ನಗರವಾಸಿಗಳ ಕೃಷಿ ನನಸಿನ ದಾರಿ ಇಲ್ಲಿದೆ
Team Udayavani, Oct 15, 2018, 6:00 AM IST
ನಗರಗಳಲ್ಲಿ ಕಾಂಕ್ರೀಟ್ ಕಟ್ಟಡಗಳಲ್ಲಿ ಬದುಕುವ ಕೆಲವರಿಗೊಂದು ಕನಸಿರುತ್ತದೆ. ಕೃಷಿ ಮಾಡುವ ಕನಸು. ಪ್ರಕೃತಿಗೆ ಹತ್ತಿರವಾಗಿರಬೇಕು, ಮಣ್ಣಿನಲ್ಲಿ ಕೆಲಸ ಮಾಡಬೇಕು, ಅಲ್ಪಾವಧಿ ಬೆಳೆ ಬೆಳೆಸಬೇಕು ಎಂಬುದು ಹಲವರ ಹಂಬಲ. ಇನ್ನು ಕೆಲವರಿಗೆ, ಯಾವುದೇ ರಾಸಾಯನಿಕ ಪೀಡೆನಾಶಕ ಬಳಸದೆ ಬೆಳೆಸಿದ ತರಕಾರಿ ತಿನ್ನುವ ಆಸೆ.
ಅಂಥವರ ಕನಸು ನನಸಾಗಿಸುತ್ತಿವೆ ಹರಿಯಾಣದ ಮೂರು ಕಂಪೆನಿಗಳು: ಅವುಗಳ ಹೆಸರು, ಅವು ಕೃಷಿಗಾಗಿ ಲೀಸಿಗೆ ನೀಡುವ ಜಮೀನಿನ ಕನಿಷ್ಠ ವಿಸ್ತೀರ್ಣ, ಲೀಸಿನ ಅವಧಿ ಮತ್ತು ಶುಲ್ಕ ಹೀಗಿವೆ: (1) ಇಡಿಬಲ್ ರೂಟ್ಸ್ ಕಂಪೆನಿ: ಐದು ಸೆಂಟ್ಸ್ (ಆರು ತಿಂಗಳಿಗೆ ರೂ.29,992) (2) ಗ್ರೀನ್ ಲೀಫ್ ಇಂಡಿಯಾ ಕಂಪೆನಿ: 10 ಸೆಂಟ್ಸ್ (ಆರು ತಿಂಗಳಿಗೆ ರೂ.31,974) (3) ಆಗ್ಯಾìನಿಕ್ ಮಟ್ಟಿ ಕಂಪೆನಿ: ಒಂದೆಕ್ರೆ (100 ಸೆಂಟ್ಸ್) (ಒಂದು ವರುಷಕ್ಕೆ ರೂ.60,000)
ಇಡಿಬಲ್ ರೂಟ್ಸೆನ ಮಾಲೀಕ ಕಪಿಲ್ ಮಂಡವೆವಾಲಾ ಈ ಕಂಪೆನಿಯನ್ನು ಡೆಲ್ಲಿಯಲ್ಲಿ ಶುರು ಮಾಡಿದ್ದು 2010ರಲ್ಲಿ – ಸಾವಯವ ಕೃಷಿ ಮಾಡಲು ಜನರಿಗೆ ಅವಕಾಶ ಒದಗಿಸಲಿಕ್ಕಾಗಿ. ಇದೀಗ ಜೂನ್ 2018ರಲ್ಲಿ ಗುರುಗ್ರಾಮದ ಗಾಹಿì ಹರ್-ಸಾರು ಗ್ರಾಮದಲ್ಲಿ ಸುಮಾರು ನಾಲ್ಕು ಹೆಕ್ಟೇರ್ ಜಮೀನು ಲೀಸಿಗೆ ಪಡೆದಿದ್ದಾರೆ. ಅದನ್ನು ಪುಟ್ಟಪುಟ್ಟ ಪ್ಲಾಟುಗಳಾಗಿ ವಿಂಗಡಿಸಿ, ಆಸಕ್ತರಿಗೆ ಲೀಸಿಗೆ ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರ ಉದ್ದೇಶಗಳಿಗಾಗಿ ತಾವು ನಡೆಸುವ ಕಾರ್ಯಾಗಾರಗಳಲ್ಲಿ ಈ ಹೊಸ ಯೋಜನೆಯ ಪ್ರಚಾರ.
