ಗುರುವಿಗೆ ಪೈನಾಪಲ್ ಬಲ
Team Udayavani, Oct 22, 2018, 12:33 PM IST
ಶಿವಮೊಗ್ಗದ ಸಾಗರದ ಸಮೀಪದ ಕೆಲವು ಹಳ್ಳಿಗಳಲ್ಲಿ ಶರಾವತಿ ಹಿನ್ನೀರಿನ ಜಮೀನುಗಳನ್ನು ರೈತರಿಂದ ಬಾಡಿಗೆಗೆ ಪಡೆದ ಗುರು ಸಾಗರ್, ಅಲ್ಲಿ ಅನಾನಸ್ ಬೆಳೆಯುವ ಮೂಲಕ ಲಕ್ಷ ಲಕ್ಷ ರೂ. ಸಂಪಾದಿಸಿದ್ದಾರೆ…
“ನಾವಂತೂ ಹೊಲದಲ್ಲೇ ದುಡಿದು, ದಣಿದೆವು. ನೀವಾದ್ರೂ ದೊಡ್ಡ ಕೆಲ್ಸಕ್ಕೆ ಸೇರಿಕೊಳ್ಳಿ…’ ಅಂತ ಹಂಬಲಿಸೋ ರೈತರೇ ಜಾಸ್ತಿ ಇರೋ ಇಂದಿನ ಕಾಲದಲ್ಲೂ ಅಲ್ಲೊಬ್ಬ ಇಲ್ಲೊಬ್ಬ ವಿದ್ಯಾವಂತ ಪದವೀಧರರು ತಿಂಗಳ ಸಂಬಳದ ನೌಕರಿ ಬೇಡವೆಂದು ಭೂತಾಯಿಯನ್ನೇ ನಂಬಿ ಕೃಷಿ ಕೆಲಸದಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ. ಅಂಥ ಕೆಲವರಲ್ಲಿ ಗುರುಸಾಗರ್ ಕೂಡಾ ಒಬ್ಬರು.
ಅವರು ಎಂ.ಕಾಂ. ಪದವೀಧರ. ನೌಕರಿಯ ಅವಕಾಶ ಸಿಕ್ಕಿದ್ದರೂ ಮತ್ತೂಬ್ಬರ ಅಧೀನದಲ್ಲಿ ಕೆಲಸಮಾಡುವ ಮನಸ್ಸಿಲ್ಲದೇ, ಭೂತಾಯಿಯನ್ನು ನಂಬಿ ರಾಜನಂತೆ ಸ್ವತಂತ್ರವಾಗಿ ಬದುಕಬೇಕೆಂಬ ಹಂಬಲದಿಂದ ಕೃಷಿಯಲ್ಲಿ ತೊಡಗಿದ್ದಾರೆ. ಶಿವಮೊಗ್ಗದ ಸಾಗರದ ಸಮೀಪದ ಕೆಲವು ಹಳ್ಳಿಗಳಲ್ಲಿ ಶರಾವತಿ ಹಿನ್ನೀರಿನ ಜಮೀನುಗಳನ್ನು ರೈತರಿಂದ ಬಾಡಿಗೆಗೆ ಪಡೆದು ಅಲ್ಲಿ ಅನಾನಸ್ ಬೆಳೆಯುವ ಮೂಲಕ ಸಾಕಷ್ಟು ಆದಾಯ ಸಂಪಾದಿಸಿದ್ದಾರೆ.
