2 ಸಿಗಡಿ ಕೆರೆಗೆ ವಿಷ; 35 ಲಕ್ಷ ರೂ. ನಷ್ಟ
Team Udayavani, Jul 10, 2018, 12:19 PM IST
ಕುಂದಾಪುರ: ಇನ್ನೆರಡು ದಿನಗಳಲ್ಲಿ ತೆಗೆದು, ಮಾರಾಟ ಮಾಡಲು ಸಿದ್ಧವಾಗಿದ್ದ ಸುಮಾರು 35 ಲಕ್ಷ ರೂ. ಮೌಲ್ಯದ ಸಿಗಡಿ(ಚಟ್ಲಿ)ಗಳಿದ್ದ 2 ಕೆರೆಗಳಿಗೆ ಕಿಡಿಗೇಡಿಗಳು ವಿಷವಿಕ್ಕಿದ ಘಟನೆ ಬೈಂದೂರು ತಾಲೂಕಿನ ಹೊಸಾಡು ಗ್ರಾಮದಲ್ಲಿ ರವಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ಜಾವದ ನಡುವೆ ನಡೆದಿದೆ.
ಬಂಟ್ವಾಡಿ ನಿವಾಸಿ ನರಸಿಂಹ ಮೊಗ ವೀರ ಅವರು ಹೊಸಾಡು ಗ್ರಾಮದ ಅರಾಟೆಯ ತಮ್ಮ 1.60 ಎಕರೆ ವಿಸ್ತೀ ರ್ಣದ ಜಾಗದಲ್ಲಿ ಮಾಡಿದ ಎರಡು ಚಟ್ಲಿ ಕೆರೆಗೆ ದುಷ್ಕರ್ಮಿಗಳು ರಾತ್ರಿ ವೇಳೆಗೆ ವೇಳೆ ವಿಷ ಹಾಕಿದ್ದಾರೆ.
9 ಟನ್ ಚಟ್ಲಿ ನಾಶ
ನರಸಿಂಹ ಮೊಗವೀರ ಕಳೆದ 90 ದಿನಗಳಿಂದ ಇಲ್ಲಿ ಚಟ್ಲಿ ಕೃಷಿ ಮಾಡುತ್ತಿದ್ದರು. 1.60 ಎಕರೆ ವಿಸ್ತೀರ್ಣದ 2 ಕೆರೆಗಳ ಪೈಕಿ ಒಂದು ಇವರ ಸ್ವಂತದ್ದಾಗಿದ್ದು, ಇನ್ನೊಂದನ್ನು ದೇವಸ್ಥಾನದಿಂದ ಲೀಸ್ಗೆ ಪಡೆದು ಸಿಗಡಿ ಕೃಷಿ ಮಾಡುತ್ತಿದ್ದರು. ಒಟ್ಟು 9,000 ಸಾವಿರ ಕೆಜಿ ಸಿಗಡಿ ಸಿಗಲಿತ್ತು. ದುಷ್ಕರ್ಮಿಗಳಿಂದಾಗಿ 9 ಟನ್ ಸಿಗಡಿ ಕೃಷಿಯೇ ನಾಶವಾಗಿದೆ.
ವಿಷದ ಬಕೆಟ್ ಪತ್ತೆ
ನರಸಿಂಹ ಅವರು ಆ ಕೆರೆಯ ಪಕ್ಕದಲ್ಲೇ ಶೆಡ್ ನಿರ್ಮಿಸಿ ಕಳೆದ 15 ದಿನಗಳಿಂದ ಪ್ರತಿ ರಾತ್ರಿ ಕಾವಲು ಕಾಯುತ್ತಿದ್ದರು. ರವಿವಾರ ಮಧ್ಯರಾತ್ರಿ 12.30ರ ವೇಳೆ ಎಚ್ಚರವಾಗಿದ್ದು, ಆಗ ಎಲ್ಲ ಕಡೆಗೆ ಲೈಟ್ ಹಾಕಿ ನೋಡಿದ್ದೆ. ಮುಂಜಾನೆ 4.30ರ ಸುಮಾರಿಗೆ ಮತ್ತೆ ಎಚ್ಚರವಾಗಿದ್ದು, ಲೈಟ್ ಹಾಕಿ ನೋಡಿದಾಗ ಒಂದು ಕೆರೆಯಲ್ಲಿ ಕೆಮಿಕಲ್ ಇರುವ ಬಕೆಟ್ ಸಿಕ್ಕಿತ್ತು. ತತ್ಕ್ಷಣ ಶೆಡ್ನಲ್ಲಿ ನನ್ನೊಂದಿಗೆ ಕೆಲಸಕ್ಕಿದ್ದ ಇಬ್ಬರು ಕೆಲಸದವರನ್ನು ಕರೆದು ಎಲ್ಲ ಕಡೆ ಲೈಟ್ ಹಾಕಿ ನೋಡಿದಾಗ ಸಿಗಡಿಗಳು ಸತ್ತು ಬಿದ್ದಿದ್ದವು ಎಂದು ನರಸಿಂಹ ಮೊಗವೀರ ಅವರು ತಿಳಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
1 ರೂ. ಸಿಗದೇ ಹೋಯಿತು…
ಕಳೆದ ವರ್ಷ 9 ಟನ್ ಸಿಗಡಿ ಮಾರಾಟ ಮಾಡಿದ್ದೆ. ಆಗ ಕೆಜಿಗೆ 270 ರೂ. ಇತ್ತು. ಈಗ ಕೆಜಿಗೆ 260 ರೂ. ಇದ್ದು, ಇನ್ನೆರಡು ದಿನಗಳಲ್ಲಿ ಸಿಗಡಿ ಬೆಲೆ ಏರಿಕೆ ಆಗಬಹುದು ಎನ್ನುವ ಕಾರಣಕ್ಕೆ ಮಾರಾಟ ಮಾಡುವುದು ತಡವಾಯಿತು. ಆದರೆ ಅದೇ ಬೆಲೆಗೆ ಕೊಡುತ್ತಿದ್ದರೆ ಅಷ್ಟಾದರೂ ಸಿಗುತ್ತಿತ್ತು. ಆದರೀಗ 1 ರೂ. ಕೂಡ ಸಿಗದಂತೆ ಆಯಿತು.
– ನರಸಿಂಹ ಮೊಗವೀರ, ಚಟ್ಲಿ ಕೆರೆಯ ಮಾಲಕ