ಸಂಘಂ ಶರಣಂ ಗಚ್ಚಾಮಿ


Team Udayavani, Nov 19, 2018, 6:00 AM IST

2dharmasthala-rural-development-project.jpg

ಬದುಕಿನಲ್ಲಿ ಭರವಸೆ ಕಳೆದುಕೊಂಡವರಿಗೆ ಆಸರೆಯಾಗುವ ಉದ್ದೇಶದಿಂದ ಆರಂಭವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಈ ಯೋಜನೆಯ ಸದಸ್ಯರಾಗಿ, ಸಂಘದಿಂದ ಸಾಲ ಪಡೆದು ಬದುಕು ಕಟ್ಟಿಕೊಂಡವರು ನೂರಾರು ಮಂದಿ ಅಂಥ ಕೆಲವರ ಯಶೋಗಾಥೆಯ ವಿವರಗಳು ಇಲ್ಲಿವೆ…

1982ರಲ್ಲಿ ಧರ್ಮಸ್ಥಳದಲ್ಲಿ ಬಾಹುಬಲಿ ಪ್ರತಿಷ್ಠಾಪನೆಯ ಮಹತ್ಕಾರ್ಯ ನಡೆಯಿತು. ಆಗ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಬದುಕಿನ ಬವಣೆಯಲ್ಲಿ ಬಂದಿಯಾಗಿ ಭರವಸೆ ಕಳೆದುಕೊಂಡವರಿಗೆ ಆಸರೆಯಾಗುವ ಕೊಡುಗೆಯೊಂದನ್ನು ಘೋಷಿಸಿದರು. ಅದುವೇ ಗ್ರಾಮಾಭಿವೃದ್ಧಿ ಯೋಜನೆ. ಇಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೆಮ್ಮರವಾಗಿ ಹರಡಿರುವ ಅದು, ಸ್ವಸಹಾಯ ಸಂಘಗಳನ್ನು ಸಂಘಟಿಸಿದೆ. ಲಕ್ಷಾಂತರ ಸಂಖ್ಯೆಯ ಸ್ವಸಹಾಯ ಸಂಘಗಳ ನೆರಳಿನಲ್ಲಿರುವ ಅಗಣಿತ ಸದಸ್ಯರ ಬದುಕಿನ ವಿಧಿಲಿಖೀತವನ್ನೇ ಬದಲಾಯಿಸಿದೆ.

ಯೋಜನೆಯ ನೆರಳಿಗೆ ಬಂದ ಯಾರೊಬ್ಬರೂ ಆರ್ಥಿಕವಾಗಿ ಸಂಪನ್ನರಾಗಿರಲಿಲ್ಲ. ವಾಸಕ್ಕೊಂದು ಸರಿಯಾದ ಮನೆ ಇರಲಿಲ್ಲ. ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಕಷ್ಟಪಡುವವರಿದ್ದರು. ಕೈಗೊಂದು ಉದ್ಯೋಗವಿರಲಿಲ್ಲ. ಇಂದು ಅವರ ಬದುಕು,  ಹೊಸ ಹರಯ ತುಂಬಿ ನಗು ನಗುತ್ತಿದ್ದರೆ, ಅದಕ್ಕೆ ಕಾರಣ ಯೋಜನೆ ತುಂಬಿದ ಆತ್ಮಸ್ಥೈರ್ಯ. ಒಂದು ಉದ್ಯೋಗದ ತರಬೇತಿ ನೀಡಿ ಸಲಕರಣೆಗಳನ್ನು ಕೊಳ್ಳಲು ಬಂಡವಾಳಕ್ಕಾಗಿ ಧನಸಹಾಯ ಒದಗಿಸಿ ಇಂದು ಸುಖೀ ಜೀವನದ ಮುನ್ನುಡಿ ಬರೆಯಲು ನೆರವಾಗಿದೆ. ಅಂದು ಹರಕು ಗುಡಿಸಲಿನಲ್ಲಿದ್ದವರು. ಇಂದು ವೈಭೋಗದ ಮನೆಯಲ್ಲಿದ್ದಾರೆ. ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡಿಸುತ್ತಿದ್ದಾರೆ. ಯೋಜನೆಯ ಆರಂಭದಲ್ಲಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಒಂದು ಮಾತು ಹೇಳಿದ್ದರು ; “ನಾವು ಯಾರಿಗೂ ಮೀನು ಹಿಡಿದು ಕೊಡುವುದಿಲ್ಲ. ಆದರೆ ಮೀನು ಹಿಡಿಯಲು ಕಲಿಸುತ್ತೇವೆ.  ಹಿಡಿದು ಕೊಟ್ಟರೆ ಜೀವನವಿಡೀ ಅದನ್ನೇ ಮಾಡಬೇಕಾಗುತ್ತದೆ. ಅದನ್ನು ಕಲಿಸಿದರೆ ಅವರ ಬದುಕನ್ನು ಅವರೇ ರೂಪಿಸಿಕೊಳ್ಳುತ್ತಾರೆ’