ಅನಾನಸ್ ಬೆಳೆ ಕುರಿತು…
ಜ್ಯೂಸ್, ಅಡುಗೆ, ಔಷಧ ತಯಾರಿಕೆ… ಹೀಗೆ ಅನಾನಸ್ ನಾನಾ ವಿಧದದಲ್ಲಿ ಬಳಕೆಯಾಗುತ್ತದೆ. ಇದು ಬಹುವಾರ್ಷಿಕ ಬೆಳೆಯಾಗಿದ್ದು, ಒಮ್ಮೆ ನಾಟಿಮಾಡಿದರೆ ಸುಮಾರು ಮೂರು ವರ್ಷಗಳವರೆಗೂ ಫಸಲು ಕೊಡುತ್ತದೆ. ಅಂದರೆ, ನಾಟಿ ಮಾಡಿದ ಮೊದಲ 10- 12 ತಿಂಗಳಲ್ಲಿ ಮೊದಲ ಬಾರಿಗೆ ತದನಂತರ 10 ತಿಂಗಳಿಗೆ ಮತ್ತೂಮ್ಮೆ ಹಾಗೂ ಅಲ್ಲಿಂದ ಸುಮಾರು 8ತಿಂಗಳಿಗೆ ಕೊನೆಯದಾಗಿ ಫಸಲು ಬಿಡುತ್ತದೆ. ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದ್ದು, ಗಾತ್ರ ಹಾಗೂ ತೂಕದ ಆಧಾರದ ಮೇಲೆ ಎ, ಬಿ, ಸಿ, ಡಿ ಗ್ರೇಡ್ ಲೆಕ್ಕದಲ್ಲಿಧಾರಣೆ ನಿರ್ಧಾರವಾಗುತ್ತದೆ.
ಮ್ಯಾಜಿಕ್ ಹೇಗಾಯ್ತು?
ಎರಡು ವರ್ಷದ ಹಿಂದೆ ಸಾಗರ ಸಮೀಪದ ಲಿಂಗದಹಳ್ಳಿಯಲ್ಲಿ 10 ಹೆಕ್ಟೇರ್ ಭೂಮಿಯಲ್ಲಿ 5 ಅಡಿಗೊಂದರಂತೆ ಸಾಲುಗಳನ್ನು ಮಾಡಿ ಅದರಲ್ಲಿ ಪ್ರತೀ ಅಡಿಗೊಂದು ಅಂತರದಲ್ಲಿ ಸುಮಾರು 1.20 ಲಕ್ಷ ಅನಾನಸ್ ಸಸಿಗಳನ್ನು ನಾಟಿ ಮಾಡಿದ ಗುರುಸಾಗರ್, ವಾರಕ್ಕೊಮ್ಮೆ 6 ಗಂಟೆಗಳಷ್ಟು ಕಾಲ ಸ್ಪ್ರಿಂಕ್ಲರ್ ವಿಧಾನದಲ್ಲಿ ನೀರನ್ನು ಹಾಯಿಸಿದ್ದರು. ನಾಟಿ ಮಾಡಿದ 8 ತಿಂಗಳಿಗೆ ಗಿಡದ ಬುಡಕ್ಕೇ ವಾಷಿಂಗ್ ಸೋಡಾ ಮಿಶ್ರಿತ ರಾಸಾಯನಿಕ ಟಾನಿಕ್ ಹಾಕಿದ್ದರು. ತದನಂತರ 2 ತಿಂಗಳಿಗೆ ಹೂ ಅರಳಿ, 4 ತಿಂಗಳ ಅಂತರದಲ್ಲಿ (ಅಂದರೆ, ನಾಟಿ ಮಾಡಿದ 12 ತಿಂಗಳಿಗೆ) ಅನಾನಸ್ ಕಾಯಿ ಕಟಾವಿಗೆ ಬಂತು. ಕಾಯಿಗಳನ್ನು ಅವುಗಳ ಗಾತ್ರ ಹಾಗೂ ತೂಕಕ್ಕನುಗುಣವಾಗಿ ದೆಹಲಿಯ ಮಾರುಕಟ್ಟೆಗೆ ನೇರವಾಗಿ ಸಾಗಿಸಿ ಮಾರಾಟಮಾಡಿದ್ದಾರೆ.
