ದೇವ ಮಂದಿರಗಳಲ್ಲಿ ವಾಸ್ತು ಹೇಗಿರುತ್ತದೆ ಎಂದರೆ…
Team Udayavani, Feb 12, 2018, 5:05 PM IST
ದೇವರೆಂದರೆ ನಾವು ನಿರ್ದಿಷ್ಟ ರೂಪಗಳನ್ನು ನೀಡಿ ಶಿಲಾ ಮೂರ್ತಿಯನ್ನು ಕಡೆದು ನೆಲೆಗೊಳಿಸಿ, ಪ್ರತಿಷ್ಠಾಪಿಸುವುದಾದರೂ, ಚೈತನ್ಯದ ಕಲಾ ವೃದ್ಧಿಯೊಂದು ತನ್ನ ಸಂಚಲನವನ್ನು, ನಿರ್ದಿಷ್ಟವಾದ ಜಾಗೆಯಲ್ಲಿ ಕಂಡುಕೊಳ್ಳಬೇಕು. ಭಾರತೀಯ ಆಗಮ ಶಾಸ್ತ್ರ ಇಂಥ ದೈವ ಸಂವರ್ಧನೆ, ಅಷ್ಟಬಂಧಗಳ ವಿಚಾರವಾಗಿ ಹಲವಾರು ವಿಶಿಷ್ಟ ಚೌಕಟ್ಟುಗಳನ್ನು, ಆವರಣಗಳನ್ನು ಇದೇ ರೀತಿ ಎಂದು ಸ್ಪಷ್ಟವಾಗಿ ಹೇಳಿದೆ.
ಬದುಕಿನ ಓಟದ ಸಂದರ್ಭದಲ್ಲಿ ಪ್ರತಿಯೊಬ್ಬನ ಆಸ್ಥೆಯ ವಿಚಾರವಾಗಿ ಭಿನ್ನವಾದ ನಿಲುವುಗಳಿರುತ್ತವೆ. ಇಂಥ ಈ ನಿಲುವುಗಳಲ್ಲಿ ಮಾನಸಿಕವಾದ ತೃಪ್ತಿ, ಸಮಾಧಾನ, ಬದುಕಿನ ಕುರಿತಾದ ಸಾರ್ಥಕತೆಗಳ ಕುರಿತು ಗಮನ ಹರಿಸುತ್ತಾರೆ. ಹಾಗೆಯೇ ಇಂಥ ಈ ತೃಪ್ತಿ, ಸಮಾಧಾನ, ಸಾರ್ಥಕತೆಗಳು-ದಾನ ನೀಡುವುದು, ಇಲ್ಲದವರಿಗೆ ಯಾವುದೋ ವಿಷಯದಲ್ಲಿ ನೆರವಾಗುವುದು, ಇನ್ನೂ ಮುಂದುವರಿದಂತೆ ಹಲವು ಜನ ದೇವಾಲಯ ಕಟ್ಟಿಸುವುದು ಮುಂತಾದವುಗಳ ಮೂಲಕ ಸಿಗುತ್ತವೆ. ಕೆಲವರು ಪಾಳು ಬಿದ್ದ ಗುಡಿಗೋಪುರಗಳ ಜೀರ್ಣೋದ್ಧಾರದ ಸಂಬಂಧವಾಗಿ ಮುಂದುವರಿಯುತ್ತಾರೆ. ದಾನ, ಸಹಾಯ ಒಂದು ತೆರನಾದರೆ, ದೇವಾಲಯಗಳ ಸಂಬಂಧವಾದ ವಿಚಾರ ಹೆಚ್ಚಿನ ಮುತುವರ್ಜಿಯನ್ನು ಬಯಸುತ್ತದೆ.
