ಎಲೆಬಿಸಿಲ ತುಣುಕುಗಳು
Team Udayavani, Mar 19, 2019, 12:30 AM IST
ಪರಿಚಯದ ಅಂಕಲ್ ನಮ್ಮ ಮನೆಯ ಕಾಂಪೌಂಡ್ ದಾಟಿ ಒಳಗೆ ಬರುತ್ತಿದ್ದಂತೆ, ಹರಿದು- ಮುರಿದು ಜಜ್ಜಿಕೊಂಡಿರುವ ಹಳೇ ಸ್ಕೂಟಿಯತ್ತ ಕುತೂಹಲದಿಂದ ನೋಡಿದರು. ಅದನ್ನು ನೋಡಿ ಅಚ್ಚರಿಪಟ್ಟವರಲ್ಲಿ ಅವರು ಮೊದಲಿಗರೇನಲ್ಲ. ಅವರು ಹೇಳಿದರು- “ಅದರ ಮೇಲೆ ಬರೆದಿರುವ ಸಾಲುಗಳೇನೋ ಜೀವಂತವಾಗಿವೆ. ಆದರೆ, ಸ್ಕೂಟಿ ಇಷ್ಟು ಹಳೆಯದಾಗಿದೆ. ಆ ಕಸವನ್ಯಾಕೆ ಮನೆ ಮುಂದೆ ಜೋಡಿಸಿಟ್ಟಿದ್ದೀರಿ?’
ಮುಗುಳ್ನಕ್ಕು ಮಾತು ಬದಲಿಸಿದೆ.. ಮಾರನೆಯ ದಿನವೇ ಕಾಕತಾಳೀಯವೇನೋ ಎನ್ನುವಂತೆ ಮತ್ತೆ ಮನೆಗೆ ಬಂದರು ಅಂಕಲ್. ಜೊತೆಗೆ ಮಗನೂ ಇದ್ದ. ಅಪ್ಪನೊಂದಿಗೆ ಮಾತಾಡುತ್ತಾ, ಮರಕ್ಕೆ ಗುದ್ದಿ ಅವರ ಮಗ ಹಾಳು ಮಾಡಿದ್ದ ಬೈಕಿನ ಫೋಟೋ ತೋರಿಸುತ್ತಿದ್ದರು. ಅದನ್ನು ನೋಡಿದ ನಾನು, “ಅಂಕಲ್, ಬೈಕು ಇಷ್ಟು ಹಾಳಾಗಿದೆ. ಮಾರಿಬಿಡಬಾರದೆ? ಸಂಪೂರ್ಣ ಜಜ್ಜಿಕೊಂಡಿದೆಯಲ್ಲಾ’ ಅಂದೆ. “ಅದನ್ನು ಮಾರೋದೇ?…’ ಅಂತ ಸ್ವಲ್ಪ ಧ್ವನಿ ಏರಿಸಿದರು. “ಅದು ನನ್ನ ಮೊದಲ ಗಾಡಿ. ಅದನ್ನು ಬೀದಿಗಿಳಿಸಲು ಪಟ್ಟ ಪಾಡು, ಅದರೊಂದಿಗೆ ಸಾಗಿದ ಆಯಸ್ಸಿನ ಭಾಗ, ಕಳೆದಿರುವ ಅಸಂಖ್ಯ ಕ್ಷಣಗಳ ಕುರುಹಾಗಿ ಅದು ಕೊನೆಯವರೆಗೂ ನನ್ನ ಜೊತೆಗಿರುತ್ತದೆ’ ಎಂದರು.
ಆಗ ನಾನು, “ಹೊರಗಿದೆಯಲ್ಲ ಸ್ಕೂಟಿ, ನಿನ್ನೆ ನೀವು ಕಸ ಅಂದ್ರಲ್ಲಾ, ಅದು ನನ್ನ ಮೊದಲ ಗಾಡಿಯೇ’ ಅಂದೆ. ತಣ್ಣಗೆ ನಗುತ್ತಾ, “ಅದರ ಮೇಲಿರುವ ಸಾಲುಗಳು ಅದರೊಂದಿಗಿನ ಬಂಧದ ಆಳ ತಿಳಿಸುತ್ತೆ’ ಅಂದರು.. ಮನುಷ್ಯ ವಸ್ತುಗಳೊಂದಿಗೆ ಬೆಸೆದುಕೊಳ್ಳುವ ಪರಿಯೇ ವಿಸ್ಮಯ. ಅದ್ಯಾವುದೋ ನವಿಲುಗರಿ, ಪುಸ್ತಕದ ಮಧ್ಯೆ ಅವಿತ ಅದಕ್ಕೊಂದು ಗಾಢ ಕಂಪು, ಮೌನ. ಆದ್ರì ಗಳಿಗೆಗಳನ್ನು ಲೇಪಿಸಿಕೊಂಡು ಇನ್ನಷ್ಟು ಕಳೆಗೊಂಡ ಒಣಗಿದ ಕೆಂಪು ಗುಲಾಬಿ.. ಇಂಥವು ಮಸುಕಾದ ಮನಸ್ಸಿಗೆ ಒಂದಷ್ಟು ಕಸುವು ಕೊಟ್ಟು, ಮತ್ತೆ ಚೇತರಿಸಿಕೊಳ್ಳುವಂತೆ ಮಾಡುವ ಹಾಗೆ, ಪ್ರೀತಿಪಾತ್ರರು ಕೊಟ್ಟ ಕಚೀìಫು, ಪೆನ್, ಕೀ ಚೈನ್, ಪೆಂಡೆಂಟ್… ಹೀಗೆ ವಸ್ತುಗಳಿಗಿಂತ ಅವುಗಳ ಹಿಂದೆ ಅವಿತ ಗಾಢ ಅನುಭೂತಿಗಳು ಆಗಾಗ ತಾಕಿ, ಮನಸ್ಸನ್ನು ಆದ್ರìಗೊಳಿಸುತ್ತವೆ.
