ಕ್ಯೂರಿಂಗ್ ಎಂಬ ಕ್ಯೂರಿಯಾಸಿಟಿ
Team Udayavani, Jan 14, 2019, 12:30 AM IST
ಧೂಳಿನಂತಿರುವ ಸಿಮೆಂಟ್ ಕಲ್ಲಿನಂತಾಗಲು ಮುಖ್ಯ ಕಾರಣ ಅದರ ಹರಳುವಿಕೆಯ ಗುಣ. ಅಂದರೆ, ಅದು ಹರಳಿನಂತೆ ಒಂದು ಕಣಕ್ಕೆ ಮತ್ತೂಂದು ಕಣ ಅಂಟಿಕೊಂಡು ವಜ್ರಕಾಯ ಆಗಿಬಿಡುತ್ತದೆ. ಈ ರಾಸಾಯನಿಕ ಕ್ರಿಯೆಗೆ ನೀರು ಅತ್ಯವಶ್ಯಕ. ಒಂದೇ ದಿನಕ್ಕೆ ಇಪ್ಪತ್ತು ದಿನದ ನೀರನ್ನು ಕೊಟ್ಟರೆ ಕೆಲಸ ಕೆಡುತ್ತದೆ. ಕಾಂಕ್ರಿಟಿನ ಹದ, ಸಮಯ ನೋಡಿಕೊಂಡು ಅದಕ್ಕೆ ನೀರು ಉಣಿಸಬೇಕಾಗುತ್ತದೆ. ಈ ಉಪಚಾರ, ಕಾಂಕ್ರಿಟಿಗೆ ಮೊದಲ ಸಲ ನೀರು ಸೇರಿಸಿದಾಗಿನಿಂದಲೇ ಶುರುವಾಗುತ್ತದೆ.
ನೋಡಲು ಗಟ್ಟಿಮುಟ್ಟಾಗಿರುವ ಕಾಂಕ್ರಿಟ್ ಕಟ್ಟಡಗಳಲ್ಲೂ ಕೂಡ ಕೆಲವೊಮ್ಮೆ ಬಿರುಕು ಬಿಟ್ಟುಕೊಳ್ಳುವುದು, ಬಾಗುವುದು, ಸೋರುವುದು ಆಗುತ್ತದೆ. ಸಾಕಷ್ಟು ಸಿಮೆಂಟ್ ಸುರಿದಂತೆ ಕಾಣುತ್ತದೆ. ಮರಳ ಗುಣಮಟ್ಟದ ಬಗ್ಗೆಯೂ ಏನೂ ಕಡಿಮೆ ಮಾಡಿಲ್ಲ. ಆದರೂ ಕಾಂಕ್ರಿಟ್ ಸೋತದ್ದು ಎಲ್ಲಿ? ಎಂಬ ಪ್ರಶ್ನೆ ಹಲವರದ್ದಾಗಿರುತ್ತದೆ. ಇದಕ್ಕೆ ಉತ್ತರ ಕ್ಯೂರಿಂಗ್. ಅದು ಸರಿಯಾಗಿ ಆಗದೇ ಇದ್ದರೆ ಹೀಗೆಲ್ಲಾ ಆಗುತ್ತಿರುತ್ತದೆ. ಹಾಗಾಗಿ, ಮನೆ ಕಟ್ಟುವಿಕೆಯಲ್ಲಿ ನಾವು “ಇದೇನು? ಬರೀ ನೀರು ಸುರಿಯುವುದಕ್ಕೆ ಇಷ್ಟೊಂದು ಪ್ರಾಮುಖ್ಯತೆ ಏಕೆ’ ಎಂದು ಹೇಳುವಂತಿಲ್ಲ. ನಮಗೆಲ್ಲ ಅನ್ನಾಹಾರದ ಜೊತೆಗೆ ನೀರು ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಕಟ್ಟಡಗಳಿಗೂ ನೀರುಣಿಸುವುದು ಮುಖ್ಯ.