ಧರ್ಮಸ್ಥಳ ಹೀಗೆ ಬದುಕು ಕಟ್ಟಲು ಕಲಿಸಿದ ಬಗೆಯಿಂದ, ಉದ್ಧಾರವಾದ ಕುಟುಂಬಗಳ ಸಂಖ್ಯೆ ಸಾವಿರ ಸಾವಿರ. ಒಬ್ಬೊಬ್ಬರದೂ ಒಂದೊಂದು ಕತೆ. ಅದು ಪಾತಾಳದಿಂದ ಮೇಲೆದ್ದು ಹಿಮಾಲಯದ ಶಿಖರ ತಲುಪಿದ ಹೃದಯಂಗಮ ಗಾಥೆ.

1. ಹೊಟ್ಟೆಗೆ ಹಿಟ್ಟು
ಬೆಳಗಾವಿ ತಾಲೂಕಿನ ಮಾನ¤ಮರ್ಡಿ ಗ್ರಾಮದ ನಿವಾಸಿ ರಾಜೇಶ್ವರಿ ಸುರೇಶ ಅವರದು ಇಂಥದೇ ಕರುಳು ಮಿಡಿಯುವ ಕತೆ. ಈ ಮೊದಲು ಹೊಟ್ಟೆಗೆ ಹಿಟ್ಟು ತರುವ ನೌಕರಿಯೇ ಇಲ್ಲದೆ ಸಂಕಟದ ಜೊತೆಗೇ ಬದುಕಿದ್ದ ಅವರು, ಈಗ ಎಲ್ಲರ ಹೊಟ್ಟೆ ತುಂಬಿಸುವ ಕೆಲಸದಲ್ಲಿ ತೊಡಗಿದ್ದಾರೆ. ಸುಖಮಯ ಬದುಕಿಗೊಂದು ಮಾದರಿಯಾಗಿದ್ದಾರೆ. ಒಂದು ಕಾಲದಲ್ಲಿ ಅವರಿಗೆ ಅರೆಹೊಟ್ಟೆಗೂ ಗಳಿಕೆ ಇರಲಿಲ್ಲ. ಮಳೆ ಬಂದರೆ ಸೋರುವ ಮನೆ, ಮೈ ಮುಚ್ಚುವ ಬಟ್ಟೆ ಕೊಂಡು ಅದೆಷ್ಟು ಕಾಲ ಕಳೆದಿತ್ತೋ!

ಬದುಕಿನ ರೇಖೆ ಹೇಗೆ ಪಲ್ಲಟಗೊಂಡಿತು ಗೊತ್ತಾ? ಅದೇ ರೋಚಕ ಕತೆ. ಅಲ್ಲಿಗೆ ಗ್ರಾಮಾಭಿವೃದ್ಧಿ ಯೋಜನೆ ಕಾಲಿರಿಸಿದಾಗ, ಅವರು ಗೆಳತಿಯರ ಜೊತೆಗೂಡಿ ಸ್ವಸಹಾಯ ಸಂಘ ಕಟ್ಟಿದರು. ವಾರಕ್ಕೆ ಹತ್ತು ರೂಪಾಯಿ ಉಳಿತಾಯ ಮಾಡಬೇಕು. ಅದೂ ಸಿಗದೆ ಹೋದಾಗ ಪಟ್ಟ ಪರಿತಾಪಕ್ಕೆ ಲೆಕ್ಕವಿಲ್ಲ. ಆರು ತಿಂಗಳು ಕಳೆದಾಗ ಅವರಿಗೂ ಸಂಘದಿಂದ ಸಾಲ ಪಡೆಯುವ ಅವಕಾಶ ಒದಗಿತು. ಹತ್ತು ರೂಪಾಯಿ ಸಾಲವನ್ನು ಬ್ಯಾಂಕುಗಳು ಕೊಟ್ಟಿರಲಿಲ್ಲ. ಆದರೆ ಸಂಘದ ಮೂಲಕ ಐವತ್ತು ಸಾವಿರ ರೂಪಾಯಿ ಸಾಲ ಪಡೆದು ಮನೆಯ ಇಕ್ಕಟ್ಟಿನ ಜಾಗದಲ್ಲಿ ಹಿಟ್ಟಿನ ಗಿರಣಿಯನ್ನು ಆರಂಭಿಸಿದರು.

