ಸಂಸದರಿಂದ ಪೆರುಂಬಾಡಿ - ಮಾಕುಟ್ಟ ರಸ್ತೆ ಮಳೆ ಹಾನಿ ಪ್ರದೇಶ ವೀಕ್ಷಣೆ
Team Udayavani, Jun 21, 2018, 6:25 AM IST
ಗೋಣಿಕೊಪ್ಪಲು: ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ 25ಕ್ಕೂ ಹೆಚ್ಚು ಭಾಗಗಳಲ್ಲಿ ಭೂ ಕುಸಿತದಿಂದ ಹಾನಿಯುಂಟಾಗಿ ಸಾರಿಗೆ ಸಂಪರ್ಕ ಕಡಿತಗೊಂಡ ಅಂತಾರಾಜ್ಯ ಹೆದ್ದಾರಿ ಪೆರುಂಬಾಡಿ ಮಾಕುಟ್ಟ ರಸ್ತೆಗೆ ಕೊಡಗುಮೈಸೂರು ಲೋಕಸಭಾ ಕ್ಷೇತ್ರ ಸದಸ್ಯ ಪ್ರತಾಪ್ ಸಿಂಹ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಪರಿಹಾರ ಒದಗಿಸಿಕೊಡಲು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಪರಿಹಾರದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲಾಡಳಿತ ಪ್ರಕೃತಿ ವಿಕೋಪಕ್ಕೆ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದನ್ನು ಪರಿಹಾರಕ್ಕೆ ಬಳಸಿ ಪ್ರಕೃತಿ ವಿಕೋಪ ಎದುರಿಸಲು ಎಲ್ಲಾ ರೀತಿಯ ನೆರವು ನೀಡಬೇಕು ಈ ಹಂತದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಕೊಡಗಿನಲ್ಲಿ ಸುರಿದ ಮಳೆಯಿಂದ ಜೂನ್ ತಿಂಗಳಿನಲ್ಲೇ ಕೆ.ಆರ್.ಎಸ್. ನೀರು 100 ಅಡಿ ತುಂಬಿದೆ. ಇದು ಸಂತೋಷ ಪಡುವ ವಿಚಾರವಾದರೂ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಉಂಟಾದ ಹಾನಿಗೆ ಕಣ್ಣೀರು ಸುರಿಸಬೇಕಾಗಿದೆ. ಸಂಬಂಧ ಪಟ್ಟ ಸಚಿವರು ಶೀಘ್ರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು. ತುರ್ತಾಗಿ ಮಳೆ ಪರಿಹಾರವನ್ನು ಒದಗಿಸಿಕೊಡುವ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಅರಣ್ಯ ಇಲಾಖೆಯಿಂದ ಶೀಘ್ರಗತಿಯಲ್ಲಿ ಮರಗಳ ರೆಂಬೆ ಕತ್ತರಿಸುವ ಕಾರ್ಯ ನಡೆಯಬೇಕಾಗಿದೆ. ಹಾನಿ ಉಂಟಾದ ವಾರದಿಂದ ಮೂರು ಬಾರಿ ಭೇಟಿ ನೀಡಿದರು ರೆಂಬೆ ಕತ್ತರಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿಲ್ಲ. ಲೋಕೋಪಯೋಗಿ ಇಲಾಖೆ ಎಂಜಿನಿಯರುಗಳು, ಕಂದಾಯ ಇಲಾಖೆ ಅಧಿಕಾರಿಗಳು ಮಳೆ ಹಾನಿ ಪರಿಹಾರಕ್ಕೆ ಕ್ರಮ ಕೈಗೊಂಡು ರಸ್ತೆಯ ಸುಗಮ ಸಂಚಾರಕ್ಕೆ ಶೀಘ್ರಗತಿಯಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭ ತಹಶೀಲ್ದಾರ್ ಗೋವಿಂದ ರಾಜು, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಬಾರತೀಶ್, ರಾಜ್ಯ ಪ್ರವಾಸೋದ್ಯಮ ಸಮಿತಿ ಉಪಾಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಆರ್.ಎಂ.ಸಿ. ಅದ್ಯಕ್ಷ ಸುವೀನ್ ಗಣಪತಿ, ಬಿ.ಜೆ.ಪಿ ತಾಲೂಕು ಕೋಶಾಧಿಕಾರಿ ಚೋಡುಮಾಡ ಶ್ಯಾಮ್ ಪೂಣಚ್ಚ, ಫೆಡರೇಶನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಜಿಲ್ಲಾ ಯುವ ಮೂರ್ಚ ಅಧ್ಯಕ್ಷ ಗಪುŒ³ ಮೊದಲಾದವರು ಹಾಜರಿದ್ದರು.