ಮನೆ ಕಟ್ಟಲು ಅತಿ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಉಪಯೋಗದಲ್ಲಿ ಇರುವ ಸಿಮೆಂಟ್ ಒಂದು ಸಂಕೀರ್ಣ ವಸ್ತು. ಅದು ಮೂಲದಲ್ಲಿಯೇ ಕಲ್ಲಿನಂತೆ ಗಟ್ಟಿಯಾಗಿದ್ದರೆ ಅದರ ಬಳಕೆ ಸೀಮಿತವಾಗಿರುತ್ತಿತ್ತು. ಆದರೆ, ಸಿಮೆಂಟ್ ನುಣ್ಣನೆಯ ಪುಡಿಯಾಗಿದ್ದು, ಇತರ ಜಡ ವಸ್ತುಗಳ ಜೊತೆ ವಿಲೀನಗೊಂಡು ಸುಲಭದಲ್ಲಿ ಹರಿದು,
ವಿವಿಧ ಆಕಾರ, ಗುಣಧರ್ಮ ಹೊಂದುವ ಕಾಂಕ್ರಿಟ್ ತಯಾರಾಗುತ್ತದೆ. ಕಾಂಕ್ರಿಟ್ ಅನ್ನು ಹಲಗೆಯಂತೆ ಸುರಿದು ಸೂರನ್ನು ಮಾಡಿಕೊಳ್ಳಬಹುದು. ಕಂಬದಂತೆ ಹಾಕಿ, ಕಾಲಂಗಳನ್ನು ತಯಾರಿಸಿಕೊಳ್ಳಬಹುದು. ಅಡ್ಡಡ್ಡಕ್ಕೆ ಹಾಕಿದರೆ – ಅದೇ ಬೀಮಾಗಿ ಮಾರ್ಪಾಡಾಗುತ್ತದೆ. ಹೀಗೆ, ನೀರಿನಂತೆ ಸುಲಭದಲ್ಲಿ ಹರಿಯುವ ಕಾಂಕ್ರಿಟ್ ಅರ್ಧಗಂಟೆಯಲ್ಲೇ ಗಟ್ಟಿಯಾಗಲು ಶುರುವಾಗಿ ನಂತರ ಕೆಲವೇ ದಿನಗಳಲ್ಲಿ ಗಟ್ಟಿಮುಟ್ಟಾದ ಕಾಂಕ್ರಿಟ್ ತಯಾರಾಗುತ್ತದೆ. ಆದರೆ, ಅದು ಕಲ್ಲಿನಂತೆ ಮತ್ತೂ ಹೆಚ್ಚಿನ ಗಟ್ಟಿತನ ಪಡೆಯಲು ಇಪ್ಪತ್ತು ದಿನವಾದರೂ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಕಾಂಕ್ರಿಟ್ಗೆ ಸಾಕಷ್ಟು ನೀರು ಹರಿಸುವುದು ಕಡ್ಡಾಯ.
ಧೂಳಿನಂತಿರುವ ಸಿಮೆಂಟ್ ಕಲ್ಲಿನಂತಾಗಲು ಮುಖ್ಯ ಕಾರಣ ಅದರ ಹರಳುವಿಕೆಯ ಗುಣ. ಅಂದರೆ, ಅದು ಹರಳಿನಂತೆ ಒಂದು ಕಣಕ್ಕೆ ಮತ್ತೂಂದು ಕಣ ಅಂಟಿಕೊಂಡು ವಜ್ರಕಾಯ ಆಗಿಬಿಡುತ್ತದೆ. ಈ ರಾಸಾಯನಿಕ ಕ್ರಿಯೆಗೆ ನೀರು ಅತ್ಯವಶ್ಯಕ. ಒಂದೇ ದಿನಕ್ಕೆ ಇಪ್ಪತ್ತು ದಿನದ ನೀರನ್ನು ಕೊಟ್ಟರೆ ಕೆಲಸ ಕೆಡುತ್ತದೆ. ಕಾಂಕ್ರಿಟಿನ ಹದ, ಸಮಯ ನೋಡಿಕೊಂಡು ಅದಕ್ಕೆ ನೀರು ಉಣಿಸಬೇಕಾಗುತ್ತದೆ. ಈ ಉಪಚಾರ, ಕಾಂಕ್ರಿಟಿಗೆ ಮೊದಲ ಸಲ ನೀರು ಸೇರಿಸಿದಾಗಿನಿಂದಲೇ ಶುರುವಾಗುತ್ತದೆ. ನೀರು ಸೇರಿಸುವ ಮೊದಲು ಜಡವಸ್ತುವಿನಂತಿರುವ ಸಿಮೆಂಟ್ ಪುಡಿ, ಒಮ್ಮೆ ಒಂದಷ್ಟು ತೇವಾಂಶ ತಾಗಿದರೂ ಸರಿ ಗಟ್ಟಿಗೊಳ್ಳಲು ತೊಡಗುತ್ತದೆ. ಈ ಕಾರಣಕ್ಕಾಗಿಯೇ, ನಾವು ಸಿಮೆಂಟ್ ಅನ್ನು ತೇವಾಂಶ ತಾಗದಂತೆ, ಮಣ್ಣು ಇಲ್ಲವೇ ಒದ್ದೆ ನೆಲದಲ್ಲಿ ಇಡದೆ, ನಾಲ್ಕಾರು ಕಲ್ಲುಗಳ ಮೇಲೆ ಹಲಗೆ ಮರವನ್ನು ಇಟ್ಟು ಅದರ ಮೇಲೆ ಶೇಖರಿಸುವುದು. ಸಿಮೆಂಟಿಗೆ ಒಂದಷ್ಟು ಹನಿ ನೀರು ಬಿದ್ದರೂ ಸಾಕು, ಅದರ ಹರಳುವಿಕೆ – ಕ್ರಿಸ್ಟಲೈಸೆಷನ್ ಶುರುವಾಗಿಬಿಡುತ್ತದೆ. ಹೀಗೆ ಉಪಯೋಗಿಸುವುದಕ್ಕೆ ಮೊದಲೇ, ಶೇಖರಿಸಿಟ್ಟಾಗ ಅಲ್ಲಲ್ಲಿ ಗಟ್ಟಿಗೊಂಡ ಸಿಮೆಂಟ್ ಚೀಲಗಳನ್ನು ಉಪಯೋಗಿಸದಿರುವುದು ಒಳ್ಳೆಯದು.
ನೀರು ಹೆಚ್ಚಾ ಬೇಡ!
ಸಿಮೆಂಟ್ ಗಟ್ಟಿಗೊಳ್ಳಲು ನೀರು ಮುಖ್ಯ ಎಂದು ಸಿಕ್ಕಾಪಟ್ಟೆ ಸುರಿಯುವಂತೆಯೂ ಇಲ್ಲ. ನಿರ್ದಿಷ್ಟ ಕಾರ್ಯಕ್ಕೆ, ನಿರ್ದಿಷ್ಟ ಗಟ್ಟಿತನ ಪಡೆಯಲು ಇಂತಿಷ್ಟೇ ನೀರು ಎಂದಿರುತ್ತದೆ. ನೀರು ಹಾಕಿದಷ್ಟೂ ಸಿಮೆಂಟ್ ಕಾಂಕ್ರಿಟ್ನ ಸರಿದಾಡುವ ಗುಣದಿಂದ ಅದರ ಮೂಲ ವಸ್ತುಗಳಾದ ಜೆಲ್ಲಿಕಲ್ಲು, ಮರಳು ಬೇರ್ಪಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ನಾವು ನಮ್ಮ ಕೆಲಸಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಸಿಮೆಂಟ್ ಕಾಂಕ್ರಿಟಿಗೆ ಹಾಕಬೇಕು . ನೀರನ್ನು ಹೆಚ್ಚು ಸುರಿದರೂ ಕಾಂಕ್ರಿಟ್ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನೋಡಲು ಕಡಿಮೆ ನೀರು ಹಾಕಿದಂತೆ ತೋರಿದರೂ ಒಮ್ಮೆ ವೈಬ್ರೇಟರ್ ಯಂತ್ರದಿಂದ ಅದುರಿಸಿದರೆ, ಕಾಂಕ್ರಿಟಿನ ಒಳಗಿದ್ದ ನೀರೆಲ್ಲ ಮೇಲೆ ಬಂದು ಸಾಕಷ್ಟು ನೀರು ಹಾಕಿರುವುದು ಕಂಡುಬರುತ್ತದೆ. ಈ ಕಾರಣದಿಂದಾಗಿಯೇ ನುರಿತ ಮೇಸಿŒಗಳು ಕಾಂಕ್ರಿಟ್ ಅನ್ನು ಒಂದು ಹಿಡಿಯಲ್ಲಿ ಅದುಮಿ, ನೀರು ಬೆರಳ ಸಂದಿಗಳಲ್ಲಿ ಜಿನುಗುತ್ತಿದೆಯೇ? ಎಂದು ಪರಿಶೀಲಿಸಿ ನೀರಿನ ಪ್ರಮಾಣವನ್ನು ನಿರ್ಧರಿಸುತ್ತಾರೆ!