ಎರಡೇ ತಿಂಗಳಲ್ಲಿ 42 ಜನರು ಈ ಹೊಸ ಯೋಜನೆಗೆ ಸೇರಿದ್ದಾರೆ. ನಾನು ಕಲಿತದ್ದು ಅಮೇರಿಕಾದ ಯುನೈಟೆಡ್ ಸ್ಟೇಟ್ಸ್ನಲ್ಲಿ. ಅಲ್ಲೇ ಐದು ವರುಷ ಕೆಲಸ ಮಾಡಿದೆ. ಅನಂತರ 2008ರಲ್ಲಿ ನನ್ನ ಕೃಷಿ ಜಮೀನಿನಲ್ಲಿ ಕೃಷಿ ಮಾಡಲಿಕ್ಕಾಗಿ ಗುಜರಾತಿಗೆ ವಾಪಾಸು ಬಂದೆ. ಅಲ್ಲಿಯೂ ಈ ಯೋಜನೆ ಶುರು ಮಾಡಿದೆ. ಆದರೆ ಅಲ್ಲಿನ ಜನರು ಇದರಲ್ಲಿ ಆಸಕ್ತಿ ತೋರಿಸಲಿಲ್ಲ. ಇದೀಗ ಗುರುಗ್ರಾಮದಲ್ಲಿ ಹಲವರು ಮುಂದೆ ಬಂದಿದ್ದಾರೆ ಎನ್ನುತ್ತಾರೆ ಮಂಡವೆವಾಲಾ.
ತನ್ನ ಜಮೀನಿನಲ್ಲಿ ಇಬ್ಬರು ರೈತರನ್ನು ಕೆಲಸಕ್ಕೆ ನೇಮಿಸಿದೆ ಇಡಿಬಲ್ ರೂಟ್ಸ್. ಅವರಿಗೆ ತಿಂಗಳಿಗೆ ಪಾವತಿ ತಲಾ ರೂ.10,000. ಜಮೀನಿನಲ್ಲಿರುವ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಅವರ ವಾಸ. ಜಮೀನಿನ ಭದ್ರತೆ ಮತ್ತು ಉಸ್ತುವಾರಿಗೆ ಅವರು ಜವಾಬ್ದಾರರು. ಪ್ರತೀ ವಾರ, ಅಲ್ಲಿ ಮಂಡವೆವಾಲಾ ಕಾರ್ಯಾಗಾರ ನಡೆಸುತ್ತಾರೆ.
ಯಾವ್ಯಾವ ತರಕಾರಿಗಳನ್ನು ಬೆಳೆಯಬಹುದೆಂದು ಶುಲ್ಕ ಪಾವತಿಸಿದ ನಗರವಾಸಿಗಳಿಗೆ ತಿಳಿಸಲಿಕ್ಕಾಗಿ. ತರಕಾರಿ ಕೃಷಿಗಾಗಿ ಜಮೀನು ತಯಾರಿ ಮತ್ತು ಬೀಜ ಬಿತ್ತನೆ ಬಗ್ಗೆಯೂ ಶುಲ್ಕ ತೆತ್ತವರಿಗೆ ಮಾಹಿತಿ ನೀಡಲಾಗುತ್ತದೆ. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲಿಕ್ಕಾಗಿ ವಾರಕ್ಕೆ ಒಮ್ಮೆಯಾದರೂ ಜಮೀನಿಗೆ ಭೇಟಿ ನೀಡಬೇಕೆಂದು ಆ ನಗರವಾಸಿಗಳನ್ನು ಒತ್ತಾಯಿಸಲಾಗುತ್ತದೆ.
ಶುಲ್ಕವನ್ನು ಬೀಜ, ಗೊಬ್ಬರ ಖರೀದಿಗಾಗಿ ಮತ್ತು ಸಸಿಗಳಿಗೆ ನೀರು ಹಾಯಿಸಲಿಕ್ಕಾಗಿ ಖರ್ಚು ಮಾಡುತ್ತೇವೆ ಎನ್ನುವ ಮಂಡವೆವಾಲಾ, ವರ್ಷಕ್ಕೆ ಒಂದು ಎಕರೆಯಿಂದ 50,000 ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಪ್ರಕೃತಿಯ ಒಡನಾಟಕ್ಕಾಗಿ ಮತ್ತು ಕೃಷಿ ಕಲಿಯಲಿಕ್ಕಾಗಿ ಇಡಿಬಲ್ ರೂಟ್ಸೆಗೆ ಶುಲ್ಕ ಪಾವತಿಸಿದವರಲ್ಲಿ ಒಬ್ಬರು ದೆಹಲಿಯ ವಕೀಲೆ ನೇಹಾ ಗೋಯಲ್; ಟೊಮೆಟೊ ಬೆಳೆಯುವ ಯೋಜನೆ ಅವರದು.
