ದೇವರೇ, ವರ ಸ್ಯಾಂಕ್ಷನ್ ಮಾಡು…
Team Udayavani, Nov 7, 2017, 11:38 AM IST
ನಾನು- ನೀನು ಎಷ್ಟು ಆಸೆ ಪಟ್ಟರೆ ಏನು ಬಂತು? ರೇಖೆಯ ಭವಿಷ್ಯದಲ್ಲಿ ಇಲ್ಲದ್ದನ್ನು ಕದಿಯಲು ಆಗುತ್ತಾ ಹೇಳು? ಪ್ರೀತಿಸಿದವರನ್ನು ನಿಜ ಜೀವನದಲ್ಲಿ ಪಡೆಯುವುದು ಕೂಡ ಸುದೈವದ ತೂಕ ಕಣೋ. ವಾಸ್ತವದ ಅಡಿಪಾಯದ ಮೇಲೆ ಜೀವನ ನಿಂತಿರುವಾಗ, ಅದರ ವಿರುದ್ಧ ದೋಣಿ ಸಾಗದು…
ನಿನ್ನ ಮಾತಿನ ಶಬ್ದಗಳ ಆಯ್ಕೆಯಲ್ಲಿಯೇ ಮೋಡಿಯಿದೆಯಲ್ಲಾ? ಅದ್ಹೇಗೆ ಆ ದೇವರು ಈ ರೀತಿಯ ವರಮಾನವನ್ನು ನಿನಗೆ ಟ್ಯಾಕ್ಸ್ರಹಿತವಾಗಿ ಕೊಟ್ಟುಬಿಟ್ಟ?! ನಾನು ಮರುಳಾಗಿದ್ದು ಆ ನಿನ್ನ ಆಯ್ಕೆಯ ಶಬ್ದಗಳಿಗೇ. ಅದು ಹೇಗೆಂದರೆ, ಸಣ್ಣ ಮಗು ನಿಷ್ಕಲ್ಮಷವಾಗಿ ಚಾಕ್ಲೆಟ್ಗೆ ಮರುಳಾದಂತೆ. ಅದು ಯಾವ ಮಟ್ಟಿನ ಶಬ್ದಗಳ ಆಕರ್ಷಣೆಯೆಂದರೆ, ಶಬ್ದಗಳಿಗೇ ಪರವಶಳಾಗಿದ್ದೆ. ಎಷ್ಟೋ ವರ್ಷಗಳ ಮಾನಸಿಕ ಯಾತನೆಗಳಿಂದ ಹೊರಬಂದಿದ್ದೆ.
ನನಗೆ ಗೊತ್ತು, ಆ ಮಾನಸಿಕ ವ್ಯಾಕುಲಗಳಿಗೆ ಪರಿಹಾರವಿಲ್ಲವೆಂದು. ಆದರೆ ನೀನು, ಕೆಲ ಗಳಿಗೆಗಳ ಮಟ್ಟಿಗಾದರೂ ಅದನ್ನೆಲ್ಲ ಮರೆಯುವಂತೆ ಮಾಡಿದ್ದೆ. ನೀನು ಮಾತಾಡದಿದ್ದಾಗ, ಮತ್ತೆ ಅವೇ ಯಾತನೆಗಳಲ್ಲಿ ಉಸಿರು ನಿಂತುಹೋದ ಅನುಭವ. ಎಲ್ಲವೂ ಪೂರ್ವನಿಶ್ಚಿತ, ಏನಾಗಬೇಕೋ ಅದು ಆಗೇ ಆಗುತ್ತೆ. ಇಲ್ಲದಿದ್ದರೆ ಆಗೋದೇ ಇಲ್ಲ. ದೇವರ ಆಜ್ಞೆಯಿಲ್ಲದೇ ಒಂದು ಹುಲ್ಲು ಕಡ್ಡಿಯೂ ಅಲ್ಲಾಡಲು ಸಾಧ್ಯವಿಲ್ಲ.
ನಮ್ಮ ಜೀವನದ ಪ್ರತಿ ಸೆಕೆಂಡ್ ಕೂಡ ದೇವರ ಇಚ್ಛೆಯಂತೆ ನಡೆಯುತ್ತದೆ. ಹೀಗಿರುವಾಗ, ನಾವು ಅಂದುಕೊಂಡಿದ್ದೆಲ್ಲವೂ ನಡೆಯುತ್ತೆ ಅಂದುಕೊಳೊದು ಸುಳ್ಳು. ನಮ್ಮ ನಮ್ಮ ಸುದೈವಗಳಲ್ಲಿ ಬರೆದಿರಬೇಕು. ಕೈ ಕಾಲು ಇಲ್ಲದ ಜನರ ನಸೀಬನ್ನೂ ದೇವರು ಬರೆದಿರುವಾಗ, ಅಂಗೈಯ ರೇಖೆಗಳನ್ನು ಎಷ್ಟು ನಂಬಬಹುದು ಎಂದು ಪ್ರಶ್ನಿಸುವವರಿದ್ದಾರೆ. ಆದರೂ, ನಾನು ನಂಬಿದ ಹಾಗೆ ನಮ್ಮ ಕೈ ಮೇಲೆ ಸುದೈವದ ರೇಖೆಗಳಿದ್ದರೆ ಮಾತ್ರ ನಾವು ಅಂದುಕೊಂಡಿದ್ದೆಲ್ಲಾ ನಿಜವಾಗುತ್ತದೆ.
