ಬರದ ನಾಡಲ್ಲಿ ಕಲ್ಲಂಗಡಿ ಕಹಾನಿ
Team Udayavani, Mar 17, 2019, 12:10 PM IST
ಗುಲ್ಬರ್ಗದಲ್ಲಿ ಬಿಸಿಲೇ ಕೆಂಡ. ಇಂಥ ಕಡೆ ಎಂಥ ಬೆಳೆ ಬೆಳೆಯಬೇಕು ಅನ್ನೋದು ರೈತರ ಪ್ರಶ್ನೆ. ಇದಕ್ಕೆ ಉತ್ತರ ಹೇಳುವಂತೆ ಜೈವಂತ್ ಕಲ್ಲಂಗಡಿ ಬೆಳೆದು, ಲಾಭ ಮಾಡಿ ಬೀಗಿದ್ದಾರೆ. ಮಾದರಿಯೂ ಆಗಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.
ಗುಲ್ಬರ್ಗ ಜಿಲ್ಲೆಯಲ್ಲಿ ರೈತರು ತಲೆ ಎತ್ತಿ ಬದುಕೋಕೆ ಆಗೋಲ್ಲ. ಆ ರೀತಿ ಇದೆ ಸುಡುವ ಬಿಸಿಲು. ಇಂಥ ಕಡೆ ಎಂಥ ಬೆಳೆ ಬೆಳೆಯಬೇಕು? ಅನ್ನೋದೇ ದೊಡ್ಡ ತಲೆನೋವು. ಇದೆಲ್ಲವನ್ನೂ ಪಕ್ಕಕ್ಕೆ ಇಟ್ಟು, ಹೀಗೆ ಬೆಳೆಯಬಹುದು ನೋಡಿ ಅಂತ ತೋರಿಸಿದ್ದಾರೆ. ದಸ್ತಪುರದ ಜೈವಂತ್ ಕಲ್ಲಂಗಡಿ .
ಹೆಸರಲ್ಲೇ ಇರುವ ಕಲ್ಲಂಗಡಿಯನ್ನೇ ಜೈವಂತರು ಬೆಳೆದದ್ದು. ಇವರ ಧೈರ್ಯ ಮೆಚ್ಚಲೇ ಬೇಕು. ಏಕೆಂದರೆ, ಗುಲ್ಬರ್ಗಾ ಸೀಮೆಯಲ್ಲಿ ವಾಡಿಕೆಯಷ್ಟು ಮಳೆ ಬಾರದೆ ಸುಮಾರು ನಾಲ್ಕು ವರ್ಷಗಳಾಗಿವೆ. ಈ ಊರಿನ ಮಂದಿ ಮಳೆಯಾಶ್ರಿತವಾಗಿ ಒಂದೆರಡು ಬೆಳೆಗಳನ್ನು ಬೆಳೆದರೆ, ಬೇಸಿಗೆಗಾಲದಲ್ಲಿ ನೀರಾವರಿ ವ್ಯವಸ್ಥೆಯಿದ್ದವರು ತರಕಾರಿ, ಪುಷ್ಪ ಕೃಷಿಗಳನ್ನು ಬೆಳೆಯುತ್ತಾರೆ. ಇಲ್ಲೆಲ್ಲ ಉಪ್ಪು ನೀರು ದೊರೆಯುವುದರಿಂದ, ಕೊಳವೆ ಬಾವಿಯನ್ನು ಕೊರೆಯುವುದು ಕಷ್ಟವೇ. ಹೀಗಿರುವಾಗ ಕಲ್ಲಂಗಡಿ ಬೆಳೆಯುವುದೆಂದರೆ ಹುಡುಗಾಟಿಕೆಯೇ? ಜೈವಂತರಿಗೆ ಹನ್ನೆರಡು ಎಕರೆ ಜಮೀನಿದೆ. ಅದರಲ್ಲಿ ಎರಡು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಣಕಾಸಿನ ಸಹಾಯ ದೊರೆತಿದೆ.
ಮೆಣಸಿನ ಬದಲು ಕಲ್ಲಂಗಡಿ
ಈ ಹಿಂದೆ ಜೈವಂತ ಎಕರೆಗಟ್ಟಲೆ ಮೆಣಸು ಬೆಳೆಯುತ್ತಿದ್ದರು. ಅವುಗಳಿಂದ ಪಡೆಯುತ್ತಿದ್ದ ಲಾಭ ಅಷ್ಟಕಷ್ಟೇ. ಬೇಡಿಕೆ, ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿ ನಷ್ಟವನ್ನು ಅನುಭವಿಸಿದ್ದೂ ಇದೆ. ರೋಗಗಳು ಬಾಧಿಸುವುದು ಅಧಿಕ. ಇದೀಗ ಮೆಣಸು ಬೆಳೆಯುವುದನ್ನು ಬಿಟ್ಟು ಇವರು ಕಲ್ಲಂಗಡಿಯ ಮೊರೆ ಹೋಗಿದ್ದಾರೆ. ಮೊದಲು ಗದ್ದೆಯನ್ನು ಉಳುಮೆ ಮಾಡಿ, ಹದಗೊಳಿಸಿ, ಮಲಿcಂಗ್ ವಿಧಾನದಲ್ಲಿ ಸಸಿಯಿಂದ ಸಸಿಗೆ ಒಂದು ಅಡಿ, ಸಾಲಿನಿಂದ ಸಾಲಿಗೆ ಆರು ಅಡಿ ಅಂತರ ಬಿಟ್ಟು ಎರಡು ಎಕರೆಗೆ ಹನ್ನೆರಡು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ.
