ನೆನಪೆಂಬ ಮುಳ್ಳಿನಿಂದ ಹೃದಯಕ್ಕೆ ಚುಚ್ಚಿಬಿಟ್ಟೆ…
Team Udayavani, Jan 22, 2019, 3:23 AM IST
ನಾನು ಯಾರನ್ನೂ ಸುಮ್ಮನೆ ದೂರ ಮಾಡಿಕೊಳ್ಳುವವಳಲ್ಲ. ಆದರೆ, ನೀನು ನನ್ನಿಂದ ತುಂಬಾ ದೂರ ಹೋಗಿಬಿಟ್ಟಿದ್ದೀಯ. ಸುಮ್ಮನೆ ಹೋಗಲಿಲ್ಲ, ಕಾಯ್ತಾ ಇರು ಬರಿನಿ ಅಂತ ಸುಳ್ಳು ಹೇಳಿ ದೂರ ಹೋಗಿಬಿಟ್ಟೆ.
ಇಂದಲ್ಲ ನಾಳೆ ನೀನು ಬಂದೇ ಬರ್ತೀಯ, ನನ್ನ ಕರೆದುಕೊಂಡು ಹೋಗ್ತಿಯ ಅಂತ ನಿನ್ನನ್ನೇ ಎದುರು ನೋಡುತ್ತಿದ್ದ ನನ್ನ ಅಳಲನ್ನು ತಿರುಗಿಯೂ ನೋಡದೆ, ನಮ್ಮ ಪ್ರೀತಿಗೆ ಮಸಣದ ಹಾದಿ ತೋರಿಸಿಬಿಟ್ಟೆ ನೀನು. ನನ್ನ ಅಂತರಾಳದ ಭಾವನೆಗಳಿಗೆ ಬರಹ ರೂಪ ನೀಡಿ ನಿನಗೆ ತಿಳಿಸಲು ಪ್ರಯತ್ನಿಸಿದೆ. ಆದರೆ ಅದು ಕೇವಲ ನಿನ್ ಕಣ್ ತಲುಪಿತೇ ಹೊರತು ಮನಸ್ಸನ್ನು ತಟ್ಟಲಿಲ್ಲ.
ನಿನ್ನನ್ನು ನಂಬಿ ಕೂತ ಹೃದಯ ಇಂದೇಕೋ ಮರುಗುತ್ತಿದೆ. ನೀನಿಲ್ಲದ ನಾಳೆಯ ಪಯಣಕೆ ಮೌನದಲ್ಲೇ ಸಜ್ಜಾಗುತ್ತಿದೆ. ನಾನು ಯಾರನ್ನೂ ಸುಮ್ಮನೆ ದೂರ ಮಾಡಿಕೊಳ್ಳುವವಳಲ್ಲ. ಆದರೆ, ನೀನು ನನ್ನಿಂದ ತುಂಬಾ ದೂರ ಹೋಗಿಬಿಟ್ಟಿದ್ದೀಯ. ಸುಮ್ಮನೆ ಹೋಗಲಿಲ್ಲ, ಕಾಯ್ತಾ ಇರು ಬರಿ¤àನಿ ಅಂತ ಸುಳ್ಳು ಹೇಳಿ ದೂರ ಹೋಗಿಬಿಟ್ಟೆ.
ಆಗ ತಾನೇ ನನ್ನ ಕನಸುಗಳು ಚಿಗುರುತ್ತಿದ್ದವು. ಅವಿನ್ನೂ ಪುಟ್ಟ ಮಗುವಿನಂತಿದ್ದವು. ಆದರೆ ಅವನ್ನೆಲ್ಲ ಒಂದೇ ಮಾತಲ್ಲಿ ಕೊಂದುಬಿಟ್ಟೆ ನೀನು. ತಪ್ಪು ತಿಳಿಯಬೇಡ, ನಾನು ನಿನ್ನನ್ನು ದೂರುತ್ತಿಲ್ಲ. ಬದಲಿಗೆ ಕೇಳ್ತಾ ಇದ್ದೀನಿ, ಯಾಕೆ ಹೀಗೆಲ್ಲ ಮಾಡಿದೆ ಅಂತ. ಒಂದಂತೂ ಅರ್ಥ ಆಗಿದೆ. ನಾನಿಲ್ದೆ ಇದ್ರೂ ನೀನು ಚೆನ್ನಾಗಿಯೇ ಇದ್ದೀಯ ಅಂತ ..
