ಪುರಾಣ ಕತೆ: ಕರ್ದಮ- ದೇವಹೂತಿ
Team Udayavani, May 11, 2017, 11:30 AM IST
ಬ್ರಹ್ಮನ ಮಗನಾದ ದಕ್ಷ ಪ್ರಜಾಪತಿಯ ಹೆಂಡತಿ ಪ್ರಸೂತಿ. ಇವರ ಕಡೆಯ ಮಗಳು ಸತೀದೇವಿ. ಇವಳು ರುದ್ರನನ್ನು ಮದುವೆಯಾದಳು. ಒಮ್ಮೆ ಋಷಿಗಳೆಲ್ಲ ಸೇರಿದಾಗ ದಕ್ಷ ಪ್ರಜಾಪತಿಯು ಅಲ್ಲಿಗೆ ಬಂದನು. ಎಲ್ಲರೂ ಎದ್ದು ನಿಂತರು. ಬ್ರಹ್ಮನೂ ರುದ್ರನೂ ಎದ್ದು ನಿಲ್ಲಲಿಲ್ಲ. ಬ್ರಹ್ಮನು ಎಲ್ಲರಿಗೂ ಹಿರಿಯ, ಅವನು ನಿಲ್ಲದಿದ್ದುದು ತಪ್ಪಲ್ಲ. ರುದ್ರನು ಎದ್ದು ನಿಲ್ಲದಿದ್ದುದರಿಂದ ದಕ್ಷನಿಗೆ ಕೋಪ ಬಂದಿತು. ರುದ್ರನನ್ನು ನಿಂದಿಸಿದ. ಇಲ್ಲಿಂದ ದಕ್ಷ ಮತ್ತು ರುದ್ರರಲ್ಲಿ ವಿರೋಧ ಹೆಚ್ಚುತ್ತಾ ಹೋಯಿತು. ಒಮ್ಮೆ ದಕ್ಷನು ಬೃಹಸ್ಪತಿವನ ಎಂಬ ಯಾಗವನ್ನು ಮಾಡಿದ. ಅದಕ್ಕೆ ರುದ್ರನನ್ನು ಬಿಟ್ಟು ಉಳಿದವರೆಲ್ಲರನ್ನೂ ಆಹ್ವಾನಿಸಿದ.
ಸತೀದೇವಿಗೆ ಯಾಗಕ್ಕೆ ಹೋಗಬೇಕೆಂದು ಆಸೆಯಾಯಿತು. ಗಂಡ ರುದ್ರನಿಗೆ ತಾವಿಬ್ಬರೂ ಹೋಗಬೇಕೆಂದು ಕೇಳಿದಳು. ಅವಳಿಗೆ ತವರುಮನೆಗೆ ಪತಿಯೊಡನೆ ಹೋಗಬೇಕೆಂಬ ಬಯಕೆ. ರುದ್ರನು ಅವಳ ತಂದೆಯ ಕೆಟ್ಟ ಮಾತುಗಳನ್ನು ನೆನಪಿಸಿದ. ಆತನು ಆಹ್ವನಿಸದಿದ್ದಾಗ ತಾವು ಹೋದರೆ ಅವನು ತಿರಸ್ಕಾರದಿಂದ ಕಾಣಬಹುದೆಂದು ಎಚ್ಚರಿಸಿದ. ತನ್ನ ಗಂಡನು ತನ್ನ ಪ್ರಾರ್ಥನೆಯನ್ನು ನಡೆಸಿಕೊಡಲಿಲ್ಲವೆಂದು ಸತೀದೇವಿಗೆ ಕೋಪ ಬಂದಿತು. ಕೋಪದಿಂದಲೇ ತನ್ನ ತಂದೆಯ ಮನೆಗೆ ಹೊರಟಳು. ರುದ್ರನ ಪರಿವಾರದವರು ಅವಳ ರಕ್ಷಣೆಗೆ ಜತೆಗೆ ಹೊರಟರು. ಅವಳು ಯಾಗಮಂಟಪವನ್ನು ಪ್ರವೇಶಿಸಿದಾಗ ಅವಳ ತಾಯಿ ಮತ್ತು ಅಕ್ಕಂದಿರು ಪ್ರೀತಿಯಿಂದ ಕಂಡರು.ಆದರೆ ಬೇರೆ ಯಾರೂ ಅವಳನ್ನು ಆದರಿಸಲಿಲ್ಲ. ತಂದೆಯು ಅವಳ ಕಡೆಗೆ ತಿರುಗಿಯೂ ನೋಡಲಿಲ್ಲ. ಸತೀದೇವಿಗೆ ಅಪಮಾನವಾಯಿತು. ತಡೆಯಲಾರದ ದುಃಖವಾಯಿತು. ಅವಳು ಉತ್ತರಾಭಿಮುಖವಾಗಿ ಕುಳಿತು ಪ್ರಾಣಾಯಾಮ ಕೈಗೊಂಡಳು. ಅಗ್ನಿಯೊಂದು ಅವಳ ಶರೀರವನ್ನು ಆವರಿಸಿ ಸುಟ್ಟುಬಿಟ್ಟಿತು. ಎಲ್ಲರೂ ಹಾಹಾಕಾರ ಮಾಡಿದರು, ದುಃಖೀಸಿದರು.