ಕ್ಯೂರಿಂಗ್ ನೀರು ಎಲ್ಲಿ ಹೋಗುತ್ತದೆ?
ಕಾಂಕ್ರಿಟ್ ಸಂಪೂರ್ಣವಾಗಿ ಗಟ್ಟಿಗೊಂಡನಂತರ ಒಂದಷ್ಟು ನೀರು ಮಾತ್ರ ಅದರಲ್ಲಿ ಉಳಿಯುತ್ತಾದರೂ, ಅದರ ಗಟ್ಟಿಗೊಳ್ಳುವ ರಸಾಯನಿಕೆ ಕ್ರಿಯೆಗೆ ಸಾಕಷ್ಟು ನೀರು ಬೇಕಾಗುತ್ತದೆ. ಜೊತೆಗೆ ಒಂದಷ್ಟು ನೀರು ಸೆಂಟ್ರಿಂಗ್ ಸಂದಿಗಳಿಂದ ಹರಿದು ಹೋಗುತ್ತದೆ ಇಲ್ಲವೆ ಗಾಳಿಗೆ ಆವಿಯಾಗಿ ಹೋಗುತ್ತದೆ. ನಾವು ಚಳಿಗಾಲ, ನೀರೆಲ್ಲಿ ಆವಿಯಾಗುತ್ತದೆ? ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಅವಧಿಯಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆ ಇದ್ದು, ಕಾಂಕ್ರಿಟ್ ಬೇಗನೆ ಒಣಗಿ ಹೋಗುತ್ತದೆ. ಇನ್ನು ಬೇಸಿಗೆ ಕಾಲದಲ್ಲಂತೂ ನೀರನ್ನು ಉಣಿಸುವುದೇ ಒಂದು ದೊಡ್ಡ ಕೆಲಸ ಆಗಿಬಿಡುತ್ತದೆ.
ಈ ಅವಧಿಯಲ್ಲಿ ಗಾಳಿಯೂ ಜೋರಾಗಿ ಬೀಸುವುದರಿಂದ, ನೀರು ಬೇಗನೆ ಆವಿಯಾಗುತ್ತದೆ. ನೀರಿಗೆ ಸ್ವಾಭಾವಿಕವಾಗೇ ಕೆಳಗೆ ಹರಿಯುವ ಗುಣ ಇರುವುದರಿಂದ, ಒಂದಷ್ಟು ನೀರು ಕೆಳಗೂ ಸೋರಿಹೋಗಬಹುದು. ಅಕ್ಕಪಕ್ಕ ಅಚ್ಚಿನಂತೆ ಬಳಸಲಾಗಿರುವ ಮರಮುಟ್ಟುಗಳೂ ಕೂಡ ಒಂದಷ್ಟು ನೀರನ್ನು ಹೀರಿಕೊಂಡು ಬಿಡುತ್ತವೆ. ನಾವು ಈ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಾಂಕ್ರಿಟಿಗೆ ನೀರು ಉಣಿಸಬೇಕಾಗುತ್ತದೆ.
