ಎನ್ಪಿಎ ಅಂದರೆ ಏನು?
Team Udayavani, Mar 5, 2018, 3:05 PM IST
ವಿಜಯ್ಮಲ್ಯ, ನೀರವ್ ಮೋದಿಯಂಥವರು ಸಾಲ ಪಡೆದು ಬ್ಯಾಂಕಿಗೆ ನಾಮ ಹಾಕಿ ಓಡಿ ಹೋಗಬಹುದು. ಅದು ದೊಡ್ಡ ಸುದ್ದಿಯಾಗಬಹುದು. ಆದರೆ ಕೋಟಿ, ಕೋಟಿ ವಂಚಿನೆಯಾದಾಗ ಇದರ ಪರಿಣಾಮ ಗ್ರಾಹಕರ ಮೇಲೂ ಆಗುತ್ತದೆ ಅನ್ನೋದು ಸುಳ್ಳಲ್ಲ. ಎನ್ಪಿಎ ಹೆಸರಲ್ಲಿ ವಸೂಲಾಗದ ಸಾಲವನ್ನೆಲ್ಲಾ ಸೇರಿಸಿ ಕಟ್ಟಿಹಾಕುತ್ತದೆ. ಇದು ಹೆಚ್ಚಾದಂತೆ ಬ್ಯಾಂಕಿನ ಆದಾಯ, ಗ್ರಾಹಕರಿಗೆ ನೀಡುವ ಬಡ್ಡಿಯ ಮೊತ್ತವೂ ಇಳಿಯುತ್ತಾ ಹೋಗುತ್ತದೆ.
ಇವತ್ತು ಬ್ಯಾಂಕಿಂಗ್ಗೆ ಸಂಬಂಧಪಟ್ಟ ಯಾವುದೇ ಸಭೆ, ಸಮಾರಂಭ, ವಿಚಾರಗೋಷ್ಠಿ, ಕಾರ್ಯಾಗಾರಗಳು ನಡೆದರೆ.. ಅಲ್ಲಿ ಅನುತ್ಪಾದಕ ಆಸ್ತಿಗಳ ಬಗೆಗೆ ಎಚ್ಚರಿಕೆ ನೀಡದೇ ಅವುಗಳು ಕೊನೆಗೊಳ್ಳುವುದಿಲ್ಲ. ಇಂಥ ಪ್ರತಿ ಸಂದರ್ಭಗಳಲ್ಲಿ ಬ್ಯಾಂಕುಗಳಿಗೆ ಅನುತ್ಪಾದಕ ಆಸ್ತಿಗಳನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಕಟ್ಟು ನಿಟ್ಟಾದ ಸೂಚನೆ, ಹೊಸ- ಹೊಸ ನಿರ್ದೇಶನಗಳನ್ನು ನೀಡಲಾಗುತ್ತದೆ. ವಿಜಯ್ ಮಲ್ಯ, ನೀರವ್ ಮೋದಿಯಂತವರು ಬ್ಯಾಂಕುಗಳಿಗೆ ನಾಮ ಹಾಕಿದ ಮೇಲಂತೂ ಗ್ರಾಹಕರು ಕೂಡ ಅನುತ್ಪಾದಕ ಆಸ್ತಿಯ ಬಗ್ಗೆ ಚಿಂತಿಸಲು ಮುಂದಾಗಿದ್ದಾರೆ. ಈ ಅನುತ್ಪಾದಕ ಆಸ್ತಿಯ ಪ್ರಮಾಣ ಹೆಚ್ಚಾದರೆ ಬ್ಯಾಂಕ್ನ ವಹಿವಾಟು, ಲಾಭದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಅನುತ್ಪಾದಕ ಆಸ್ತಿಗಳನ್ನು ನಿಯಂತ್ರಿಸಲು ಸಮರೋಪಾದಿಯ ಚಿಂತನೆಗಳು ನಡೆಯುತ್ತಿವೆ.
ಅನುತ್ಪಾದಕ ಆಸ್ತಿ ಎಂದರೇನು?
ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುವುದು, ಅದನ್ನು ಅವÍÂಕತೆ ಇದ್ದವರಿಗೆ ಸಾಲ ನೀಡುವುದು ಬ್ಯಾಂಕುಗಳ ಮೂಲ ವೃತ್ತಿ. ಈ ಸೇವೆಗಾಗಿ ಅವು ಠೇವಣಿದಾರರಿಗೆ ಬಡ್ಡಿ ನೀಡುತ್ತವೆ ಮತ್ತು ಸಾಲ ಪಡೆದುಕೊಂಡವರಿಂದ ಬಡ್ಡಿ ವಸೂಲು ಮಾಡುತ್ತವೆ.ಈ ನೀಡುವ, ಪಡೆಯುವ ಬಡ್ಡಿದರದ ವ್ಯತ್ಯಾಸವನ್ನು ಬ್ಯಾಂಕಿಂಗ್ ಪರಿಭಾಷೆಯಲ್ಲಿ ನೆಟ… ಇಂಟರೆಸ್ಟ್ ಮಾರ್ಜಿನ್ ಎನ್ನುತ್ತಾರೆ. ಬ್ಯಾಂಕ್ಗಳ ನಿರ್ವಹಣೆ ಈ ಮಾರ್ಜಿನ್ನಿಂದಲೇ ಆಗಬೇಕು. ಹಾಗೆಯೇ ಬ್ಯಾಂಕ್ಗಳು ಬಡ್ಡಿ ಹೊರತಾಗಿ, ತಾವು ಕೊಡುವ ವಿವಿಧ ಸೇವೆಗಳಿಗೆ ಗ್ರಾಹಕರಿಂದ ಶುಲ್ಕ ಪಡೆಯುತ್ತಿದ್ದು, ಇವುಗಳು ಬ್ಯಾಂಕುಗಳಿಗೆ ಬಡ್ಡಿಯೇತರ ಆದಾಯವಾಗಿರುತ್ತದೆ. ಇಂಥ ಆದಾಯ, ಬ್ಯಾಂಕಿನ ಒಟ್ಟು ಅದಾಯದ ಸುಮಾರು ಶೇ.22- 25 ಇರುತ್ತದೆ.
ಬ್ಯಾಂಕುಗಳು ತಮ್ಮ ನಿರ್ವಹಣೆಯನ್ನು ತಾವೇ ಮಾಡಿಕೊಳ್ಳಬೇಕು ವಿನಃ ಅವುಗಳಿಗೆ ಬಜೆಟ್ ಅನುದಾನ ದೊರಕುವುದಿಲ್ಲ. ಬ್ಯಾಂಕುಗಳಲ್ಲಿ ಸಾಲ ನೀಡಿದ ತಕ್ಷಣ ಬಡ್ಡಿ ಮೀಟರ್ ಚಾಲೂ ಆಗುತ್ತದೆ. ನೀಡಿದ ಸಾಲದ ಮೂರು ಕಂತುಗಳು ಬರದಿದ್ದರೆ ಅಂಥ ಸಾಲಗಳನ್ನು ಅನುತ್ಪಾದಕ ಆಸ್ತಿ ಎಂದು ಪರಿಗಣಿಸಿ, ಆ ಖಾತೆಗೆ ವರ್ಗಾಯಿಸುತ್ತಾರೆ.
ಸಾಲಗಳು ಬ್ಯಾಂಕುಗಳಿಗೆ ಆಸ್ತಿಯಾಗಿದ್ದು, ಅವು ನಿರಂತರವಾಗಿ ಬ್ಯಾಂಕುಗಳಿಗೆ ಆದಾಯ ತರದಿ¨ªಾಗ
ಅಂಥ ಸಾಲಗಳನ್ನು ಬ್ಯಾಂಕಿನ ಭಾಷೆಯಲ್ಲಿ ಅನುತ್ಪಾದಕ ಆಸ್ತಿ(ಸಾಲ) ಎಂದು ಹೇಳುತ್ತಾರೆ. ಜನಸಾಮಾನ್ಯರ ಭಾಷೆಯಲ್ಲಿ ಈ ಸಾಲಗಳಿಂದ ಬ್ಯಾಂಕುಗಳಿಗೆ ಏನೂ ಗಿಟ್ಟುವುದಿಲ್ಲ ಮತ್ತು ಇವು ಒಂದು ರೀತಿಯ ಡೆಡ್ ಇನ್ವೆಸ್ಟ್ಮೆಂಟ್ ಕೂಡಾ. ಇದನ್ನು ಇನ್ನೂ ಸರಳವಾಗಿ ಬಂಜೆ ಸಾಲ ಎಂದೂ ಕರೆಯಬಹುದು.
