ಗುಡಿಬಂಡೆ: ಕುಡಿಯುವ ನೀರಿಗೆ ತೀವ್ರ ಅಭಾವ
Team Udayavani, Mar 4, 2019, 7:56 AM IST
ಗುಡಿಬಂಡೆ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗುತ್ತಿದ್ದು, ಇನ್ನು ಬೇಸಿಗೆ ಕಾಲದಲ್ಲಿ ಹೇಗೆ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮುಂದೆ ಹಣಕೊಟ್ಟರೂ ನೀರು ಸಿಗದ ಪರಿಸ್ಥಿತಿ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ನೀರಿಗಾಗಿ ಮನೆಯಲ್ಲಿ ಒಬ್ಬರು ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು ನೀರು ತರುವ ಕಾಯಕ ದಲ್ಲಿದ್ದರೆ ಮನೆಯ ದೊಡ್ಡವರು ಗುಳೆ ಹೊರಡುವ ತಯಾರಿಯಲ್ಲಿದ್ದಾರೆ.
ಲೋಡ್ ಶೆಡ್ಡಿಂಗ್: ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಸಮಸ್ಯೆ ಉದ್ಭವಿಸಿದರೆ ಅಂತಹ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಸ್ಕಾಂನಿಂದ ಸರಿಯಾಗಿ ವಿದ್ಯುತ್ ಸರಬರಾಜು ಆಗದ ಕಾರಣ, ಹಳ್ಳಿಗಳಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ.
ಗ್ರಾಮೀಣ ಭಾಗದಲ್ಲಿ ದಿನದಲ್ಲಿ 4-5 ತಾಸು ತ್ರೀ ಫೇಸ್ ಕೊಡುವಂತೆ ಮೇಲಾಧಿಕಾರಿಗಳು ಹೇಳಿದ್ದಾರೆ. ಕುಡಿವ ನೀರಿಗಾಗಿ ವಿದ್ಯುತ್ ಎಲ್ಲಿಂದ ತರುವುದು? ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ವಿದ್ಯುತ್ ಕೊಡಲು ಆಗುವುದಿಲ್ಲ ಎಂಬ ಮಾತುಗಳು ಸಂ ಧಿಸಿದ ಇಲಾಖೆಯ ಅಧಿಕಾರಿಗಳಿಂದ ಬರು ತ್ತಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಟ್ಯಾಂಕರ್ ಮೂಲಕ ಸರಬರಾಜು: ತಾಲೂಕಿ ನಾದ್ಯಂತ ಪ್ರಸ್ತುತ ವರ್ಷ ಮಳೆ ಅಭಾವ ಉಂಟಾಗಿದ್ದರಿಂದ ಸರ್ಕಾರ ಈಗಾಗಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದೆ. ತಾಲೂಕಿನ ಜನರ ಜೀವನಾಡಿ ಯಾಗಿರುವ ಕೆರೆಗಳು ಬತ್ತಿರುವುದು ಒಂದೆಡೆ ಯಾದರೆ, ಬೋರ್ವೆಲ್ಗಳು ಅಂತರ್ಜಲ ಮಟ್ಟ ಕುಸಿದು ಬರಿದಾಗುತ್ತಿವೆ. ತಾಲೂಕಿನಲ್ಲಿ ಪ್ರಸ್ತುತ ಬತ್ತಲಹಳ್ಳಿ, ಕೇರೆನಹಳ್ಳಿ, ಜಂಗಾಲಹಳ್ಳಿ, ಚಿಕ್ಕನಂಚರು ಪುರದಹಳ್ಳಿ, ಪುಲವಮಾಕಲ ಹಳ್ಳಿ, ಕರಿಗಾಂತಮನಹಳ್ಳಿ, ಹನುಮಂತಪುರಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರಿಗೆ ಈಗಾಗಲೇ ಪರ್ಯಾಯವಾಗಿ ಖಾಸಗಿ ಕೊಳವೆ ಬಾವಿಗಳಿಂದ ಹಾಗೂ ಟ್ಯಾಂಕ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.ಕೆಲಸ ಮಾಡುತ್ತಿಲ್ಲ: ಕುಡಿಯುವ ನೀರಿನ ಅಭಾವ ತಗ್ಗಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಹೊರೆತು ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಜನರು ದೂರಿದ್ದಾರೆ.
