನ್ನ. ಸಾರು, ಅನ್ನ, ಹುಳಿ, ಹಪ್ಪಳ ಇದೇ ಊಟನೇ ಇಲ್ಲಿ ಸಿಗೋದು. ಆದರೆ, ರುಚಿಯಲ್ಲಿ ಮಾತ್ರ ಡಿಫರೆಂಟ್. ಬಹುಶಃ ಇಲ್ಲಿನ ಊಟ ಸವಿದರೆ, ನೀವು ತಮಿಳುನಾಡಿನ ಊಟ ತಿಂದ ಅನುಭವ ಆಗದೇ ಇದ್ದರೆ ಕೇಳಿ. ಮಧುರೈ ಕಡೆ ಇಂಥದೇ ಟೇಸ್ಟು ಇರೋ ಊಟ ಸಿಗುತ್ತದೆ.
ಇದು ಪಕ್ಕಾ ಐಯ್ಯರ್ ಶೈಲಿಯದ್ದು. ವಿಶೇಷವೆಂದರೆ, ಇಲ್ಲಿ ಸಿಗುವ ರಸಂ ಬಹಳ ರುಚಿಕಟ್ಟಾಗಿರುತ್ತದೆ. ಅದರಲ್ಲಿ ಹುಡುಕಿದರೆ ಬೇಳೆ ಸಿಗೋಲ್ಲ. ಅದೇ ಇದರ ಸಿಕ್ರೇಟ್. ಸಾಮಾನ್ಯವಾಗಿ ಐಯ್ಯರ್ ಊಟಗಳಲ್ಲಿ ಬೇಳೆಗಳ ಪಾತ್ರ ಕಡಿಮೆ. ನಮ್ಮ ಕಡೆ ಮಾಡುವ ಹಾಗೇ ಅವರು ಪ್ರತ್ಯೇಕವಾಗಿ ಹುಳಿಪುಡಿ,
ಸಾರಿನ ಪುಡಿಗಳನ್ನು ಮಾಡಿಟ್ಟುಕೊಂಡು ಅಡುಗೆ ಮಾಡೋಲ್ಲ. ಹೆಚ್ಚಾಗಿ ಮೆಣಸು, ಜೀರಿಗೆಗಳನ್ನು ಸಾಂಬಾರ್ ಪದಾರ್ಥಕ್ಕೆ ಬಳಸುವುದರಿಂದ ಇದು
ಕೊಡುವ ರುಚಿಯೇ ಬೇರೆ. ಉಳಿ, ತರಕಾರಿ ಕೂಟಿಗೆ ಸಾಂಬಾರ ಪೌಡರ್ ಬಳಸದೆ ಮಸಾಲೆ ರುಬ್ಬಿಹಾಕುವುದರಿಂದ, ರಸಂ, ಸಾಂಬಾರ್ಗೆ ಬೆಲ್ಲ
ಹಾಕದೇ ಇರುವುದರಿಂದ ಇಂಥ ವೈವಿಧ್ಯಮಯ ಟೇಸ್ಟು ಸಿಗುತ್ತದೆ.
ಐಯ್ಯರ್ ಊಟದಲ್ಲಿ ಹೆಚ್ಚಾಗಿ ತೆಂಗು ಕಾಣೋದಿಲ್ಲ. ಇಂಗು, ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡಬಹುದು ಬಿಡ್ರೀ ಅನ್ನೋಮಾತು ಇಲ್ಲಿ
ಅನ್ವಯವಾಗೋಲ್ಲ. ತೆಂಗಿನಕಾಯಿಯನ್ನು ಇವರು ಬಳಸದೆ, ರುಚಿಕಟ್ಟಾಗಿ ಅಡುಗೆ ಮಾಡುತ್ತಾರೆ. ಐಯ್ಯರ್ ಮೆಸ್ ಶುರುವಾಗಿದ್ದು 1959ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ. ಮಹದೇವಅಯ್ಯರ್ ಇದರ ಮಾಲೀಕರು. ಈಗ ಮಕ್ಕಳು ಮೊಮ್ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಪ್ರತಿ ಶನಿವಾರ ರಜೆ. ಆದರೆ, ಭಾನುವಾರ ಪುಷ್ಕಳ ಭೋಜನ. ಇದಕ್ಕೆ ಸಾಥ್ ನೀಡಲು ಮಜ್ಜಿಗೆ ಹುಳಿ ಕೂಡ ಜೊತೆಗಿರುತ್ತದೆ. ಮಜ್ಜಿಗೆ ಹುಳಿಯನ್ನು ಕುಂಬಳಕಾಯಿ, ಸೌತೇಕಾಯಿ ಎರಡರಲ್ಲೂ ಮಾಡುತ್ತಾರೆ. ಬಾಯಿ ಚಪ್ಪರಿಸಲು ಹೋಮ್ ಮೇಡ್ ಉಪ್ಪಿನಕಾಯಿ ಸಿಗುತ್ತದೆ. ಆಗಾಗ ಅತಿಥಿಯಂತೆ ಹಾಗಲಕಾಯಿ ಹುಳಿ ಸಿಗುತ್ತದೆ.
ಕಹಿ ಬಿಟ್ಟುಕೊಡದೆ ರುಚಿ ಹೆಚ್ಚಿಸುವಂತೆ ಮಾಡೋದು ಈ ಐಯ್ಯರ್ ಮೆಸ್ನಲ್ಲಿ ಮಾತ್ರ. ರಾತ್ರಿಯ ಹೊತ್ತು ಚಪಾತಿ ಪಲ್ಯ. ಇನ್ನೊಂದು ವಿಶೇಷ ಎಂದರೆ, ಮಧ್ಯಾಹ್ನ ಮಾಡಿದ ಸಾಂಬಾರು, ರಸಂ ರಾತ್ರಿ ಮುಂದುವರಿಯೋಲ್ಲ. ಬೆಳಗ್ಗೆ ಬೇರೆ ಮೆನು, ರಾತ್ರಿಗೇ ಬೇರೆ ಇನ್ನೊಂಥರ ಮೆನು. ವಾರ ಪೂರ್ತಿ ವೈವಿಧಯಮಯ ಅಡುಗೆ. ರಿಪೀಟೇಷನ್ ಇರೋಲ್ಲ.
ಪದೇಪದೆ ಐಯ್ಯರ್ ಮೆಸ್ ಹೋಗಬೇಕು ಅನಿಸೋದು ಇದೇ ಕಾರಣಕ್ಕೆ.
ಜಿ.ಕೆ.