ಪ್ರಪ್ರಥಮವಾಗಿ ದೇವಾಲಯವನ್ನು ಕಟ್ಟಲು ಅಥವಾ ಜೀರ್ಣೋದ್ಧಾರ ಮಾಡಲು ಮುಂದಾದವರ ಜಾತಕಗಳ ಪರಿಶೀಲನೆ ಬಹುಮುಖ್ಯವಾಗುತ್ತದೆ. ಮುಂಚಿತವಾಗಿಯೇ ಜಾತಕದ ಧರ್ಮ ಭಾವ (ಒಂಭತ್ತನೇ ಭಾವದ ಸುಕೃತ ಹಾಗೂ ಭಾಗ್ಯಗಳನ್ನು ಪ್ರತಿಫಲಿಸುವ ಮನೆ) ವಿಶೇಷವನ್ನು ಅರಿತು ಮುಂದಾಗುವುದು ಅವಶ್ಯವಾಗಿದೆ. ಈ ಸಂಬಂಧವಾಗಿ ದೇವಾಲಯ ಕಟ್ಟೋಣದ ಅಥವಾ ಜೀರ್ಣೋದ್ಧಾರದ ವಿಷಯದಲ್ಲಿ ಮುಂದಾಗುವ ಮುನ್ನ ದೋಷಗಳೇನಾದರೂ ಜಾತಕದಲ್ಲಿದ್ದರೆ, ಈ ದೋಷ ನಿವಾರಣೆಗಾಗಿ ಕೆಲವು ಪರಿಹಾರ ರೂಪದ ಕೈಂಕರ್ಯ ಹಾಗೂ ಅನುಷ್ಠಾನಗಳನ್ನು ಪೂರೈಸಿಕೊಳ್ಳಬೇಕು. ದೇವಾಲಯದ ಕಟ್ಟೋಣ ಅಥವಾ ಜೀರ್ಣೋದ್ಧಾರದ ಸಂದರ್ಭದಲ್ಲಿ ಮುಂದಾದ ಕೆಲಸದಲ್ಲಿ ದೈವದ ಸಿದ್ಧಿ ಕೂಡಿ ಬಂದು, ನಿರ್ದಿಷ್ಟವಾದ ತನ್ನ ಅಲೌಕಿಕ ಸಂಪನ್ನತೆಯನ್ನು ನೆಲೆ ಊರಿಸಲು ದೈವ ಶಕ್ತಿಗೆ ಸಾಧ್ಯವಾಗಬೇಕು.
ದೇವರೆಂದರೆ ನಾವು ನಿರ್ದಿಷ್ಟ ರೂಪಗಳನ್ನು ನೀಡಿ ಶಿಲಾ ಮೂರ್ತಿಯನ್ನು ಕಡೆದು ನೆಲೆಗೊಳಿಸಿ, ಪ್ರತಿಷ್ಠಾಪಿಸುವುದಾದರೂ, ಚೈತನ್ಯದ ಕಲಾ ವೃದ್ಧಿಯೊಂದು ತನ್ನ ಸಂಚಲನವನ್ನು, ನಿರ್ದಿಷ್ಟವಾದ ಜಾಗೆಯಲ್ಲಿ ಕಂಡುಕೊಳ್ಳಬೇಕು. ಭಾರತೀಯ ಆಗಮ ಶಾಸ್ತ್ರ ಇಂಥ ದೈವ ಸಂವರ್ಧನೆ, ಅಷ್ಟಬಂಧಗಳ ವಿಚಾರವಾಗಿ ಹಲವಾರು ವಿಶಿಷ್ಟ ಚೌಕಟ್ಟುಗಳನ್ನು, ಆವರಣಗಳನ್ನು ಇದೇ ರೀತಿ ಎಂದು ಸ್ಪಷ್ಟವಾಗಿ ನಿರ್ದೇಶಿಸಿದೆ. ನಿಜಕ್ಕೂ ಒಂದು ಚೇತೋಹಾರಿಯಾದ ಶಕ್ತಿ ಇದೆ ವಿಶ್ವದಲ್ಲಿ. ಅದು ತನ್ನ ಸೂಕ್ಷ್ಮ ಸ್ವರೂಪವನ್ನು ಆವಾಹನೆ ಮಾಡಿಸಿಕೊಂಡು, ಒಂದು ನಿರ್ದಿಷ್ಟ ಸ್ಥಳದಲ್ಲಿ ಬಂದು ನೆಲೆ ಊರಿ ದಿವ್ಯವೊಂದಕ್ಕೆ ಕಾರಣವಾಗಿ ದೇವಾಲಯವಾಗುವುದು, ಬೇಕಾಬಿಟ್ಟಿಯಾಗಿ ನಡೆಯಲ್ಪಡುವ ಕ್ರಿಯೆಯಲ್ಲ.
