ಇನ್ನೇಕೆ ಈ ಮೌನ ಕರೆದರೂ ಕೇಳದೆ…
Team Udayavani, Nov 13, 2018, 6:00 AM IST
“ಕಾಫಿಗೆ ಬರ್ತೀರಾ?’ ಅಂತ ನೀನು ಕರೆದಿದ್ದೆ. ನಮ್ಮಿಬ್ಬರ ಭಾವನೆಗಳು ಬದಲಾಗಿದ್ದು ಅವತ್ತೇ ಇರಬೇಕು. ಅಂದು ಕಾಫಿ ಹೀರುತ್ತಾ, ನಂನಮ್ಮ ಬದುಕಿನ ಭೂತ, ವರ್ತಮಾನ, ಭವಿಷ್ಯದ ಚರ್ಚೆ ಸಾಗಿತ್ತು.
ನಿಂಗೂ ಗೊತ್ತಿದೆ.. ನಮ್ಮಿಬ್ಬರ ಕಾಡಾಟ ಪ್ರೀತಿಯೆಂದು.. ಆದರೂ ಅದನ್ನೊಪ್ಪಿಕೊಳ್ಳಲು ಇಬ್ಬರ ಮನಸ್ಸೂ ಸಿದ್ಧವಿಲ್ಲ. ಇಬ್ಬರಿಗೂ ಇಗೋ ಸಮಸ್ಯೆಯಾ? ಇಲ್ಲ, ಮತ್ತೆ? ನಾಚಿಕೆಯಾ..ಅದೂ ಅಲ್ಲ. ಮತ್ತೇನು ಸಮಸ್ಯೆ ಪ್ರೀತಿ ಹೇಳಿಕೊಳ್ಳಲು ಅಂತ ಇಬ್ಬರಿಗೂ ತಿಳಿಯದು. ಎದುರು ಸಿಕ್ಕಾಗ ಮಾತಿಲ್ಲ, ಕಥೆಯಿಲ್ಲ. ಸಂಭಾಷಣೆಯೆಲ್ಲಾ ವಾಟ್ಸಾಪ್ನಲ್ಲಿ ಮಾತ್ರ. ಕರೆಗೆ ಕಿವಿಯಾಗಿಸಿದರೆ ಮೌನದ ರಿಂಗ್ಟೋನ್.
ಯಾವುದೋ ಕೆಲಸದ ಮಧ್ಯದಲ್ಲಿದ್ದಾಗ ಎದುರಿಗೆ ಧುತ್ತೆಂದು ಪ್ರತ್ಯಕ್ಷನಾದವನು ನೀನು. ಅಂದು ಯಾವುದೇ ಭಾವನೆಗಳಿಲ್ಲದೆ ಹತ್ತಿರ ಬಂದವನು ಫೋನ್ ನಂಬರ್ ಬೇಕೆಂದು ಕೇಳಿದ್ದೆ. ನಂತರ ಒಂದೆರೆಡು ತಿಂಗಳು ಕೆಲಸವಿದ್ದರಷ್ಟೇ ಕರೆ, ಸಂದೇಶ.. ನೆಪಕ್ಕಾದರೂ ಊಟ ಆಯಿತೆ? ಗುಡ್ ಮಾರ್ನಿಂಗ್, ಗುಡ್ ನೈಟ್ ಎಂಬ ಯಾವ ಮಾತುಗಳೂ ನಮ್ಮಿಬ್ಬರಲ್ಲಿ ಇರಲಿಲ್ಲ. ಆದರೆ, ಒಂದು ದಿನ ನನ್ನ ವಾಟ್ಸಪ್ ಸ್ಟೇಟಸ್ ಬಗ್ಗೆ ನೀನಾಗಿಯೇ ಮೆಸೇಜ್ ಮಾಡಿದ್ದೆ. ಅವತ್ತೇ ನಮ್ಮಿಬ್ಬರ ನಡುವೆ ನಿಜವಾದ ಸಂಭಾಷಣೆ ಶುರುವಾಗಿತ್ತು.