ಸಾಲ ಅನುತ್ಪಾದಕ ಸಾಲ (ಆಸ್ತಿ) ಆಗಲು ಕಾರಣಗಳೇನು?
ವ್ಯವಹಾರದಲ್ಲಿ ಕುಂಠಿತ, ಬರಬೇಕಾದ ಹಣ ಬಾರದಿರುವುದು, ಮಾರುಕಟ್ಟೆ ಇಳಿತ, ನಿರೀಕ್ಷೆಯಂತೆ ವ್ಯವಹಾರ ನಡೆಯದಿರುವುದು, ವೆಚ್ಚದಲ್ಲಿ ಅಕಸ್ಮಾತ್ ಇಳಿಕೆ, ಅನಿರೀಕ್ಷಿತ ಹೊರೆ ಮತ್ತು ಸಾಲಗಾರರ ಮಧ್ಯೆ ವಿರಸ ಹೀಗೆ ಹತ್ತು ಹಲವು ಕಾರಣಗಳನ್ನು ತೋರಿಸಿ ಸಾಲ ಮರುಪಾವತಿ ಯಾಗದಿರುವುದಕ್ಕೆ ಸಮರ್ಥನೆ ನೀಡುತ್ತಾರೆ. ಇವುಗಳಲ್ಲಿ ಸತ್ಯಾಂಶ ವಿಲ್ಲದಿಲ್ಲ. ಆದರೆ, ವಿಶ್ಲೇಷಕರ ಪ್ರಕಾರ ಸಾಲ ಮರುಪಾವತಿ ಗಂಭೀರತೆ ಕಳೆದುಕೊಂಡಿರುವುದೇ ಇದಕ್ಕೆ ಕಾರಣ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಮಾಜದಲ್ಲಿ ತಲೆ ಎತ್ತಿ ಓಡಾಡಿ ಮಾದರಿಯಾಗಬೇಕು ಎನ್ನುವ ದಶಕಗಳ ಹಿಂದಿನ ಮನೋಸ್ಥಿತಿ ಕಡಿಮೆಯಾಗಿದೆ. ಅದಕ್ಕೂಮೇಲಾಗಿ ಸರ್ಕಾರದ ಸಾಲ ಮನ್ನಾ, ಬಡ್ಡಿ ಕಡಿತ, ಏಕಬಾರಿ ತೀರುವಳಿಯಂಥ ಸಾಲಗಾರ ಸ್ನೇಹಿ ಕ್ರಮಗಳು ಸಾಲಗಾರರು ಸಾಲ ಮರುಪಾವತಿ ಮಾಡದಂತೆ ಅಥವಾ ವಿಳಂಬ ಮಾಡುವಂತೆ ಮಾಡುತ್ತಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರೂ ಸಾಲ ಮರುಪಾವತಿ ನಿಟ್ಟಿನಲ್ಲಿ ಹಿಂಜರಿಯುವಂತೆ ಮಾಡುವುದರಿಂದ ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚುವಂತೆ ಮಾಡಿದೆ. ಇಂದಲ್ಲದಿದ್ದರೆ ನಾಳೆಯಾದರೂ ಸಾಲ ಮನ್ನಾ ಬರಬಹುದೆಂದು ಕಾಯುವವರೂ ಇಲ್ಲದಿಲ್ಲ. ಸಾಲ ಮನ್ನಾದೊಂದಿಗೆ, ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುವವರಿಗೆ ಸ್ವಲ್ಪ ವಿನಾಯತಿಯ ಉತ್ತೇಜನ ಕೊಟ್ಟಿದ್ದರೆ, ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ ಎನ್ನುವ ಅಭಿಪ್ರಾಯವೂ ಇದೆ.
