ಅವನು ಸ್ಪೈಡರ್ ಫೋಟೋಗ್ರಾಫರ್
Team Udayavani, May 1, 2018, 6:38 PM IST
ನಾವು ಮಾಡುವ ಯಾವುದೇ ಕೆಲಸದಲ್ಲಿ ತುಸು ತಲೆ ಕೆಡಿಸಿಕೊಂಡರೆ, ಒಂದು ಸ್ವಲ್ಪ ರಿಸ್ಕ್ ತಗೊಂಡ್ರೆ, ಲೋಕದ ಕಂಗಳನ್ನು ನಮ್ಮತ್ತಲೇ ತಿರುಗಿಸಿಕೊಳ್ಳಬಹುದು ಅನ್ನೋದಕ್ಕೆ ಈ ಫೋಟೋಗ್ರಾಫರ್ಸಾಕ್ಷಿ. ಈ ವೈರಲ್ ಆದ ವೆಡ್ಡಿಂಗ್ ಫೋಟೋದಿಂದ ನಾವು ಕಲಿಯುವುದು ಏನನ್ನು?
ನಿಜ ಅಲ್ವಾ? ನಿನ್ನೆ ಮೊನ್ನೆ ಈ ಫೋಟೋವನ್ನು ನೀವೂ ನೋಡಿರುತ್ತೀರಿ. ಪಕ್ಕಾ, ಇದು ನಿಮ್ಮ ವಾಟ್ಸಾಪ್, ಫೇಸ್ಬುಕ್ನಲ್ಲೂ ಮಿಂಚಿನಂತೆ ಹರಿದಾಡಿ, ಮೆರೆದಾಡಿದ ಫೋಟೋ. ನೂರಾರು, ಸಾವಿರಾರು ಸಲ ಜಿಗಿದು, ಮತ್ತೆ ಮತ್ತೆ ನಿಮ್ಮ ಕಣ್ಣಿಗೆ ಬಿದ್ದ ಫೋಟೋವೇ! ಅದರಲ್ಲಿ ಯಾವುದೇ ಅನುಮಾನವಿಲ್ಲ.
ಯಾವುದೇ ಸಾಧನೆಯ ಹಿಂದೆ ಇರೋದೇ “ರಿಸ್ಕ್’ ಎಂಬ ಎರಡಕ್ಷರ. ಈ ವೆಡ್ಡಿಂಗ್ ಫೋಟೋದ ಹಿಂದೆಯೂ ಅಂಥದ್ದೇ ಕ್ರಿಯೆಟಿವ್ ರಿಸ್ಕ್ ಇತ್ತು. ಆಗಷ್ಟೇ ಮದ್ವೆಯಾದ ದಂಪತಿ, ಆಕಾಶ ನೋಡುತ್ತಾ, ಹುಣ್ಣಿಮೆ ಬೆಳದಿಂಗಳಿನಂತೆ ನಗುತ್ತಿದ್ದಾರೆ. ಅವರ ಆ ರಮ್ಯ ನೋಟ ಮೇಲಿನಿಂದ ಕ್ಲಿಕ್ಕಾಗಿದೆ. ಹಾಗೆ ಸೆರೆಹಿಡಿದಿದ್ದು, ಡ್ರೋಣ್ ಕ್ಯಾಮೆರಾದಿಂದಲೋ, ಕ್ರೇನ್ನಿಂದಲೋ ಅಲ್ಲವೇ ಅಲ್ಲ. ಒಬ್ಬ ಮಾಮೂಲಿ ವೆಡ್ಡಿಂಗ್ ಫೋಟೋಗ್ರಾಪರ್, ಅಕೇಶಿಯಾ ಮರ ಹತ್ತಿ ಅವರ ರಮ್ಯಚಿತ್ರವನ್ನು ಸೆರೆಹಿಡಿದಿದ್ದ!
