ಕಾದಿರುವೆ ನಿನಗಾಗಿ ಬರುವೆಯಾ ಹಾಡಾಗಿ..?
Team Udayavani, Aug 21, 2018, 6:00 AM IST
ಇದು ಪ್ರೀತಿಯೋ, ಸ್ನೇಹವೋ ಅಥವಾ ಮಾಯೆಯೋ ನನಗೆ ಗೊತ್ತಿಲ್ಲ. ಆದಷ್ಟು ಬೇಗ ನಿನ್ನನ್ನು ನೋಡಬೇಕು, ನಿನ್ನ ಮಾತುಗಳನ್ನು ಕೇಳಬೇಕು ಎಂದು ಮನಸ್ಸು ಹಂಬಲಿಸುತ್ತಿದೆ. ಆ ದಿನಗಳು ಬೇಗ ಬರಲಿ.
ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹೊರಗೆ ಕಾಲಿಡಲೂ ಆಗುತ್ತಿಲ್ಲ. ಮನಸ್ಸಿಗೇಕೋ ಮಂಕು ಕವಿದಂತಾಗಿದೆ. ಕೆನ್ನೆಯ ಮೇಲೆ ಕೈಯೂರಿ ಕುಳಿತು, ತೊಟ್ಟಿಕ್ಕುವ ಮಳೆಯ ಹನಿಗಳನ್ನೇ ನೋಡುತ್ತಾ ಕುಳಿತಿದ್ದೆ. ಹೀಗಿದ್ದಾಗಲೇ ನನ್ನ ಕಣ್ಮುಂದೆ ಬಂದಿದ್ದು ನೀನು… ನಿನ್ನೊಂದಿಗೆ ಕಳೆದೆನಲ್ಲ; ಅವೆಲ್ಲಾ ಸುಂದರ ಬಾಲ್ಯದ ನೆನಪುಗಳು, ಜೊತೆ ಕಳೆದ ಸಮಯಗಳು, ಕೂಡಿ ಆಡಿದ ಆಟಗಳು… ಆ ನೆನಪೇ ಒಂದು ಮಧುರ ಭಾವಗೀತೆ. ಆದರೆ ಇಂದು ನೀನೆಲ್ಲೋ, ನಾನೆಲ್ಲೋ. ನನ್ನಿಂದ ಅದೆಷ್ಟೇ ದೂರವಿದ್ದರೂ ಕೂಡ, ನಿನ್ನ ನೆನಪುಗಳು ಆಗಾಗ ಬಂದು ಮನಸಿನ ಕದ ಬಡಿಯುತ್ತವೆ. ಅಂದು ಮಾವಿನ ಮರದಡಿ ಬಿದ್ದಿದ್ದ ಪಕ್ಷಿ ಯಾವುದೆಂದು ತಿಳಿಯಲು, ಅದನ್ನು ಕೋಲಿನಿಂದ ಆ ಕಡೆ ಈ ಕಡೆ ಹೊರಳಾಡಿಸಿ, ಅದು ಸತ್ತ ಕಾಗೆಯೆಂದು ತಿಳಿದಾಗ ಹೊಳೆಗೆ ಹೋಗಿ ತಲೆಯವರೆಗೂ ಮುಳುಗೆದ್ದು ಬಂದಿದ್ದೆ ನೋಡು; ಅದನ್ನಂತೂ ನನ್ನಿಂದ ಮರೆಯಲು ಸಾಧ್ಯವೇ ಇಲ್ಲ.