ಆಚಾರ್ಯ ಧರ್ಮ ವ್ಯಾಖ್ಯಾನ ಸಿದ್ಧ ಪಂಡಿತ ವರಾಹ ಮಿಹಿರರು, ಒಂದು ದೇವಾಲಯ ನಿರ್ಮಾಣಕ್ಕೆ ಅವಶ್ಯಕವಾದ ವಿಧಿವಿಧಾನಗಳೇನು ಎಂಬುದನ್ನು ತಮ್ಮ “ಬೃಹತ್ ಸಂಹಿತಾ’ ಗ್ರಂಥದಲ್ಲಿ ಯುಕ್ತವಾಗಿ ಮಂಡಿಸಿದ್ದಾರೆ. ಇವುಗಳಿಂದ ಜೀವನದ ಯಶಸ್ಸು ಹಾಗೂ ಸಾರ್ಥಕತೆಗಳು ಕೇವಲ ಕಟ್ಟಿಸಿದವನಿಗೆ ಮಾತ್ರವಲ್ಲ, ಆ ದೇವಾಲಯವನ್ನು ಗೌರವಪೂರ್ವಕವಾಗಿ ಆರಾಧಿಸುವ, ಭಕ್ತಾದಿಗಳ ಕ್ಷೇಮಕ್ಕೂ ಕಾರಣವಾಗುವ ಪರಿಯನ್ನು ವ್ಯಾಖ್ಯಾನಿಸಿದ್ದಾರೆ.
ಈಗ ಆಧುನಿಕ ಕಾಲ ಎಂದು ಗುರುತಿಸಿಕೊಂಡ ಸಮಯದ ಈ ಘಟ್ಟದಲ್ಲಿ ಹೇಗೆ ಬೇಕೋ ಹಾಗೆಲ್ಲಾ ದೇವಾಲಯಗಳು ಎದ್ದೇಳುತ್ತಿವೆ. ಇದು ಸೂಕ್ತವಲ್ಲ. ಪ್ರಸಾದ ಲಕ್ಷಣಾಧ್ಯಯ ಪರಿಚ್ಛೇದದಲ್ಲಿ ವರಾಹ ಮಿಹಿರರು ಸಂಪನ್ನವಾದ, ಸಾಪೇಕ್ಷ ಲಕ್ಷಣಗಳನ್ನು ದೇವಾಲಯದ ಕುರಿತು ಮಂಡಿಸುತ್ತಾರೆ. ಈ ಕುರಿತಾದ ವಿಸ್ತಾರವಾದ ವಿವರಗಳನ್ನು ಮುಂದಿನ ವಾರಗಳಲ್ಲಿ ನೋಡೋಣ. ದೇವರ ಗುಡಿಗೆ ಹೇಗೆ ನೀರಿನ ಜಲಾಶಯವೊಂದು ಅವಶ್ಯಕವಾಗಿದೆ, ಹಸಿರುವ ಕಂಗೋಳಿಸುವ ಉದ್ಯಾನವು ಹೇಗೆ ರೂಪುಗೊಂಡಿರಬೇಕು, ದೇವಾಲಯದ ಸಲುವಾಗಿನ ಭೂಮಿಯ ಲಕ್ಷಣಗಳೆಲ್ಲ ಯಾವ ರೀತಿಯಲ್ಲಿ ಅರ್ಥಪೂರ್ಣವಾಗಿರಬೇಕು, ನಿಕೃಷ್ಟವಾದ ಸ್ಥಳಗಳಲ್ಲಿ ಯಾಕಿರಬಾರದು ಎಂಬುದನ್ನೆಲ್ಲಾ ಮುಂದಿನ ವಾರಗಳಲ್ಲಿ ಚರ್ಚಿಸೋಣ.
– ಅನಂತಶಾಸ್ತ್ರಿ