ಇದನ್ನೇ ನೋಡಿ, ಟ್ಯಾಲೆಂಟ್ ಅನ್ನೋದು. ನಾವು ಮಾಡುವ ಯಾವುದೇ ಕೆಲಸದಲ್ಲಿ ತುಸು ತಲೆ ಕೆಡಿಸಿಕೊಂಡರೆ, ಒಂದು ಸ್ವಲ್ಪ ರಿಸ್ಕ್ ತಗೊಂಡ್ರೆ, ಮಿಂಚನ್ನು ನಾವೇ ಸೃಷ್ಟಿಸಿಬಿಡಬಹುದು. ನಾವು ಎಷ್ಟು ಕ್ರಿಯೇಟಿವ್ ಆಗಿ ಕೆಲಸ ಮಾಡುತ್ತೇವೆ ಎಂಬುದನ್ನು ಜಗತ್ತಿನೆಲ್ಲರಿಗೂ ತೋರಿಸಬಹುದು. ಕಿಲಕಿಲ ನಗುವ ಈ ದಂಪತಿಯ ಫೋಟೋ ತೆಗೆದವನು ಕೇರಳದ ತ್ರಿಶ್ಶೂರ್ನ ವಿಷ್ಣು ಎಂಬ ಕೇವಲ 23 ವರ್ಷದ ಫೋಟೋಗ್ರಾಪರ್. ಹೊಟ್ಟೆಪಾಡಿಗಾಗಿ ಕ್ಯಾಮೆರಾ ಹಿಡಿದ ವಿಷ್ಣುವಿನದ್ದು ತಿಂಗಳಿಗೆ ಸಾಧಾರಣ ದುಡಿಮೆ ಅಷ್ಟೇ. ಕಷ್ಟಪಟ್ಟು ಕ್ಯಾಮೆರೋಪಕರಣಗಳನ್ನು ಕೊಂಡಿದ್ದನಂತೆ ಆತ. ಆದರೆ, ತಾನು ಮಾಡುವ ಕೆಲಸದಲ್ಲಿ ಆ ಯಾವ ಕೊರತೆಯನ್ನೂ ಅವನು ತೋರ್ಪಡಿಸಲಿಲ್ಲ.
ಫೋಟೋ ಹಿಂದಿನ ಕತೆ
ವಿಷ್ಣು, ತ್ರಿಶ್ಶೂರ್ನ ಒಬ್ಬ ವರನ ಮನೆಗೆ ಫೋಟೋ ತೆಗೆಯಲು ಹೋದಾಗ, ಸೂಕ್ತ ಲೊಕೇಶನ್ಗೆ ಹುಡುಕಾಡಿದನಂತೆ. ಅಲ್ಲಿ ಹೇಳಿಕೊಳ್ಳುವಂಥ, ಮನೋಹರ ವಾತಾವರಣ ಎಲ್ಲೂ ಕಾಣಿಸದೆ ತಲೆಕೆಡಿಕೊಂಡನಂತೆ. ಹತ್ತಿರದಲ್ಲಿ ಎಲ್ಲಿ ನೋಡಿದರೂ ದಟ್ಟ ಬಯಲು. ಅದೇ ಬಯಲಿನ ನಡುವೆ ಕಂಡಿದ್ದು ಕೆಲವು ಅಕೇಶಿಯಾ ಮರಗಳಷ್ಟೇ. ಅಬ್ಟಾ, ಈ ಮರಗಳಾದ್ರೂ ಇವೆಯಲ್ಲ, ಇವನ್ನೇ ಇಟ್ಟುಕೊಂಡು ಮ್ಯಾಜಿಕ್ ಮಾಡಬೇಕು ಎಂದು ದಂಪತಿಯನ್ನು ಫೋಟೋಶೂಟ್ಗೆ ಅಣಿಗೊಳ್ಳಲು ಸೂಚಿಸಿದ. ಈತ ಸಾಕಷ್ಟು ಬಾರಿ ಮರದ ಮೇಲೆ ಹತ್ತಿಯೇ ಫೋಟೋಗಳನ್ನು ತೆಗೆದಿದ್ದ.
