ನೀನು ಕೃಷ್ಣನಾದರೂ ನಾನು ರಾಧೆಯಲ್ಲ!
Team Udayavani, Dec 11, 2018, 11:55 AM IST
ನವಿಲಿಗೆ ನಾಟ್ಯ ಚಂದ
ಹಣೆಗೆ ಬೊಟ್ಟು ಚಂದ,
ಸರೋವರಕ್ಕೆ ತಾವರೆ ಚಂದ
ನನಗೆ ನೀನೇ ಚಂದ …..
ಮಕರ ಸಂಕ್ರಾಂತಿಯ ಶುಭಾಶಯಗಳು
ಅಂತ ಬರೆದಿದ್ದ ಗ್ರೀಟಿಂಗ್ ಕಾರ್ಡ್ ನನ್ನ ಡೆಸ್ಕಿನ ಒಳಗೆ ಸಿಕ್ಕಿದಾಗ ಮನದೊಳಗೆ ನೂರಾರು ಭಾವ. ಇದನ್ನು ಯಾರು ಬರೆದಿರಬಹುದು? ಎಷ್ಟು ದಿನದಿಂದ ನನ್ನ ಗಮನಿಸುತ್ತಿದ್ದವೋ ಆ ಕಣ್ಣುಗಳು? ಪೆದ್ದಿಯಾದ ನನಗ್ಯಾಕೆ ಅದು ಕಾಣಿಸಲಿಲ್ಲ? ಯಾರಿರಬಹುದು ಈ ಹುಡುಗ? ಅಂತೆಲ್ಲಾ ಯೋಚಿಸಿ ಕುತೂಹಲ ಹೆಚ್ಚಿತು.ಇಷ್ಟು ದಿನ ಹತೋಟಿಯಲ್ಲಿದ್ದ ಮನಸ್ಸು ಕೈ ತಪ್ಪುತ್ತಿದೆಯಾ ಅಂತ ದಿಗಿಲೂ ಆಯ್ತು.
ಕಳೆದ ವರ್ಷ, ಸಂಕ್ರಾಂತಿಯ ಮರುದಿನ ಚೆಂದದ ಡಬ್ಬದಲ್ಲಿ ಸಂಕ್ರಾಂತಿ ಕಾಳು ತುಂಬಿ, ಅಮ್ಮ ಹೊಲಿದಿದ್ದ ಹೊಸ ಲಂಗಾ-ದಾವಣಿ ತೊಟ್ಟು ಕಾಲೇಜಿಗೆ ಬಂದಿದ್ದೆ. ಎಲ್ಲಾ ಕ್ಲಾಸಿಗೂ ತೆರಳಿ, ಎಲ್ಲರಿಗೂ ಸಂಕ್ರಾಂತಿಯ ಶುಭಾಶಯ ಕೋರಿ, ಎಳ್ಳು ಬೀರಿ ಕ್ಲಾಸ್ಗೆ ಬಂದು ಕುಳಿತೆ. ಬ್ಯಾಗ್ ತೆರೆಯಲು ನೋಡಿದಾಗ, ಪಿಂಕ್ ಕಲರ್ನ ಕಾರ್ಡ್ ಒಂದು ಡೆಸ್ಕ್ನ ಮೇಲೆ ಬೆಚ್ಚಗೆ ಮಲಗಿತ್ತು. ಹೆದರಿಕೆಯಲ್ಲೇ ಅದನ್ನು ಬ್ಯಾಗೊಳಗೆ ಸೇರಿಸಿ, ಏನೂ ಆಗೇ ಇಲ್ಲದವಳಂತೆ ದಿನ ಕಳೆದೆ.
ಸಂಜೆ ಮನೆಗೆ ಹೋಗುವಾಗ ದಾರಿಯಲ್ಲಿ ನೀನು ಸಿಕ್ಕಿ, “ಹಾಯ್, ಮೀನಿನ ಕಣ್ಣವಳೇ, ಹೇಗಿದೆ ಗ್ರೀಟಿಂಗ್ ಕಾರ್ಡ್?’ ಅಂದಾಗಲೇ ಗೊತ್ತಾಗಿದ್ದು, ಅದು ನೀನೇ ಕೊಟ್ಟಿದ್ದು ಅಂತ. ನಾನೂ ಈಗ ಪ್ರೀತಿಯಲ್ಲಿ ಬೀಳಬೇಕು, ನನಗೂ ಒಬ್ಬ ಗೆಳೆಯ ಬೇಕು… ಅಂತ ಮನಸ್ಸು ಒಳಗೊಳಗೇ ಹಾಡಿಕೊಳ್ಳುತ್ತಿತ್ತು. ಒಂಟಿ ಪಯಣ ಸಾಕಾಗಿತ್ತು. ಒಂಟಿ ಕನಸುಗಳಿಗೂ ಜೊತೆ ಬೇಕೆನಿಸಿತ್ತು. ಹೃದಯದ ಕವಾಟದಲ್ಲೂ ಸ್ವಲ್ಪ ಜಾಗ ಖಾಲಿ ಇತ್ತು…
ನಿನ್ನ ಕಾರ್ಡ್ ನೋಡಿದ ಮೇಲೆ, ಸ್ವತ್ಛಂದವಾಗಿ ಹರಿಯುತ್ತಿದ್ದ ಭಾವನೆಗಳ ಯಾರೋ ದಿಕ್ಕು ತಪ್ಪಿಸಿದ ಅನುಭವ. ಹಿಂದೆ ಮುಂದೆ ಯೋಚಿಸದೇ ನಿನ್ನನ್ನು ಮನಸ್ಸಿನೊಳಗೆ ಆಹ್ವಾನಿಸಿಬಿಟ್ಟೆ. ಮುಂದಿನದು ದೇವರಿಗೆ ಬಿಟ್ಟಿದ್ದಾಗಿತ್ತು. ಒಂದು ವರ್ಷವಾಗುತ್ತಾ ಬಂತಲ್ಲ, ಇದೆಲ್ಲಾ ನಡೆದು ಹೋಗಿ. ಈಗೀಗ ನಿನ್ನ ಯೋಚನೆಗಳಲ್ಲಿ ದಿನ ಕಳೆದದ್ದೇ ಗೊತ್ತಾಗಿಲ್ಲ. ನೀನು ಕೂಡ, “ಬಾರಹ ಮಹೀನೆ ಮೇ ಬಾರಹ ತರೀಕೆ ಸೆ ತುಜೆ ಪ್ಯಾರ್ ಕರೂಂಗಾ’ ಅಂತ ಪಣ ತೊಟ್ಟಿದ್ದೆ.