ಗ್ರಾಮದವರು ವಿಟ್ಟು ಮಾಡಿಸಲು ದೂರದ ಊರಿಗೆ ಹೋಗುವ ಪರಿಸ್ಥಿತಿ ಇದ್ದಾಗ ರಾಜೇಶ್ವರಿ ಆರಂಭಿಸಿದ ಹಿಟ್ಟಿನ ಗಿರಣಿ ಅವರಿಗೆಲ್ಲ ಅನುಕೂಲವೊದಗಿಸಿತು. ದಿನವಿಡೀ ದುಡಿಮೆ. ಬಂದ ಲಾಭದಲ್ಲಿ ಅವರೊಂದು ಹೊಲಿಗೆ ಯಂತ್ರ ಕೊಂಡು ಅಕ್ಕಪಕ್ಕದವರ ಬಟ್ಟೆಗಳನ್ನು ಹೊಲಿದು ಕೊಡುವುದಕ್ಕೆ ಮುಂದಾದರು. ಒಂದೆಡೆ ಯಂತ್ರ ಚಲಿಸುತ್ತ ಧಾನ್ಯದ ಹಿಟ್ಟು ಮಾಡುವಾಗ ಕೈಗಳು ಹೊಲಿಯುವ ಕಾಯಕ ನಡೆಸಿದವು. ಈಗ ಅವರ ಬದುಕು ಬವಣೆಗಳಿಂದ ಮುಕ್ತಗೊಂಡಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದಕ್ಕೂ ನೆರವಾಗಿದೆ ಗಿರಣಿಯ ಗಳಿಕೆ. ಮನೆ ಕಟ್ಟಿಸಿದ್ದಾರೆ. ನೆಮ್ಮದಿಯಿಂದ ಬದುಕುತ್ತಿದ್ದಾರೆ.

2. ರೊಟ್ಟಿ ತಟ್ಟಿ ಬದುಕು
ಮೂಡಲಗಿ ತಾಲೂಕಿನ ಕುಲಗೊಡ ವಲಯದ ರತ್ನವ್ವಾ ಶಂಕರಪ್ಪ ಸತಾರ ಅವರದೂ ಕಷ್ಟಗಳನ್ನು ಹಾಸಿ ಹೊದ್ದ ಬದುಕು. ಬಿದ್ದರೆ ಎತ್ತುವರಿರಲಿಲ್ಲ, ಬೆನ್ನನಾಧರಿಸುವವರಿರಲಿಲ್ಲ. ಅವರಿಗೂ ಗೊತ್ತಿತ್ತು. ಕೈ ಬರಿದಾದರೆ ಊರಿನಲ್ಲಿ ಗೌರವವೂ ಇಲ್ಲ. ಇಂತಹ ಸಂಕಷ್ಟದಲ್ಲಿ ಬರಗಾಲಪೀಡಿತ ಊರಿನಲ್ಲಿ ಸರಿಯಾದ ಕೂಲಿಯೂ ಸಿಗುತ್ತಿರಲಿಲ್ಲ. ಅವರು ಕೂಡ ಸ್ವಸಹಾಯ ಸಂಘದ ನೆರಳಿಗೆ ಬಂದರು. ರೊಟ್ಟಿ ತಯಾರಿಸುವ ಯಂತ್ರ ತಂದರೆ ರೊಟ್ಟಿಗಳಿಗೆ ಉತ್ತಮ ಬೇಡಿಕೆ ಬರಬಹುದೆಂಬ ಆಶಯ ಅವರದಾಗಿತ್ತು. ಆದರೆ ಈ ಯಂತ್ರದ ಬೆಲೆ ವಿಚಾರಿಸಿದಾಗ ಮುಖದಲ್ಲಿ ಮೂಡಿದ್ದು ನಿರಾಶೆ. ಎಂಭತ್ತು ಸಾವಿರ ರೂಪಾಯಿ ಕೊಟ್ಟು ಯಂತ್ರ ಕೊಳ್ಳುವುದು ಕನಸೆಂದೇ ಅವರೆಂದುಕೊಂಡಿದ್ದರು.

