ನರಿಯ ಓಟ
Team Udayavani, Jul 26, 2018, 6:00 AM IST
ಒಂದು ಕಾಡಿನಲ್ಲಿ ತೋಳ ಹಾಗೂ ನರಿ ಸ್ನೇಹದಿಂದ ವಾಸವಾಗಿದ್ದವು. ಜೊತೆಯಾಗಿಯೇ ಆಹಾರ ಹಂಚಿಕೊಂಡು ಆರಾಮವಾಗಿದ್ದವು. ಒಂದು ದಿನ ಬೆಳಗ್ಗೆ ಅವೆರಡಕ್ಕೂ ಬಹಳ ಹಸಿವಾಯಿತು. ಆಹಾರ ಅರಸುತ್ತಾ ಕಾಡಿನಲ್ಲಿ ಸುತ್ತಾಟ ನಡೆಸಿದವು. ಆದರೆ ಎಲ್ಲಿಯೂ ಆಹಾರ ಸಿಗಲೇ ಇಲ್ಲ. ಕಾಡಿನ ಮೂಲೆಯಲ್ಲಿ ಮನುಷ್ಯರ ತೋಟಗಳಿವೆ. ಅಲ್ಲಿಗೆ ಹೋಗೋಣ ಎಂದು ನರಿ ಹೇಳಿತು. ತೋಳ ಹಿಂಜರಿಯಿತು. ಅದಕ್ಕೆ ಮನುಷ್ಯರ ಭಯ. ಕಡೆಗೆ ಹಸಿವು ತಾಳಲಾಗದೆ ಅವೆರಡೂ ಅತ್ತ ಕಡೆ ಹೆಜ್ಜೆ ಹಾಕಿದವು.
ತೋಟದ ಬಳಿ ಯಾರೂ ಇರಲಿಲ್ಲ. ನರಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಅದು ಖುಷಿಯಿಂದ ಕುಣಿಯುತ್ತಾ “ನೋಡಿದೆಯಾ ನಮ್ಮ ಅದೃಷ್ಟವಾ? ಇಷ್ಟು ದೊಡ್ಡ ದ್ರಾಕ್ಷಿ ತೋಟವನ್ನು ಕಾಯಲು ಒಬ್ಬನೇ ಒಬ್ಬ ಮನುಷ್ಯನಿಲ್ಲ’ ಎಂದಿತು. ತೋಳಕ್ಕೆ ಅನುಮಾನ ಬಂತು. ನರಿ ದ್ರಾಕ್ಷಿ ಗೊಂಚಲಿಗೆ ಬಾಯಿ ಹಾಕಲು ಗೇಟು ಹಾರಿತು. ತೋಳ ಇಲ್ಲೇನೋ ಅಪಾಯವಿದೆ ಎಂಬ ಅನುಮಾನದಿಂದ ನಿಂತು ನೋಡುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ನರಿ ಓಟ ಕೀಳುವುದನ್ನು ಅದು ನೋಡಿತು. ನರಿ ಏಕೆ ಜೀವ ಭಯದಿಂದ ಓಡುತ್ತಿದೆ ಎಂದು ನೋಡಿದರೆ ಅದರ ಹಿಂದೆ ನಾಲ್ಕೈದು ಬೇಟೆ ನಾಯಿಗಳು ಅಟ್ಟಿಸಿಕೊಂಡು ಬರುತ್ತಿದ್ದವು.
ನಾಯಿಗಳ ಹಿಂಡನ್ನು ಕಂಡ ತೋಳ, ಪೊದೆಯೊಳಗೆ ಅವಿತುಕೊಂಡಿತು. ನರಿಯನ್ನು ಅಟ್ಟಿಸಿ ಬೆಂಡೆತ್ತಿದ ನಾಯಿಗಳು ಮತ್ತೆ ತೋಟದೊಳಗೆ ಹಿಂತಿರುಗಿದವು. ನರಿಯ ಬಳಿ ಬಂದ ತೋಳ ಅದನ್ನು ಸಮಾಧಾನಿಸಿತು. ಅತುರ ಪಟ್ಟರೆ ಗತಿಗೇಡು ಎನ್ನುವುದು ಆ ದಿನ ನರಿಗೆ ಅರ್ಥವಾಯಿತು.
ಅಮರಯ್ನಾ ಪತ್ರಿಮಠ