ದಂಪತಿ ಹಾಗೆ ನೋಡ್ತಾ ಇದ್ದಂತೆ, ವಿಷ್ಣು ಕ್ಯಾಮೆರಾವನ್ನು ಕೊರಳಿಗೇರಿಸಿಕೊಂಡು ಚಕಚಕನೆ ಅಕೇಶಿಯಾ ಮರವನ್ನು ಏರಿ ಆಗಿತ್ತು. ಒಂದು ಪಫೆìಕ್ಟ್ ಫ್ರೆàಮ್ನಲ್ಲಿ ದಂಪತಿಯ ನಗುವನ್ನು ಸೆರಿಹಿಡಿದೇಬಿಟ್ಟ. ಆದರೆ, ಅಲ್ಲಿ ಈ ಫೋಟೋಶೂಟ್ನ ದೃಶ್ಯ ನೋಡುತ್ತಿದ್ದವರಲ್ಲಿ ಅನೇಕರು ನಕ್ಕರಂತೆ. ಮತ್ತೆ ಕೆಲವರು ಶಿಳ್ಳೆ ಹೊಡೆದು, ಚಪ್ಪಾಳೆ ಬಾರಿಸಿ, ಬೆಂಬಲಿಸಿದರಂತೆ. ಇನ್ನಾéರೋ ವಿಷ್ಣುವಿನ ಸಾಹಸವನ್ನು ಚಿತ್ರೀಕರಿಸಿದರು. ಆದರೆ, ವಿಷ್ಣು ಮಾಡಿದ ಕೆಲಸವನ್ನು ಜೋಕರ್ನಂತೆ ನೋಡಿ, ಮನರಂಜನೆ ಪಡೆದವರೆಲ್ಲ ಬೆಳಗ್ಗೆದ್ದು ನೋಡುವಾಗ, ದೊಡ್ಡ ಬಾಯಿ ತೆರೆದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ವಿಷ್ಣುವಿನ ಸಾಹಸ ಅಷ್ಟರಲ್ಲಾಗಲೇ ಫೇಸ್ಬುಕ್- ವಾಟ್ಸಾéಪ್ನ ಒಡಲು ಸೇರಿ ವೈರಲ್ ಆಗಿತ್ತು. ಆ ವಿಡಿಯೋ ಎರಡೇ ದಿನದಲ್ಲಿ 3,56,00 ವೀಕ್ಷಣೆ ಪಡೆದು, 2,700 ಶೇರ್ ಆಗಿ ವಿಷ್ಣು, ಭಾರತದ ಸ್ಪೈಡರ್ಮ್ಯಾನ್ ಅವತಾರಿ ಆಗಿದ್ದ.
ಹಾಗೆ ನೋಡಿದರೆ, ವಿಷ್ಣು ಸಾಮಾನ್ಯರಲ್ಲಿ ಸಾಮಾನ್ಯ ಫೋಟೋಗ್ರಾಫರ್ ಅಷ್ಟೇ. ವೆಡ್ಡಿಂಗ್ ಫೋಟೋಗ್ರಫಿಯನ್ನು ಈಗಷ್ಟೇ ಅರ್ಥಮಾಡಿಕೊಳ್ಳುತ್ತಿರುವ ಚಿಗುರು ಮೀಸೆಯ ಹೈದ. ಬಾಲ್ಯದಲ್ಲಿ ಮರ ಹತ್ತಿ ಹಣ್ಣು ಕೀಳುತ್ತಿದ್ದನಂತೆ ಆತ. ಮರಕೋತಿ ಆಡಿ, ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದನಂತೆ. ಬಾಲ್ಯದ ಆ ಕಲೆಯನ್ನೇ, ಫೋಟೋಗ್ರಫಿಯ ತಂತ್ರವಾಗಿಸಿ, ಮ್ಯಾಜಿಕ್ ಮಾಡಿಯೇಬಿಟ್ಟ.
ಇದರಿಂದ ನಾವು ಕಲಿಯುವುದು ಏನನ್ನು?
ಈ ವೆಡ್ಡಿಂಗ್ ಫೋಟೋಗ್ರಾಫರ್ ಮಾಡಿದ್ದು ಅಂಥ ದೊಡ್ಡ ಸಾಹಸವೇನೂ ಅಲ್ಲ. ತನ್ನ ಪುಟ್ಟ ಕೆಲಸವನ್ನು, ಚೊಕ್ಕವಾಗಿ, ಕ್ರಿಯೇಟಿವ್ ಆಗಿ ಮಾಡಿ ತೋರಿಸಿದ್ದನ್ನು ನಾವ್ಯಾರೂ ಕೇವಲವಾಗಿ ಕಾಣುವಂತೆಯೂ ಇಲ್ಲ. ಅಂದರೆ, ಸಾಧನೆ ಮಾಡಲು ನಾವು ಮಾಡುವ ಕೆಲಸ ಎಂಥದ್ದು ಎಂಬುದು ಮುಖ್ಯವಲ್ಲ ಎಂಬುದು ಇಲ್ಲಿ ಸ್ಪಷ್ಟ. ನಮ್ಮ ಕೈಯಲ್ಲಿ ದುಬಾರಿ ಉಪಕರಣಗಳೇ ಬೇಕು ಅಂತಲೂ ಇಲ್ಲ. ಮೆದುಳೆಂಬ ಮಹಾಉಪಕರಣವನ್ನು ಚೆನ್ನಾಗಿ ಬಳಸಿಕೊಳ್ಳುವ ಕಲೆ ಗೊತ್ತಿರಬೇಕು. ವಿಷ್ಣು ಅದನ್ನೇ ಇಲ್ಲಿ ಮಾಡಿದ್ದು.
ಕೆಲವು ಕೆಲಸ ಮಾಡುವಾಗ, ನಮ್ಮಗಳ ಬಡತನ ನೋಡಿ, ಅಕ್ಕಪಕ್ಕದವರು ನಗಬಹುದು. ಗೇಲಿ ಮಾಡಿ ಹಗುರವಾಗಿ ಕಾಣಬಹುದು. ಇಲ್ಲವೇ ಇವನ ಹಣೆಬರಹ ಇಷ್ಟೇ ಎಂದು ನಿರ್ಲಕ್ಷ್ಯವಾಗಿ ನೋಡಿಬಿಡಬಹುದು. ಅದಕ್ಕೆಲ್ಲ ತಲೆಕೆಡಿಸಿಕೊಂಡರೆ, ಈ ಮನುಷ್ಯ ಜನ್ಮದ ಅತ್ಯಮೂಲ್ಯ ಸಮಯ ವ್ಯರ್ಥವೇ ಆಗಿಹೋಗುತ್ತೆ. ಯಾವತ್ತೇ ಇದ್ದರೂ ನಿಮ್ಮನ್ನು ಕೈಹಿಡಿಯುವುದು ನಿಮ್ಮ ಕೆಲಸವೇ. ಅವರ ಬಾಯಿ ಮುಚ್ಚುವುದು ಕೂಡ ನೀವು ಮಾಡುವ ಕೆಲಸದ ಅದ್ಭುತ ಫಲಿತಾಂಶವೇ ಆಗಿರುತ್ತೆ. ಮೊದಲು ಕೆಲಸವನ್ನು ಎಂಜಾಯ್ ಮಾಡಿ, ನಂತರ ಅದರ ಮೋಡಿ ನೋಡಿ.
ಪುಟ್ಟ ಕೆಲಸದಲ್ಲೂ ಗ್ರೇಟ್ ಆಗೋದಂದ್ರೆ…
1. ಇದುವರೆಗೂ ಯಾರೂ ಯೋಚಿಸದೇ ಇರೋದನ್ನು ನೀವು ಯೋಚಿಸಿ.
2. ನಿಮ್ಮ ಆಲೋಚನೆಯು ಪ್ರತಿ ವ್ಯಕ್ತಿಗಳ ಭಾವನೆಯನ್ನು ಕನೆಕ್ಟ್ ಮಾಡುವ ಹಾಗಿರಲಿ.
3. ಹೈಫೈಯಾಗಿ ಬಿಂಬಿಸಿಕೊಳ್ಳದೇ, ಇದ್ದುದರಲ್ಲಿ ಮಾಡಿ ತೋರಿಸುವ ಛಾತಿ ಬೆಳೆಸಿಕೊಳ್ಳಿ.
4. “ಸಿಂಪ್ಲಿ ಲಿವಿಂಗ್, ಹೈ ಥಿಂಕಿಂಗ್’ ಎಂಬ ಹಳೇ ಮಾತಿಗೆ, ಬಂಗಾರದ ಚೆಲುವಿದೆ ಎಂಬುದು ಗೊತ್ತಿರಲಿ.
5. ಪ್ರಚಾರಕ್ಕಾಗಿ ಏನನ್ನೂ ಮಾಡಲು ಹೋಗಬೇಡಿ, ಸಮಾಜವೇ ನಿಮ್ಮನ್ನು ಗುರುತಿಸುವ ಹಾಗೆ ಕ್ರಿಯೇಟಿವ್ ಆಗಿ ಕೆಲಸ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