ಆದರೆ, ಯೋಜನೆಯ ಕಾರ್ಯಕರ್ತರು ಅವರ ಬದುಕು ಕಟ್ಟುವ ಬಯಕೆಗೆ ಉತ್ತೇಜನ ನೀಡಿದರು. ಯಂತ್ರ ಖರೀದಿಗೆ ಬೇಕಾದ ಸಾಲವೂ ದೊರಕಿತ್ತು. ಖಡಕ್‌ ರೊಟ್ಟಿ, ರಾಗಿ ರೊಟ್ಟಿ, ಅಕ್ಕಿ ರೊಟ್ಟಿ… ಹೀಗೆ ವಿಧವಿಧದ ರೊಟ್ಟಿಗಳನ್ನು ತಯಾರಿಸಿದ ರತ್ನವ್ವಗೆ ಬಂದ ಬೇಡಿಕೆ ಕಂಡು ಅಚ್ಚರಿ. ದಿನದಲ್ಲಿ ಐನೂರು ರೊಟ್ಟಿ ತಯಾರಿಸಿದರೂ ಸಂಜೆಯ ಹೊತ್ತಿಗೆ ಎಲ್ಲವೂ ಖಾಲಿ. ಹಿಟ್ಟಿನ ವೆಚ್ಚ ಕಳೆದರೆ ಬಂದ ಲಾಭ ಐನೂರು ರೂಪಾಯಿ. ಈಗ ಎಲ್ಲ ಕೊರತೆಗಳನ್ನೂ ನೀಗಿ ಅವರ ಕೊರಳಿನಲ್ಲಿ ಬಂಗಾರದ ಒಡವೆಗಳು ಮಿಂಚುವಂತಾಗಿದೆ.

3.ಬದುಕು ಕೊಟ್ಟ ಅಂಗಡಿ
ದೊಡವಾಡ ಗ್ರಾಮದ ಶೋಭಾ ಮಡಿವಾಳರ ಅವರ ಜೀವನವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಬದುಕಿನ ರಥವೆಳೆಯಲು ಅವರು ಹೋಟೆಲ್‌ ಹಾಕಿದರು. ಹಲವು ಉದ್ಯೋಗಗಳನ್ನು ಮಾಡಿದರು. ಆದರೆ ಕಾಸು ಕೈಗೆ ಹತ್ತಲಿಲ್ಲ. ಹಳಿ ತಪ್ಪಿದ ಬದುಕಿಗೊಂದು ನಿಲ್ದಾಣ ಸಿಗಲಿಲ್ಲ. ಮೂರು ಮಂದಿ ಹೆಣ್ಣುಮಕ್ಕಳಿದ್ದರು. ಅವರಿಗೂ ಸುಖೀ ಜೀವನದ ನೆರಳು ಒದಗಿಸುವ ಜವಾಬ್ದಾರಿಯೂ ಹೆಗಲ ಮೇಲಿತ್ತು.

ಹೀಗಿರುವಾಗಲೇ ಕಿವಿಗೆ ಬಿದ್ದದ್ದು ಸ್ವಸಹಾಯ ಸಂಘಗಳಿಂದ ಲಾಭ ಪಡೆದು ಹೊಸ ಬದುಕಿನ ಗರಿಗಟ್ಟಿಕೊಂಡವರ ಕತೆಗಳು. ಅದೇ ವೇಳೆಗೆ ಭೇಟಿಯಾದ ಸ್ವಸಹಾಯ ಸಂಘದ ಯೋಜನೆಯ ಕಾರ್ಯಕರ್ತರು ಅವರಿಗೆ ಭರವಸೆ ಮೂಡಿಸಿದರು. ಸಂಘದಿಂದ ಸಾಲ ಪಡೆದ ಶೋಭಾ ತಮ್ಮ ಊರಿನಲ್ಲಿ ಒಂದು ಕಿರಾಣಿ ಅಂಗಡಿ ತೆರೆದರು. ಬ್ಯೂಟಿ ಪಾರ್ಲರ್‌ ನಡೆಸುವವರಿಗೆ ಬೇಕಾದ ಸಾಮಗ್ರಿಗಳನ್ನೂ ಅಲ್ಲಿ ತಂದಿಟ್ಟರು. ಕಡಿಮೆ ಲಾಭ ಇರಿಸಿಕೊಂಡು ಗಿರಾಕಿಗಳ ಮನ ಗೆದ್ದರು. ಈಗ ಅವರು ಸುಖೀ ಕುಟುಂಬದ ಮಾದರಿಯಾಗಲು ನೆರವಾಗಿದೆ ದಿನವೂ ಗಳಿಸುವ 500ರಿಂದ 600 ರೂಪಾಯಿಗಳ ಲಾಭ! ಇಷ್ಟೇ ಸಾಲದೆಂದು ಸೀರೆಗಳಿಗೆ ಕುಚ್ಚು ಕಟ್ಟಿ ಕೊಡುತ್ತಾರೆ, ಬಟ್ಟೆಗಳಿಗೆ ಇಸಿŒ ಮಾಡಿಕೊಡುತ್ತಾರೆ, ಜೂಲಾ ವಯರಿನ ಹೆಣಿಗೆಯಿಂದಲೂ ಲಾಭ ಪಡೆಯುತ್ತಿದ್ದಾರೆ.