ಮೂರು ತಿಂಗಳು ಮರುಪಾವತಿ ಅಗದಿದ್ದರೆ, ಪ್ರತಿಯೊಂದು ಸಾಲವನ್ನೂ ಅನುತ್ಪಾದಕ ಸಾಲ ಎಂದು ಪರಿಗಣಿಸಲಾಗುವುದು. ಯಾವುದೇ ಸಾಲಕ್ಕೂ ವಿನಾಯತಿ ನೀಡುವುದಿಲ್ಲ. ಯಾರಾದರೂ ಸಾಲಗಾರರು,ತಮ್ಮ ಸಾಲ ಅನುತ್ಪಾದಕ ಸಾಲ ಅಗದಂತೆ ತಡೆಯಲು, ಸಾಲದ ಮರುಪಾವತಿಯಲ್ಲಿನ ತಮ್ಮ ತೊಂದರೆಗಳನ್ನು ವಿವರಿಸಿ, ಮರುಪಾವತಿ ಸಮಯವನ್ನು ದೀರ್ಘಗೊಳಿಸುವಂತೆ, ಕಂತಿನ ಮೊತ್ತವನ್ನು, ಬಡ್ಡಿದರವನ್ನು ಕಡಿಮೆಮಾಡುವಂತೆ, ಸಾಲ ಮರುಪಾವತಿಯ ವಿರಾಮವನ್ನು ಹೆಚ್ಚಿಸುವಂತೆ ಸಾಲದ ಒಪ್ಪಂದದಲ್ಲಿ ಕೆಲವೊಂದು ಮಾರ್ಪಾಡು ಮಾಡುವಂತೆ ಬ್ಯಾಂಕುಗಳಲ್ಲಿ ಕೇಳಿಕೊಳ್ಳಬಹುದು. ಬ್ಯಾಂಕುಗಳು ಈ ಮನವಿಯು ಸಕಾರಣವಾಗಿದ್ದರೆ, ಅರ್ಥಗರ್ಭಿತವಾಗಿದ್ದರೆ ಸಾಲ ಒಪ್ಪಂದದಲ್ಲಿ ಸ್ವಲ್ಪ ಮಾರ್ಪಾಡುಮಾಡಿ ಸಾಲ ಅನುತ್ಪಾದಕ ಆಸ್ತಿಗೆ ಜಾರದಂತೆ ಕ್ರಮ ತೆಗೆದುಕೊಳ್ಳುತ್ತವೆ. ಇವುಗಳನ್ನು ಮರು ವಿನ್ಯಾಸಗೊಳಿಸಿದ ಸಾಲ ಎಂದು ಕರೆಯುತ್ತಾರೆ. ಹೀಗಾಗಿ ತಕ್ಷಣಕ್ಕೆ ಅನುತ್ಪಾದಕ ಸಾಲ ಎನ್ನುವ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳುತ್ತವೆ. ಬ್ಯಾಂಕುಗಳು ಅವುಗಳಿಗೆ ಲಾಭದಿಂದ ಪ್ರಾವಿಷನ್ ಮಾಡುವ ಅನಿವಾರ್ಯತೆಯಿಂದ ವಿರಮಿಸಬಹುದು.
ಪರಿಣಾಮ ಗ್ರಾಹಕರ ಮೇಲೆ
ಒಮ್ಮೆ ಒಂದು ಸಾಲವನ್ನು ಅನುತ್ಪಾದಕ ಎಂದು ವರ್ಗೀಕರಿಸಿದ ಮೇಲೆ, ಆ ಸಾಲದ ಮೇಲೆ ಬಡ್ಡಿಯನ್ನು ಆಕರಿಸುವಂತಿಲ್ಲ. ಅಂತೆಯೇ ಅವು ಬ್ಯಾಂಕಿನ ಆದಾಯದಲ್ಲಿ ಸೇರುವುದಿಲ್ಲ. ಬರಬೇಕಾದ ಬಡ್ಡಿಯನ್ನು ಲೆಕ್ಕ ಹಾಕಿ ಪ್ರತ್ಯೇಕವಾಗಿ ಆಂತರಿಕ ಉಪಯೋಗಕ್ಕಾಗಿ ಮಾತ್ರ ನಮೂದಿಸಿಕೊಳ್ಳಬಹುದು. ಅವುಗಳನ್ನು ಪ್ರತ್ಯೇಕ ಪುಸ್ತಕಕ್ಕೆ ಬದಲಾಯಿಸುತ್ತಾರೆ. ಬ್ಯಾಂಕುಗಳಲ್ಲಿ ಆದಾಯದ ಸಮೀಕರಣ ಮೊದಲಿನಂತೆ accrued basis ಮೇಲೆ ಇರದೇ, actual receipt ಮೇಲೆ ಇರುವುದರಿಂದ, ಬಡ್ಡಿಯನ್ನು