ಒಂದು ಸಂಜೆ ಮಳೆ ಸುರಿಯುತ್ತಿತ್ತು. “ಕಾಫಿಗೆ ಬರ್ತೀರಾ?’ ಅಂತ ನೀನು ಕರೆದಿದ್ದೆ. ನಮ್ಮಿಬ್ಬರ ಭಾವನೆಗಳು ಬದಲಾಗಿದ್ದು ಅವತ್ತೇ ಇರಬೇಕು. ಅಂದು ಕಾಫಿ ಹೀರುತ್ತಾ, ನಂನಮ್ಮ ಬದುಕಿನ ಭೂತ, ವರ್ತಮಾನ, ಭವಿಷ್ಯದ ಚರ್ಚೆ ಸಾಗಿತ್ತು. ಹೀಗೆ ಆಪ್ತವಾಗುತ್ತ ಬಂದ ನೀನು ಅಂತರಾತ್ಮದಲ್ಲಿ ಕುಳಿತಿದ್ದು ಯಾವಾಗ ಎಂದು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ!
ಅದಾದ ಮೇಲೆಯೂ ನಾವಿಬ್ಬರೂ ದಿನಾ ಮೆಸೇಜ್, ಫೋನ್ ಮಾಡಿಕೊಳ್ಳುತ್ತಿರಲಿಲ್ಲ. ವಾರಕ್ಕೊಂದು ಮಾತು, ಮೂರು ದಿನಕ್ಕೊಂದು “ಹಾಯ್, ಹಲೋ’ ರವಾನೆಯಾಗುತ್ತಿತ್ತು. ಒಮ್ಮೆ ಅದ್ಯಾವುದೊ ಹಿಂದಿ ಸಿನಿಮಾಕ್ಕೆ ಹೋದಾಗಲೂ ನಮ್ಮ ಭಾವನೆಗಳು ಪ್ರಕಟವಾಗಲೇ ಇಲ್ಲ. ಕಂಡೂ ಕಾಣದಂತಿರುವ, ಇದ್ದೂ ಇಲ್ಲದಂತಿರುವ ಪ್ರೀತಿಯನ್ನು ನಿನ್ನೆದುರು ಹೇಳಲು ಭಯವಾಗುತ್ತದೆ. ನನಗೂ ಗೊತ್ತಿದೆ, ನಿನಗೂ ಹೇಳಲು ಏನೋ ಹಿಂಜರಿಕೆ ಎಂದು..
ನಾಳೆ ಹುಡುಗ ನೋಡಲು ಬರುತ್ತಿದ್ದಾನೆ ಎಂದು ನಾನು ಹೇಳಿದರೆ ಸಾಕು; ನಿನಗೆ ಸಿಟ್ಟು ಬರುತ್ತದೆ. ನನಗೂ ಅಷ್ಟೇ ಬಿಡು.. ನೀನು ಅವಳಾರನ್ನೋ ನೋಡಲು ಹೋಗುತ್ತೀಯ ಎಂದು ತಿಳಿದರೆ ಹೊಟ್ಟೆಯಲ್ಲಿ ಸಂಕಟ. ಹೇಳುವಂತಿಲ್ಲ ಬಿಡುವಂತಿಲ್ಲ. ಇಂಥ ಫಜೀತಿ ಬೇಕೇನೋ ಮಾರಾಯ?
ನೀನು “ಐ ಲವ್ ಯು’ ಅಂತ ಹೇಳುವುದಿಲ್ಲ, ನನಗೆ ಹೇಳಿಕೊಳ್ಳಲು ಹೆಣ್ಣೆಂಬ ನಾಚಿಕೆ.. ಕಾಡುವುದು, ಕಾಯಿಸುವುದು ಸಲೀಸು ನಿನಗೆ. ನಿನ್ನ ಕಾಡಾಟ ನಂಗೂ ಇಷ್ಟವೇ. ಆದರೆ, ಎಷ್ಟು ದಿನ ಅಂತ ಕಾಯೋದು? ಒಂದು ದಿನ ನಾನೊಂದು ಪ್ರೀತಿಯ ಸಂದೇಶವನ್ನು ಕಳುಹಿಸಿಯೇ ಬಿಟ್ಟೆ. ನೀನು ಅದನ್ನೂ ತಮಾಷೆಯೆಂದು ತಿಳಿದು ನಕ್ಕುಬಿಟ್ಟೆ. ಇನ್ನೇನು ಮಾಡುವುದು? ನಾನು ಕೂಡ ತಮಾಷೆ ಮಾಡಿದವಳಂತೆ ನಕ್ಕು ಸುಮ್ಮನಾದೆ. ನಮ್ಮಿಬ್ಬರ ನಡುವೆ ಅತಿಯಾಗಿರುವ ಇಂತಹ ತಮಾಷೆಯೇ ಪರಸ್ಪರ ಪ್ರೀತಿ ವ್ಯಕ್ತಪಡಿಸಲು ಅಡ್ಡವಾಗಿದೆಯಾ?