ನನ್ನ ಹೆಸರ ಹೇಳದೇ, ಮೀನಿನ ಕಣ್ಣವಳೇ ಅಂತ ಕರೆವ ಪರಿಯಿಂದ ಹಿಡಿದು, ನೀನು ಕೊಟ್ಟ ಮೊದಲ ಗ್ರೀಟಿಂಗ್ ಕಾರ್ಡ್, ಆ ನವಿಲುಗರಿ, ಕಿವಿಯ ಝುಮುಕಿ, ಅಷ್ಟೇ ಅಲ್ಲ; ನೀ ಕೊಡಿಸಿದ ಸಣ್ಣ ಚಾಕಲೇಟ್ನ ಕವರ್ ಕೂಡಾ ಬೀರುವಿನಲ್ಲಿ ಭದ್ರವಾಗಿ ಎತ್ತಿಟ್ಟಿದ್ದೇನೆ. ಆದರೆ, ಮೊನ್ನೆ ನನಗೊಂದು ಆಘಾತಕಾರಿ ವಿಷಯ ಗೊತ್ತಾಯಿತು. ಸ್ನೇಹಿತೆಗೆ ಕೊಟ್ಟ ನೋಟ್ಬುಕ್ನಲ್ಲಿ ನೀನು ಕೊಟ್ಟಿದ್ದ ಆ ಗ್ರೀಟಿಂಗ್ಸ್ ಇಟ್ಟಿದ್ದೆ. ಇಷ್ಟು ದಿನ ಮುಚ್ಚಿಟ್ಟ ಪ್ರೀತಿ ಅವಳಿಗೂ ಗೊತ್ತಾಗಿಬಿಟ್ಟಿತು.
ಅವಳು ಹೇಳಿದ್ದನ್ನು ಕೇಳಿ, ನಿಂತ ನೆಲ ಕುಸಿದಂತಾಯ್ತು. “ಓಹೋ ಇವನಾ ನಿನ್ನ ಹೀರೋ? ಲೇ ಪೆದ್ದಿ, ನಿನ್ನ ಥರಾ ಅದೆಷ್ಟು ಜನರನ್ನು ಬಕರಾ ಮಾಡಿದ್ದಾನೋ ಅವನು. ನನಗೂ ಹೀಗೆ ಬರೆದು ಕೊಟ್ಟಿದ್ದ. ಅವನಿಗೆ ವರ್ಷವಿಡೀ ಮತ್ತೇನು ಕೆಲಸ. ಒಂದೇ ಕವನವನ್ನು ಎಲ್ಲರಿಗೂ ಬರೀತಾನೆ. ನಾನು ಆ ಕಾರ್ಡ್ನ ವಾಪಸ್ ಅವನ ಮುಖದ ಮೇಲೆ ಎಸೆದಿದ್ದೆ. ಅದನ್ನೇ ಎತ್ತಿ ಜೂನಿಯರ್ ಒಬ್ಬಳಿಗೆ ಕೊಟ್ಟಿದ್ದಾನಂತೆ. ನೀನಿನ್ನೂ ಅದನ್ನು ಇಟ್ಕೊಂಡು ಪೂಜೆ ಮಾಡ್ತಿದ್ದೀಯಲ್ಲ?’ ಅಂದಾಗ ಕುಸಿದುಬಿದ್ದಿದ್ದೆ.
ಹೋಗಿ ಹೋಗಿ, ಕೃಷ್ಣನ ತುಳಸಿಯಾದೆನಾ ನಾನು? ನಿನ್ನಿಂದ ಮೋಸಕ್ಕಿಂತ ನನಗೆ ಅಪಮಾನವಾಗಿದೆ. ನನ್ನನ್ನು ಅಪಮಾನಿಸಿದವರನ್ನು ನಾನು ಸುಮ್ಮನೆ ಬಿಡೋದಿಲ್ಲ. ಏನ್ ಮಾಡ್ತೀನಿ ಅಂತ ನೋಡ್ತಾ ಇರು. “ಪ್ಲೀಸ್, ಬದಲಾಗು’ ಅಂತ ಬೇಡಿಕೊಳ್ಳೋದಿಕ್ಕೆ ನಾನು ಪತ್ರ ಬರೆದಿದ್ದೇನೆ ಅಂತ ಒಕ್ಕಣೆ ನೋಡಿ ಭಾವಿಸಬೇಡ. ಯಾವುದನ್ನೂ ನಾನು ಮರೆತಿಲ್ಲ ಅಂತ ಹೇಳ್ಳೋದಿಕ್ಕೆ ಅಷ್ಟೆಲ್ಲಾ ಬರೆದಿದ್ದು. ಇನ್ಯಾವತ್ತೂ ನನ್ನ ಮುಖ ನೋಡಬೇಡ.
ಇಂತಿ
ಅಂಜನಾ ಗಾಂವ್ಕರ್, ದಬ್ಬೆಸಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