ಆದಾಯವೆಂದು ಬ್ಯಾಲೆನ್ಸ ಶೀಟ್ನಲ್ಲಿ ಸೇರಿಸುವಂತಿಲ್ಲ. ಅಷ್ಟರ ಮಟ್ಟಿಗೆ ಬ್ಯಾಂಕಿನ ಆದಾಯದಲ್ಲಿ ಕಡಿಮೆಯಾಗುತ್ತದೆ. ಬಂದ ಲಾಭದಲ್ಲಿ ಕೂಡಾ ಕೆಲವು ಭಾಗವನ್ನು ಈ ಅನುತ್ಪಾದಕ ಆಸ್ತಿಗೆ ಪ್ರಾವಿಷನ್ ಹೆಸರಿನಲ್ಲಿ ವರ್ಗಾಯಿಸುತ್ತಿದ್ದು ಅನುತ್ಪಾದಕ ಸಾಲ ಹಳೆಯದಾದಷ್ಟು ಮತ್ತು ಭದ್ರತೆ ಕಡಿಮೆ ಇದ್ದಷ್ಟು, ಪ್ರಾವಿಷನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಬ್ಯಾಂಕಿನ ನಿವ್ವಳ ಲಾಭದ ಮೇಲೆ ಪರಿಣಾಮ ಬೀರುತ್ತದೆ. ಲಾಭದ ಪ್ರಮಾಣ ಕಡಿಮೆಯಾದಂತೆ ಬ್ಯಾಂಕುಗಳ ಶೇರುಗಳು ದಕ್ಷಿಣಾಭಿಮುಖವಾಗಿ ಚಲಿಸತೊಡಗುತ್ತವೆ. ಶೇರುದಾರರಿಗೆ ಮತ್ತು ಸರ್ಕಾರಕ್ಕೆ ದೊರಕುವ ಡಿವಿಡೆಂಡ್ ಪ್ರಮಾಣ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ.
ಒಂದು ಬ್ಯಾಂಕಿನಲ್ಲಿ ಸುಸ್ತಿ ಸಾಲ ಅಥವಾ ಅನುತ್ಪಾದಕ ಆಸ್ತಿ ಹೆಚ್ಚಾದಂತೆ, ಅದರಲ್ಲಿ ಜನಸಾಮಾನ್ಯರ ವಿಶ್ವಾಸ ಕಡಿಮೆ ಯಾಗುತ್ತಾ ಹೋಗುತ್ತದೆ. ಅದರ ನಿರ್ವಹಣಾ ವೈಖರಿ ಬಗೆಗೆ ಪ್ರಶ್ನೆಗಳು ಆರಂಭವಾಗುತ್ತವೆ. ಬ್ಯಾಂಕುಗಳು ಸಾಲ ನೀಡುವಾಗ ಕಠಿಣ ಮತ್ತು ಮಡಿವಂತಿಕೆಯನ್ನು ತೋರಿಸಬಹುದು. ನಿಯಮಗಳನ್ನು ರೂಪಿಸಬಹುದು ಅಥವಾ ಹೆಚ್ಚಿನ ಭದ್ರತೆಯನ್ನು ಕೇಳಹುದು. ಒಂದು ರೀತಿಯ ಕ್ಲಾಸ್ ಬ್ಯಾಂಕಿಂಗ್ನತ್ತ ಒಲವು ತೋರಿಸಬಹುದು. ಸಾಲಗಳು ಮರುಪಾವತಿ ಯಾಗದಿದ್ದರೆ, ಫಂಡ್ಸ್ ಪುನರ್ ಬಳಕೆಗೆ ದೊರಕದೇ, ಬ್ಯಾಂಕ್ಗಳ ಸಾಲ ನೀಡಿಕೆಯಲ್ಲಿ ಕುಂಠಿತವಾಗಬಹುದು. ಸಾಲ ನೀಡಿಕೆಗೆ ಸರ್ಕಾರದ ಕ್ಯಾಪಿಟಲ್ ಅಥವಾ ಠೇವಣಿಯನ್ನು ಆಶ್ರಯಿಸುವ ಅನಿವಾರ್ಯತೆ ಬರಬಹುದು. ಸರ್ಕಾರ ಬ್ಯಾಂಕ್ಗಳಲ್ಲಿ ಕ್ಯಾಪಿಟಲ… ಹೂಡುವಾಗ ಕೆಲವು ಮಾನದಂಡಗಳನ್ನು ವಿಧಿಸುತ್ತಿದ್ದು, ಅನುತ್ಪಾದಕ ಆಸ್ತಿ ಅದರಲ್ಲಿ ಮುಖ್ಯವಾದದ್ದು. ಅನುತ್ಪಾದಕ ಆಸ್ತಿ ಹೆಚ್ಚಾದಷ್ಟು ಕ್ಯಾಪಿಟಲ… ದೊರಕುವ ಪ್ರಮಾಣ ಕಡಿಮೆಯಾಗುತ್ತದೆ. ಈ ವರ್ಷ ಈ ಮಾನದಂಡವನ್ನು ಪೂರೈಸಲಾಗದೇ ಕೆಲವು ಬ್ಯಾಂಕ್ಗಳು ಜಂಟಿಯಾಗಿ 6,500 ಕೋಟಿ ಸರ್ಕಾರದ ಕ್ಯಾಪಿಟಲ…ಅನ್ನು ಮಿಸ್ ಮಾಡಿಕೊಂಡಿವೆ. ಅನುತ್ಪಾದಕ ಆಸ್ತಿ ಹೆಚ್ಚಿದಂತೆ ಲಾಭದ ಪ್ರಮಾಣ ಕಡಿಮೆಯಾಗುತ್ತಿದ್ದು, ಅದು ಅಂತರಿಕವಾಗಿ ಕ್ಯಾಪಿಟಲ… ಹೆಚ್ಚಿಸಲು ತಡೆಯಾಗುತ್ತದೆ. ಹಾಗೆಯೇ ಅನುತ್ಪಾದಕ ಸಾಲ ವಸೂಲಾತಿಗೆ ತಗಲುವ ವೆಚ್ಚ ಕೂಡಾ ಗಮನಾರ್ಹವಾಗಿರುತ್ತದೆ. ಇದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಮರಿಕೊಳ್ಳುವ ಅನಾವಶ್ಯಕವಾದ ಹೊರೆ. ಅದಕ್ಕೂ ಮಿಗಿಲಾಗಿ ಯಾವುದೇ ಸಾಲವನ್ನು ಒಮ್ಮೆ ಅನುತ್ಪಾದಕ ಆಸ್ತಿ ಎಂದು ಪರಿಗಣಿಸಿದರೆ, ಅದು ಬ್ಯಾಂಕ್ಗಳ ಸಿಬಿಲ… ವರದಿಯಲ್ಲಿ ನಮೂದಾಗುತ್ತಿದ್ದು, ಇದು ಸಾಲ ಫೂರ್ಣ ಮರುಪಾವತಿಯಾಗುವವರೆಗೆ ಸಾಲಗಾರನ ದಾಖಲೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ. ಸಾಲಗಾರನ ಮುಂದಿನ ಬ್ಯಾಂಕ… ವ್ಯವಹಾರಗಳಲ್ಲಿ, ಆತನ ಸಾಲ ಬೇಡಿಕೆಗೆ ರೆಡ್ ಸಿಗ್ನಲ್ ಬೀಳುತ್ತದೆ.
ತೀರಾ ಇತ್ತೀಚೆಗೆ Insolvency & Bankruptcy Code(IBC) ನಿರ್ಣಯದ ಮೂಲಕ ಬ್ಯಾಂಕ್ ಸಾಲ ವಸೂಲಿಗೆ ಸ್ವಲ್ಪ ಕಠಿಣವಾದ ಕ್ರಮವನ್ನು ತೆಗೆದುಕೊಂಡಿದೆ. ದೊಡ್ಡ ಸಾಲಗಳು ಇದರ ವ್ಯಾಪ್ತಿಗೆ ಬರುವಂತೆ ಮಾಡಲಾಗಿದೆ. ಈ ಪ್ರಕ್ರಿಯೆ 6 ತಿಂಗಳ ಸಮಯ ಪರಿಮಿತಿಯೊಳಗೆ ಮುಗಿಯುವಂತೆ ನಿಗಾವಹಿಸಲಾಗಿದೆ. ಹಾಗೆಯೇ ಇತ್ತಿಚೆಗಗೆ 2.11 ಲಕ್ಷ ಕ್ಯಾಪಿಟಲ… ಮರುಪೂರಣ ಮಾಡುವಾಗ ಬ್ಯಾಂಕಿಂಗ್ ಸುಧಾರಣೆಯ ಹಲವು ಕಟ್ಟಳೆಗಳನ್ನು ವಿಧಿಸಲಾಗಿದೆ. 5 ಕೋಟಿ ಮತ್ತು ಹೆಚ್ಚು ಅನುತ್ಪಾದಕ ಸಾಲಕ್ಕೆ ಜಾರಿದರೆ ವಾರಕ್ಕೊಮ್ಮೆ ರಿಸರ್ವ ಬ್ಯಾಂಕ… ಗೆ ಸಂಪೂರ್ಣ ಮಾಹಿತಿ ಕೊಡಬೇಕಾಗುತ್ತದೆ.
