ಏಕಾಏಕಿ ಏಕಮುಖ ವಾಹನ ಸಂಚಾರ: ವ್ಯಾಪಾರಸ್ಥರಿಂದ ಧರಣಿ
Team Udayavani, Jan 19, 2019, 12:30 AM IST
ಗೋಣಿಕೊಪ್ಪಲು: ಪಟ್ಟಣದಲ್ಲಿ ಏಕಾಏಕಿ ಏಕಮುಖ ವಾಹನ ಸಂಚಾರಕ್ಕೆ ಮುಂದಾಗಿರುವುದರ ಅವ್ಯವಸ್ಥೆಯನ್ನು ವಿರೋಧಿಸಿ ವರ್ತಕರು ಕರೆದ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಒಂದು ದಿನದ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗಿ ಪ್ರತಿಭಟನೆಯಲ್ಲಿ ನಿರತರಾದರು. ಬೆಳಗಿನಿಂದ ಸಂಜೆಯವರೆಗೆ ಗ್ರಾ.ಪಂ ವಾಣಿಜ್ಯ ಸಂಖ್ಯೆಗಳ ಮುಂದೆ ಬಹು ಸಂಖ್ಯೆಯಲ್ಲಿ ವರ್ತಕರು ಕುಳಿತು ಸಂಜೆಯ ತನಕ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡರು.
ಏಕಮುಖ ಸಂಚಾರದ ಅವ್ಯವ್ಯವಸ್ಥೆ ಯನ್ನು ವಿರೋಧಿಸಿ ಘೋಷಣೆಗಳನ್ನು ಹಾಕುತ್ತಾ ಏಕಮುಖ ಸಂಚಾರದಿಂದ ವ್ಯಾಪಾರಕ್ಕೆ ಉಂಟಾಗುತ್ತಿರುವ ನಷ್ಟದ ಬಗ್ಗೆ ತಮ್ಮ ನೋವಿನ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಚೇಂಬರ್ ಆಫ್ ಕಾರ್ಮಸ್ ಸ್ಥಾನೀಯ ಸಮಿತಿ ಬಂದಿಗೆ ಬೆಂಬಲ ನೀಡದೆ ಇದ್ದರು ವರ್ತಕರೆ ಮುಂದೆ ನಿಂತು ಪ್ರತಿಭಟಿಸುವ ಮೂಲಕ ಏಕಮುಖ ಸಂಚಾರವನ್ನು ವಿರೋಧಿಸಿ ದರು. ಬಂದಿಗೆ ಬೆಂಬಲ ಸೂಚಿಸಿ ಪಟ್ಟಣದ ಶೇ. 90ರ ಅಂಗಡಿ ಮಳಿಗೆಗಳು ಮುಚ್ಚಲಾಗಿತ್ತು.
ಪಟ್ಟಣದಲ್ಲಿನ ಬಂದ್ ಹಿನ್ನಲೆ ಹೊರಗಿನಿಂದ ಬರುವವರ ಸಂಖ್ಯೆ ಕಡಿಮೆಯಾಗಿದ್ದು ಪಟ್ಟಣದಲ್ಲಿ ಬೆರಳೆಣಿಕೆಯ ಜನಸಂಖ್ಯೆಯಷ್ಟೆ ಕಂಡು ಬಂದಿತು. ಬಸ್ಗಳಿಗೆ, ಆಟೋಗಳಿಗೆ ಗಿರಾಕಿಗಳಿರಲಿಲ್ಲ.ಸಾರ್ವಜನಿಕರಿಗೆ ಯಾವುದೆ ಸಮಸ್ಯೆ ಉಂಟಾಗಲಿಲ್ಲ.
ಉಳಿದಂತೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಹಾಗೂ ಮುಖ್ಯ ರಸ್ತೆಯಲ್ಲಿ ಕೆಲವೆ ಕೆಲವು ಅಂಗಡಿಗಳು ತೆರೆದಿದ್ದವು. ಔಷದಿ ಮಳಿಗೆ, ಮದ್ಯದ ಅಂಗಡಿ,ಕೆಲವು ಹೊಟೇಲ್, ಕ್ಯಾಂಟಿನ್, ಮಾಂಸ, ಮೀನಿನ ಅಂಗಡಿ ಮತ್ತು ಒಂದೆರಡು ಜಿನಸಿ ಅಂಗಡಿಗಳು ತೆರದಿದ್ದವು. ಉಳಿದಂತೆ ಯಾವುದೆ ಅಂಗಡಿಗಳು ತೆರೆದಿರಲಿಲ್ಲ. ಬಂದ್ ಹಿನ್ನೆಲೆ ಯಾವುದೇ ವ್ಯಾಪಾರ ವಹಿವಾಟು ಇರಲಿಲ್ಲ. ವಾಹನ ಸಂಚಾರಕ್ಕೆ ಸಭೆ ಸಮಾರಂಭ ಗಳಿಗೆ ಯಾವುದೆ ಸಮಸ್ಯೆ ಉಂಟಾಗಲಿಲ್ಲ. ವರ್ತಕ ಮಚ್ಚಮಾಡ ಅನಿಶ್ ಮಾದಪ್ಪ, ನೇತ್ರತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಜಿ.ಪಂ ಸದಸ್ಯೆ ಶ್ರೀಜಾ ಶಾಜಿ, ಗ್ರಾ.ಪಂ ಸದಸ್ಯರಾದ ಮುರುಗ, ಜೆ.ಕೆ. ಸೋಮಣ್ಣ, ಪ್ರಮುಖರಾದ ಗಜಾನನ ಶೇಟ್, ಶಿವಾಜಿ, ಚಡಕನ್ ರಫೀಕ್, ಅಶ್ರಫ್, ಸಜೀವ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ನಿರತರಾಗಿದ್ದರು.