ಗ್ರೀನ್ ಲೀಫ್ ಇಂಡಿಯಾ ಕಂಪೆನಿಗೆ ಲಾಭದ ಉದ್ದೇಶವಿಲ್ಲ ಎನ್ನುತ್ತಾರೆ ಇದನ್ನು 2016ರಲ್ಲಿ ಆರಂಭಿಸಿದ ದೀನ್ ಮಹಮ್ಮದ್ ಖಾನ್. ಗುರುಗ್ರಾಮದಲ್ಲಿ ಜಿಲ್ಲಾ ತೋಟಗಾರಿಕಾ ಅಧಿಕಾರಿಯಾಗಿದ್ದ ಅವರು ಕಂಪೆನಿಗಾಗಿ ಲೀಸಿಗೆ ಪಡೆದಿರುವುದು ಆರು ರೈತರ ಮೂರು ಹೆಕ್ಟೇರ್ ಜಮೀನನ್ನು. ಅದನ್ನೀಗ 80 ಸದಸ್ಯರಿಗೆ ಲೀಸಿಗೆ ಒದಗಿಸಿದ್ದಾರೆ ಪ್ರತಿಯೊಬ್ಬರಿಗೂ ಆರು ತಿಂಗಳ ಅವಧಿಗೆ 10 ಸೆಂಟ್ಸ್ ಜಮೀನು. ಈ ಗ್ರಾಮದ ರೈತರ ಜೊತೆ ಮಾತಾಡಿ, ಈ ವ್ಯವಹಾರದ ಅನುಕೂಲ ಅವರಿಗೆ ವಿವರಿಸಿ, ಅವರನ್ನು ಒಪ್ಪಿಸಿದೆ ಎಂದು ಹೇಳುತ್ತಾರೆ ಖಾನ್.
ಖಾನ್ ಅವರ ಕಂಪೆನಿಗೆ ಲೀಸಿಗೆ ಜಮೀನು ಕೊಟ್ಟಿರುವ ರೈತರಿಗೆ ಎರಡು ವಿಧದ ಆದಾಯ. ಆ ಜಮೀನಿನ ಮಾಲೀಕ ರೈತರನ್ನೇ ಅಲ್ಲಿ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿದೆ. ಅವರಿಗೆ ತಿಂಗಳಿಗೆ ತಲಾ ರೂ.2,000 ಪಾವತಿ. ಅತ್ತ ಲೀಸಿನ ಆದಾಯ, ಇತ್ತ ಮಾಸಿಕ ಆದಾಯ; ಪ್ರತಿಯೊಬ್ಬ ಮಾಲೀಕ-ರೈತನೂ ತನ್ನ ಜಮೀನಿನಿಂದ ವರ್ಷಕ್ಕೆ 60,000 ರೂಪಾಯಿ ಗಳಿಸುತ್ತಾರೆಂದು ಖಾನ್ ವಿವರಿಸುತ್ತಾರೆ. ಇಡಿಬಲ್ ರೂಟ್ಸ್ ಮತ್ತು ಗ್ರೀನ್ ಲೀಫ್ ಇಂಡಿಯಾ ಈ ಎರಡೂ ಕಂಪೆನಿಗಳ ಜಮೀನಿಗೆ ಶುಲ್ಕ ಪಾವತಿಸಿ ಕೃಷಿ ಮಾಡುವವರು, ತಾವು ಬೆಳೆಸಿದ ಸಂಪೂರ್ಣ ಫಸಲನ್ನು ತಾವೇ ಒಯ್ಯಬಹುದು.