ಇಷ್ಟೆಲ್ಲಾ ಕಾನೂನುಗಳು ಇದ್ದರೂ ಶ್ರೀಮಂತರ ಪಡೆದ ಸಾಲ ಹಿಂದಿರುಗಸದೇ ಇರುವುದು ಅಥವಾ ಸಾಲ ಪಡೆದು ದೇಶ ಬಿಟ್ಟು ಹೋದದ್ದು ಏಕೆ ಎಂದರೆ ಉತ್ತರ ಮಾತ್ರ ಸಿಗುವುದಿಲ್ಲ.
ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿ(ಸಾಲದ)ಗಳ ಪ್ರಮಾಣವೆಷ್ಟು?
ತೀರಾ ಇತ್ತಿಚೆಗಿನ ವರದಿಗಳ ಪ್ರಕಾರ, ಬ್ಯಾಂಕುಗಳಲ್ಲಿ ಅನುತ್ಪಾದಕ ಅಸ್ತಿಗಳ ಪ್ರಮಾಣ 9.50 ಲಕ್ಷ ಕೋಟಿಗಳು. ಇದು ಬ್ಯಾಂಕುಗಳ ಒಟ್ಟು ಸಾಲದ ಶೇ.10 ರಷ್ಟು ಎನ್ನಬಹುದು. ಇದಕ್ಕೆ ಮರುವಿನ್ಯಾಸಗೊಳಿಸಿದ ಸಾಲದ ಮೊತ್ತವನ್ನೂ ಸೇರಿಸಿದರೆ ಇದು 15ಲಕ್ಷ ಕೋಟಿಯನ್ನು ಮುಟ್ಟಬಹುದು ಎನ್ನುವ ಅಂದಾಜಿದೆ. 2015 -16 ರಲ್ಲಿ ಈ ಅನುತ್ಪಾದಕ ಸಾಲದಲ್ಲಿ ಕೇವಲ ಶೇ.20.15ರಷ್ಟು ಮರುಪಾವತಿಯಾಗಿದೆ. ಬ್ಯಾಂಕ್ಗಳ ಪ್ರಕಾರ ಒಂದು ಲಕ್ಷ ವಸೂಲು ಮಾಡುವ ಹೊತ್ತಿಗೆ ಐದು ಲಕ್ಷ ಅನುತ್ಪಾದಕ ಸಾಲದ ಮೊತ್ತಕ್ಕೆ ಹೊಸದಾಗಿ ಸೇರುತ್ತದೆ. ಬ್ಯಾಂಕ್ಗಳ ಬಹುಪಾಲು ಶಕ್ತಿ ಇಂಥ ವಸೂಲಾತಿ ಪ್ರಕ್ರಿಯೆಯಲ್ಲಿಯೇ ವ್ಯಯವಾಗುತ್ತದೆ. ಸಾಲ ವಸೂಲಾತಿಗಾಗಿ ಇರುವ ಸಾಲ ವಸೂಲಾತಿ ಮಂಡಳಿ, ಲೊಕ ಅದಾಲತ್ ಮತ್ತು ಸಫೇìಸಿ ಆಕ್ಟ್ 2002 ಗಳಲ್ಲಿ ಸುಮಾರು 2.86 ಲಕ್ಷಕೋಟಿ ಸಾಲಗಳು ತೀರ್ಮಾನಕ್ಕಾಗಿ ಕಾಯುತ್ತಿವೆ. ಇವುಗಳಲ್ಲಿ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳು ಲೆಕ್ಕವಿಲ್ಲ.
– ರಮಾನಂದ ಶರ್ಮಾ