ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ: ಮತ್ತೆ 6 ಮಂದಿ ಬಂಧನ
Team Udayavani, Feb 22, 2019, 12:30 AM IST
ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್ ಮತ್ತು ಕೃಪೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ 6 ಮಂದಿಯನ್ನು ಬಂಧಿಸಲಾಗಿದೆ.
ಶರತ್ಲಾಲ್ ಮತ್ತು ಕೃಪೇಶ್ ಸಂಚರಿಸುತ್ತಿದ್ದ ಬೈಕಿಗೆ ವಾಹನ ಢಿಕ್ಕಿ ಹೊಡೆಸಿದ್ದ ಪೆರಿಯ ಎಚ್ಚಿಕಾನಂ ನಿವಾಸಿ ಸಜಿ ಜೋರ್ಜ್ (40), ಎಚ್ಚಿಲಡ್ಕ ಚಾಪ್ಪಾರಪ್ಪಡವು ಕಾವುಂಗಲ್ ಉಡುವಳ್ಳಿ ನಿವಾಸಿ, ಕೂಲಿ ಕಾರ್ಮಿಕ ಕೆ.ಎಂ.ಸುರೇಶ್ (27), ಪೆರಿಯ ಎಚ್ಚಿಲಡ್ಕದ ಆಟೋ ಚಾಲಕ ಅನಿಲ್ ಕುಮಾರ್ (33), ಕುಂಡಂಗುಳಿ ಮಾಲಾಂಕೋಟ್ಟೆಯ ಪಿಕಪ್ ಲಾರಿ ಕ್ಲೀನರ್ ಎ.ಅಶ್ವಿನ್ ಆಲಿಯಾಸ್ ಅಪ್ಪು (19), ಕಲೊÂàಟ್ ಪ್ಲಾಕಾತೊಟ್ಟಿಯ ಜೀಪು ಚಾಲಕ ಶ್ರೀರಾಗ್ ಅಲಿಯಾಸ್ ಕುಟ್ಟು (22), ಪೆರಿಯ ಕಾಂಞಿರಡ್ಕಂ ನಿವಾಸಿ ನಿರ್ಮಾಣ ಕಾರ್ಮಿಕ ಜಿಗಿಜಿನ್(26) ಬಂಧಿತರು.
ಈ ಪೈಕಿ ಸಜಿ ಜೋರ್ಜ್ ಸಿಪಿಎಂ ಎಚ್ಚಿಕಾನಂ ಬ್ರಾಂಚ್ ಸಮಿತಿ ಸದಸ್ಯ ಹಾಗೂ ಎಚ್ಚಿಲಡ್ಕ ಎ.ಕೆ.ಜಿ. ಕ್ಲಬ್ ಪದಾಧಿಕಾರಿ. ಇಂಟರ್ಲಾಕ್ ಸಂಸ್ಥೆಯ ಮಾಲಕನಾಗಿರುವ ಈತ ಕಲೊÂàಟ್ನ ಯೂತ್ ಕಾಂಗ್ರೆಸ್ ಕಾರ್ಯಕರ್ತ ಅನೂಪ್ ಕಾಟ್ಟುಮನೆಯ ಮೇಲೆ ಹಲ್ಲೆ ನಡೆಸಿದ ಮತ್ತು ಕಲೊÂàಟ್ ರಾಜೀವ್ಜಿ ವಾದ್ಯಶಾಲೆ ಸಂಘ ಕಚೇರಿ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲೂ ಭಾಗಿಯಾಗಿದ್ದ.
ಬಂಧಿತನಾಗಿರುವ ಎ.ಪೀತಾಂಬರನ್ನನ್ನು ತನಿಖಾ ತಂಡ ಮತ್ತೆ ಕಸ್ಟಡಿಗೆ ಪಡೆದು ಕೊಲೆ ನಡೆದ ಸ್ಥಳಕ್ಕೆಕರೆ ತಂದು ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ.ಸ್ಥಳಕ್ಕೆ ಕರೆ ತಂದಾಗ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.
ಸಿಬಿಐ ತನಿಖೆಗೆ ಆಗ್ರಹ
ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸಿದ್ದಲ್ಲಿ ನ್ಯಾಯ ಸಿಗದು. ಪುತ್ರನಿಗೆ ಕೆಲವು ದಿನಗಳ ಹಿಂದೆಯಷ್ಟೇ 18 ವರ್ಷ ತುಂಬಿತ್ತು. ಆತನ ಹಂತಕರಿಗೆ ಶಿಕ್ಷೆಯಾಗದಿದ್ದಲ್ಲಿ ಅವನಿಗೆ ನ್ಯಾಯ ಲಭಿಸದು. ಸಿಪಿಎಂ ನಿರ್ದೇಶನದಂತೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಅದರಲ್ಲಿ ನಮಗೆ ನಂಬಿಕೆ ಇಲ್ಲ. ಆದ್ದರಿಂದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಮೃತ ಕೃಪೇಶ್ನ ತಂದೆ ಕೃಷ್ಣನ್ ಹೇಳಿದ್ದಾರೆ.
ತಲವಾರು,ಸರಳು ಪತ್ತೆ
ಹತ್ಯೆಗೆ ಬಳಸಲಾಗಿದೆ ಎನ್ನಲಾದ ಹಿಡಿ ಇಲ್ಲದ ಒಂದು ತಲವಾರು ಮತ್ತು ನಾಲ್ಕು ಕಬ್ಬಿಣದ ಸರಳುಗಳನ್ನು ಕೊಲೆ ನಡೆದ ಸ್ಥಳದಿಂದ 400 ಮೀಟರ್ ದೂರದಲ್ಲಿರುವ ಸಿಪಿಎಂ ಕಾರ್ಯಕರ್ತರೋರ್ವರ ರಬ್ಬರ್ ತೋಟದ ಪಾಳು ಬಾವಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಂದು ಮುಖ್ಯಮಂತ್ರಿ ಜಿಲ್ಲೆಗೆ
ಹತ್ಯೆ ಬಳಿಕ ಭುಗಿಲೆದ್ದ ಜನಾಕ್ರೋಶದ ಕಾವು ತಣಿಯುವ ಮೊದ ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೆ.22ರಂದು ಹೊಸದುರ್ಗಕ್ಕೆ ಆಗಮಿಸಲಿದ್ದಾರೆ. ಸರಕಾರದ 1000ನೇ ದಿನದ ಅಂಗವಾಗಿ ಜಾರಿಗೊಳಿಸುವ ಅಭಿವೃದ್ಧಿ ಯೋಜನೆಗಳ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಅವರು ನೆರ ವೇರಿಸುವರು.
ಯೂತ್ ಕಾಂಗ್ರೆಸ್ ರ್ಯಾಲಿ
ಕೊಲೆಯನ್ನು ಪ್ರತಿಭಟಿಸಿ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಫೆ.22ರಂದು ಹೊಸದುರ್ಗ ಡಿವೈಎಸ್ಪಿ ಕಚೇರಿಗೆ ಜಾಥಾ ನಡೆಯಲಿದೆ.
ಪೀತಾಂಬರನ್ ತಲೆಗೆ ಹೊಡೆದ, ಇತರರು ಕಡಿದರು!
ಪೀತಾಂಬರನ್ ಕಬ್ಬಿಣದ ಸರಳಿನಿಂದ ಮೊದಲು ಶರತ್, ಬಳಿಕ ಕೃಪೇಶ್ ತಲೆಗೆ ಹೊಡೆದ. ಬಳಿಕ ಇತರರು ತಲವಾರು ಮತ್ತು ಸರಳುಗಳಿಂದ ಹಲ್ಲೆ ಮಾಡಿ ಕೊಲೆಗೈದರು. ಕೊಲೆ ಉದ್ದೇಶದಿಂದಲೇ ದಾಳಿ ನಡೆಸಲಾಗಿದೆ. ರಾಜಕೀಯ ವೈಷಮ್ಯ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಹೊಸದುರ್ಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ತಿಳಿಸಿದ್ದಾರೆ.
ತನಿಖೆ ಕ್ರೈಂ ಬ್ರಾಂಚ್ಗೆ
ಈ ನಡುವೆ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ಗೆ ಒಪ್ಪಿ ಸಿ ಡಿಜಿಪಿ ಲೋಕನಾಥ್ ಬೆಹ್ರ ಆದೇಶ ನೀಡಿದ್ದಾರೆ. ಐ.ಜಿ.ಶ್ರೀಜಿತ್ ತನಿಖೆಯ ಉಸ್ತುವಾರಿ ವಹಿಸಲಿದ್ದಾರೆ. ಬೆಚ್ಚಿ ಬೀಳಿಸುವ ಕೃತ್ಯ ಎಂದ ಕೋರ್ಟ್ಇದೊಂದು ಬೆಚ್ಚಿ ಬೀಳಿಸುವಂತಹ ಕೃತ್ಯ. ಮೃತರ ದೇಹದಲ್ಲಿ ಕಂಡು ಬಂದಿದ್ದ ಗಾಯಗಳು ಕೃತ್ಯದ ಭೀಕರತೆಯನ್ನು ತೋರಿಸುತ್ತಿವೆ ಎಂದ ನ್ಯಾಯಾಲಯ,ಪೀತಾಂಬರನ್ಗೆ ಫೆ.27ರ ತನಕ ಪೊಲೀಸ್ ಕಸ್ಟಡಿ ವಿಧಿಸಿದೆ.