ಇದ್ದರೂ ಇಲ್ಲಂದಂತಿದ್ದ ಕಳ್ಳಾಟದ ಭಾವನೆಗಳ ಮೇಲೆ ಯಾರ ಕಣ್ಣು ಬಿತ್ತೋ ಮಾರಾಯ, ತುಸುವಿದ್ದ ಕೋಪ ಅತಿಯಾಗಿ, ಇಬ್ಬರ ನಡುವೆ ಜಗಳವಾಗಿ, ನಮ್ಮ ದಾರಿ ನಮಗೆ ಅಂತ ಹೊರಟೆವು. ನಿನ್ನಿಂದ ಸಕಲೇಶಪುರದ ಘಾಟಿ ದಾರಿ ಕಂಡುಕೊಳ್ಳಲು ಸಾಧ್ಯವಾಯಿತು. ಆದರೆ ನನ್ನಿಂದ? ಇಲ್ಲ ಆಗಲಿಲ್ಲ. ಆ 31 ಗಂಟೆಗಳ ನಿನ್ನ ಮೌನ ತಡೆದುಕೊಳ್ಳಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಮನಸ್ಸು ತಡೆಯಲಿಲ್ಲ. ನೀನು ನಮ್ಮೂರಾದ ಮೂಡಿಗೆರೆಗೆ ಹೋಗಿದೀಯ ಅನ್ನುವುದನ್ನೇ ನೆಪವಾಗಿಟ್ಟುಕೊಂಡು ಕರೆ ಮಾಡಿದೆ. ಅವತ್ತು ನಾನು ಕ್ಷಮೆ ಕೇಳಬೇಕೆಂದು ಫೋನಾಯಿಸಿದೆ, ನೀನು ಬೈಯ್ಯಲು ಸಿದ್ಧನಾಗಿ, ಕರೆ ತುಂಡರಿಸಿದೆ. ಮತ್ತೆ ನಿನ್ನಿಂದಲೇ ಕರೆ ಬರುವವರೆಗೂ ಕಾದೆ.. ಕಡೆಗೂ ಬಂತು, ಆ ನಿನ್ನ ಬೈಗುಳದ ಗುಡುಗಿನ ಕರೆ.. ನೀನು ಬೈದಾಗಲೇ ತಿಳಿದಿದ್ದು, ನಿನ್ನ ಅಂತರ್ಯದಲ್ಲಿ ನಾನು ಬರೀ ಸ್ನೇಹಿತೆಯಾಗಿ ಉಳಿದಿಲ್ಲವೆಂದು.. ಆದರೆ ಅದನ್ನು ಸ್ಪಷ್ಟವಾಗಿ ಹೇಳದ ನಿನ್ನನ್ನು ನೆನಪಿಸಿಕೊಂಡ್ರೆ ಈಗಲೂ ನಗು ಬರುತ್ತಿದೆ.. ಸಾಕು ಈ ಕಾಡಾಟ, ಕಾದಾಟ.. ಮುಗಿಸಿಬಿಡುವ.. ಮತ್ತೆ ಶುರುಮಾಡುವ ಪ್ರೇಮಿಗಳಾಗಿ ಆ ಎಲ್ಲ ತರಲೆ ತುಂಟಾಟಗಳನ್ನು..
ಇಂತಿ ನಿನ್ನ
ಶ್ರುತಿ ಮಲೆನಾಡತಿ