ಹಾಲಾಡಿ ಪರ-ವಿರೋಧ ಘೋಷಣೆ; ಗದ್ದಲ, ವಾಗ್ವಾದ
Team Udayavani, Nov 14, 2017, 8:40 AM IST
ಕುಂದಾಪುರ: ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾವೇಶವು ಮೂಲ ಬಿಜೆಪಿಗರು ಹಾಗೂ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಣಗಳ ನಡುವಿನ ಬಲ ಪ್ರದರ್ಶನದ ವೇದಿಕೆಯಾಗಿ ಪರಿವರ್ತನೆಯಾಗಿತ್ತು.
ಎರಡೂ ಗುಂಪಿನ ಕಾರ್ಯಕರ್ತರು ಪರ- ವಿರೋಧ ಘೋಷಣೆಗಳನ್ನು ಕೂಗಿದ್ದು, ಈ ವೇಳೆ ಮಾತಿನ ಚಕಮಕಿಯಿಂದ ಗದ್ದಲ, ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪ್ರಸಂಗವೂ ನಡೆಯಿತು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸಭೆಯಲ್ಲಿ ಸಾಮಾನ್ಯರಾಗಿ ಬಂದು ಕುಳಿತುಕೊಳ್ಳುತ್ತಿದ್ದಂತೆ ಅವರ ಪರ ಘೋಷಣೆಗಳು ಜೋರಾಗಿಯೇ ಕೇಳಿ ಬಂತು. ವೇದಿಕೆಯೇರಲು ಬಂದ ಬಿ.ಎಸ್. ಯಡಿಯೂರಪ್ಪ ಸಹಿತ ಎಲ್ಲ ನಾಯಕರು ಹಾಲಾಡಿ ಅವರ ಕುಶಲೋಪರಿ ವಿಚಾರಿಸಿದರು.
ಈ ವೇಳೆ ಕೆರಳಿದ ಹಾಲಾಡಿ ವಿರೋಧ ಬಣದ ಕಾರ್ಯಕರ್ತರು ಸಭೆ ನಡೆಯುತ್ತಿರುವಾಗಲೇ ಶ್ರೀನಿವಾಸ ಶೆಟ್ಟಿ ಅವರ ವಿರುದ್ಧ “ಹಾಲಾಡಿಗೆ ಮುಕ್ತಿ ನೀಡಿ, ಬಿಜೆಪಿಗೆ ಶಕ್ತಿ ನೀಡಿ’, “ಹಾಲಾಡಿಗೆ ಬಿಜೆಪಿ ಅನಿವಾರ್ಯ-ಬಿಜೆಪಿಗೆ ಹಾಲಾಡಿ ಅನಿವಾರ್ಯ ಅಲ್ಲ’, “ಮನೆಯಲ್ಲಿ ಕೂರುವ ಎಂಎಲ್ಎ ಸಾಕು, ಕೆಲಸ ಮಾಡುವ ಎಂಎಲ್ಎ ಬೇಕು’, “ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು’ ಎಂಬ ಫಲಕಗಳನ್ನು ಪ್ರದರ್ಶಿಸಿ ದರು. ಇದರಿಂದ ಹಾಲಾಡಿ ಪರ ಬಣದ ಕಾರ್ಯ ಕರ್ತರು ಆಕ್ರೋಶಗೊಂಡರು. ಸಭೆಯಲ್ಲಿ ಸ್ವಲ್ಪ ಕಾಲ ಗೊಂದಲದ ವಾತಾವರಣ ನೆಲೆಸಿತ್ತು.
ಅಸಮಾಧಾನಗೊಂಡ ಶ್ರೀನಿವಾಸ ಶೆಟ್ಟರು ಎದ್ದು ಹೊರನಡೆಯಲು ಮುಂದಾದಾಗ ಮಧ್ಯ ಪ್ರವೇಶಿಸಿದ ಯಡಿಯೂರಪ್ಪ ಮಾತನಾಡಿ, ಹಾಲಾಡಿ ಅವರು ಬಿಜೆಪಿಗೆ ಬರುವುದನ್ನು ವಿರೋಧಿಸುವವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ. ಗೂಂಡಾ ಸಂಸ್ಕೃತಿಯ ಕಾರ್ಯಕರ್ತರು ಬೇಕಾ ಗಿಲ್ಲ. ಹಾಲಾಡಿ ವಿರೋಧಿಗಳಿದ್ದರೆ ಎದ್ದು ಹೋಗ ಬಹುದು ಎಂದು ತಿಳಿಸಿದರು.