ನನಗೆ ಗೊತ್ತು, ನಿನಗೂ ನಾನಂದ್ರೆ ಇಷ್ಟ ಅಂತ. ಆದರೆ ಇಷ್ಟಾನೇ ಪ್ರೀತಿ ಆಗಲಿಕ್ಕೆ ಸಾಧ್ಯ ಇಲ್ಲ ಅನ್ನೋದನ್ನ ತಿಳಿಸಿಕೊಟ್ಟೆ. ನೀನು ಕೊನೆಗೂ ನನ್ ಪ್ರೀತೀನ ಉಳಿಸಿಕೊಳ್ಳಲಿಲ್ಲ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ನೀನೇ ನನಗೆ ನೋವು ಕೊಟ್ಟೆ. ನೆನಪೆಂಬ ಮುಳ್ಳಿನಿಂದ ನನ್ ಹೃದಯಾನ ಚುಚ್ಚಿಬಿಟ್ಟೆ.
ಆ ಪ್ರೀತಿಯ ಕ್ಷಣಗಳು ನಿನಗೆ ನೆನಪಾಗ್ತಾ ಇಲ್ವಾ? ಒಂದು ಗಳಿಗೆ ನಾನೇನಾದರೂ ನಿನ್ನನ್ನು ಮರೆತೆನೆಂದರೆ, ಮರುಗಳಿಗೆಯೇ ನನಗೆ ಮರಣ. ಒಳಗೊಳಗೇ ಕೊರಗಿ ಕನಸುಗಳಿಗೆ ಘೋರಿ ಕಟ್ಟುತ್ತಿದ್ದೇನೆ.
ಹಾಗಂತ ಜೀವನ ಪೂರ್ತಿ ನಿನಗೆ ಶಾಪ ಹಾಕಲ್ಲ. ಯಾಕಂದ್ರೆ ನೀನು ನನ್ನ ಪ್ರತಿರೂಪ. ನಿನಗೆ ಕಿಂಚಿತ್ ನೋವಾದರೂ ನನ್ನ ಜೀವ ಹೋದ ಹಾಗೇ. ಏನೇ ಆಗಲಿ, ನೀನೂ ಒಂದು ಹೊಸ ಜೀವನ ರೂಪಿಸಿಕೊಂಡಿದ್ದೀಯ. ಅದು ಸುಖಕರವಾಗಿರಲಿ ಅಷ್ಟೇ ಸಾಕು. ನನ್ನ ಬಾಳ ಪಯಣದಲ್ಲಿ ಯಾರು ಇರ್ತಾರೋ, ಇಲ್ಲವೋ ಗೊತ್ತಿಲ್ಲ. ನಿನ್ನ ನೆನಪು ಸದಾ ಇರುತ್ತೆ.
ಹೇಳ್ಳೋಕೆ ಏನೂ ಉಳಿದಿಲ್ಲ ಅನ್ನಿಸ್ತಿದೆ. ನನ್ನ ಪ್ರಾಣಾನೇ ಪಣ ಇಟ್ಟು ನಿನ್ನ ಕಾದಿದ್ದೆ. ಇದೇ ಅಲ್ವ ನಿಜವಾದ ಪ್ರೀತಿ? ಆದರೂ ಅದರ ಅರಿವು ನಿನಗಾಗಲಿಲ್ಲ. ಇರಲಿ ಬಿಡು. ಎಲ್ಲೇ ಇದ್ದರೂ ಚೆನ್ನಾಗಿರು ಎಂಬುದಷ್ಟೇ ಹಾರೈಕೆ.
ನಿನ್ನದೇ ನೆನಪಲ್ಲಿ
ಮಂಜುಳಾ. ಎನ್ ಶಿಕಾರಿಪುರ