ಶಿಕ್ಷೆ ಘೋಷಣೆಯಾದ ಕೂಡಲೇ ಕೋರ್ಟ್ನಿಂದ ಪರಾರಿ: ಬಂಧನ
Team Udayavani, Jun 24, 2018, 6:00 AM IST
ಕುಂಬಳೆ: ಮನೆಯಿಂದ ಕದ್ದ ಅಪರಾಧಕ್ಕಾಗಿ ಕೆಲವು ದಿನಗಳ ಹಿಂದೆ ನ್ಯಾಯಾಲಯ ತೀರ್ಪು ಘೋಷಿಸಿದ ತತ್ಕ್ಷಣ ಸ್ಥಳದಿಂದ ಪರಾರಿಯಾಗಿದ್ದ ನೆಲ್ಲಿಕಟ್ಟೆ ಬಳಿಯ ಚೆನ್ನಡ್ಕ ನಿವಾಸಿ ಮೊದು(40)ನನ್ನು ಕುಂಬಳೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಪೇರಾಲ್ ಕಣ್ಣೂರು ನಿವಾಸಿ ಇಬ್ರಾಹಿಂ ಅವರ ಮನೆಯಿಂದ ಆರೂವರೆ ಪವನ್ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಳವು ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದಾನೆ. 2014ರಲ್ಲಿ ಕಳವು ನಡೆದಿದ್ದು, ಈ ಪ್ರಕರಣದಲ್ಲಿ ಮೊದು ಮೂರನೇ ಆರೋಪಿಯಾಗಿದ್ದ.
ಈತನ ಮೇಲಿನ ಆರೋಪ ಸಾಬೀತಾಗಿ ನ್ಯಾಯಾಲಯ ಒಂದೂವರೆ ವರ್ಷ ಕಠಿನ ಸಜೆ ಹಾಗೂ 1 ಲ.ರೂ. ದಂಡ ವಿಧಿಸಿ ತೀರ್ಪು ನೀಡುತ್ತಿದ್ದಂತೆ ಅಲ್ಲಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಬಳಿಕ ಈತನಿಗಾಗಿ ಪೊಲೀ ಸರು ಶೋಧ ಆರಂಭಿಸಿದ್ದರು. ಅವನು ಚೆನ್ನಡ್ಕದ ಮನೆಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ದಾಳಿ ನಡೆಸಿ ಬಂಧಿಸಿದರು.