ಖರ್ಚು ಮತ್ತು ಆದಾಯದ ಲೆಕ್ಕ
ಪ್ರತಿ ಗಿಡವೊಂದಕ್ಕೆ ಸರಾಸರಿ 10- 12ರೂ.ಗಳಂತೆ ಒಟ್ಟು 12- 15 ಲಕ್ಷ ರೂ.ಗಳಷ್ಟು ಖರ್ಚು ತಗುಲಿದೆ. ಮೊದಲ ಹಂತದಲ್ಲಿ ಅಂದಾಜು 240 ಟನ್ಗಳಷ್ಟು ಕಾಯಿ ಕಟಾವು ಮಾಡಿದ್ದಾರೆ. ಗಾತ್ರಕ್ಕನುಗುಣವಾಗಿ ಕಿಲೋಗೆ 12ರಿಂದ 18 ರೂ.ಗಳವರೆಗೂ ಬೆಲೆ ದೊರೆತಿದ್ದು, 25- 30 ಲಕ್ಷ ರೂ.ನಷ್ಟು ಗಳಿಕೆಯಾಗಿದೆ. ನಂತರದ ಕಟಾವಿನಲ್ಲಿ 150 ಟನ್ಗಳಷ್ಟು ಇಳುವರಿ ದೊರೆತು, 25- 30 ಲಕ್ಷ ರೂ. ಆದಾಯ ಕಂಡಿದ್ದಾರೆ. “ಮೊದಲನೇ ಬಾರಿಯಂತೆ ಮತ್ತೂಮ್ಮೆ ನಾಟಿ, ಪೈಪ್ಲೈನ್ ಅಳವಡಿಕೆ ಮುಂತಾದ ಖರ್ಚುಗಳು ಇಲ್ಲವಾದ ಕಾರಣ ಎರಡನೇ ಬಾರಿಗೆ ಖರ್ಚು (ಸುಮಾರು 2 ಲಕ್ಷ ರೂ.) ಕಡಿಮೆ ಬಂತು’ ಎನ್ನುತ್ತಾರೆ, ಗುರುಸಾಗರ್. ಮೂರನೇ ಬಾರಿಯೂ ಕಟಾವು ಬರುತ್ತದೆಯಾದರೂ ಅದು ಸಾಕಷ್ಟು ಉತ್ತಮ ಗುಣಮಟ್ಟದಲ್ಲಿರದಿದ್ದ ಕಾರಣ, ನಿರೀಕ್ಷಿತ ಬೆಲೆ ಸಿಗುವುದಿಲ್ಲವಂತೆ. ಆದ್ದರಿಂದ, ಇವರು 3ನೇ ಕಟಾವಿನ ಗೋಜಿಗೆ ಹೋಗಲಿಲ್ಲ. ನೆಟ್ಟಿರುವ ಗಿಡದ ಸುತ್ತಲೂ ಹುಟ್ಟಿದ ಹೊಸಗಿಡಗಳನ್ನು ಮಾರಿ ಲಾಭ ಕಂಡುಕೊಂಡಿದ್ದಾರೆ.
ಆರೈಕೆ ಹೇಗೆ?
– ವಾರಕ್ಕೊಮ್ಮೆಯಷ್ಟೇ ನೀರನ್ನು ಚಿಮುಕಿಸಬೇಕು.
– ಅತಿಯಾಗಿ ನೀರು ಶೇಖರಣೆಯಾದರೆ, ಬುಡ ಕೊಳೆಯಬಹುದು.
– ನೆನಪಿರಲಿ, ಮಳೆ ಜಾಸ್ತಿಯಾದರೂ, ಕಾಯಿಯ ತೂಕ ಕಡಿಮೆ ಆಗುವ ಅಪಾಯವಿರುತ್ತೆ.
– ಕೀಟ ಬಾಧೆ ಕಾಡದಿದ್ದರೂ ಅತಿಯಾದ ಬಿಸಿಲಿಗೆ ಕಾಯಿಯು ಹಾನಿಯಾಗದಂತೆ ತಡೆಯಲು ಭತ್ತದ ಒಣಹುಲ್ಲಿನಿಂದ ಸಿಂಬೆ ಮಾಡಿ, ಪ್ರತಿ ಹಣ್ಣಿಗೂ ಸುತ್ತಬೇಕು.
– ಆರಂಭದಲ್ಲಿ ಕಳೆ ತೆಗೆಯುವುದು, ಬುಡಕ್ಕೆ ಮಣ್ಣು ಹಾಕುವುದು, ಟಾನಿಕ್ ಬಿಡುವುದು ಕಡ್ಡಾಯ.
– ಇವೆಲ್ಲ ಕೆಲಸಕ್ಕೆ ಪ್ರತಿದಿನ 10 ಕೂಲಿಕಾರರ ಅಗತ್ಯವಿರುತ್ತೆ.
– ಪ.ನಾ.ಹಳ್ಳಿ. ಹರೀಶ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