4. ಪಾಕ ತಜ್ಞೆಯಾದರು
ಗಂಡ ಅನಾರೋಗ್ಯದಿಂದ ಅಕಾಲಿಕ ಸಾವನ್ನಪ್ಪಿದಾಗ ವಿದ್ಯಾನಗರದ ಶೋಭಾ ಮಾಳಕ್ಕನವರ ಅವರ ಬದುಕಿಡೀ ಕತ್ತಲು ಆವರಿಸಿತ್ತು. ಮೂರು ಮಂದಿ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯೂ ಅವರ ಮೇಲಿತ್ತು. ದುಡಿಯಲು ಹೋದರೆ ಕೆಲಸ ಕೊಡುವವರಿರಲಿಲ್ಲ. ಅವರಿಗೂ ಜೀವನ ರಥ ಸುಗಮವಾಗಿ ಚಲಿಸಲು ಸಂಘದಲ್ಲಿ ಸಾಲ ಮಾಡಿ, ಅಡುಗೆ ಪಾತ್ರೆಗಳನ್ನು ಖರೀದಿಸಿದರು. ಸಮಾರಂಭಗಳಿಗೆ ಅಡುಗೆ ತಯಾರಿಸಿ ಕೊಟ್ಟರು. ಬಡಿಸಬೇಕೆಂದು ಕೋರಿದವರ ಸಮಾರಂಭಗಳಿಗೆ ಹೋಗಿ ಆ ಕೆಲಸವನ್ನೂ ಮಾಡಿದರು. ಅಡುಗೆಯ ದುಡಿಮೆ ಉಂಡವರ ಹೊಟ್ಟೆಯನ್ನಷ್ಟೇ ತಂಪಾಗಿಸಲಿಲ್ಲ. ಶೋಭಾ ಅವರಿಗೂ ಅದರ ಗಳಿಕೆ ಸುಖಮಯವಾದ ಬದುಕಿಗೆ ಬೇಕಾದಷ್ಟು ಆದಾಯ ತಂದುಕೊಡುವಂತಾಗಿದೆ. 

5.ಕಿರಾಣಿ ಅಂಗಡಿಯ ಶಾಬಿರಾ    
ರಾಮಲಿಂಗ ಓಣಿಯ ಶಾಬಿರಾ ಹುಗ್ಗಿಯ ಬದುಕಿನಲ್ಲಿ ಅಡಗಿದ್ದು ಕಣ್ಣೀರು ಮಾತ್ರ. ಕೃಷಿ ಕೆಲಸ ಉದರಂಭರಣಕ್ಕೆ ನೆರವಾಗುತ್ತಿತ್ತು. ಸತತವಾಗಿ ಮೂರು ವರ್ಷ ಮಳೆ ಬರಲಿಲ್ಲ. ಅನ್ನದಾತರು ಉಣಿಸಿಗಾಗಿ ಬನ್ನಪಡುತ್ತಿದ್ದರೆ ಅವರ ಬಳಿ ದುಡಿಯುತ್ತಿದ್ದ ಶಾಬಿರಾ, ಕೆಲಸವಿಲ್ಲದೆ ಕಷ್ಟಪಡಬೇಕಾಯಿತು. ಅವರಿಗೂ ನವಜೀವನದ ಹುಗ್ಗಿ ಹಂಚಿದ್ದು ಸ್ವಸಹಾಯ ಸಂಘದಿಂದ ಪಡೆದ ಸಾಲ. 45 ಸಾರ ಸಾಲ ಪಡೆದು ಆಕೆ ಕಿರಾಣಿ ಅಂಗಡಿ ಆರಂಭಿಸಿದರು. ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರವಾಯಿತು. ದಿನಕ್ಕೆ 350 ರೂಪಾಯಿ ಲಾಭವೂ ಬಂದಿತು. ಈಗ ಅವರ ಮಕ್ಕಳಿಗೆ ಉತ್ತಮ ಆಹಾರ, ಒಳ್ಳೆಯ ಬಟ್ಟೆ ಜೊತೆಗೆ ಶಿಕ್ಷಣ ನೀಡಲೂ ಸುಲಭವಾಗಿದೆ.     