ಆದರೆ, ಆಗ್ಯಾìನಿಕ್ ಮಟ್ಟಿಯ ಜಮೀನಿಗೆ ಶುಲ್ಕ ಪಾವತಿಸಿದವರು, ತಾವು ಬೆಳೆಸಿದ ಫಸಲಿನ ಅರ್ಧಾಂಶ ಮಾತ್ರ ಒಯ್ಯಬಹುದು. ಉಳಿದ ಅರ್ಧಾಂಶ ಕಂಪೆನಿಯ ಪಾಲು. ಆದರೆ, ಈ ಕಂಪೆನಿಗೆ ಶುಲ್ಕ ಪಾವತಿಸಿದವರಿಗೆ ಸಿಗುವ ಜಮೀನು, ಬೇರೆ ಎರಡು ಕಂಪೆನಿಗಳ ಸದಸ್ಯರಿಗೆ ಸಿಗುವುದಕ್ಕಿಂತ 10ರಿಂದ 20 ಪಟ್ಟು ಹೆಚ್ಚು (ಅದೇ ವೆಚ್ಚದಲ್ಲಿ). ಹಾಗಾಗಿ, ಫಸಲಿನ ಅರ್ಧಾಂಶ ಮಾತ್ರ ಪಡೆಯುವ ಷರತ್ತಿಗೆ ಅವರು ಒಪ್ಪಿಕೊಳ್ಳುತ್ತಾರೆ ಎನ್ನುತ್ತಾರೆ ಕಂಪೆನಿಯ ಮಾಲೀಕ ದೀಪಕ್ ಗುಪ್ತಾ. ಅವರು ಸಾವಯವ ತರಕಾರಿಗಳನ್ನು ಮನೆಗಳಿಗೆ ತಲಪಿಸಲಿಕ್ಕಾಗಿ ಆಗ್ಯಾìನಿಕ್ ಮಟ್ಟಿ ಕಂಪೆನಿ ಆರಂಭಿಸಿದ್ದು 2012ರಲ್ಲಿ. ಲೀಸಿಗಾಗಿ ಜಮೀನು ಒದಗಿಸುವ ಈ ಕಾರ್ಯಕ್ರಮ ಶುರು ಮಾಡಿದ್ದು 2016ರಿಂದ. ಜಮೀನಿನಲ್ಲಿ ಬೆಳೆದ ಫಸಲನ್ನು ಕೆಫೆಗಳಿಗೂ ಅಂಗಡಿಗಳಿಗೂ ಮಾರಾಟ ಮಾಡಿ ಗಳಿಸಿದ ಆದಾಯದಿಂದ ಜಮೀನು ನಿರ್ವಹಿಸುವ ಐವರು ರೈತರಿಗೆ ಪ್ರತಿ ತಿಂಗಳು ರೂ.15,000 ಪಾವತಿ ಮಾಡುತ್ತಾರೆ. ಆ ರೈತರಿಗೆ ಜಮೀನಿನ ಹತ್ತಿರದಲ್ಲಿ ವಾಸದ ವ್ಯವಸ್ಥೆ. ಪಲ…-ವಾಲ… ಜಿಲ್ಲೆಯ ಕಿಶೋರೆಪುರ್ ಮತ್ತು ಕಿರಾಂಜ… ಗ್ರಾಮಗಳಲ್ಲಿ 16 ಹೆಕ್ಟೇರ್ ಜಮೀನು ಲೀಸಿಗೆ ಪಡೆದಿದ್ದಾರೆ ದೀಪಕ… ಗುಪ್ತಾ. ಆ ಜಮೀನಿನ ಮಾಲೀಕ ರೈತರು ಬೇಸಾಯ ತೊರೆಯಲು ನಿರ್ಧರಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾ, 2017-18ರಲ್ಲಿ ಈ ಯೋಜನೆಯಿಂದ ಕಂಪೆನಿ ರೂ.50,000 ಲಾಭ ಗಳಿಸಿದ್ದನ್ನು ತಿಳಿಸುತ್ತಾರೆ.
ಆಗ್ಯಾìನಿಕ್ ಮಟ್ಟಿಯಿಂದ ಮೇ 2018ರಲ್ಲಿ ಲೀಸಿಗೆ ಜಮೀನು ಪಡೆದ ಗುರುಗ್ರಾಮ ನಗರದ ಚಾರ್ಟೆಡ್ ಅಕೌಂಟೆಂಟ್ ರಿಷಬ್ ಗುಪ್ತಾ ಅವರ ಅಭಿಪ್ರಾಯದಲ್ಲಿ ಇದೊಂದು ಸುಸ್ಥಿರ ಕೃಷಿ ಮಾದರಿ. ಈ ಯೋಜನೆಯಿಂದ ರೈತರಿಗೆ ಆರ್ಥಿಕ ಭದ್ರತೆ ಸಿಗುತ್ತದೆ. ಬರಗಾಲ, ನೆರೆ ಅಥವಾ ಬೇರೆ ಯಾವುದೇ ಸಂಕಟ ಬಂದರೂ ಅವರು ಅದನ್ನು ಎದುರಿಸಬಹುದು. ಜೊತೆಗೆ, ಅಲ್ಲಿ ಸಾವಯವ ಕೃಷಿ ಮಾಡುವ ಕಾರಣ ನಾವು ಭೂಮಿಯಿಂದ ಪಡೆದದ್ದನ್ನು ಕಂಪೋಸ್ಟಿನ ರೂಪದಲ್ಲಿ ಭೂಮಿಗೇ ಹಿಂತಿರುಗಿಸುತ್ತೇವೆ ಎಂಬುದವರ ವಿವರಣೆ.
ಇತರ ರಾಜ್ಯಗಳಲ್ಲಿಯೂ ರೈತರಿಗೆ ಆರ್ಥಿಕ ಭದ್ರತೆ ಒದಗಿಸಬಲ್ಲ ಇಂಥ ಯೋಜನೆಗಳು ಶುರುವಾಗಲೆಂದು ಹಾರೈಸೋಣ.
ಅದ್ದೂರು ಕೃಷ್ಣ ರಾವ್