ಇಲ್ಲಾಂದ್ರೆ ಇಲ್ಲ. ನಾನು, ನೀನು ಎಷ್ಟು ಆಸೆ ಪಟ್ಟರೆ ಏನು ಬಂತು? ರೇಖೆಯ ಭವಿಷ್ಯದಲ್ಲಿ ಇಲ್ಲದ್ದನ್ನು ಕದಿಯಲು ಆಗುತ್ತಾ ಹೇಳು? ಪ್ರೀತಿಸಿದವರನ್ನು ನಿಜ ಜೀವನದಲ್ಲಿ ಪಡೆಯುವುದೂ ಸುದೈವದ ತೂಕ ಕಣೋ. ವಾಸ್ತವದ ಅಡಿಪಾಯದ ಮೇಲೆ ಜೀವನ ನಿಂತಿರುವಾಗ, ಅದರ ವಿರುದ್ಧ ದೋಣಿ ಸಾಗದು. ಒಂದಂತೂ ನಿಜ. ನಿನ್ನ ಪ್ರೀತಿಯ ಮಾತುಗಳು ಮಾತ್ರ ನನ್ನನ್ನು ಸಂತೈಸಿದ್ದವು.
ನೀನು ಕಟ್ಟಿಕೊಟ್ಟ ಮಾಯಾಲೋಕದಲ್ಲಿ ನಾನು ಸ್ವತಂತ್ರವಾಗಿ ವಿಹರಿಸುತ್ತಿದ್ದೆ. ಸಾಮಾಜಿಕ ಕಟ್ಟಳೆಗಳಿಂದ ತುಂಬಿ ಹೋದವರಿಗೆ ಅದರ ವಿರುದ್ಧ ನಿಲ್ಲೋದು ಅಸಾಧ್ಯವೆಂದಾಗ, ನನ್ನ ನಿನ್ನ ಪ್ರೀತಿ ಸುಖಾಂತ್ಯದಲ್ಲಿ ಕೊನೆಯಾಗುತ್ತದೆಂದು ಊಹಿಸೋದು ಮೂರ್ಖತನ. ವಾಸ್ತವ ಅನ್ನೋದು ಬಹಳ ಕಹಿ. ಅದು ಸತ್ಯ ಅಂತ ಗೊತ್ತಿದ್ದರೂ, ಮನಸ್ಸು ಅದನ್ನು ಒಪ್ಪುವುದಿಲ್ಲ. ಒಪ್ಪಿಕೊಂಡರೆ ನೋವೇ ಗತಿ.
ಹುಟ್ಟುವಾಗಲೇ ದೇವರು ನಮ್ಮ ನಮ್ಮ ನಸೀಬನ್ನು ಬರೆದಿರುವಾಗ, ಅದನ್ನು ಜಗತ್ತಿನ ಯಾವ ದುಬಾರಿ ರಬ್ಬರ್ನಿಂದಲೂ ಅಳಿಸಲಾಗದು. ಬಂದಂಥ ಸಂದರ್ಭಗಳನ್ನು ಬಂದ ಹಾಗೇ ಎದುರಿಸಬೇಕಷ್ಟೆ. ಹುಟ್ಟು- ಸಾವುಗಳು ಜನ್ಮಜನ್ಮಾಂತರದ ನಂಟು ಎಂಬ ಗಟ್ಟಿ ನಿಲುವುಗಳ ಮಧ್ಯೆ, ಈ ಜನ್ಮದಲ್ಲಿ ಪೂರೈಸಲಾಗದ ಆಸೆಗಳು, ಮರುಜನ್ಮದಲ್ಲಿ ನೆರವೇರುತ್ತವಂತೆ.
ಆದರೆ, ನನಗೆ ಈ ಜನ್ಮವೇ ಜುಗುಪ್ಸೆ ಎನಿಸುತ್ತಿರುವಾಗ, ಮರುಜನ್ಮದಲ್ಲಿ ನಂಬಿಕೆ, ಆಸಕ್ತಿಯಿಲ್ಲ. ಈ ಜನ್ಮದಲ್ಲಿ ಸಾಧ್ಯವಾಗದ್ದು, ಮರುಜನ್ಮದಲ್ಲಿ ಸಾಧ್ಯವೇ? ನಾವು ದಿನವೂ ಪೂಜಿಸುವ, ಆರಾಧಿಸುವ, ಪ್ರಾರ್ಥಿಸುವ, ನಾವಿಬ್ಬರೂ ಸಂಪೂರ್ಣವಾಗಿ ನಂಬಿದಂಥ ಆ ದೇವರು ಈ ಜನ್ಮದಲ್ಲಿ ಏಕೆ ನಮ್ಮ ಆಸೆಗಳನ್ನು ಈಡೇರಿಸುವುದಿಲ್ಲ?
ಇಂತಿ ನಿನ್ನ ಆತ್ಮೀಯಳು,
* ಮಾಲಾ ಮ ಅಕ್ಕಿಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