ಪತ್ತೆಯಾಗದ ಪುಂಡಾನೆ: ಇಂದೂ ಕಾರ್ಯಾಚರಣೆ
Team Udayavani, May 15, 2018, 9:20 AM IST
ಮಡಿಕೇರಿ: ಸುಂಟಿಕೊಪ್ಪ ಸಮೀಪದ ಮೋದೂರು ಕಾಫಿ ತೋಟದಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಪುಂಡಾನೆ ಸೆರೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಸೋಮವಾರ ಆನೆ ಪತ್ತೆಯಾಗದೆ ಇರುವುದರಿಂದ ಮಂಗಳವಾರವೂ ಮುಂದುವರಿಯಲಿದೆ. ಪುಂಡಾನೆ ಇಬ್ರಾಹಿಂ ಅವರ ಮೇಲೆ ಇತ್ತೀಚೆಗೆ ದಾಳಿ ನಡೆಸಿ ಗಾಯಗೊಳಿಸಿತ್ತು, ಆಸ್ತಿಪಾಸ್ತಿಗೆ ಹಾನಿ ಮಾಡಿತ್ತು. ಸಾರ್ವಜನಿಕರ ಆಗ್ರಹದ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರು ಇಲಾಖೆಗೆ ಪತ್ರ ಬರೆದು ಅನುಮತಿ ಪಡೆದಿದ್ದರು.
ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಸಿಬಂದಿ ಕಾರ್ಯಾಚರಣೆ ಆರಂಭಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಎಸಿಎಫ್ ಚಿಣ್ಣಪ್ಪ, RFO, ವೈದ್ಯಾಧಿಕಾರಿಗಳಾದ ಡಾ| ಮುಜೀಬ್ ನೇತೃತ್ವದಲ್ಲಿ RRT ತಂಡ, ಅರಣ್ಯ ಸಿಬಂದಿ, ಮಾವುತರ ಸಹಿತ 60ಕ್ಕೂ ಹೆಚ್ಚಿನ ಸಿಬಂದಿ ಪಾಲ್ಗೊಂಡಿದ್ದರು. ಕಾಡಾನೆಗಳ ಎರಡು ಗುಂಪು ಕಂಡುಬಂದರೂ ಪುಂಡಾನೆ ಕಾಣಸಿಗಲಿಲ್ಲ.