ಕಬ್ಬಿಣದ ಬೀರುವಿನ ಒಳ ಖಜಾನೆಯ ಚಿಕ್ಕ ಪೆಟ್ಟಿಗೆಯೊಳಗೆ ಜಾಗ ಪಡೆಯುವ ಅದ್ಯಾವುದೋ ಕಾಗದದ ತುಣುಕೊಂದು ಬದುಕಿನ ಭಾಗದ ಅಂಕಿತ ಹಾಕಿಸಿಕೊಂಡ ಅಮೂಲಾಗ್ರ ವಸ್ತುವಾಗಿರಬಹುದು. ಉಳಿದವರಿಗೆ ಕಾಗದದ ಚೂರಾಗಿ ಕಾಣುವ ಆ ವಸ್ತುವನ್ನು ಬಿಡಿಸುವಾಗ ಈಗಲೂ ನವಿರಾಗಿ ಅದುರುವ ಕೈಬೆರಳು, ಕಂಪಿಸುವ ದೇಹ, ಆ ಕಾಗದದ ಚೂರಿನಲ್ಲಿ ಹುದುಗಿರುವ ಅನುಭೂತಿಗಳು… ಎಲ್ಲಕ್ಕಿಂತ ಹೆಚ್ಚಾಗಿ ಆ ವಸ್ತುವಿನೊಂದಿಗೆ ಬೆರೆತಿರುವ ನೆನಪಿನಲ್ಲಿಯೇ ಇಡೀ ಜನ್ಮವೊಂದನ್ನು ಕಳೆಯಬಹುದು.
ವಿಲಿಯಂ ಷೇಕ್ಸ್ಪಿಯರ್ನ ಒಥೇಲೋ ನಾಟಕದ ಕತೆ ಗೊತ್ತಾ? ಮನೆಯೊಂದನ್ನು ಕಾಯ್ದಿರಿಸುವಾಗ ಟೋಕನ್ ಅಡ್ವಾನ್ಸ್ ನೀಡುವಂತೆ ಒಥೇಲೋ, ಡೆಸಿಮೋನಾಗೆ ಕುಸುರಿಯಿರುವ ಕರವಸ್ತ್ರವೊಂದನ್ನು ಒಪ್ಪಿಗೆಯ ಸೂಚಕವಾಗಿ ನೀಡುತ್ತಾನೆ. ನಂತರದ ಕತೆ ಪೂರ್ತಿ ಆ ಕರವಸ್ತ್ರದ ಸುತ್ತ ಸಾಗುತ್ತದೆ. ಡೆಸಿಮೋನಾಳ ದಿಂಬಿನಡಿ ಆ ಕರವಸ್ತ್ರ ಒಥೇಲೋನೇ ಆಗಿ ನೆಲೆ ಕಾಣುತ್ತದೆ. ದುಷ್ಯಂತ, ಶಾಕುಂತಲೆಗೆ ನೀಡಿದ ಉಂಗುರವೂ ಬರೀ ಉಂಗುರವಷ್ಟೇ ಅಲ್ಲ. ಅದೇ ಅವಳಿಗೆ ದುಷ್ಯಂತನಿದ್ದಂತೆ.
