ಚಹಾ ಮಾರುವವ ಮೋಸ ಮಾಡುವುದಿಲ್ಲ!
Team Udayavani, Nov 13, 2018, 6:00 AM IST
ನಾನು ನಿತ್ಯವೂ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಓಡಾಡುತ್ತೇನೆ. ಎಂದಿನಂತೆ ಅವತ್ತೂ ಮೈಸೂರಿನ ಸ್ಟೇಶನ್ನಿನಲ್ಲಿ ಇಳಿದಿದ್ದೆ. ನನ್ನ ಆಫೀಸಿಗೆ ಆಟೋದಲ್ಲಿ ಹೊರಟೆ. ಕಚೇರಿಯೆದುರು ಆಟೋ ನಿಂತಾಗ, ಡ್ರೈವರ್ಗೆ ಕಾಸು ಕೊಡಲು, ಜೇಬಿಗೆ ಕೈಹಾಕಿದೆ. ಪರ್ಶೇ ಕಾಣಿಸಲಿಲ್ಲ! ಅಯ್ಯೋ, ಯಾರೋ ಪಿಕ್ಪಾಕೆಟ್ ಮಾಡಿದ್ದಾರೆ ಅಂತ ಅನ್ನಿಸಿ, ಗಾಬರಿಬಿದ್ದೆ. ಅದರೊಳಗೆ 3 ಸಾವಿರ ರೂ. ಹಣವಿತ್ತು. ಮಿಗಿಲಾಗಿ, ಆರೇಳು ಕಾರ್ಡ್ಗಳಿದ್ದವು. ಯಾರಾದರೂ ಸ್ವೆ„ಪ್ ಮಾಡಿಬಿಟ್ಟರೆ ಕಷ್ಟವೆಂದು, ಕೂಡಲೇ ಎಲ್ಲವನ್ನೂ ಬ್ಲಾಕ್ ಮಾಡಿದೆ. ಯಾವುದಕ್ಕೂ ಇರಲಿಯೆಂದು, ರೈಲ್ವೆ ಪೊಲೀಸರಿಗೆ ದೂರನ್ನೂ ಕೊಟ್ಟೆ. ಅವತ್ತು ಇಡೀ ದಿನ ನಿದ್ದೆಯೇ ಬರಲಿಲ್ಲ.
ಮರುದಿನ ಬೇಸರದಲ್ಲಿ ಮತ್ತೆ ಅದೇ ಟ್ರೈನ್ ಹತ್ತಿದ್ದೆ. ಸುತ್ತ ನೋಡಿದಾಗ, ಅಲ್ಲಿ ಎಲ್ಲರೂ ಕಳ್ಳರ ಹಾಗೆಯೇ ಕಾಣಿಸುತ್ತಿದ್ದರು. ಒಂದು ತಾಸು ಆದ ಮೇಲೆ, ಅಲ್ಲೊಬ್ಬ ಚಹಾ ಮಾರುವನು ನನ್ನನ್ನೇ ಬಹಳ ಹೊತ್ತಿನಿಂದ ನೋಡುತ್ತಿರುವುದು ಗಮನಕ್ಕೆ ಬಂತು. ಪರ್ಸ್ ಕದ್ದ ಕದೀಮ ಅವನೇ ಇದ್ದಿರಬೇಕೆಂಬ ಶಂಕೆಯೊಂದು ನನ್ನೊಳಗೆ ಹುಟ್ಟಿತು. ನಾನೂ ದಿಟ್ಟಿಸಿದೆ. ಯಾಕೋ ಅವನು ನನ್ನ ಬಳಿ ಬಂದು, ಒಂದು ಕಪ್ ಚಹಾವನ್ನು ನನ್ನ ಕೈಗಿಟ್ಟ. “ನೀವು ರವೀಶ್ ಅಲ್ವಾ?’ ಅಂದ. ಅರೇ! ಇವನಿಗೆ ನನ್ನ ಹೆಸರು ಹೇಗೆ ಗೊತ್ತಾಯ್ತು? ಈತ ನನ್ನ ಪರ್ಸ್ ಕದ್ದಿದ್ದು ಪಕ್ಕಾ ಅಂತ ಮತ್ತೆ ನನ್ನೊಳಗೆ ಶಂಕೆಯ ಸುಂಟರಗಾಳಿ ಎದ್ದಿತು. ಕೋಪವೂ ಬಂತು. ಆದರೆ, ಅದನ್ನು ತೋರ್ಪಡಿಸದೇ, ತುಸು ಸಮಾಧಾನದಿಂದ, “ಹೌದಪ್ಪಾ, ನಾನೇ ರವೀಶ. ನಾನ್ಹೆàಗೆ ನಿನಗೆ ಪರಿಚಯ?’ ಎಂದು ಕೇಳಿದೆ. “ಏನಿಲ್ಲ, ನಿನ್ನೆ ನೀವು ರೈಲಿನಿಂದ ಇಳಿಯುವಾಗ, ನಿಮ್ಮ ಪರ್ಸ್ ಕೆಳಕ್ಕೆ ಬಿತ್ತು. ಆ ರಶ್ಶಿನಲ್ಲಿ ಯಾರು ಪರ್ಸ್ ಬೀಳಿಸಿಕೊಂಡಿದ್ದು ಅಂತ ಕೇಳಿದೆ, ಯಾರಿಂದಲೂ ಉತ್ತರ ಬರಲಿಲ್ಲ. ಅದರಲ್ಲಿದ್ದ ಫೋಟೋ ನೋಡಿ, ಪರಿಚಯದ ಮುಖ ಅಂತನ್ನಿಸಿತು. ನಿತ್ಯವೂ ನೀವು ರೈಲಿನಲ್ಲಿ ಬರುವುದನ್ನು ಕಂಡಿದ್ದೆ. ಅದಕ್ಕಾಗಿ ಈ ಪರ್ಸನ್ನು ನಾನೇ ಇಟ್ಟುಕೊಂಡೆ. ಸದ್ಯ ಸಿಕ್ಕಿದರಲ್ಲ ಸರ್, ತಗೊಳ್ಳಿ ನಿಮ್ಮ ಪರ್ಸು…’ ಅಂದ ಆತ.
ನನಗೆ ಅವನ ಮಾತನ್ನು ಕೇಳಿದ ಆದ ಖುಷಿ, ಅಷ್ಟಿಷ್ಟಲ್ಲ. ಈ ಕಾಲದಲ್ಲಿ ಇಂಥವರೂ ಇರ್ತಾರಾ ಅಂತನ್ನಿಸಿತು. ಪರ್ಸ್ ಓಪನ್ ಮಾಡಿದಾಗ, ಅದರಲ್ಲಿ ಎಲ್ಲವೂ ಸರಿಯಾಗಿತ್ತು. 500 ರೂ. ನೋಟನ್ನು ಅವನ ಕೈಗಿಡಲು ಹೋದೆ. ಅವನು ನಿರಾಕರಿಸಿದ. “ಏನಪ್ಪಾ, ಪರ್ಸ್ನಲ್ಲಿ ಇಷ್ಟೆಲ್ಲ ಹಣವಿದ್ದರೂ, ಹೀಗೆ ಪ್ರಮಾಣಿಕವಾಗಿ ಕೊಟ್ಟೆಯಲ್ಲ, ಗ್ರೇಟ್ ನೀನು’ ಅಂದೆ. “ಇಲ್ಲಾ ಸರ್… ಚಹಾ ಮಾರುವವರು ಯಾವತ್ತೂ ಮೋಸ ಮಾಡುವುದಿಲ್ಲ’ ಎಂದ!
ರವೀಶ್ ಚಂದ್ರ ಎನ್.