ಮತ್ತೆ ಬಂದ ಹಾಲಾಡಿ
ಸಮಾವೇಶ ಮುಗಿದು ಗಣ್ಯ ನಾಯಕರೆಲ್ಲ ಅಲ್ಲಿಂದ ತೆರಳಿದ ಸ್ವಲ್ಪ ಹೊತ್ತಲ್ಲಿಯೇ ಅಲ್ಲಿಗೆ ಬಂದ ಶ್ರೀನಿವಾಸ ಶೆಟ್ಟರು ಕಾರ್ಯಕರ್ತರು, ಅಲ್ಲಿದ್ದ ಕಿರಣ್ ಕೊಡ್ಗಿ, ಕಾಡೂರು ಸುರೇಶ್ ಶೆಟ್ಟಿ ಅವರ ಬಳಿ ಮಾತುಕತೆ ನಡೆಸಿದರು. ಇದೇ ವೇಳೆ ನೀವೇನೂ ಬೇಸರ ಮಾಡಿಕೊಳ್ಳಬೇಡಿ. ನಾವು ನಿಮ್ಮೊಂದಿಗಿದ್ದೇವೆ ಅನ್ನುವ ಮಾತುಗಳು ಅವರ ಅಭಿಮಾನಿಗಳಿಂದ ಕೇಳಿ ಬಂತು. ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ಅಲ್ಲಿಂದಲೇ ಕರೆ ಮಾಡಿ ಹೀಗೆ ಕರೆಸಿ ಅವಮಾನ ಮಾಡಿದ್ದು ಯಾಕೆ. ಹೀಗೆಲ್ಲ ಆಗುತ್ತಿದ್ದರೆ ನಾನು ಬರುತ್ತನೇ ಇರಲಿಲ್ಲ ಎಂದು ಹಾಲಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಡಿವಿಎಸ್ ಸಭೆ
ಬಿಎಸ್ವೈ ಅವರು ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಮುಂದಿನ ಶಾಸಕ ಎಂದಿದ್ದಲ್ಲದೆ, ವಿರೋಧಿಸಿದವರನ್ನು ಗೂಂಡಾ ಕಾರ್ಯಕರ್ತರೆಂದು ಹೇಳಿದ್ದಕ್ಕೆ ಅಸಮಾಧಾನಗೊಂಡಿದ್ದ ಕೆಲವು ಮೂಲ ಬಿಜೆಪಿಗರನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿ ಸಭೆ ನಡೆಸಿ, ಅಭ್ಯರ್ಥಿ ಬಗ್ಗೆ ವರಿಷ್ಠರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಲಘು ಲಾಠಿಪ್ರಹಾರ
ಹಾಲಾಡಿ ಪರ-ವಿರೋಧ ಘೋಷಣೆಗಳು ವಿಕೋಪಕ್ಕೆ ತಿರುಗಿದಾಗ ಸ್ವತಃ ಎಸ್ಪಿ ಡಾ| ಸಂಜೀವ್ ಎಂ. ಪಾಟೀಲ್ ಅವರೇ ಪರಿಸ್ಥಿತಿ ಯನ್ನು ನಿಯಂತ್ರಿಸಲು ಆಗಮಿಸಿದರು. ಸಭೆ ಮುಗಿದ ಬಳಿಕವೂ ಸಭಾಂಗಣದಲ್ಲಿ ಜನ ಸೇರಿದ್ದ ರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಿ ಸಲು ಹರಸಾಹಸ ಪಡುತ್ತಿದ್ದರು. ಈ ವೇಳೆ ಕೆಲ ಜನರು ಗುಂಪು – ಗುಂಪಾಗಿ ಸೇರಿ ಮಾತ ನಾಡು ತ್ತಿದ್ದನ್ನು ಗಮನಿಸಿದ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿಪ್ರಹಾರ ನಡೆಸಿದರು.