ರುದ್ರನ ಪರಿವಾರದವರು ಸತೀದೇವಿಯೊಡನೆ ಬಂದಿದ್ದರಲ್ಲವೆ? ಅವರಿಗೀಗ ರೋಷವು ಉಕ್ಕಿ ಹರಿಯಿತು. ಅವರು ಯಜ್ಞದಲ್ಲಿ ಪಾಲುಗೊಂಡವರನ್ನೆಲ್ಲ ಕೊಲ್ಲಲು ಸಿದ್ಧರಾದರು. ಆದರೆ ಯಭುಗಳೆಂಬ ದೇವತೆಗಳು ಅವರನ್ನೆಲ್ಲ ಓಡಿಸಿದರು.
ಈ ಸಂಗತಿಯನ್ನೆಲ್ಲ ಕೇಳಿ ರುದ್ರನು ಅಗ್ನಿಪರ್ವತದಂತಾದನು. ಅವನು ತನ್ನ ಜಟೆಯನ್ನು ನೆಲಕ್ಕೆ ಅಪ್ಪಳಿಸಿದನು. ಕೂಡಲೇ ಪರ್ವತಾಕಾರದ ವೀರಭದ್ರನು ಎದ್ದು ಬಂದ. ಅವನದು ಕಪ್ಪು ದೇಹ, ಆಯುಧಗಳನ್ನು ಹಿಡಿದ ಸಾವಿರ ತೋಳುಗಳು, ಕೆಂಡದಂತೆ ಬೆಳಗುವ ಮೂರು ಕಣ್ಣುಗಳು, ತಲೆಬುರುಡೆಗಳ ಹಾರ. ಶಿವನು ಅವನಿಗೆ ದಕ್ಷನನ್ನೂ, ಯಾಗವನ್ನೂ ಧ್ವಂಸ ಮಾಡುವಂತೆ ಆಜ್ಞಾಪಿಸಿದನು. ವೀರಭದ್ರನೂ ಅವನ ಸೈನ್ಯದವರೂ ಹೋಮಶಾಲೆಯನ್ನು ಪ್ರವೇಶಿಸಿ ಎಲ್ಲರನ್ನು ಚೆಲ್ಲಾಪಿಲ್ಲಿ ಮಾಡಿದರು. ಭೃಗು ಮಹರ್ಷಿಯನ್ನು ಕೊಂದರು. ತಪ್ಪಿಸಿಕೊಂಡ ದೇವತೆಗಳೂ ಋಷಿಗಳೂ ಓಡಿ ಹೋಗಿ ಬ್ರಹ್ಮನ ಮೊರೆ ಹೊಕ್ಕರು. ಬ್ರಹ್ಮನು ಅವರಿಗೆ ಸತೀದೇವಿಗೆ ಅಪಮಾನ ಮಾಡಿದ್ದು ತಪ್ಪು ಎಂದು ಹೇಳಿ ಅವರನ್ನು ಕರೆದುಕೊಂಡು ಕೈಲಾಸಕ್ಕೆ ಬಂದನು.
ರುದ್ರನು ಶಾಂತನಾಗಿ ಕುಳಿತಿದ್ದ. ಸುತ್ತಲೂ ನಾರದರು ಮತ್ತು ಇತರ ಋಷಿಗಳು, ಬ್ರಹ್ಮನು, “ಅರ್ಧಕ್ಕೆ ನಿಂತ ಯಾಗವನ್ನು ಪೂರ್ಣಗೊಳಿಸುವ ಕಾರ್ಯ ರುದ್ರನದು, ಸತ್ತವರೆಲ್ಲ ಮತ್ತೆ ಬದುಕುವಂತಾಗಬೇಕು’ ಎಂದು ವಿನಂತಿ ಮಾಡಿದ. ರುದ್ರನು ಒಪ್ಪಿದ. ದಕ್ಷನ ತಲೆಯು ಸುಟ್ಟು ಹೋಗಿದ್ದುದರಿಂದ ಅವನಿಗೆ ಕುರಿಯ ತಲೆಯಾಯಿತು. ಸತ್ತವರು ಬದುಕಿದರು. ಗಾಯಗೊಂಡವರು ಮೊದಲಿಂತಾದರು. ಯಜ್ಞಕಾರ್ಯವು ಸಂಪೂರ್ಣವಾಯಿತು. ಬ್ರಹ್ಮನು ದಕ್ಷನಿಗೆ, “ಬ್ರಹ್ಮ ವಿಷ್ಣು ರುದ್ರರು ಬೇರೆ ಬೇರೆಯಲ್ಲ. ಮೂವರನ್ನೂ ಒಬ್ಬರೇ ಎಂದು ಕಾಣಬೇಕು’ ಎಂದು ತಿಳಿಸಿಕೊಟ್ಟ.
ದೇಹವನ್ನು ತ್ಯಜಿಸಿದ್ದ ಸತೀದೇವಿಯು ಹಿಮವಂತ ಮತ್ತು ಅವನ ಹೆಂಡತಿ ಮೆನೆಯವರ ಮಗಳಾಗಿ ಪಾರ್ವತಿ ಎನ್ನುವ ಹೆಸರಿನಿಂದ ಬೆಳೆದು ಮತ್ತೆ ಶಿವನನ್ನು ಮದುವೆಯಾದಳು. ‘
ಎಲ್. ಎಸ್. ಶೇಷಗಿರಿ ರಾವ್
(“ಕಿರಿಯರ ಭಾಗವತ’ ಪುಸ್ತಕದಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