ಕ್ಯೂರಿಂಗ್ ವಿಧಾನಗಳು
ಹಲಗೆಯಂತೆ ಸೂರಿನ ಕಾಂಕ್ರಿಟಿಗೆ ಚಿಕ್ಕಚಿಕ್ಕ ಕಟ್ಟೆಗಳನ್ನು ಕಟ್ಟಿ ನೀರು ನಿಲ್ಲಿಸಿ, ಉಣಿಸುವುದು ಹೆಚ್ಚು ಪ್ರಚಲಿತದಲ್ಲಿದೆ. ನೀರು ಸಾಮಾನ್ಯವಾಗಿ ಒಂದು ದಿನಕ್ಕೆ ಒಂದು ಎಮ್ಎಮ್ ನಷ್ಟು ಆವಿಯಾಗಿ ಹೋಗುತ್ತದೆ. ಅಂದರೆ, ನೀವು ಇಪ್ಪತ್ತು ದಿನ ಕ್ಯೂರ್ ಮಾಡಬೇಕೆಂದಿದ್ದರೆ ಕಡೇಪಕ್ಷ ಇಪ್ಪತ್ತು ಸೆಂಟಿಮೀಟರ್ ಅಂದರೆ ಸುಮಾರು ಒಂದು ಇಂಚಿನಷ್ಟು ನೀರನ್ನು ನಿಲ್ಲಿಸಲು ತಯಾರಿರಬೇಕು. ಈ ನೀರಿನಲ್ಲಿ ಒಂದಷ್ಟು ಸೋರಿಹೋಗುವುದರಿಂದ, ಅದರಲ್ಲೂ ಕಾಂಕ್ರಿಟ್ ಹಾಕಿದ ಎರಡು ಮೂರು ದಿನ ಸೋರುವಿಕೆ ಹೆಚ್ಚಿರುವುದರಿಂದ, ಹೆಚ್ಚುವರಿ ನೀರು ಹಾಕುವುದು ಅನಿವಾರ್ಯ. ಕಾಂಕ್ರಿಟ್ ಕಾಲಂಗಳಿಗೆ ಗೋಣಿ ಚೀಲಗಳನ್ನು ಇಲ್ಲವೇ ರಾಗಿ ಹುಲ್ಲನ್ನು ದಾರದಂತೆ ಹೆಣೆದು, ಸುತ್ತುವುದು ಇದ್ದದ್ದೇ. ಕೆಲವೊಮ್ಮೆ ಕಾಲಂಗಳಿಗೆ ಪ್ಲಾಸ್ಟಿಕ್ ಸುತ್ತುವುದೂ ಉಂಟು. ಆದರೆ, ಹೀಗೆ ಸುತ್ತಿದರೆ ಕೆಲವೊಮ್ಮೆ ನಮಗೆ ಒಳಗೆ ಕಾಂಕ್ರಿಟ್ ಒಣಗಿದರೂ ಗೊತ್ತಾಗುವುದಿಲ್ಲ. ಆದುದರಿಂದ ದಪ್ಪದಾದ ಪಾರದರ್ಶಕ ಪ್ಲಾಸ್ಟಿಕ್ ಹಾಳೆಗಳನ್ನೇ ಬಳಸಬೇಕಾಗುತ್ತದೆ.
ಕಟ್ಟಡ ದೊಡ್ಡದಿದ್ದರೆ ಪಂಪ್ ಬಳಸಿಯೂ ನೀರು ಉಣಿಸಬಹುದು. ಇಲ್ಲ, ಕೆಲವೇ ಕಾಲಂಗಳು ಇದ್ದರೆ, ಅವುಗಳ ಮೇಲೆ ಸಣ್ಣ ರಂಧ್ರ ಇರುವ ಡಬ್ಬಗಳನ್ನು ಇಟ್ಟು, ಇವಕ್ಕೆ ನೀರು ತುಂಬಿಸಿಯೂ ಸತತವಾಗಿ ನೀರು ಉಣಿಸಬಹುದು. ಒಂದು ಹತ್ತು ಚದರದ ಮನೆಯ ಸೂರೂ ಕೂಡ ಸಾಕಷ್ಟು ನೀರು ಬೇಡುವುದರಿಂದ, ಇದಕ್ಕೆಂದೇ ಒಂದೆರಡು ಕಾರ್ಮಿಕರನ್ನು ನಿಯೋಜಿಸುವುದು ಒಳ್ಳೆಯದು.
ಹೆಚ್ಚಿನ ಮಾಹಿತಿಗೆ ಫೋನ್ 98441 32826
– ಆರ್ಕಿಟೆಕ್ಟ್ ಕೆ.ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು