ಶಬರಿಮಲೆ: ಅಲ್ಲಲ್ಲಿ ರಾ. ಹೆದ್ದಾರಿ ತಡೆ ಚಳವಳಿ
Team Udayavani, Oct 11, 2018, 6:00 AM IST
ಕಾಸರಗೋಡು: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಿತಿಯ ಮಹಿಳೆಯರಿಗೆ ಪ್ರವೇಶ ನೀಡಲು ಸರಕಾರ ನಡೆಸುತ್ತಿರುವ ಪ್ರಯತ್ನವನ್ನು ಪ್ರತಿಭಟಿಸಿ ವಿವಿಧ ಹಿಂದೂ ಸಂಘಟನೆಗಳು ಹಾಗೂ ಅಯ್ಯಪ್ಪ ಸೇವಾ ಸಮಾಜ ಹೋರಾಟ ವನ್ನು ತೀವ್ರಗೊಳಿಸಿದೆ.
ಇದರಂಗವಾಗಿ ಬುಧವಾರ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು.ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿಯನ್ನು ಬಾಲಕೃಷ್ಣನ್ ನಂಬ್ಯಾರ್ ಉದ್ಘಾಟಿಸಿದರು. ಉಪ್ಪಳ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದ ರಸ್ತೆ ತಡೆಯನ್ನು ವೀರಪ್ಪ ಅಂಬಾರು ಉದ್ಘಾಟಿಸಿದರು.
ಪೊಯಿನಾಚಿಯಲ್ಲಿ ಸ್ವಾಮಿ ಪ್ರೇಮಾನಂದ, ಕಾಂಞಂಗಾಡ್ನಲ್ಲಿ ಕ್ಷೇತ್ರ ಸಂರಕ್ಷಣ ಸಮಿತಿಯ ರಾಜ್ಯ ಸಮಿತಿ ಸದಸ್ಯ ನಾರಾಯಣನ್ ಮತ್ತು ವೆಳ್ಳರಿಕುಂಡುನಲ್ಲಿ ಗೋವಿಂದನ್ ಮಾಸ್ಟರ್ ಉದ್ಘಾಟಿಸಿದರು.
ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ಮಧ್ಯೆ ರಾಜ್ಯಾದ್ಯಂತ ರಸ್ತೆ ತಡೆ ಚಳವಳಿ ನಡೆಯಿತು. ಮಹಿಳೆಯರ ಸಹಿತ ನೂರಾರು ಮಂದಿ ರಸ್ತೆ ತಡೆ ಚಳವಳಿಯಲ್ಲಿ ಭಾಗವಹಿಸಿದರು.
ದೇಗುಲಕ್ಕೆ ಎಲ್ಲ ವಯೋಮಿತಿಯ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಯತ್ನಿಸುತ್ತಿರುವ ರಾಜ್ಯ ಸರಕಾರದ ನೀತಿಯನ್ನು ಪ್ರತಿಭಟಿಸಿ ಕಾಸರಗೋಡು ಜಿಲ್ಲೆ ಸಹಿತ ರಾಜ್ಯದ ಇನ್ನೂರು ಕೇಂದ್ರಗಳಲ್ಲಿ ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ಚಳವಳಿ ನಡೆಯಿತು.
ಬಿಜೆಪಿ ನೇತೃತ್ವದ ಎನ್ಡಿಎ ಆಶ್ರಯದಲ್ಲಿ ಪಂದಳಂ ನಿಂದ ತಿರುವನಂತಪುರದ ಸೆಕ್ರೆಟರಿಯೇಟ್ ತನಕ ಲಾಂಗ್ ಮಾರ್ಚ್ ಆರಂಭಗೊಂಡಿತು. ಎಸ್ಎನ್ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್ ನಿಲುವಿಗೆ ವಿರುದ್ಧವಾಗಿ ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ ಎನ್ಡಿಎಯ ಲಾಂಗ್ ಮಾರ್ಚ್ನಲ್ಲಿ ಭಾಗವಹಿಸಿದ್ದಾರೆ.