ಹೈಸ್ಕೂಲ್ನಲ್ಲಿದ್ದಾಗ ನಮ್ಮ ಮಾಸ್ತರರೊಬ್ಬರು ಅವರ ಡ್ರಾಯರ್ನಲ್ಲಿ ಅತ್ಯಂತ ಜತನದಿಂದ ನವಿಲುಗರಿಯೊಂದನ್ನು ಕಾಯ್ದಕೊಂಡಿದ್ದರು. ಒಂದೆರಡು ಬಾರಿ ಸ್ಟಾಫ್ರೂಮ್ಗೆ ಹೋದಾಗ ಅವರು ಮಾರ್ದವವಾಗಿ ಅದನ್ನು ದಿಟ್ಟಿಸುತ್ತಾ ಕುಳಿತಿದ್ದ ನೆನಪು. “ನಿಮ್ಮ ನವಿಲುಗರಿ ಮರಿ ಹಾಕಲಿಲ್ವಾ, ಸರ್?’ ಅಂತ ನಾವು ಛೇಡಿಸಿದ್ದೆವು. ಆಗ ಅವರು ಅವೆಷ್ಟೋ ನೆನಪುಗಳನ್ನು ಒಂದೇ ಕಿರುನಗೆಯಲ್ಲಿ ನಮ್ಮತ್ತ ಸೂಸುತ್ತಿದ್ದರು. ಅವರ ನವಿಲುಗರಿ ಮರಿ ಹಾಕದಿದ್ದರೂ, ಅದರಿಂದ ಜಿನುಗುವ ನೆನಪುಗಳು ಅವರನ್ನು ಆಗಾಗ್ಗೆ ಹಗುರಾಗಿಸುತ್ತಿದ್ದುದು ಮಾತ್ರ ನಿಜ.
ಕರವಸ್ತ್ರ, ಉಂಗುರ, ನವಿಲುಗರಿ, ಬರೀ ವಸ್ತುಗಳಾಗಿರುವುದಿಲ್ಲ. ನೆನಪುಗಳ ಬಿಕ್ಕಳಿಕೆ, ಹರಿದ ಕಣ್ಣೀರು, ಆಡಿದ ಮಾತು, ಜಗಳ ಮರೆತು ನಕ್ಕಿದ್ದು…ಹೀಗೆ ಅದೆಷ್ಟೋ ಭಾವಗಳ ಬೆಚ್ಚನೆಯ ಖಜಾನೆಯದು. ಭಾರತ ಎಷ್ಟೇ ಮುಂದುವರಿದಿದ್ದರೂ, ಈಗಲೂ ಜನ ಬರುವುದು ಹಂಪಿ-ಬೇಲೂರು-ಹಳೇಬೀಡು, ಅಜಂತಾ, ಎಲ್ಲೋರಾದಂಥ ಗತವೈಭವಗಳನ್ನು ನೋಡಲೆಂದೇ. ಪೂರ್ವ-ಪಶ್ಚಿಮ ಜರ್ಮನಿಗಳನ್ನು ಬೇರ್ಪಡಿಸಿದ 155 ಕಿ.ಮೀ ಉದ್ದದ ಬರ್ಲಿನ್ ಗೋಡೆ 1999ರಲ್ಲಿ ನೆಲಸಮವಾಯಿತು. ಪ್ರವಾಸಿಗರು ಆ ಗೋಡೆಯ ತುಣುಕುಗಳನ್ನು ತಮ್ಮೊಡನೆ ಒಯ್ಯುತ್ತಾರೆ. ಆ ಅವಶೇಷಗಳಿಗೆ ಇಂದು ಭಾರೀ ಬೆಲೆ ಇದೆ. ಈ ಕಲ್ಲು-ಕಬ್ಬಿಣದ ಅವಶೇಷಗಳು ಇತಿಹಾಸದ ತುಣುಕುಗಳೇ ಮತ್ತು ಬರ್ಲಿನ್ ಮಹಾಗೋಡೆಯ ಭಾಗಗಳೇ..
ಈ ನವಿಲುಗರಿ, ಒಣಗಿದ ಕೆಂಪು ಗುಲಾಬಿ, ಪೆಂಡೆಂಟ್, ಕೀ ಚೈನ್ ಕೂಡಾ ನಮ್ಮ ಬದುಕಿನ ಹಂಪಿ-ಬರ್ಲಿನ್ ಗೋಡೆಗಳು…
ಅಂಕಲ್ ಮತ್ತವರ ಮಗ ಹೊರಟು ನಿಂತರು. ಹೋಗುವಾಗ ಅವರ ಮಗ ಆ ಮುರಿದ ಸ್ಕೂಟಿಯ ಮೇಲಿದ್ದ ‘mere humsafar’ ಎಂಬ ಸಾಲಿನ ಫೋಟೊ ತೆಗೆದುಕೊಂಡ. ಅಂಕಲ್, ಅವರ ಜಜ್ಜಿಹೋದ ಬೈಕ್ ಮೇಲೆ ನೆನಪುಗಳ ಪಯಣ ಸಾಗಿಸುತ್ತಿದ್ದಂತೆ ಕಂಡರು…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