ಬೀದಿ ಗುಡಿಸಿದ ಐಷಾರಾಮಿ ಕಾರು
Team Udayavani, Feb 14, 2019, 12:30 AM IST
ಸ್ವಾತಂತ್ರ್ಯಕ್ಕೂ ಹಿಂದೆ ನಡೆಯಿತು ಎನ್ನಲಾದ ಘಟನೆಯಿದು. ಭಾರತದ ಮಹಾರಾಜನೊಬ್ಬ ಕಾರ್ಯನಿಮಿತ್ತ ಲಂಡನ್ಗೆ ಭೇಟಿದ. ಅವರಿಗೆ ಲಂಡನ್ನ ಬೀದಿಗಳನ್ನು ಸುತ್ತುವ ಮನಸ್ಸಾಯಿತು. ಅಧಿಕಾರಿಗಳನ್ನು ಬಿಟ್ಟು ತಾವೊಬ್ಬರೇ ನಗರ ಸಂಚಾರಕ್ಕೆ ಹೊರಟರು. ದಾರಿಯಲ್ಲಿ ಕಾರು ಶೋರೂಮ್ ಒಂದು ಅವರ ಗಮನ ಸಳೆಯಿತು. ಮೊದಲೇ ಮಹಾರಾಜರಿಗೆ ಐಷಾರಾಮಿ ಕಾರುಗಳ ಶೋಕಿ ಇತ್ತು. ಅವರು ಕಾತರರಾಗಿ ಕಾರಿನ ಬಗ್ಗೆ ವಿಚಾರಿಸಲು ಒಳಕ್ಕೆ ತೆರಳಿದರು. ಅದು ಪ್ರಸಿದ್ಧ ರೋಲ್ರಾಯ್ಸ ಮಳಿಗೆಯಾಗಿತ್ತು. ಭಾರತೀಯನೊಬ್ಬ ಒಳಪ್ರವೇಶಿಸಿದ್ದನ್ನು ಕಂಡ ಸೇಲ್ಸ್ಮನ್ಗೆ ಅವರು ಮಹಾರಾಜರೆಂದು ತಿಳಿಯಲಿಲ್ಲ. ಇವರೂ ಹೇಳಲಿಲ್ಲ. ಭಾರತೀಯರೆಂದರೆ ಅಸಡ್ಡೆ ತೋರುತ್ತಿದ್ದ ಸೇಲ್ಸ್ಮನ್ಗೆ ಭಾರತೀಯನೊಬ್ಬ ಒಳಪ್ರವೇಶಿಸಿದ್ದು ಸರಿಕಾಣಲಿಲ್ಲ. ಜಗತ್ತಿನ ಉತ್ಕೃಷ್ಟವಾದ ಕಾರನ್ನು ಭಾರತೀಯ ಕೊಳ್ಳಲಾರ ಎನ್ನುವುದು ಅವನ ಖಚಿತ ಅಭಿಪ್ರಾಯವಾಗಿತ್ತು. ಆತ ಮಹಾರಾಜರನ್ನು ಕೀಳಾಗಿ ಕಂಡ. ಕುಪಿತರಾದ ಮಹಾರಾಜರು ತಾವು ಉಳಿದುಕೊಂಡಿದ್ದ ಹೋಟೆಲ್ಗೆ ವಾಪಸ್ಸಾದರು. ಅಧಿಕಾರಿಗಳನ್ನು ಕರೆದು ಮಹಾರಾಜರು ಬರುತ್ತಿರುವುದಾಗಿ ಶೋರೂಮಿನವರಿಗೆ ಸುದ್ದಿ ಮುಟ್ಟಿಸಲು ತಿಳಿಸಿದರು. ಈ ಬಾರಿ ಮಹಾರಾಜರನ್ನು ವೈಭವಯುತವಾಗಿ ಸ್ವಾಗತಿಸಲಾಯಿತು. ಮಳಿಗೆಯ ಮಾಲೀಕ ಖುದ್ದು ಮಹಾರಾಜರನ್ನು ಬರಮಾಡಿಕೊಂಡ. ಆತಿಥ್ಯ ಸ್ವೀಕರಿಸಿದ ಮಹಾರಾಜರು ತಮಗಾದ ಅವಮಾನದ ಕುರಿತು ಬಾಯಿಬಿಡಲಿಲ್ಲ. ಆ ದಿನ ಒಂದಲ್ಲ, ಎರಡಲ್ಲ, ಆರು ಕಾರುಗಳನ್ನು ಭಾರತಕ್ಕೆ ಕೊಂಡು ತಂದರು. ಭಾರತಕ್ಕೆ ವಾಪಸ್ಸಾದವರೇ ಮಹಾರಾಜರು ಕಾರುಗಳನ್ನು ನಗರ ಸ್ವಚ್ಛಗೊಳಿಸುವ ಕೆಲಸಕ್ಕೆ ಹಚ್ಚಿದರು. ಅಷ್ಟೇ ಸಾಕಾಯಿತು. ಜಗತ್ಪ್ರಸಿದ್ಧ ಐಷಾರಾಮಿ ಕಾರು ಭಾರತದ ಬೀದಿಗಳಲ್ಲಿ ಕಸ ಗುಡಿಸಲು ಬಳಕೆಯಾಗುತ್ತಿದೆ ಎನ್ನುವ ಸುದ್ದಿ ಜಗತ್ತಿನಾದ್ಯಂತ ಹರಡಿತು. ಕಂಪನಿಯ ಹೆಸರಿಗೆ ಇದರಿಂದ ಕುಂದುಂಟಾಯಿತು. ಪರಿಣಾಮವಾಗಿ ಆ ಕಂಪನಿಯ ಕಾರನ್ನು ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿತು. ಕೂಡಲೆ ಎಚ್ಚೆತ್ತ ಸಂಸ್ಥೆಯ ಸಿಬ್ಬಂದಿ ವರ್ಗ ನಡೆದ ಘಟನೆಯೆಲ್ಲವನ್ನೂ ತಿಳಿದುಕೊಂಡು ಮಹಾರಾಜರಿಗೆ ಕ್ಷಮಾಪಣಾ ಪತ್ರ ಬರೆದರು. ತಮ್ಮ ಸಂಸ್ಥೆಯ ಕಾರನ್ನು ಮುನಿಸಿಪಾಲಿಟಿ ವಾಹನವನ್ನಾಗಿ ಬಳಸದಂತೆ ಮನವಿ ಮಾಡಿದರು. ಅಲ್ಲದೆ ರೋಲ್ಸ್ರಾಯ್ಸ ಸಂಸ್ಥೆ , ತಮ್ಮಿಂದಾದ ಪ್ರಮಾದಕ್ಕೆ ಪ್ರಾಯಶ್ಚಿತವಾಗಿ ಮಹಾರಾಜರಿಗೆ ಆರು ಕಾರುಗಳನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿತು. ಈ ಮಹಾರಾಜ ಯಾರೆಂಬುದರ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಈ ಘಟನೆಯ ಕುರಿತು ಚರ್ಚೆಗಳು ಇನ್ನೂ ನಡೆದೇ ಇದೆ.
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