ಹೇಗಿದ್ದೀಯಾ ನೀನು? ನನ್ನ ನೆನಪಿದೆಯಾ? ಇಂದಲ್ಲಾ ನಾಳೆ ನಿನ್ನನ್ನು ನೋಡುತ್ತೇನೆ ಎಂಬ ಭರವಸೆ ನನಗಿದೆ. ನಿನಗೂ ಹಾಗನ್ನಿಸಿರಬಹುದು ಅಂತ ಮನಸು ಹೇಳುತ್ತಿದೆ. ಒಂಟಿಯಾಗಿ ಕುಳಿತಾಗಲೆಲ್ಲಾ ಕಣ್ಮುಂದೆ ಬರುವುದು ನಿನ್ನ ನೆನಪುಗಳೇ. ಅದು ಯಾಕೆಂದು ನಾನರಿಯೆ. ಮನದಲ್ಲಿ ಮರೆಯಾಗಿ ಕುಳಿತ ನಿನ್ನ ನೆನಪುಗಳು ಎಂದೂ ಅಳಿಸಿ ಹೋಗುವುದಿಲ್ಲ.
ದಿನದಿಂದ ದಿನಕ್ಕೆ ಮನಸು ನಿನ್ನದೇ ನೆನಪುಗಳೊಂದಿಗೆ ಚಿಗುರುತ್ತಿದೆ. ಕನಸಲ್ಲಿ ಅದೆಷ್ಟು ಬಾರಿ ಬಂದಿರುವೆಯೋ ಲೆಕ್ಕವೇ ಇಲ್ಲ. ಆದರೆ ಕಣ್ಮುಂದೆ ಮಾತ್ರ ಗೋಚರವಾಗುತ್ತಿಲ್ಲ. ಯಾಕೆ ಹಾಗೆ ಕಾಡುತ್ತಿರುವೆ? ಇದಕ್ಕೆಲ್ಲಾ ಉತ್ತರ ಸಿಗುವುದು ಯಾವಾಗ? ಕೆಲವೊಮ್ಮೆ ನಿನ್ನ ನೆನೆಯುತ್ತಾ ಮಂಕಾಗಿ ಕುಳಿತು ಗೆಳತಿಯರೆದುರು ಅವಮಾನವಾಗಿದೆ. ಕ್ಲಾಸಲ್ಲಿ ಲೆಕ್ಚರರ್ ಪಾಠ ಮಾಡುತ್ತಿರುವಾಗಲೂ ನಿನ್ನದೇ ಲೋಕದಲ್ಲಿ ಮುಳುಗಿರುತ್ತೇನೆ. ಇತ್ತೀಚೆಗಂತೂ ನಿನ್ನ ನೆನಪುಗಳ ಕಾಡುವಿಕೆಯಿಂದ ನಿದ್ದೆಗೂ ಕೊರತೆ ಬಂದಿದೆ. ದಿನದ ಕೆಲಸಗಳೂ ಸಾಗುತ್ತಿಲ್ಲ.
ಇದು ಪ್ರೀತಿಯೋ, ಸ್ನೇಹವೋ ಅಥವಾ ಮಾಯೆಯೋ ನನಗೆ ಗೊತ್ತಿಲ್ಲ. ಆದಷ್ಟು ಬೇಗ ನಿನ್ನನ್ನು ನೋಡಬೇಕು, ನಿನ್ನ ಮಾತುಗಳನ್ನು ಕೇಳಬೇಕು ಎಂದು ಮನಸ್ಸು ಹಂಬಲಿಸುತ್ತಿದೆ. ಆ ದಿನಗಳು ಬೇಗ ಬರಲಿ. ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಿರುವ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಬೇಕೆಂದರೆ ನೀನೇ ಬರಬೇಕು. ಇಷ್ಟು ದಿನ ಕಾಯಿಸಿರುವುದೇ ಸಾಕು. ನನ್ನ ಮನಸ್ಸಿನ ಈ ಮಾತುಗಳನ್ನಾದರೂ ಕೇಳಿ ಆದಷ್ಟು ಬೇಗ ಬಂದು, ನನ್ನ ಗೊಂದಲಗಳಿಗೆ, ಪ್ರಶ್ನೆಗಳಿಗೆ ಉತ್ತರ ನೀಡುವೆಯಾ?
ಇಂತಿ
ನಿನಗಾಗಿ ಕಾಯುತ ಕುಳಿತಿರುವ
ಗೀತಾ ಕೆ ಬೈಲಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