ಟ್ಯಾಂಕರ್ ಲಾಬಿ: ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಹಿಂದೆ ಟ್ಯಾಂಕರ್ ಲಾಬಿ ಕೆಲಸ ಮಾಡುತ್ತಿದೆ. ಈ ಹಿಂದೆ ಇದರ ಬಗ್ಗೆ ಹಗರಣ ಬೆಳಕಿಗೆ ಬಂದು ತನಿಖೆ ನಡೆದಿದೆ. ಈಗ ಪ್ರಭಾವಿ ವ್ಯಕ್ತಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಅಧಿಕಾರಿಗಳ್ಳೋದಿಗೆ ಶಾಮೀಲಾಗಿ ಟ್ಯಾಂಕರ್ ನೀರು ಸರಬರಾಜುವಿನಲ್ಲಿ ದುಪಟ್ಟು ಹಣ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಬೇಸಿಗೆ ಆರಂಭಕ್ಕಿಂತ ಮುಂಚೆ ಕುಡಿಯುವ ನೀರಿನ ಪರಿಸ್ಥಿತಿ ಮುಂದುವರಿದರೆ ಸಾರ್ವಜನಿಕರು ನೀರಿಗಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಬಹುದು.
ಕುಡಿಯುವ ನೀರು ನಿಂತು ಹೋಗುವ ಗ್ರಾಮಗಳಿಗೆ 24 ಗಂಟೆಯ ಒಳಗೆ ನೀರನ್ನು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೇಸಿಗೆ ಎದುರಿಸಲು ಅಧಿಕಾರಿಗಳು ಮತು ಜಲಗಾರರಿಗೆ ಸೂಚನೆ ನೀಡಲಾಗಿದ್ದು, ಕುಡಿಯುವ ನೀರು ಪೋಲಾಗಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗುವುದು.
ಎಸ್.ಎನ್.ಸುಬ್ಟಾರೆಡ್ಡಿ, ಶಾಸಕ
ತಾಲೂಕಿನಲ್ಲಿ ಪ್ರಸ್ತುತ 2 ಗ್ರಾಮ ಪಂಚಾಯಿತಿಗಳಾದ ಉಲ್ಲೋಡು ಮತ್ತು ವರ್ಲಕೊಂಡ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ತೀವ್ರ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ಇಲ್ಲವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ತಾಲೂಕಿನಲ್ಲಿ ಈಗಾಗಲೇ 60 ಕೊಳವೆ ಬಾವಿ ಕೊರೆಸಲಾಗಿದ್ದು, ಇನ್ನೂ 25 ಕೊಳವೆ ಬಾವಿಗಳನ್ನು ಕೊರೆಸಬೇಕಾಗಿದೆ.
ನವೀನ್, ಪ್ರಭಾರಿ ಎಇ, ಗ್ರಾಮೀಣ ನೀರು ಸರಬರಾಜು ಇಲಾಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!
High temperature: ಉರಿ ಬಿಸಿಲಿಗೆ ಹೈರಾಣ: ಮಳೆಗಾಗಿ ಕಾದ ಜನ!
Lok Sabha election: ಎಸ್ಸೆಸ್ಸೆಲ್ಸಿ, ಪಿಯುಸಿ ಓದಿರುವ ಅಭ್ಯರ್ಥಿಗಳೇ ಹೆಚ್ಚು!
Lok Sabha Elections 2024: 29 ಅಭ್ಯರ್ಥಿಗಳ ಸ್ಪರ್ಧೆ ಇದೇ ಮೊದಲು!