6. ಬದುಕಿನ ಸುಖದ ಘಮ ಘಮ
ಇವರದು ನಾಳೆಗಳ ನಿರೀಕ್ಷೆ ಇಲ್ಲದ ಕಷ್ಟದ ಬದುಕಾಗಿತ್ತು. ಅಕಾಲದಲ್ಲಿ ಸಾವನ್ನಪ್ಪಿದ ಪತಿ. ಮೂರು ಮಂದಿ ಪುಟ್ಟ ಮಕ್ಕಳ ಜವಾಬ್ದಾರಿ. ಓದು ಬರಹ ಗೊತ್ತಿಲ್ಲ. ದಿನದ ಕವಳಕ್ಕಾಗಿ ಬೇರೆಯವರಲ್ಲಿಗೆ ಹೋಗಿ ರೊಟ್ಟಿ ಬಡಿದು ದಿನಗೂಲಿ ಪಡೆಯಬೇಕಾಗಿತ್ತು. ಕಿರಾಣಿ ಅಂಗಡಿಯಲ್ಲಿ ಹಿಟ್ಟು ಸಾಣಿಸಿ ಸಿಗುವ ಹಣಕ್ಕೆ ಕೈ ಚಾಚಬೇಕಿತ್ತು. ಇಂಥ ಕಷ್ಟದಲ್ಲಿಯೂ ತನ್ನ ಮಕ್ಕಳಿಗೆ ಅದರ ಕಾವು ತಟ್ಟಬಾರದೆಂಬ ಎಚ್ಚರಿಕೆ. ಮಗನಿಗೆ ಐಟಿಐಯಲ್ಲಿ ಸೇಫ್ಟಿ ಎಂಡ್‌ ಫೈರ್‌ ಶಿಕ್ಷಣ ಕೊಡಿಸಿ ಉದ್ಯೋಗದ ದಾರಿ ತೋರಿಸಿದ್ದಾರೆ. ಮಗಳಿಗೆ ಮದುವೆ ಮಾಡಿದ್ದಾರೆ. ಜತೆಗಿರುವ ಮಗನೊಂದಿಗೆ ಸ್ವಾವಲಂಬನೆಯ ದಾರಿಯಲ್ಲಿ ಹೆಜ್ಜೆ ಹಾಕಿ, ಇದು ವರೆಗೆ ಪಟ್ಟ ಕಷ್ಟಗಳಿಗೆ ಇತಿಶ್ರೀ ಹಾಡಿ ತನ್ನದೇ ಆದ ಸುಖೀ ಜೀವನದ ಗರಿ ಕಟ್ಟುತ್ತಿದ್ದಾರೆ. 

ಅವರ ಹೆಸರು ದೇವಕ್ಕ ಹಾವನೂರ. ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯೆಯಾಗಿ ಸೇರಿಕೊಂಡ ಅವರು, ಸಂಘದಿಂದ 70 ಸಾವಿರ ರೂಪಾಯಿ ಸಾಲ ಪಡೆದು ಅಗರಬತ್ತಿ ತಯಾರಿಸುವ ಯಂತ್ರವನ್ನು ಖರೀದಿಸಿದ್ದಾರೆ. ಯಂತ್ರದ ಅಸಲು ಬೆಲೆ ಒಂದೂವರೆ ಲಕ್ಷವಾಗಿದ್ದರೂ ಉಪಯೋಗಿಸಿದ ಯಂತ್ರವಾದ ಕಾರಣ, ಕೊಂಚ ಕಡಮೆ ದರಕ್ಕೆ ಬಂದಿದೆ. ಸಂಘದ ಮೂಲಕವೇ ಅಗರುಬತ್ತಿ ಮಾಡುವ ಧಾನದ ತರಬೇತಿಯೂ ಲಭಿಸಿದೆ. ಈಗ ಅವರ ಮನೆಯಲ್ಲಿ ಸದಾ ತುಂಬಿರುವ ಅಗರಬತ್ತಿಯ ಘಮ ಬದುಕಿನ ಕಷ್ಟ ಕಳೆದು ಸುಗಂಧ ಬೀರುವಂತಾಗಿದೆ.