ನೀರಾವರಿ, ಗೊಬ್ಬರ, ನಿರ್ವಹಣೆ
ನೀರಿಗಾಗಿ ಕೊಳವೆ ಬಾವಿ ಇದೆ. ಆರಂಭದಲ್ಲಿ ನಿತ್ಯ ಅರ್ಧ ತಾಸು, ಬಳ್ಳಿ ದೊಡ್ಡದಾದಂತೆ ಒಂದು, ಎರಡು ತಾಸುಗಳ ಕಾಲ ಹನಿ ನೀರಾವರಿ ವಿಧಾನದ ಮೂಲಕ ನೀರುಹಾಯಿಸುತ್ತಾರೆ. ರಾಸಾಯನಿಕ ಗೊಬ್ಬರಗಳನ್ನು ಹನಿ ನೀರಾವರಿ ವಿಧಾನದ ಮೂಲಕವೇ ನೀಡುತ್ತಾರೆ. ಗೊಬ್ಬರ, ಔಷಧಕ್ಕೆ ಸೇರಿ ಎರಡು ಎಕರೆಯ ಒಂದು ಬೆಳೆಗೆ ಒಂದು ಲಕ್ಷ ರೂಪಾಯಿ ಖರ್ಚು ತಗುಲಿದೆ. ಬಳ್ಳಿಗಳ ಮಧ್ಯೆ ಬೆಳೆದ ಕಳೆಗಳನ್ನು ಆಗಾಗ ತೆಗೆಯುತ್ತಿರಬೇಕು. ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿದರೆ ಹೂವು, ಕಾಯಿ ಉದುರುವ ಸಾಧ್ಯತೆಗಳಿರುತ್ತವೆ. ಬಿಸಿಲು ಬೀಳುವ ಜಾಗ ಉತ್ತಮ. ಅತಿಯಾದ ಬಿಸಿಲಿರುವ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸುವಂತಿಲ್ಲ. ಕಲ್ಲಂಗಡಿಯಲ್ಲಿ ಹಲವಾರು ತಳಿಗಳಿದ್ದು ಇವರು ಕಡು ಹಸಿರು ಬಣ್ಣದ ತೈವಾನ್ ಕಲ್ಲಂಗಡಿಯನ್ನು ಬೆಳೆದಿದ್ದಾರೆ. ಇದು ರುಚಿಯಲ್ಲಿ ಭಿನ್ನ. ಹೆಚ್ಚು ಸಿಹಿಯಾಗಿದ್ದು ಬೇಡಿಕೆಯು ಅಧಿಕ. ಬೀಜ ಬಿತ್ತಿ ಗಿಡ ತಯಾರಿಸುವ ಬದಲು ಸಸಿ ನಾಟಿ ಉತ್ತಮ. ಮೆಣಸಿಗೆ ಹೋಲಿಸಿದರೆ ಕಲ್ಲಂಗಡಿ ನಿರ್ವಹಣೆ ಸುಲಭ.
ಇಳುವರಿ
ಕಲ್ಲಂಗಡಿ ಎರಡು ತಿಂಗಳ ಬೆಳೆ. ಎರಡು ಎಕರೆಯಲ್ಲಿ 50 ಟನ್ ಇಳುವರಿ ಪಡೆದಿದ್ದಾರೆ. ಗ್ರಾಹಕರು, ಕೆ.ಜಿಗೆ ಏಳೂವರೆ ರೂಪಾಯಿಯಂತೆ ಖರೀದಿಸಿದ್ದಾರೆ. ತೈವಾನ್ ಕಲ್ಲಂಗಡಿಗೆ ಬೇಸಿಗೆ ಕಾಲದಲ್ಲಿ ಅಧಿಕ ಬೇಡಿಕೆಯಿದೆ. ಅದರಲ್ಲೂ ಬಿಸಿಲಿನ ತಾಪಮಾನವನ್ನು ತಡೆದುಕೊಳ್ಳಲು ಅಸಾಧ್ಯವಾಗುವ ಗುಲ್ಬರ್ಗಾದಲ್ಲಿ ಪ್ರತಿನಿತ್ಯ ಸಾವಿರಾರು ಟನ್ ಕಲ್ಲಂಗಡಿ ಮಾರಾಟವಾಗುತ್ತದೆ. ಬೆಳೆಗೆ ಹಂದಿಗಳ ಕಾಟ ಇದೆ. ಗದ್ದೆಯ ಸುತ್ತಲೂ ಸರಿಗೆ ಕಟ್ಟುವ ಮೂಲಕ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಬಹುದಾಗಿದೆ. ನೀರಾವರಿ ವ್ಯವಸ್ಥೆಯಿದ್ದ ಕಡೆಗಳಲ್ಲಿ ಬೆಳೆಯಬಹುದಾದ ಬೆಳೆಯಿದು. ನೆಟ್ಟು 40 ದಿನಕ್ಕೆ ಕಾಯಿ ಬರುತ್ತದೆ. ನಂತರ 30 ದಿನಗಳ ಕಾಲ ಗಿಡಗಳನ್ನು ಚೆನ್ನಾಗಿ ಪೋಷಿಸಬೇಕು. ನೀರಾವರಿ ವ್ಯವಸ್ಥೆಯಿದ್ದರೆ ಉತ್ತರಕರ್ನಾಟಕದಲ್ಲೂ ಕಲ್ಲಂಗಡಿ ಬೆಳೆಯಬಹುದೆಂಬುದನ್ನು ಜೈವಂತರು ತೋರಿಸಿಕೊಟ್ಟಿದ್ದಾರೆ.
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅವರ ಸಂಪರ್ಕಕಕ್ಕೆ ಅವರ ಮೊಬೈಲ್ ನಂಬರ್ : 9741123831.
ಚಂದ್ರಹಾಸ ಚಾರ್ಮಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!