ಕನಿಯಾಲ-ಬಾಯಾರು ರಸ್ತೆ ಶೋಚನೀಯ ಬಿ.ಜೆ.ಪಿ.ಯಿಂದ ಪ್ರತಿಭಟನೆ
Team Udayavani, Sep 7, 2017, 8:00 AM IST
ಕುಂಬಳೆ: ಪೈವಳಿಕೆ ಗ್ರಾಮ ಪಂಚಾಯತ್ನ ಸಜಂಕಿಲ ಸರ್ಕುತ್ತಿಯಿಂದ ಕನಿಯಾಲದ ವರೆಗಿನ ರಸ್ತೆಯನ್ನು ದುರಸ್ತಿ ಗೊಳಿಸದಿರುವ ಪೈವಳಿಕೆ ಗ್ರಾ.ಪಂ. ಅನಸ್ಥೆಯನ್ನು ವಿರೋಧಿಸಿ ಬಿಜೆಪಿ ವತಿಯಿಂದ ರಸ್ತೆತಡೆ ಕಾರ್ಯಕ್ರಮ ನಡೆಯಿತು.
ಪ್ರತಿಭಟನಾ ಕಾರ್ಯಕ್ರಮವನ್ನು ಬಿಜೆಪಿ ಮಂಡಲ ಸಮಿತಿ ಸದಸ್ಯ ಪ್ರವೀಣಚಂದ್ರ ಬಲ್ಲಾಳ್ ಉದ್ಘಾಟಿಸಿದರು. ಹಲವು ವರ್ಷಗಳಿಂದ ಡಾಮರೀಕರಣ ಕಾಣದ ರಸ್ತೆಯಲ್ಲಿ ಹಲವಡೆ ಬƒಹದಾಕಾರದ ಹೊಂಡಗಳು ನಿರ್ಮಾಣಗೊಂಡಿದ್ದು ಪ್ರಕೃತ ರಸ್ತೆ ಸಂಚಾರಕ್ಕೆ ತೊಡಗಾಗಿದೆ. ಬಾಯಾರು ಬಳ್ಳೂರು ಮೂಲಕ ಕರ್ನಾಟಕಕ್ಕೂ ಸಂಪರ್ಕಕೊಂಡಿಯಾಗಿರುವ ಈ ರಸ್ತೆಯ ಮೇಲ್ದರ್ಜೆಗೆ ಗ್ರಾ.ಪಂ. ಮೀನ ಮೇಷ ತೋರುತ್ತಿದೆ ಎಂಬುದಾಗಿ ಆರೋಪಿಸಿ ಬಿಜೆಪಿ ರಸ್ತೆ ತಡೆಯನ್ನು ಹಮ್ಮಿ ಕೊಂಡಿತು. ಬೆಳಗ್ಗೆ 6ರಿಂದ ಮಧ್ಯಾಹ್ನದ ವರೆಗೆ ನಡೆದ ರಸ್ತೆತಡೆ ಕಾರ್ಯಕ್ರಮದಲ್ಲಿ ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲು, ಕಾರ್ಯದರ್ಶಿ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್,ಮಂಡಲ ಉಪಾಧ್ಯಕ್ಷೆ ಜಯಲಕ್ಷ್ಮಿ ಭಟ್, ನಾಯಕರಾದ ಗಣೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.