ಉಜ್ವಲಾ: ತನಿಖೆಗೆ ಪ್ರತ್ಯೇಕ ತಂಡ
Team Udayavani, Jul 8, 2018, 6:00 AM IST
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ನಡೆದ ಉಜ್ವಲಾ ಹಗರಣದ ಸಮಗ್ರ ತನಿಖೆಗೆ ಪೆಟ್ರೋಲಿಯಂ ಅಧಿಕಾರಿಗಳು ಮುಂದಾಗಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಹಿಂದೂಸ್ಥಾನ್ ಪೆಟ್ರೋಲಿಯಂ ಚೀಫ್ ರೀಜನಲ್ ಮ್ಯಾನೇಜರ್ ಎನ್. ರಮೇಶ್ ಅವರು, ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳ ಬದಲು ಬೇರೆಯವರಿಗೆ ಸಂಪರ್ಕ ಕಲ್ಪಿಸಿದ್ದರೆ ಅದನ್ನು ಸರಿಪಡಿಸಲಾಗುವುದು. ಅರ್ಹರಿಗೇ ಸಂಪರ್ಕ ಕಲ್ಪಿಸಲಾಗುವುದು ಎಂದಿದ್ದಾರೆ.
ಕೇಂದ್ರ ಸರಕಾರ ಒಟ್ಟು 8 ಕೋಟಿ ಉಜ್ವಲಾ ಅಡುಗೆ ಅನಿಲ ಸಂಪರ್ಕದ ಗುರಿ ಇಟ್ಟುಕೊಂಡಿದೆ. ಇದುವರೆಗೆ ನಾಲ್ಕೂವರೆ ಕೋಟಿ ಸಂಪರ್ಕ ನೀಡಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹಾಗೂ ಬ್ರಹ್ಮಾವರದಲ್ಲಿನ ಗ್ಯಾಸ್ ವಿತರಕ ಏಜೆನ್ಸಿಯಲ್ಲಿ ನಡೆದಿರುವ ಅಕ್ರಮ ಕುರಿತು ಮಾಹಿತಿ ಲಭ್ಯವಾಗಿದೆ. ಇಬ್ಬರಿಂದಲೂ ಸಮಗ್ರ ವಿವರ ಪಡೆಯಲಾಗುತ್ತಿದ್ದು, ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗುವುದು ಎಂದು ತಿಳಿಸಿದ್ದಾರೆ. ಅಕ್ರಮ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಲ್ಲದೇ, ದಂಡ ವಿಧಿಸಲಾಗುತ್ತದೆ ಎಂದರು.
ಗ್ರಾಮ ಸ್ವರಾಜ್ ಅಭಿಯಾನ
ಕೇಂದ್ರ ಸರಕಾರ ಹೊಗೆ ರಹಿತ ಮನೆಯ ಗ್ರಾಮ ಸ್ವರಾಜ್ ಅಭಿಯಾನದ ಮೂಲಕ ಕರ್ನಾಟಕದಲ್ಲಿ 475 ಹಳ್ಳಿಗಳನ್ನು ಗುರುತಿಸಿದೆ. ಮಂಗಳೂರು ವಿಭಾಗದಲ್ಲಿ ಶಿವಮೊಗ್ಗ, ಕೊಡಗು ಒಟ್ಟು 29 ಹಳ್ಳಿಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಅಡುಗೆ ಅನಿಲ ಸಂಪರ್ಕ ನೀಡಲಾಗುತ್ತದೆ. ಮುಂದಿನ ದಿನದಲ್ಲಿ ಉಜ್ವಲಾ ಯೋಜನೆ ಇನ್ನಷ್ಟು ಪರಿಷ್ಕರಣೆಯಾಗುವ ಸಾಧ್ಯತೆಯಿದೆ ಎಂದರು.
ಫಲಾನುಭವಿಗಳಿಗೆ ಗ್ಯಾಸ್ ಕನೆಕ್ಷನ್
ಬೈಂದೂರು ಹಾಗೂ ಇತರ ಕೆಲವೆಡೆ ಬಿ.ಪಿ.ಎಲ್. ಕಾರ್ಡ್ ದಾರರ ಟಿನ್ ನಂಬರ್ಗೆ ಗಂಗೊಳ್ಳಿ ಮುಂತಾದ ಕಡೆಯವರಿಗೆ ಸಂಪರ್ಕ ನೀಡಿದ್ದು “ಉದಯವಾಣಿ’ ವರದಿಯಲ್ಲಿ ಗಮನಿಸಿದ್ದೇನೆ. ಯಾರು ಅರ್ಹರಾಗಿದ್ದಾರೋ ಅವರಿಗೆ ವಿತರಕರಿಂದ ಉಚಿತ ಸಂಪರ್ಕಕ್ಕೆ ತಿಳಿಸಲಾಗಿದೆ. ಹೀಗಾಗಿ ಅರ್ಹರು ಸಮೀಪದ ಗ್ಯಾಸ್ ವಿತರಕರನ್ನು ಸಂಪರ್ಕಿಸಬೇಕು ಎಂದು ಎಚ್ಪಿ ಅಧಿಕಾರಿ ತಿಳಿಸಿದ್ದಾರೆ.