ಅಗರಬತ್ತಿ ತಯಾರಿಕೆಗೆ ಬೇಕಾದ ಸಾಮಗ್ರಿಗಳನ್ನು ಮನೆಗೇ ತಂದುಕೊಡುವ ವ್ಯಾಪಾರಿಗಳಿದ್ದಾರೆ. ಕಡ್ಡಿಗಳು, ಇದ್ದಿಲಿನ ಪುಡಿ, ಅಂಟು, ಧೂಳು ಅದಕ್ಕೆ ಬೇಕು. ಇದನ್ನೆಲ್ಲ ನೀರು ಹಾಕಿ ಕಲಸಿದರೆ ಯಂತ್ರದ ಮೂಲಕ ಕಡ್ಡಿಗಳಿಗೆ ಅಂಟಿಸುವ ಕೆಲಸ ನಡೆಯುತ್ತದೆ. ಹೀಗೆ ಬತ್ತಿಗಳನ್ನು ತಯಾರಿಸಿ ಅಗತ್ಯವಾದ ಪರಿಮಳ ದ್ರವ್ಯದ ನೀರಿನಲ್ಲಿ ಅದ್ದಿ ಒಣಗಿಸಿದರೆ ಘಮಘಮ ಬತ್ತಿಗಳು ಸಿದ್ಧವಾಗುತ್ತವೆ. ಜೋಡಿಸಿ ಕಟ್ಟು ಮಾಡಿದ ಬತ್ತಿಗಳನ್ನು ವ್ಯಾಪಾರಿಗಳು ಮನೆಗೆ ಬಂದು ಒಯ್ಯುತ್ತಾರೆ.ಒಂದು ದಿನದಲ್ಲಿ ದೇವಕ್ಕ ಮಗ ಅಣ್ಣಪ್ಪನ ಜೊತೆಗೆ ಇಪ್ಪತ್ತು ಕಿಲೋ ಬತ್ತಿಗಳನ್ನು ತಯಾರಿಸುತ್ತಾರೆ. ಕಿಲೋಗೆ ಅರುವತ್ತು ರೂಪಾಯಿ ದರದಲ್ಲಿ ಬತ್ತಿಗಳು ಮಾರಾಟವಾಗುತ್ತವೆ. ಇದರಿಂದ ನಿತ್ಯವೂ  ಬರುವ ಗಳಿಕೆ ಇನ್ನೂರು ರೂಪಾಯಿ. “ನಮ್ಮ ಸ್ವಂತ ಉದ್ದಿಮೆಯಾದ ಕಾರಣ,  ಹೆಚ್ಚಿನ ಲಾಭ ಗಳಿಸಿ ನೆಮ್ಮದಿಯ ನಾಳೆಗಳನ್ನು ಕಾಣಬಲ್ಲೆವು’ ಎನ್ನುವಾಗ ಆತ್ಮಶ್ವಾಸದ ಸೆಲೆ ದೇವಕ್ಕನ ಮೊಗದಲ್ಲಿ ಮಂದಹಾಸವಾಗಿದೆ.

