ವಾಪಸ್ ಬಂದವರಿಗೆ ಕಂಡಿದ್ದು ಅವಶೇಷ
Team Udayavani, Aug 22, 2018, 6:00 AM IST
ಮಡಿಕೇರಿ: ನಿರಂತರ ಮಳೆಯಿಂದ ಮನೆ, ಜಮೀನು ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿದ್ದ ಕೆಲವು ಕುಟುಂಬಗಳು ಮಂಗಳವಾರ ಸ್ವಂತ ಊರಿಗೆ ಮರಳಿದಾಗ ಕಂಡಿದ್ದು ಬರೀ ಅವಶೇಷಗಳು. ಕಳೆದ ವಾರ ಪೂರ್ತಿ ಸುರಿದ ಮಳೆಗೆ ಮಡಿಕೇರಿ ಸಮೀಪದ ಮಕ್ಕಂದೂರು, ತಂತಿಪಾಲ್, ಉದಯಗಿರಿ, ಪೈಸಾರಿ, ಇಂದಿರಾನಗರ, ಚಾಮುಂ ಡೇಶ್ವರಿ ನಗರ, ತಾಳತ್ಮನೆ ಮೊದ ಲಾದ ಪ್ರದೇಶ ದಲ್ಲಿ ಗುಡ್ಡ ಕುಸಿದು ಹಲವು ಮನೆಗಳು ಸರ್ವನಾಶ ವಾಗಿದ್ದು, ಕೆಲವು ಮನೆಗಳ ಅವಶೇಷ ಮಾತ್ರ ಉಳಿದುಕೊಂಡಿದೆ.
ಮಡಿಕೇರಿಯ ವಿವಿಧ ನಿರಾಶ್ರಿತರ ಕೇಂದ್ರದಲ್ಲಿರುವ ಅನೇಕರು ಮಂಗಳವಾರ ತಮ್ಮ ಮನೆ, ಜಮೀನು ಹುಡುಕಿಕೊಂಡು ಊರಿನತ್ತ ಹೋಗಿದ್ದರು. ಅಲ್ಲಿ ಮನೆ ಇರಲಿಲ್ಲ, ಕುಸಿದ ಗುಡ್ಡದಡಿ ಮನೆಯ ಅವಶೇಷಗಳನ್ನು ಕಂಡು ಬೆಚ್ಚಿ ಬಿದ್ದರು. ಮಡಿಕೇರಿ-ಸೋಮವಾರ ಪೇಟೆ ರಸ್ತೆಯು ಮಕ್ಕಂದೂರು ಸಮೀಪದಲ್ಲಿ ಸಂಪೂರ್ಣವಾಗಿ ಕುಸಿದಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಪೈಸಾರಿ ಎಂಬ ಪ್ರದೇಶದಲ್ಲಿನ ಸುಮಾರು 15ರಿಂದ 20 ಮನೆಗಳು ಸಂಪೂರ್ಣ ಹಾನಿಯಾಗಿವೆ. ಮಂಗಳ ವಾರ ಕೆ.ಎಸ್.ಹೇಮಾವತಿ ಎಂಬುವರು ತಮ್ಮ ಮನೆ ನೋಡಲು ಹೋಗಿದ್ದರು. ಅಲ್ಲಿ ಮನೆ, ಜಮೀನು ಏನೂ ಇರಲಿಲ್ಲ. ಗುಡ್ಡ ಕುಸಿದು ಸಂಪೂರ್ಣ ನೆಲ ಸಮವಾಗಿತ್ತು. ಮಗ ಎಚ್ಚರವಾಗಿದ್ದರಿಂದ ನಮ್ಮೆಲ್ಲರ ಜೀವ ಉಳಿದಿದೆ. ಇಲ್ಲವಾದರೆ, ನಾವು ಜೀವಂತವಾಗಿ ರುತ್ತಿರಲಿಲ್ಲ. ನಮ್ಮ ಬದುಕಿಗೆ ಸರ್ಕಾರವೇ ದಾರಿ ತೋರಿಸಬೇಕು ಎಂದು ಹೇಮಾವತಿ ನೋವು ತೋಡಿಕೊಂಡರು. ಹೇಮಾವತಿಯವರ ಮನೆ ಸಮೀಪವೇ ರಾಣಿ ಎಂಬುವರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದರು. ಒಂದೆರೆಡು ತಿಂಗಳಲ್ಲಿ ಗೃಹಪ್ರವೇಶ ಮಾಡಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು. ಈಗ ಹಳೇ ಮನೆ ಮತ್ತು ಹೊಸ ಮನೆ ಎರಡೂ ಇಲ್ಲದಾಗಿದೆ. ಇದು ಒಬ್ಬರು, ಇಬ್ಬರ ಗೋಳಲ್ಲ. ಕೊಡಗು ಜಿಲ್ಲೆಯ ನಿರಾಶ್ರಿತರ ಕೇಂದ್ರದಲ್ಲಿ ಇರುವ ಬಹುತೇಕರ ಗೋಳು. ಮನೆ, ಜಮೀನು ಇಲ್ಲದೇ ಅವರು ಪರಿತಪಿಸುತ್ತಿದ್ದಾರೆ.
ಡಿಜೆ ಪಕ್ಷಿ ಜತೆ ಬಂಗಾಲಿ ಕುಟುಂಬ: ಮಕ್ಕಂದೂರು ಸಮೀಪದಲ್ಲಿ ಗುಡ್ಡೆ ಕುಸಿತದಿಂದ ಮನೆ ಕಳೆದುಕೊಂಡಿರುವ ಪಶ್ಚಿಮ ಬಂಗಾಳದ 6 ಕುಟುಂಬ
ಜನರಲ್ ತಿಮ್ಮಯ್ಯ ಶಾಲೆಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿದ್ದಾರೆ. ಇದರಲ್ಲಿ ಒಂದು ಕುಟುಂಬ ಪ್ರೀತಿಯಿಂದ ಸಾಕಿರುವ ಹಕ್ಕಿಯೊಂದನ್ನು ಅವರ
ಜತೆಯೇ ಕರೆದುಕೊಂಡು ಬಂದಿದ್ದಾರೆ. ಅದಕ್ಕೆ ಡಿಜೆ ಎಂದು ಹೆಸರಿಟ್ಟು ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಈ ಆರು ಕುಟುಂಬ ಕೊಡಗಿಗೆ ಬಂದು 6 ವರ್ಷವಾಗಿದ್ದು, ಎಲ್ಲರೂ ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದಾರೆ.
ಕಾಣೆಯಾಗಿರುವ ಶಂಕೆ?
ಅತ್ತಿಹೊಳೆ ಗ್ರಾಮದ ಫ್ರಾನ್ಸಿಸ್ ಅಲಿಯಾಸ್ ಅಪ್ಪು ಎಂಬುವರು ಶುಕ್ರವಾರದಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕುವ ಎಲ್ಲ ರೀತಿಯ ಪ್ರಯತ್ನ ನಡೆದಿದ್ದರೂ, ಈವರೆಗೂ ಪತ್ತೆಯಾಗಿಲ್ಲ. ಫ್ರಾನ್ಸಿಸ್ ಪತ್ನಿ ಜ್ಯೋತಿ ಹಾಗೂ ಇಬ್ಬರು ಮಕ್ಕಳು ಸೋಮವಾರಪೇಟೆಯಲ್ಲಿ ಸುರಕ್ಷಿತವಾಗಿದ್ದಾರೆ. ಫ್ರಾನ್ಸಿಸ್ ಭೂಕುಸಿತದಲ್ಲಿ ಸಿಲುಕಿ ಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇವರು ಕಾಣೆಯಾಗಿರುವ ಬಗ್ಗೆ ಫೋಸ್ಟರ್ಗಳು ಹರಿದಾಡುತ್ತಿವೆ.
ರಾಜು ಖಾರ್ವಿ ಕೊಡೇರಿ
ಚಿತ್ರ: ಎಚ್. ಫಕ್ರುದ್ದೀನ್