7. ಬಣ್ಣ ತುಂಬಿದ ಕಲೆ 
ಇವರ ಮನೆ ವೈವಿಧ್ಯಮಯ ಕಲಾ ಸಾಮಗ್ರಿಗಳ ಆಗರ. ವರ್ಣ ರಂಜಿತವಾದ ಉಯ್ನಾಲೆಗಳು, ತೊಟ್ಟಿಲುಗಳು, ಬ್ಯಾಗುಗಳು, ಹೂದಾನಿಗಳು, ಗೊಂಬೆಗಳು ಹೀಗೆ ಎಂಭತ್ತಕ್ಕಿಂತ ಹೆಚ್ಚು ರೀತಿಯ ವಸ್ತುಗಳು ತಯಾರಾಗುತ್ತವೆ. ಅದೇ ಮೈಕ್ರೋ ಮ್ಯಾಜಿಕ್‌. ಜೂಲಾ ಎಂಬ ವಿಶಿಷ್ಟವಾದ ಬಣ್ಣ ಬಣ್ಣದ ಎಳೆಗಳನ್ನು ಹೆಣಿಗೆ ಹಾಕಿ, ಅಲ್ಲಲ್ಲಿ ವರ್ಣರಂಜಿತವಾದ ಮಣಿಗಳನ್ನು, ಕನ್ನಡಿಗಳನ್ನು ಕೂಡಿಸಿ ಸಿದ್ಧವಾಗುವ ಸಾಮಗ್ರಿಗಳೆಲ್ಲವೂ ಜನರ ಮನವನ್ನು ಆಕರ್ಷಿಸುತ್ತವೆ. ಸಂತೆಗೆ ಹೊತ್ತುಕೊಂಡು ಹೋಗಿ ಮಾರುವ ಪ್ರಮೇಯವಿಲ್ಲ. ಮನೆಗೇ ಬಂದು ಬೇಕಾದುದನ್ನು ಆರಿಸಿ, ತೆಗೆದುಕೊಂಡು ಹೋಗುವ ಗ್ರಾಹಕರಿದ್ದಾರೆ. ಮದುವೆಗಳಲ್ಲಿ ವಧುವಿಗೆ ಕೊಡಬೇಕಾದ ಉಡುಗೊರೆಗಳನ್ನು ಇದೇ ರೀತಿ ತಯಾರಿಸಿ ಕೊಡಲು ಬೇಡಿಕೆ ಸಲ್ಲಿಸುವವರಿದ್ದಾರೆ. ಸಾಧಾರಣ ವಸ್ತುನ ಬೆಲೆ ಐದು ರೂಪಾಯಿಂದ ಆರಂಭವಾಗಿ ಐನೂರರ ತನಕವಿದ್ದರೆ ಮದುಮಗಳಿಗೆ ಕೊಡುವ ವಿಶಿಷ್ಟ ಕೊಡುಗೆಗಳ ಬೆಲೆ ಹತ್ತರಿಂದ ಹದಿನೈದು ಸಾವಿರವಾಗುತ್ತದೆ.

ಈ ಕಲಾ ಚತುರೆ ಸುವರ್ಣ ಕುಮಾರಿ. ಹೊನ್ನಾಳಿಯ ಕಮ್ಮರಗಟ್ಟಿಯಲ್ಲಿ ಅವರೊಬ್ಬ ಬಹು ಬೇಡಿಕೆಯ ಕಲಾವಿದೆ ಮಾತ್ರವಲ್ಲ, ಸಣ್ಣ ಉದ್ಯಮಿಯಾಗಿ ಈ ಕಲಾ ವಸ್ತುಗಳ ತಯಾರಕಿ. ತಮ್ಮ ಕೈ ಕೆಳಗೆ ಮೂವತ್ತು ಮಂದಿ ಗೃಣಿಯರಿಗೆ ಜೂಲಾ ತಯಾರಿಕೆಯ ಉಪವೃತ್ತಿ ಮಾಡಲು ಅವಕಾಶ ನೀಡಿದ್ದಾರೆ. ಇದರಿಂದ ಪ್ರತಿಯೊಬ್ಬರಿಗೂ ತಿಂಗಳಿಗೆ ಎರಡು ಸಾವಿರ ರೂ. ಗಳಿಕೆಗೆ ದಾರಿಯಾಗಿದೆ.

ಮ್ಯಾಕ್ರಂ ಮ್ಯಾಜಿಕ್‌ ಕಲೆಯನ್ನು ಉದ್ಯಮವಾಗಿ ಮಾಡಲು ಸುವರ್ಣರಿಗೆ ಆರಂಭಿಕ ಬಂಡವಾಳ ಐವತ್ತು ಸಾವಿರ ರೂ.ಗಳನ್ನು ಪತಿಯೇ ಒದಗಿಸಿದ್ದರು. ಬಳಿಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯೆಯಾಗಿ ಸಾಲದ ನೆರವು ಪಡೆದು ಜೂಲಾ ಮತ್ತಿತರ ಸಾಮಗ್ರಿಗಳನ್ನು ಖರೀದಿಸಿ ತಂದರು.  ಆರಂಭಿಕ ಕಂತು ಕಟ್ಟಲು ಹತ್ತು ರೂಪಾಯಿಯೂ ಇರಲಿಲ್ಲ. ಈಗ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿಯ ವಹಿವಾಟು ನಡೆಯುತ್ತದೆ. ಇದರಲಿ,É ಅರ್ಧದಷ್ಟು ಪರಿಕರಗಳ ಬೆಲೆಯಾದರೆ ಉಳಿದುದರಲ್ಲಿ ಅರ್ಧಾಂಶವನ್ನು ಕೆಲಸಗಾರರಿಗೆ ಹಂಚುತ್ತಾರೆ. ಇನ್ನುಳಿದುದು ಅವರ ದುಡಿಮೆಯ ಪ್ರತಿಫ‌ಲ.

– ಪ.ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.